ಈ ಕುರಿತು ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ತಾವು ಅಧಿಕಾರದಲ್ಲಿದ್ದಾಗ ಅದನ್ನು ಎಷ್ಟೇ ದುರುಪಯೋಗ ಮಾಡಿಕೊಂಡಿದ್ದರೂ, ಅಕ್ರಮಗಳನ್ನು ಮಾಡಿದ್ದರೂ, ಸಾರ್ವಜನಿಕವಾಗಿ ಮಾತನಾಡುವಾಗ ಏನನ್ನು ಹೇಳಬಹುದು ಎನ್ನುವ ಯಾವುದೇ ಪರಿಜ್ಞಾನ ಇಲ್ಲದ ಮತ್ತು ತಮ್ಮ ಕುಕೃತ್ಯಗಳನ್ನು ನಾಚಿಕೆ ಇಲ್ಲದೆ ಘಂಟಾಘೋಷವಾಗಿ ಸಾರುವ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಇವರು ಸ್ವತಃ ಹೇಳಿಕೊಂಡಂತಹ ಘನಕಾರ್ಯದಿಂದಾಗಿ ತಮಗೆ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸರ್ಕಾರಿ ನೌಕರಿಯನ್ನು ಕಳೆದುಕೊಂಡು ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳು ನಮ್ಮ ರಾಜ್ಯದಲ್ಲಿ ಸಾವಿರಾರು ಜನ ಇದ್ದಾರೆ. ಕೆಪಿಎಸ್ಸಿಯ ಅತಿ ಭ್ರಷ್ಟ ಅಧ್ಯಕ್ಷ ಹೆಚ್.ಎನ್. ಕೃಷ್ಣ ಜೈಲಿನಿಂದ ಬಿಡುಗಡೆಯಾಗುವಾಗ ಅವರನ್ನು ಅಲ್ಲಿಂದ ಕಾರಿನಲ್ಲಿ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡು ಕರೆತಂದವರು ಕುಮಾರಸ್ವಾಮಿಯವರು. ಮೋಸಕ್ಕೊಳಗಾದ ಬಡವ ಮತ್ತು ದುರ್ಬಲರ ಶಾಪ ಕಠೋರವಾಗಿರುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.