ಶ್ರೀರಂಗಪಟ್ಟಣ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಹಾಗೂ ಅವರ ಬೆಂಬಲಿಗರು ಶುಕ್ರವಾರ ಇಲ್ಲಿನ ಗಂಜಾಂ ನಿಮಿಷಾಂಬಾ ಸೇರಿದಂತೆ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಹರಕೆ ತೀರಿಸಿದರು.
ನಿಮಿಷಾಂಬಾ ದೇವಿಗೆ ಸೀರೆ ಸಮರ್ಪಿಸಿದರು. ದೇವಾಲಯದಲ್ಲಿ ಶಶಿಕಲಾ ಹೆಸರಿನಲ್ಲಿ ಅರ್ಚನೆ ಮಾಡಿದರು.
ಬಳಿಕ ಪಟ್ಟಣದ ಶ್ರೀರಂಗ ನಾಥಸ್ವಾಮಿ ದೇವಾಲಯದಲ್ಲಿ ದರ್ಶನ ಪಡೆದರು. ಅರ್ಚಕರೊಬ್ಬರ ಸಲಹೆಯಂತೆ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮನ ದೇಗುಲಕ್ಕೂ ಭೇಟಿ ನೀಡಿದ್ದರು. ಕಂಟಕ ನಿವಾರಣೆಗಾಗಿ ಅಲ್ಲಿ ‘ತಡೆ’ ಒಡೆಸಿದರು.
‘ಶಶಿಕಲಾ ಅವರು ಜೈಲಿನಲ್ಲಿದ್ದಾಗ ಅವರ ಬಿಡುಗಡೆಗೆ ಪ್ರಾರ್ಥಿಸಿ ಅವರ ಬೆಂಬಲಿಗರು ನಿಮಿಷಾಂಬಾ ದೇವಿಗೆ ಹರಕೆ ಹೊತ್ತಿದ್ದರು. ಶಶಿಕಲಾ ಅವರು ಶುಕ್ರವಾರ ಬಂದು ಹರಕೆ ತೀರಿಸಿದ್ದಾರೆ’ ಎಂದು ನಿಮಿಷಾಂಬಾ ದೇವಾಲಯದ ಅರ್ಚಕ ಸೂರ್ಯನಾರಾಯಣ ಭಟ್ ಹೇಳಿದರು.