ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮಹಾರಾಷ್ಟ್ರ ನಡೆಸುತ್ತಿರುವ ಹುನ್ನಾರವನ್ನು ವಿವರಿಸಿ, ‘ಸುಪ್ರೀಂ ಕೋರ್ಟ್ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ಸಾಕ್ಷಿ ಸೃಷ್ಟಿಸಲು ಮಹಾರಾಷ್ಟ್ರ ಸರ್ಕಾರವು ಈ ಆರೋಗ್ಯ ವಿಮೆ ಯೋಜನೆಯನ್ನು ₹ 54 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. ಅದರಂತೆ ಇದೇ 3ರಂದು ಅಧಿಕೃತ ಆದೇಶವನ್ನು ಹೊರಡಿಸಿದೆ. 865 ಹಳ್ಳಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ದಾವೆ ದಾಖಲಿಸಿರುವ ಈ ಹಳ್ಳಿಗಳಲ್ಲಿಯ ಮರಾಠಿಗರು, ಮಹಾರಾಷ್ಟ್ರಕ್ಕೆ ಸೇರ ಬಯಸಿದ್ದಾರೆಂದು ದಾಖಲೆ ಸೃಷ್ಟಿಸಲು ಅಲ್ಲಿನ ಸರ್ಕಾರ ಕುತಂತ್ರ ನಡೆಸಿದೆ. ಈ ಕ್ರಮ ನ್ಯಾಯಾಂಗ ನಿಂದನೆಯಾಗಿದ್ದು, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಬೇಕು. ಅಲ್ಲದೇ, ಆಡಳಿತಾತ್ಮಕ ಕ್ರಮಗಳ ಮೂಲಕ ಯೋಜನೆಯ ಜಾರಿಗೆ ತಡೆ ಹಾಕಬೇಕು’ ಎಂದು ಆಗ್ರಹಿಸಿದರು.