ಬೆಂಗಳೂರು: ಗೃಹಜ್ಯೋತಿ ಯೋಜನೆ ಮೂಲಕ ಬಾಡಿಗೆ ಮನೆಗಳಲ್ಲಿ ವಾಸಿಸುವ ಎಲ್ಲರಿಗೂ ಮನೆ ಒಪ್ಪಂದ ಪತ್ರ ಸೇರಿದಂತೆ ಸರಳ ದಾಖಲೆ ಪಡೆದು ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಆಧಾರ್ ಹಾಗೂ ಆರ್ ಅರ್ ಸಂಖ್ಯೆ ಹೊಂದಾಣಿಕೆಯಾದರೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಬಾಡಿಗೆ ಮನೆಯಲ್ಲಿ ಬಹುದಿನಗಳಿಂದ ವಾಸಿಸುತ್ತಿರುವ ಬಾಡಿಗೆದಾರರಿಗೂ ದಾಖಲೆಗಳಿರುತ್ತವೆ. ಹೊಸದಾಗಿ ಬಾಡಿಗೆ ಮನೆ ಬದಲಿಸಿದವರು. ಮತ್ತೊಂದು ಸ್ಥಳದ ವಿಳಾಸ ಹೊಂದಿರುವ ದಾಖಲೆ ಹೊಂದಿರುವವರು ಮಾಲೀಕರಿಂದ ಪಡೆದ ಒಪ್ಪಂದ ಪತ್ರ ಅಥವಾ ವಾಸ ದೃಢೀಕರಣದ ಯಾವುದೇ ದಾಖಲೆ ನೀಡಿದರೆ ಸಾಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ 2.14 ಕೋಟಿ ಗ್ರಾಹಕರು ಇದ್ದಾರೆ. ಅವರಿಗೆ ಈ ಯೋಜೆನೆಯ ಪ್ರಯೋಜನ ದೊರೆಯಲಿದೆ. ಯೋಜನೆಯ ಲಾಭ ಪಡೆಯಲು ಬಯಸುವವರು ಮಾಹಿತಿ ಸಿಂಧು, ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಯಾವುದೇ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 15ರಿಂದ ಜುಲೈ 5ರವರೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಮನೆಯ ವಾರ್ಷಿಕ ಸರಾಸರಿ ಬಳಕೆಯ ಆಧಾರದಲ್ಲಿ ಯೂನಿಟ್ ನಿಗದಿ ಮಾಡಲಾಗುವುದು. ಅದಕ್ಕಿಂತ ಶೇ10 ಉಚಿತ. ನಂತರ 200 ಯೂನಿಟ್ ನಿಗದಿತ ದರ ಪಾವತಿಸಬೇಕು. 200 ಯೂನಿಟ್ ದಾಟಿದರೆ ಇಡೀ ಬಳಕೆಯ ಶುಲ್ಕ ಪಾವತಿಸವೇಕು ಎಂದರು.
ಉಚಿತ ಬಳಕೆಗೆ ಯಾವುದೇ ಕನಿಷ್ಠ ಶುಲ್ಕ, ತೆರಿಗೆ ಇರುವುದಿಲ್ಲ. ಶೂನ್ಯ ಬಿಲ್ ಬರಲಿದೆ ಎಂದರು.