ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಥಗಿತಗೊಂಡ ₹17,000 ಕೋಟಿ ವೆಚ್ಚದ ರಾ.ಹೆ ಕಾಮಗಾರಿ 3 ತಿಂಗಳಲ್ಲಿ ಪ್ರಾರಂಭ: ಸತೀಶ

Published 25 ಡಿಸೆಂಬರ್ 2023, 12:55 IST
Last Updated 25 ಡಿಸೆಂಬರ್ 2023, 12:55 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ₹17 ಸಾವಿರ ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಮೂರು ತಿಂಗಳಲ್ಲಿ ಎಲ್ಲ ಅಡೆತಡೆ ನಿವಾರಿಸಿ, ಹೆದ್ದಾರಿ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೂ ಮನವಿ ಮಾಡಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಗೋವಾದಲ್ಲಿ ಭಾನುವಾರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು, ಇಲ್ಲದಿದ್ದರೆ ಯೋಜನೆ ಸ್ಥಗಿತವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಮೂರು ತಿಂಗಳ ಕಾಲಾವಕಾಶ ಕೇಳಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶೀಘ್ರ ಚರ್ಚಿಸುತ್ತೇನೆ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ 12 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರಾಜ್ಯಕ್ಕೆ ₹17 ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ಈವರೆಗೆ ₹8,000 ಕೋಟಿ ಖರ್ಚಾಗಿದೆ. 15 ಕಡೆಗಳಲ್ಲಿ ಕಾಮಗಾರಿ ಸ್ಥಗಿತವಾಗಿದೆ. ಅರಣ್ಯ ಒತ್ತುವರಿ, ಭೂ ಸಮಸ್ಯೆ, ಗ್ರಾಮಗಳ ಸ್ಥಳಾಂತರ ಹೀಗೆ ನಾನಾ ಕಾರಣಗಳಿವೆ. ಈಗ ಕಾಮಗಾರಿ ನಡೆಯದಿದ್ದರೆ ರಾಜ್ಯಕ್ಕೆ ಹಿನ್ನಡೆ ಆಗಲಿದೆ’ ಎಂದರು.

‘ವಿಜಯಪುರ– ಹುಬ್ಬಳ್ಳಿ ಮಾರ್ಗದ ರಸ್ತೆ ಕೇವಲ ಶೇ 1ರಷ್ಟು ಮಾತ್ರ ಬಾಕಿ ಇದೆ. ಗೋವಾ ಗಡಿಯಿಂದ ಕರ್ನಾಟಕದ ಕುಂದಾಪುರವರೆಗೆ ರಸ್ತೆ ಮಾಡಲು ಅರಣ್ಯ ಇಲಾಖೆಯ ತಕರಾರುಗಳಿವೆ. ಇದೇ ರೀತಿ ಆರು ಕಡೆ ಅರಣ್ಯ ಇಲಾಖೆಯಿಂದ ತಡೆ ಬಿದ್ದಿದೆ. ಹೆದ್ದಾರಿ ಪ್ರಾಧಿಕಾರದಲ್ಲಿ ಹಣದ ಕೊರತೆ ಇಲ್ಲ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT