ವಿಜಯಪುರ: ‘ನಾನು ಹಿಂದೂ ಎನ್ನಲು ಹೆಮ್ಮೆ. ತಿಲಕ ಧರಿಸುವುದು ನನ್ನ ಹಕ್ಕು’ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ, ತಿಲಕವಿಟ್ಟ ಚಿತ್ರದ ಜತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಪ್ಲೋಡ್ ಮಾಡಿದ್ದಾರೆ.
ಈ ಸಂದೇಶ ಅಪ್ಲೋಡ್ ಆದ ಕೆಲ ಹೊತ್ತಿಗೆ ಹಲ ಪ್ರತಿಕ್ರಿಯೆ ದಾಖಲಾಗಿವೆ. ಹಲವರು ಹಂಚಿಕೊಂಡಿದ್ದಾರೆ. ಇದರ ಬಳಿಕ ಯತ್ನಾಳ ಹಣೆಯ ಮೇಲೆ ತಿಲಕವನ್ನು ಏಕೆ ಹಚ್ಚಬೇಕು ? ಎಂಬ ಸಂದೇಶವುಳ್ಳ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಇದಕ್ಕೆ ಪೂರಕವಾಗಿ ಹಲವರು ಯತ್ನಾಳ ಖಾತೆಗೆ ಟ್ಯಾಗ್ ಮಾಡಿ, ‘ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಗೌಡ್ರು ತಿಲಕ ಹಚ್ಚಿಕೊಂಡು ಮಾತನಾಡಬೇಕು ಎಂದು ನಮ್ಮ ವಿನಂತಿ. ತಿಲಕ ನಮ್ಮ ಹೆಮ್ಮೆ...’ ಎಂಬಿತ್ಯಾದಿ ಪೋಸ್ಟ್ಗಳನ್ನು ಹಾಕಿಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈಚೆಗೆ ‘ತಿಲಕ ಹಚ್ಚಿಕೊಂಡವರನ್ನು ನೋಡಿದರೆ ನನಗೆ ಭಯ’ ಎಂದು ಹೇಳಿಕೆ ನೀಡಿದ್ದ ಬೆನ್ನಿಗೆ, ಬಸನಗೌಡ ಸಾಮಾಜಿಕ ಜಾಲತಾಣದಲ್ಲಿ ತಿಲಕ ಹಚ್ಚಿಕೊಂಡ ತಮ್ಮ ಭಾವಚಿತ್ರ, ವಿಚಾರಗಳನ್ನು ಬಿತ್ತರಿಸಿಕೊಂಡಿದ್ದಾರೆ.