ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಗಾಂಧಿ ಯಾರು, ಪ್ರಧಾನಿ ಅಭ್ಯರ್ಥಿಯೇ?: ತೇಜಸ್ವಿ ಸೂರ್ಯ

Published 12 ಮೇ 2024, 6:36 IST
Last Updated 12 ಮೇ 2024, 6:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಚುನಾವಣಾ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗವಹಿಸುವಂತೆ ನಿವೃತ್ತ ನ್ಯಾಯಧೀಶರ ಆಹ್ವಾನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಪ್ರಸ್ತಾಪಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರಧಾನಿ ಮೋದಿ ಅವರನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇಂಡಿಯಾ ಮೈತ್ರಿ ಕೂಟದ ಮಾತು ಬಿಡಿ, ಮೊದಲು ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು. ಪಕ್ಷದ ಸೋಲಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿದ ಬಳಿಕ ಪ್ರಧಾನಿಯನ್ನು ಚರ್ಚೆಗೆ ಆಹ್ವಾನಿಸಿ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ​ ಇಂಡಿಯಾ ಮೈತ್ರಿಕೂಟದಲ್ಲಿ ಗಾಂಧಿ ಕುಟುಂಬದ ಸ್ಥಾನವನ್ನು ಪ್ರಶ್ನಿಸಿರುವ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿಯೊಂದಿಗೆ ಚರ್ಚೆ ಮಾಡುವ ಮೊದಲು ರಾಹುಲ್ ಗಾಂಧಿ ತನ್ನನ್ನು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?:

ಪ್ರಮುಖ ಚುನಾವಣಾ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗಹಿಸುವಂತೆ ನಿವೃತ್ತ ನ್ಯಾಯಧೀಶರಾದ ಮದನ್‌ ಬಿ.ಲೋಕೂರ್ ಮತ್ತು ಅಜಿತ್ ಪ.ಶಾ ಮತ್ತಿತ್ತರರು ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರದ ಹಿಂದೆ ಪತ್ರ ಬರೆದು ಆಹ್ವಾನ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಲು ಸಿದ್ದ ಎಂದು ಹೇಳಿದ್ದರು. ನಿವೃತ್ತ ನ್ಯಾಯಾಧೀಶರು, ಪತ್ರಕರ್ತರ ಆಹ್ವಾನವನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, ‘ನಾವು ಸಿದ್ದವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯಲ್ಲಿ ಭಾಗವಹಿಸಬೇಕೆಂದು ದೇಶದ ಜನತೆ ನಿರೀಕ್ಷಿಸುತ್ತಾರೆ’ ಎಂದು ಹೇಳಿದ್ದರು.

‘ಪ್ರಮುಖ ರಾಜಕೀಯ ಪಕ್ಷದ ನಾಯಕರು ತಮ್ಮ ದೃಷ್ಟಿಕೋನವನ್ನು ಸಾಮಾನ್ಯ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಇದು ಸಕಾರಾತ್ಮಕ ಕ್ರಮವಾಗಿದೆ. ಕಾಂಗ್ರೆಸ್ ಆಹ್ವಾನವನ್ನು ಸ್ವೀಕರಿಸಿದ್ದು, ಚರ್ಚೆಯಲ್ಲಿ ಭಾಗವಹಿಸಲು ಸಿದ್ದವಾಗಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT