ಚಿಕ್ಕಮಗಳೂರು: ‘ನಾನು ಕಾಂಗ್ರೆಸ್ ಸೇರಬೇಕು ಎಂಬುದು ಜೆಡಿಎಸ್ ಪಕ್ಷದ ಬಹುತೇಕ ಕಾರ್ಯಕರ್ತರು, ಪಕ್ಷಾತೀತವಾಗಿರುವ ನನ್ನ ಅಭಿಮಾನಿಗಳ ಅಭಿಪ್ರಾಯ. ಕ್ಷೇತ್ರದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಒಂಟಿಯಾಗಿ ತೀರ್ಮಾನ ತೆಗೆದುಕೊಳ್ಳುವುದಷ್ಟು ಜಾತಿ ಬಲ ಮತ್ತು ಜನ ಶಕ್ತಿ ನನಗೆ ಇಲ್ಲ. ನನಗಿರುವ ಜನ ಸಂಪರ್ಕ, ಪ್ರೀತಿ ಆಧರಿಸಿ ಈ ನಿರ್ಧಾರಕ್ಕೆ ಮುಂದಾಗಿದ್ದೇನೆ’ ಎಂದು ಜೆಡಿಎಸ್ ಮುಖಂಡ ವೈಎಸ್ವಿ ದತ್ತ ತಿಳಿಸಿದರು.
‘ಪ್ರಜಾವಾಣಿ’ಯೊಂದಿಗೆ ಬುಧವಾರ ದೂರವಾಣಿಯಲ್ಲಿ ಅವರು ಮಾತನಾಡಿ, ‘ನನ್ನ ಜತೆಗಿರುವ ಕಾರ್ಯಕರ್ತರು ಅತಂತ್ರರಾಗಬಾರದು ಎಂದು ಕಾಂಗ್ರೆಸ್ ಸೇರಲು ಮುಂದಾಗಿದ್ದೇನೆ. ನಾನು ಮನೆ ಸೇರಿದಾಗ ಕಾರ್ಯಕರ್ತರು ದತ್ತಣ್ಣ ನಡುನೀರಿನಲ್ಲಿ ಕೈಬಿಟ್ಟರು ಎಂದು ಹೇಳಬಾರದು. ಅವರಿಗೊಂದು ನೆಲೆ ಕಲ್ಪಿಸಿ, ರಾಜಕೀಯದಿಂದ ನಿವೃತ್ತಿಯಾಗಬೇಕು ಎಂಬ ದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದ್ದೇನೆ’ ಎಂದರು.
‘ಇದೇ 17ರಂದು ಸೇರುತ್ತಾರೆ ಎಂಬ ಯಾರೊ ತಪ್ಪು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸೇರುವುದು ಯಾವತ್ತು ಎಂಬುದು ತೀರ್ಮಾನವಾಗಿಲ್ಲ. 17ರಂದು ಬೆಳ್ತಂಗಂಡಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ, ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕೃತಿ ಬಿಡುಗಡೆ.ಗೊಳಿಸುತ್ತಾರೆ, ಪುಸ್ತಕ ಕುರಿತು ನಾನು ಮಾತನಾಡುತ್ತೇನೆ. ಪುಸ್ತಕ ಬಿಡುಗಡೆ ಆಹ್ವಾನ ಪತ್ರಿಕೆಯಲ್ಲಿ ನಮ್ಮಿಬ್ಬರ ಹೆಸರು ಇರುವುದರಿಂದ ಎಲ್ಲರೂ ಅವತ್ತು ಸೇರುತ್ತೇನೆ ಎಂದುಕೊಂಡಿರಬಹುದು. ಅದೊಂದು ಸಾಹಿತ್ಯಕ ಕಾರ್ಯಕ್ರಮ, ಅವತ್ತು ಕಾಂಗ್ರೆಸ್ ಸೇರಲ್ಲ. ಯಾವತ್ತು ಸೇರುತ್ತೇನೆ ಎಂಬುದನ್ನು ಶೀಘ್ರದಲ್ಲಿ ತಿಳಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ಜನತಾ ಪರಿವಾರದಲ್ಲಿ 50 ವರ್ಷಗಳಿಂದ ಎಚ್.ಡಿ.ದೇವೇಗೌಡ ಅವರ ಆತ್ಮೀಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮಿಬ್ಬರದು ಪಕ್ಷಕ್ಕೆ ಮೀರಿದ ಭಾವನಾತ್ಮಕ ಸಂಬಂಧ. ದೇವೇಗೌಡ ಅವರ ಬಗ್ಗೆ ಪೂಜ್ಯ ಭಾವನೆ ಇದೆ, ಒಂದು ರೀತಿ ತಂದೆ ಮತ್ತು ಮಗನ ಸಂಬಂಧ ನಮ್ಮದು. ಬದುಕಿರುವವರೆಗೂ ಅವರೊಟ್ಟಿಗೇ ಇರುತ್ತೇನೆ ಎಂದು ಹೇಳಿರುವುದು ನಿಜ. ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು ಕಾಂಗ್ರೆಸ್ ಕಡೆಗೆ ಮುಖಮಾಡುವಂತೆ ಮಾಡಿವೆ’ ಎಂದು ಹೇಳಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.