ಬೆಂಗಳೂರು: ಸಬ್ಸಿಡಿ ಇರುವ ಅಡುಗೆ ಅನಿಲ ಪೂರೈಕೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಮತ್ತು ಅನರ್ಹರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಸಬೇಡಿ ಎಂದು ವಿತರಕರಿಗೆ ಸೂಚನೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೆಲ ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರ ನಡೆಸುತ್ತಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯಕ್ತ ಡಾ.ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.
2000ನೇ ಇಸವಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ‘ದ್ರವೀಕೃತ ಪೆಟ್ರೋಲಿಯಂ ಅನಿಲ (ನಿಯಂತ್ರಣ, ಪೂರೈಕೆ ಮತ್ತು ವಿತರಣೆ) ಆದೇಶ’ದ ಅನ್ವಯ ಅಗತ್ಯ ವಸ್ತುಗಳ ತಯಾರಿಕೆ, ಪೂರೈಕೆ ಮತ್ತು ವಿತರಣೆಯ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.
ಸಬ್ಸಿಡಿ ಆಧಾರದಲ್ಲಿ ಒಂದು ಕುಟುಂಬಕ್ಕೆ ಒಂದು ಅಡುಗೆ ಅನಿಲ ಸಿಲಿಂಡರ್ ಮಾತ್ರ ಪೂರೈಸಬಹುದು. ಅಲ್ಲದೆ, ಈ ಆದೇಶ ವಿತರಕರ ಮೇಲೆಯೂ ಕೆಲವು ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.