ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ (ಎ, ಬಿ ವೃಂದ) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮೂಲಕ 1998, 1999 ಮತ್ತು 2004ರಲ್ಲಿ ನಡೆದ ನೇಮಕಾತಿಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರಗಳ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್ ನೇಮಕ ಮಾಡಿದ್ದ ಸಮಿತಿ ವರದಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಕೇಳಿದೆ.
ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ಖಲೀಲ್ ಅಹಮದ್ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ. ಸಮಗ್ರ ವರದಿಯನ್ನು ನೀಡಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸಮಿತಿಯ ಸದಸ್ಯರು ಮಂಡಿಸಿದ ಕೋರಿಕೆ ಮನ್ನಿಸಿ, ಪೀಠ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತು.
ಸುನೀಲ್ ಕುಮಾರ್ ಅರ್ಜಿ ಇತ್ಯರ್ಥ: ‘ಶಾಸಕನಾದ ನಾನು ತತ್ಕಾಲ್ ಯೋಜನೆಯ ಅಡಿ ಪಾಸ್ಪೋರ್ಟ್ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವಾಲಯ ನನ್ನ ಅರ್ಜಿಯನ್ನು ಪರಿಗಣಿಸಿಯೇ ಇಲ್ಲ’ ಎಂದು ಕಾರ್ಕಳ ಶಾಸಕ, ಬಿಜೆಪಿಯ ವಿ. ಸುನೀಲ್ ಕುಮಾರ್ ಅವರು ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
‘ಅರ್ಜಿ ಸಲ್ಲಿಸಿದ ನಂತರ ಸುನೀಲ್ ಕುಮಾರ್ ಅವರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ತೆರಳಿ ಸಂದರ್ಶನಕ್ಕೆ ಸಮಯ ನಿಗದಿಪಡಿಸಿಕೊಳ್ಳಲಿಲ್ಲ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಪ್ರತಿವಾದ ಮಂಡಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ‘ಸುನೀಲ್ ಕುಮಾರ್ ಹೊಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಆದರೆ ಅವರು ಅರ್ಜಿ ಸಲ್ಲಿಸಿರುವುದು ಹೌದಾದರೆ, ಅದನ್ನು ಪರಿಗಣಿಸಬೇಕು. ಕಾನೂನು ಹೇಗೆ ಹೇಳುತ್ತದೆಯೋ ಅದರ ಅನ್ವಯವೇ ಶಾಸಕರಿಗೆ ಪಾಸ್ಪೋರ್ಟ್ ನೀಡಬಹುದು’ ಎಂದು ಆದೇಶ ಹೊರಡಿಸಿದ್ದಾರೆ.