ಷಿಕಾಗೊ:‘ಹಿಂದೂ ಸಮುದಾಯವು ಸಮಾಜವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಏಳಿಗೆ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ಒಗ್ಗೂಡಬೇಕು’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಇಲ್ಲಿ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮ ಅಹಂಕಾರವನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಎಲ್ಲವನ್ನು ಒಪ್ಪಿಕೊಳ್ಳುವುದನ್ನು ಕಲಿತರೆ ಇಡೀ ವಿಶ್ವವೇ ಒಂದು ತಂಡವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದರು.
‘ಸಿಂಹವು ಒಂಟಿಯಾಗಿದ್ದರೆ, ಕಾಡು ನಾಯಿಗಳು ದಾಳಿ ಮಾಡಿ ಅದನ್ನು ಕೊಂದೇ ಬಿಡಬಹುದು. ಇದನ್ನು ನಾವು ಮರೆಯಬಾರದು. ಹಿಂದೂಗಳು ಪ್ರಾಬಲ್ಯ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿಲ್ಲ. ಆದರೆ, ಜಗತ್ತಿನ ಸುಧಾರಣೆಗೆ ಕೊಡುಗೆ ನೀಡುವುದು ನಮ್ಮ ಉದ್ದೇಶ’ ಎಂದರು.
‘ನಾವು ಆಧುನಿಕತೆಯ ವಿರೋಧಿಯಲ್ಲ. ಆದರೆ, ಭವಿಷ್ಯದ ಪರವಾದಿ. ಅಂದರೆ, ಹಿಂದೂಧರ್ಮ ಪ್ರಾಚೀನವಾದುದು ಮತ್ತು ಆಧುನಿಕೋತ್ತರವಾದುದು’ ಎಂದು ಭಾಗವತ್ ಅಭಿಪ್ರಾಯಪಟ್ಟರು.