ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪತ್ರಕರ್ತೆ ರಾಣಾ ಆಯುಬ್‌ಗೆ ಅಮೆರಿಕದ ಸೆನೆಟರ್‌ ಬೆಂಬಲ

Last Updated 23 ಡಿಸೆಂಬರ್ 2022, 13:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಪತ್ರಕರ್ತೆ ರಾಣಾ ಆಯೂಬ್‌ ಅವರನ್ನು ಬೆಂಬಲಿಸಿ ಅಮೆರಿಕದ ಪ್ರಮುಖ ಸೆನೆಟರ್‌ ಹೇಳಿಕೆ ನೀಡಿದ್ದಾರೆ. ಅವರ ಕೆಲಸಗಳು ಸದುದ್ದೇಶದಿಂದ, ರಾಷ್ಟ್ರದ ಮೇಲಿನ ಪ್ರೀತಿಯಿಂದ ಕೂಡಿದ್ದು ಮಾದರಿ ಎನಿಸಿವೆ ಎಂದಿದ್ದಾರೆ.

ಅಮೆರಿಕದ ವೆರ್‌ಮೊಂಟ್‌ನ ಡೆಮಾಕ್ರಟಿಕ್‌ ಸೆನೆಟರ್‌ ಪ್ಯಾಟ್ರಿಕ್‌ ಲೆಹೈ ಅವರು ಗುರುವಾರ ಹೇಳಿಕೆ ನೀಡಿದ್ದು, ರಾಣಾ ಆಯೂಬ್‌ ಅವರು ಪ್ರಶಸ್ತಿ ವಿಜೇತ ಭಾರತೀಯ ಪತ್ರಕರ್ತೆ. ಮತೀಯ ಹಿಂಸಾಚಾರಗಳ ಬಗ್ಗೆ, ನ್ಯಾಯಾಂಗ ಹತ್ಯೆಗಳ ಬಗ್ಗೆ ಮತ್ತು ಇತರ ಕೃತ್ಯಗಳ ಬಗ್ಗೆ ಧೈರ್ಯದಿಂದ ವರದಿಗಳನ್ನು ಮಾಡಿದ್ದಾರೆ. ಇವೆಲ್ಲವೂ ಭಾರತದ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದಾಗಿವೆ ಎಂದಿದ್ದಾರೆ.

ಆಯೂಬ್‌ ಅವರ ಪ್ರಮುಖ ಕೆಲಸಗಳು ಭಾರತದ ಮೇಲಿನ ಪ್ರೀತಿಯಿಂದ ಮತ್ತು ಸದುದ್ದೇಶದಿಂದ ಕೂಡಿವೆ. ಅವುಗಳು ರಾಷ್ಟ್ರದ ಧ್ಯೇಯಕ್ಕೆ ಅನುಗುಣವಾಗಿವೆ. ಹಾಗಿದ್ದೂ ಅವರನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ಕಿರುಕುಳ ನೀಡಲಾಗುತ್ತಿದೆ, ಟ್ರೋಲ್‌ ಮಾಡಲಾಗುತ್ತಿದೆ, ಜೀವ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ತನ್ನ ವರದಿಗಾರಿಕೆಗೆ ಸರ್ಕಾರವು ಆಧಾರ ರಹಿತ ಪ್ರಕರಣಗಳನ್ನು ದಾಖಲಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು ಆಕೆಯ ಬಾಯಿ ಮುಚ್ಚಿಸಲು ಸರ್ವ ಪ್ರಯತ್ನವನ್ನು ನಡೆಸುತ್ತಿರುವ ನಡುವೆ ಅಧಿಕಾರದಲ್ಲಿರುವವರ ಅವ್ಯವಹಾರಗಳನ್ನು ಬಯಲಿಗೆ ತರಲು ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.

ಪತ್ರಕರ್ತರ ರಕ್ಷಣೆ ಸಮಿತಿಯಲ್ಲಿ ಮಾತನಾಡಿದ ಲೆಹೈ ಅವರು, ಜಾಗತಿಕವಾಗಿ 2022ರಲ್ಲಿ ಕನಿಷ್ಠ 38 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. 294 ಮಂದಿಯನ್ನು ಬಂಧಿಸಲಾಗಿದೆ. 64 ಮಂದಿ ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಕೇವಲ ತಮ್ಮ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದರು ಎಂದರು.

ಲೆಕ್ಕಕ್ಕೆ ಸಿಗದಷ್ಟು ಇತರ ಪತ್ರಕರ್ತರು ಪ್ರತೀಕಾರ, ಪೀಡನೆ, ಕಾನೂನು ಹಿಂಸೆ, ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಲೆಹೈ ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪರವಾಗಿ ನಾವು ನಿಲ್ಲಬೇಕು. ಹಾಗಾಗಿ ರಾಣಾ ಆಯೂಬ್‌ ಮತ್ತು ವಿಶ್ವದಾದ್ಯಂತ ಇರುವ ಆಕೆಯಂತಹ ಸ್ಥೈರ್ಯವುಳ್ಳ ಪತ್ರಕರ್ತರನ್ನು ಬೆಂಬಲಿಸಬೇಕು. ಅವರ ಕೆಲಸವನ್ನು ಯಾವುದೇ ಭಯವಿಲ್ಲದೆ ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪತ್ರಕರ್ತೆ ರಾಣಾ ಆಯೂಬ್‌ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಪ್ರಕರಣ ದಾಖಲಿಸಿದೆ. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ ₹2.69 ಕೋಟಿಯನ್ನು ಅವರು ಸ್ವಂತಕ್ಕೆ ಬಳಿಸಿದ್ದಾರೆ ಮತ್ತು ವಿದೇಶಿ ದೇಣಿಗೆ ನಿಯಮವನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ಆರೋಪ ಹೊರಿಸಲಾಗಿದೆ.

ಅಸ್ಸಾಂ, ಬಿಹಾರ, ಮಹಾರಾಷ್ಟ್ರದ ಕೊಳಗೇರಿಯಲ್ಲಿ ವಾಸಿಸುಸುವವರು ಮತ್ತು ರೈತರಿಗೆ ನೆರವು ನೀಡಲು ಹಾಗೂ ಕೋವಿಡ್‌ನಿಂದ ಸಂಕಷ್ಟಕ್ಕೀಡಾಗಿರುವವರಿಗೆ ನೆರವು ನೀಡಲು ದೇಣಿಗೆ ಸಂಗ್ರಹಿಸಲಾಗಿತ್ತು. ದೇಣಿಗೆ ಹಣವನ್ನು ರಾಣಾ ಅವರ ತಂದೆ ಮತ್ತು ಸಹೋದರಿಯ ಬ್ಯಾಂಕ್‌ ಖಾತೆಗಳ ಮೂಲಕ ಸ್ವೀಕರಿಸಲಾಗುತ್ತಿತ್ತು. ನಂತರ ಈ ಹಣವನ್ನು ರಾಣಾ ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗಿದೆ ಎಂದು ಇ.ಡಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT