ಇಸ್ಲಾಮಾಬಾದ್:ಅಂತರರಾಷ್ಟ್ರೀಯ ಸಮುದಾಯವು ಭಾರತವನ್ನು ನಂಬುತ್ತದೆ, ನಮ್ಮನ್ನಲ್ಲ ಎಂದು ಪಾಕಿಸ್ತಾನದ ಸಚಿವ ಬ್ರಿಗೇಡಿಯರ್ ಇಜಾಜ್ ಅಹ್ಮದ್ ಶಾ ಹೇಳಿದ್ದಾರೆ. ಇದರಿಂದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.
‘ಹಮ್ ನ್ಯೂಸ್’ ಸುದ್ದಿವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘ಆಡಳಿತಾರೂಢ ಗಣ್ಯರು ದೇಶದ ವರ್ಚಸ್ಸನ್ನು ಹಾಳು ಮಾಡುತ್ತಿದ್ದಾರೆ. ಭಾರತವು ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದೆ’ ಎಂದು ಹೇಳಿದ್ದಾರೆ.
‘ಜಮ್ಮು–ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗುತ್ತಿದೆ, ಅಲ್ಲಿನ ಜನರಿಗೆ ಔಷಧಿಯನ್ನೂ ನೀಡಲಾಗುತ್ತಿಲ್ಲ ಎಂದು ನಾವು ಹೇಳುತ್ತೇವೆ. ಆದರೆ, ಅಂತರರಾಷ್ಟ್ರೀಯ ಸಮುದಾಯ ನಮ್ಮನ್ನು ನಂಬುತ್ತಿಲ್ಲ. ಭಾರತವನ್ನು ನಂಬುತ್ತದೆ’ ಎಂದು ಶಾ ಹೇಳಿದ್ದಾರೆ.
‘ಆಡಳಿತದಲ್ಲಿರುವ ಗಣ್ಯರು ದೇಶದ ಹೆಸರನ್ನು ಹಾಳು ಮಾಡಿದ್ದಾರೆ. ನಮ್ಮದು ಒಂದು ಜವಾಬ್ದಾರಿಯುತ ರಾಷ್ಟ್ರ ಎಂದು ಜನರು ಭಾವಿಸುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.