ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಒಪ್ಪಂದಗಳಿಗೆ ಭಾರತ–ಭೂತಾನ್ ಸಹಿ

ಇಂಧನ, ವ್ಯಾಪಾರ, ಬಾಹ್ಯಾಕಾಶ, ಕೃಷಿ ಕ್ಷೇತ್ರದಲ್ಲಿ ಸಹಕಾರ ವೃದ್ಧಿ
Published 22 ಮಾರ್ಚ್ 2024, 14:38 IST
Last Updated 22 ಮಾರ್ಚ್ 2024, 14:38 IST
ಅಕ್ಷರ ಗಾತ್ರ

ತಿಂಫು (ಭೂತಾನ್‌): ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ವಲಯದಲ್ಲಿ ಸಹಕಾರ ಸೇರಿ ಹಲವು ಒಪ್ಪಂದಗಳಿಗೆ ಭಾರತ ಮತ್ತು ಭೂತಾನ್‌ ಶುಕ್ರವಾರ ಸಹಿ ಹಾಕಿವೆ. ಉಭಯ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೂ ಒಡಂಬಡಿಕೆ (ಎಂಒಯು) ಅಂತಿಮಗೊಳಿಸಲಾಯಿತು.

ದೇಶದ ‘ನೆರೆಹೊರೆ ಮೊದಲು’ ನೀತಿಯ ಭಾಗವಾಗಿ ಹಿಮಾಲಯದ ರಾಷ್ಟ್ರದೊಂದಿಗಿನ ಭಾರತದ ಅನನ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಧಾನಿ ಮೋದಿ ಭೂತಾನ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ ಅವರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು. 

ಮೋದಿಯವರ ಗೌರವಾರ್ಥ ಟೊಬ್ಗೆ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಉಭಯ ನಾಯಕರು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದರು.

ನವೀಕರಿಸಬಹುದಾದ ಇಂಧನ, ಕೃಷಿ, ಕ್ರೀಡೆ–ಯುವಜನ ತರಬೇತಿ, ಪರಿಸರ ಮತ್ತು ಅರಣ್ಯ, ಪ್ರವಾಸೋದ್ಯಮದಂತಹ ವಲಯಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 

ಉಭಯ ದೇಶಗಳ ನಡುವೆ ಕೊಕ್ರಜಾರ್-ಗೆಲೆಫು ರೈಲು ಸಂಪರ್ಕ ಮತ್ತು ಬನಾರ್ಹತ್-ಸಂಸ್ತೆ ರೈಲು ಸಂಪರ್ಕ ಯೋಜನೆಗಳನ್ನು ಆರಂಭಿಸಲು, ಅನುಷ್ಠಾನ ವಿಧಾನಗಳನ್ನು ಒಳಗೊಂಡ ಒಪ್ಪಂದದ ಒಡಂಬಡಿಕೆಯನ್ನು ಅಂತಿಮಗೊಳಿಸಲಾಯಿತು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಎರಡೂ ದೇಶಗಳು ದೀರ್ಘಕಾಲದಿಂದಲೂ ಅನನ್ಯ ಬಾಂಧವ್ಯಗಳನ್ನು ಕಾಯ್ದುಕೊಂಡುಬಂದಿವೆ. ಇದು ಅತ್ಯಂತ ನಂಬಿಕೆ, ಸದ್ಭಾವನೆ ಮತ್ತು ಎಲ್ಲ ಹಂತಗಳಲ್ಲಿಯೂ ಪರಸ್ಪರ ಸಹಕಾರದಿಂದ ನಿರೂಪಿಸಲ್ಪಟ್ಟಿದೆ ಎಂದು ಅದು ಹೇಳಿದೆ.

–––

ಮೋದಿಗೆ ಭೂತಾನ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್‌ ಆಫ್‌ ದಿ ಡ್ರುಕ್‌ ಗ್ಯಾಲ್ಪೊ’ ನೀಡಿ ಶುಕ್ರವಾರ ಗೌರವಿಸಿದೆ. ಶುಕ್ರವಾರ ಭೂತಾನ್‌ಗೆ ಬಂದಿಳಿದ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿರುವ ಭೂತಾನ್‌ ದೊರೆ ಜಿಗ್ಮೆ ಖೇಸರ್‌ ನಾಮ್‌ಗೈಲ್‌ ವಾಂಗ್ಚುಕ್‌ ಇದೇ ವೇಳೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ‘ಭಾರತ-ಭೂತಾನ್ ಸಂಬಂಧಗಳ ವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಭೂತಾನ್ ಹಾಗೂ ಅಲ್ಲಿನ ಜನರಿಗೆ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ’. ಈ ಪ್ರಶಸ್ತಿ ಪಡೆದ ಮೊದಲ ವಿದೇಶಿ ಗಣ್ಯ ಎನ್ನುವ ಶ್ರೇಯಕ್ಕೂ ಮೋದಿ ಭಾಜನರಾದರು. ಪ್ರಶಸ್ತಿ ಸ್ವೀಕರಿಸಿದ ನಂತರ ಇಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ ಭಾರತ ಮತ್ತು ಭೂತಾನ್ ಜನರ ನಡುವಿನ ಬಾಂಧವ್ಯವು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಅನನ್ಯವಾಗಿಸಲಿದೆ. ಇಲ್ಲಿನ ಜನರ ಹೃದಯದಲ್ಲಿ ಭಾರತ ನೆಲೆಸಿದೆ ಎಂದು ಬಣ್ಣಿಸಿದರು.

ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ. ಭೂತಾನ್‌ ಜನರು ನೀಡಿದ ಅವಿಸ್ಮರಣೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸುವೆ. ಉಭಯ ದೇಶಗಳ ಸ್ನೇಹವು ಹೊಸ ಮಜಲಿಗೆ ತಲುಪಲಿದೆ

-ನರೇಂದ್ರ ಮೋದಿ ಭಾರತದ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT