ಜಕಾರ್ತ: ‘ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣ ಅತ್ಯಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಸಿಯಾನ್–ಭಾರತ ಮತ್ತು ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ‘ಮುಕ್ತ ಇಂಡೊ–ಪೆಸಿಫಿಕ್ ಪ್ರದೇಶದ ಖಾತ್ರಿ ಈ ಹೊತ್ತಿಗೆ ಅಗತ್ಯ’ ಎಂದಿದ್ದಾರೆ.
ಆಗ್ನೇಯ ಏಷ್ಯಾ ರಾಷ್ಟ್ರಗಳು (ಆಸಿಯಾನ್) ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಗುಂಪುಗಳು ಎಂದೇ ಭಾವಿಸಲಾಗುತ್ತದೆ. ಭಾರತ, ಅಮೆರಿಕ, ಚೀನಾ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಸಂವಾದ ಪಾಲುದಾರ ರಾಷ್ಟ್ರಗಳಾಗಿವೆ. ಇಂಡೊ–ಪೆಸಿಫಿಕ್ ದೃಷ್ಟಿಕೋನದಿಂದ ಭಾರತ ಆಸಿಯಾನ್ ಬೆಂಬಲಿಸುತ್ತಿದೆ ಎಂದು ಪಾಲ್ಗೊಂಡ ನಾಯಕರಿಗೆ ಮೋದಿ ಮನವರಿಕೆ ಮಾಡಿಕೊಟ್ಟಿದ್ದಾರೆ.
‘ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಆಸಿಯಾನ್ ಗುಂಪು ಜಗತ್ತಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಕೆಲಸ ಮಾಡುತ್ತಿದೆ. 21ನೇ ಶತಮಾನ ಏಷ್ಯಾದ್ದಾಗಿದೆ. ಇದು ನಮ್ಮೆಲ್ಲರ ಶತಮಾನವಾಗಿದೆ’ ಎಂದಿದ್ದಾರೆ.
‘ಜಗತ್ತು ಕೋವಿಡ್ನಿಂದ ಹೊರಬಂದ ಸಂದರ್ಭದಿಂದ ಮನುಕುಲದ ಒಳಿತಿಗಾಗಿ ಪ್ರತಿಯೊಬ್ಬರ ಪರಿಶ್ರಮ (ಸಬ್ ಕಾ ಪ್ರಯಾಸ್)ದ ಜತೆಗೆ ಅಭಿವೃದ್ಧಿಯ ಪಥದಲ್ಲಿ ಸಾಗಲು ನಿಯಮಗಳನ್ನು ಪಾಲಿಸಬೇಕಾದ ಜರೂರು ಇದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದ್ದರೂ, ನಮ್ಮ ಈ ಸಹಕಾರದ ಫಲವಾಗಿ ಪ್ರಗತಿಯನ್ನು ಕಾಣಬಹುದು. ಪೂರ್ವಕ್ಕಾಗಿ ಭಾರತ ಹೊಂದಿರುವ ನಿಯಮಗಳಿಗೆ ಆಸಿಯಾನ್ ಎಂಬುದೇ ಪ್ರಮುಖ ಆಧಾರಸ್ತಂಭವಾಗಿದೆ. ಆಸಿಯಾನ್–ಭಾರತದ ಪಾಲುದಾರಿಕೆಯು ಇದೀಗ ನಾಲ್ಕನೇ ದಶಕಕ್ಕೆ ಕಾಲಿರಿಸಿದೆ. ಭಾರತದ ಇಂಡೊ–ಪೆಸಿಫಿಕ್ ಉಪಕ್ರಮದಲ್ಲಿ ಆಸೀನ್ ಪ್ರಮುಖ ಪಾತ್ರ ವಹಿಸಿದೆ’ ಎಂದು ಬಣ್ಣಿಸಿದ್ದಾರೆ.