ಗುರು-ಶಿಷ್ಯರ ಸಂಬಂಧವೂ ಕೂಡ ಪವಿತ್ರವಾದುದು. ಗುರುಗಳು ಸದಾಚಾರಿ, ಸದ್ವಿಚಾರಿ ಮತ್ತು ಪರಮಜ್ಞಾನಿಗಳಾಗಿರುವಂತೆ ಶಿಷ್ಯನೂ ಕೂಡ ಯೋಗ್ಯನಾಗಿರಬೇಕಾಗುತ್ತದೆ. ಶಿಷ್ಯನಲ್ಲಿ ಹುಸಿ, ಕಳವು, ಪರಹಿಂಸೆ ಇತ್ಯಾದಿ ದುರ್ಗುಣಗಳಿದ್ದರೆ ಗುರುಕೃಪೆ ಸಾಧ್ಯವಾಗುವುದಿಲ್ಲ. ಗುರು ಸದಾ ಶಿಷ್ಯನ ತೀವ್ರತೆ ಹಾಗು ಯೋಗ್ಯತೆಯನ್ನು ನಿರೀಕ್ಷಿಸುವನು. ಆದ್ದರಿಂದ ಶಿಷ್ಯನೂ ಯೋಗ್ಯನಾಗಿರಬೇಕಾದುದು ಅಪೇಕ್ಷಣೀಯ. ಸುಯೋಗ್ಯ ಶಿಷ್ಯನು ಸದ್ಗುರುವನ್ನು ಸೇರಿದರೆ, ಸದ್ಗುರು ಸೇವೆಯನ್ನು ಮಾಡಿದರೆ, ಸದ್ಗುರುವಿನಿಂದ ದೀಕ್ಷಿತನಾಗಿ ಅವನು ತೋರಿದ ದಾರಿಯಲ್ಲಿ ಸಾಗಿದರೆ ಶಿಷ್ಯನ ಭಾಗ್ಯಕ್ಕೇನೂ ಕೊರತೆಯಿಲ್ಲ. ಶರಣ ಆದಯ್ಯನವರು ಹೀಗೆ ಹೇಳಿದ್ದಾರೆ-