<p>ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಭಾರತೀಯರ ಎದುರು ತಮ್ಮ ವಾದವನ್ನು ಅದೇಕೆ ಮಂಡಿಸುತ್ತಿಲ್ಲವೋ, ನನಗಂತೂ ಅರ್ಥವಾಗುತ್ತಿಲ್ಲ. ಶ್ರೀಲಂಕಾ ತಮಿಳರ ಬಗ್ಗೆ ಅದೇನು ಹೇಳಬೇಕೆಂದಿದ್ದಾರೊ ಅದನ್ನು ನೇರವಾಗಿಯೇ ಹೇಳಿ ಬಿಡಲಿ. ರಾಜಪಕ್ಸೆ ಬಗ್ಗೆ ಈ ಭಾಗದಲ್ಲಿ ಸದಭಿಪ್ರಾಯವಂತೂ ಇದ್ದಂತಿಲ್ಲ. <br /> <br /> ಈ ನಡುವೆ ಶ್ರೀಲಂಕಾವನ್ನು ಇಬ್ಭಾಗ ಮಾಡಬೇಕೆಂಬ ತಮಿಳು ರಾಷ್ಟ್ರೀಯವಾದಿಗಳ ವಾದಕ್ಕೆ ಭಾರತೀಯರು ಬೆಂಬಲಿಸುವುದು ಅಷ್ಟರಲ್ಲೇ ಇದೆ. ಪರಿಸ್ಥಿತಿ ಹೀಗಿರುವಾಗ ರಾಜಪಕ್ಸೆ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂವಹನ ನಡೆಸಬೇಕಾದ ಅಗತ್ಯ ಇದ್ದೇ ಇದೆ.<br /> <br /> ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂತಾದವರೊಂದಿಗೆ ಹಲವು ಸುತ್ತುಗಳ ಚರ್ಚೆಗಿಂತಲೂ ರಾಜಪಕ್ಸೆ ಅವರಿಗೆ ರಾಜಕೀಯ ತಜ್ಞರು, ವಿಶ್ಲೇಷಕರು, ಚಿಂತಕರ ಜತೆಗಿನ ಸಂವಾದದ ಅಗತ್ಯವಿದೆ.<br /> <br /> ಭಾರತದ ಗುಪ್ತಚರ ಇಲಾಖೆಯೇ ಆಗಲಿ, ನಾಗರಿಕ ಸಮಾಜವೇ ಆಗಲಿ ಹಿಂದೆ ಯಾವತ್ತೂ ಎಲ್ಟಿಟಿಇ ಮುಖಂಡ ಪ್ರಭಾಕರನ್ ಅವರ ಯಾವುದೇ ಫ್ಯಾಸಿಸ್ಟ್ ತಂತ್ರ, ಕಾರ್ಯಾಚರಣೆಗಳನ್ನು ಬೆಂಬಲಿಸಿರಲಿಲ್ಲ. <br /> <br /> ಅದೇನೇ ಇದ್ದರೂ, ಶ್ರೀಲಂಕಾದಲ್ಲಿರುವ ಅಲ್ಪಸಂಖ್ಯಾತ ತಮಿಳರನ್ನು ಪ್ರಜಾಸತ್ತೆಯ ಚೌಕಟ್ಟಿನೊಳಗೆ ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳಬೇಕೆಂದು ಭಾರತೀಯರೆಲ್ಲರೂ ಬಯಸುತ್ತಾರೆ. <br /> <br /> ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಶಾಂತಿ ಪಾಲನಾ ಪಡೆಯು (ಐಪಿಕೆಎಫ್) ಅಲ್ಲಿಗೆ ತೆರಳಿದ್ದು ಈಗ ಹಳೆಯ ವಿಚಾರ. ಉಭಯ ದೇಶಗಳಿಗೂ ಅದರಿಂದ ಕಹಿ ಅನುಭವವೇ ಹೆಚ್ಚು. ಈಗಂತೂ ಉಭಯ ದೇಶಗಳ ನಡುವೆ ಅದೊಂದು ಮರೆತು ಹೋಗುತ್ತಿರುವ ಅಧ್ಯಾಯ.<br /> <br /> ಆದರೂ ಎಲ್ಟಿಟಿಇ ವಿರುದ್ಧದ ಕದನದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಘಟನೆಗಳು ತಮಿಳರೂ ಸೇರಿದಂತೆ ಭಾರತೀಯರೆಲ್ಲರ ನೆನಪಿನಲ್ಲಿವೆ. ಅದರಲ್ಲೂ, ಅಂದು ನಡೆದ ದೌರ್ಜನ್ಯಗಳ ಕೆಲವು ಮಾಹಿತಿಗಳು ಈಚೆಗೆ ಬಯಲಾಗುತ್ತಿದ್ದು, ಭಾರತೀಯ ಸಮುದಾಯವೇ ತಲ್ಲಣಗೊಂಡಿದೆ. <br /> <br /> ಪ್ರಭಾಕರನ್ ಅವರ ಮಗನ ವಿಕೃತ ರೀತಿಯ ಹತ್ಯೆಯ ವಿವರಗಳಂತೂ ಅಮಾನವೀಯವಾಗಿವೆ. ಇಂತಹ ಸುದ್ದಿಗಳು ಬಯಲಾಗುತ್ತಿದ್ದರೂ, ಅಂತರರಾಷ್ಟ್ರೀಯ ವಲಯಗಳಲ್ಲಿ ಈ ಕುರಿತು ಚರ್ಚೆಗೆ ಗ್ರಾಸ ಒದಗುತ್ತಿದ್ದರೂ ಶ್ರೀಲಂಕಾ ಸರ್ಕಾರ ಮಾತ್ರ ಕಿವುಡಾಗಿ ವರ್ತಿಸುತ್ತಿದೆ. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. <br /> <br /> ಇಂತಹ ದೌರ್ಜನ್ಯಗಳು ನಡೆದಿವೆ ಎನ್ನಲಾದ ಸ್ಥಳಗಳಿಗೂ ಭಾರತೀಯ ಅಧಿಕಾರಿಗಳನ್ನು ಕರೆದೊಯ್ದು ತೋರಿಸುವ ಸೌಜನ್ಯವನ್ನು ತೋರಿಲ್ಲ. ಹೀಗಾಗಿ ಇದು ಹಲವು ಅನುಮಾನಗಳಿಗೆ ಎಡೆ ಕೊಡುತ್ತದೆ.<br /> <br /> ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಹಿಂದೊಮ್ಮೆ ಶ್ರೀಲಂಕಾದ ಪ್ರಮುಖ ಪತ್ರಿಕೆಯೊಂದರಲ್ಲಿ ನಾನು ನಿಖರ ಮಾಹಿತಿಗಳೊಂದಿಗೆ ಲೇಖನ ಬರೆದಿದ್ದೆ. ಆ ಪತ್ರಿಕೆಯವರು ತಮ್ಮನ್ನು ಅತ್ಯಂತ ಮುಕ್ತಧೋರಣೆ ಹೊಂದಿರುವವರೆಂದು ಬಿಂಬಿಸಿಕೊಳ್ಳುತ್ತಾರೆ. <br /> <br /> ಆ ಪತ್ರಿಕೆಯವರೇ ನನ್ನ ಆ ಲೇಖನದಿಂದ ಸಿಡಿಮಿಡಿಗೊಂಡರಲ್ಲದೆ, ನಂತರ ನನ್ನ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿಬಿಟ್ಟರು. ಇವುಗಳೇನೇ ಇದ್ದರೂ, ವಾಸ್ತವಗಳನ್ನು, ನಿಖರ ಮಾಹಿತಿಗಳನ್ನು ಎದುರಿಗಿಟ್ಟುಕೊಂಡು ಕಣ್ಣಾಮುಚ್ಚಾಲೆ ನಡೆಸಬೇಕಿಲ್ಲ.<br /> <br /> ಈ ಬಗ್ಗೆ ತಮಿಳುನಾಡಿನಲ್ಲಿ ಹೆಚ್ಚು ಜನ ಕೋಪೋದ್ರಿಕ್ತರಾಗಿದ್ದಾರೆ. ಇದು ಸಹಜ. ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಈ ಜನರು ಶ್ರೀಲಂಕಾ ತಮಿಳರಿಗೆ ಅತಿ ಸಮೀಪದವರು. ಕೇಂದ್ರ ಸರ್ಕಾರ ಈ ವಿವಾದ, ಸಮಸ್ಯೆಯನ್ನು ಇನ್ನಷ್ಟೂ ವಸ್ತುನಿಷ್ಠವಾಗಿ ನೋಡಬಹುದು. ಇದು ಮನಮೋಹನ್ ಸಿಂಗ್ ಸರ್ಕಾರ ಇತರರಿಗಿಂತ ಭಿನ್ನ ಎಂಬುದನ್ನು ತೋರಿಸುತ್ತದೆ.<br /> <br /> ಯುಪಿಎ ಸರ್ಕಾರದ ಮಿತ್ರಪಕ್ಷವಾದ ಡಿಎಂಕೆ ಈಚೆಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿತ್ತು. ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಗೊತ್ತುವಳಿಗೆ ಬೆಂಬಲಿಸಬೇಕೆಂದು ಡಿಎಂಕೆ ಪಕ್ಷವು ಕೇಂದ್ರವನ್ನು ಒತ್ತಾಯಿಸಿತ್ತು. ಕೊನೆಗೂ ಕರುಣಾನಿಧಿ ಆಗ್ರಹಕ್ಕೆ ಮನಮೋಹನ್ ಸಿಂಗ್ ಒಪ್ಪಿದ್ದಾರೆ.<br /> <br /> ಶ್ರೀಲಂಕಾದ ರಾಜಕೀಯ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ನಿರಂತರವಾಗಿ ಗಮನಿಸುತ್ತಿರುವವರಿಗೆಲ್ಲಾ ಅಲ್ಲಿಂದ ವಲಸೆ ಹೋಗುತ್ತಿರುವವರ ಸಂಖ್ಯೆಯನ್ನು ಗಮನಿಸಿದಾಗ ಆತಂಕವೆನಿಸುತ್ತದೆ. ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಕಾಣಲಾಗುತ್ತಲೇ ಇಲ್ಲ. <br /> <br /> ತನ್ನಲ್ಲಿರುವ ಜನಾಂಗೀಯ ಸಮಸ್ಯೆಯ ಬೆಂಕಿಯನ್ನು ನಂದಿಸುವಲ್ಲಿ ಶ್ರೀಲಂಕಾ ಸರ್ಕಾರ ತಪ್ಪು ಹಾದಿ ಹಿಡಿದಿದೆಯೇನೋ ಎಂದೆನಿಸುತ್ತದೆ. ಶತಶತಮಾನಗಳಿಂದ ತಾವು ಬಾಳಿ ಬದುಕುತ್ತಿರುವ ನೆಲದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂಬ ಶ್ರೀಲಂಕಾ ತಮಿಳರ ಭಾವನೆಗಳಿಗೆ ಸರ್ಕಾರದ ಕೆಲವು ಧೋರಣೆಗಳು ಪುಷ್ಟಿ ನೀಡುವಂತಿವೆ. <br /> <br /> ಬಹುಸಂಖ್ಯಾತ ಸಿಂಹಳೀಯ ಕೋಮಿಗೆ ಸೇರಿರುವ ರಾಜಪಕ್ಸೆ ಅವರು ತಾವು ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿದ ಮೇಲಾದರೂ ತಮಿಳರ ಪ್ರಶ್ನೆಗೆ ಸರಿಯಾಗಿ ಸ್ಪಂದಿಸಬೇಕಿತ್ತು. <br /> <br /> ಆದರೆ ರಾಜಪಕ್ಸೆ ತಮಿಳು ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವುದಕ್ಕೂ ಇತಿಶ್ರೀ ಹೇಳಿಬಿಟ್ಟರು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವಾಗಿತ್ತು.<br /> <br /> ಇದು ಅಲ್ಪಸಂಖ್ಯಾತ ತಮಿಳರ ಮನದಲ್ಲಿ ಸಮಾನತೆಯ ಭಾವ ತಂದು ಕೊಡುವಂತಿತ್ತು. ತಾವು ಈ ನೆಲದಲ್ಲಿ ಎರಡನೇ ದರ್ಜೆಯ ಪ್ರಜೆಗಳಲ್ಲ ಎಂಬ ಭಾವ ಅವರ ಮನದಲ್ಲಿ ತುಂಬಿರುವಂತೆ ಮಾಡುತಿತ್ತು. ಈಗ ರಾಜಪಕ್ಸೆ ಆ ಭಾವನೆಗಳನ್ನೂ ಪುಡಿಗಟ್ಟಿ ಬಿಟ್ಟರು.<br /> <br /> ಶ್ರೀಲಂಕಾದ ಉತ್ತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹಳ ಮಂದಿ ಎಲ್ಟಿಟಿಇ ಸಂಘಟನೆಯ ಬೆಂಬಲಿಗರೇನೂ ಆಗಿರಲಿಲ್ಲ. ವೇಲುಪಿಳ್ಳೈ ಪ್ರಭಾಕರನ್ ಇವರೆಲ್ಲರಿಗೂ ಹೀರೊ ಆಗಿರಲಿಲ್ಲ.<br /> <br /> ತಮ್ಮ ಕಾರ್ಯತಂತ್ರಗಳಿಂದ ತಮಿಳರನ್ನು ಬಡತನದ ಕೂಪಕ್ಕೆ ತಳ್ಳಿದ ಪ್ರಭಾಕರನ್ ವಿರುದ್ಧ ಬಹಳಷ್ಟು ತಮಿಳರು ಟೀಕಾಸ್ತ್ರಗಳನ್ನು ಬಿಡುತ್ತಲೇ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.<br /> <br /> ಪ್ರಭಾಕರನ್ ನಂತರವಾದರೂ ಕೊಲಂಬೊ ಮಂದಿ ಜಾಫ್ನಾ ಭಾಗದವರನ್ನು ಗೌರವದಿಂದ ನಡೆಸಿಕೊಳ್ಳಬಹುದು, ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂದುಕೊಂಡಿದ್ದವರಿಗೆಲ್ಲಾ ಈಗ ನಿರಾಸೆ ಉಂಟಾಗಿದೆ. ಪ್ರಭಾಕರನ್ ಪ್ರಭಾವದಿಂದ ದೂರ ಉಳಿದಿದ್ದವರ ಮೇಲೂ ಶ್ರೀಲಂಕಾ ಸರ್ಕಾರ ತನ್ನ ಸೇಡಿನ ಗದಾಪ್ರಹಾರ ನಡೆಸುತ್ತಲೇ ಇದೆ. <br /> <br /> ಆದರೂ ಎಲ್ಟಿಟಿಇಯ ಬಗ್ಗೆ ಹೆದರಿಕೆ, ವಿದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ಸಂಖ್ಯೆಯ ತಮಿಳರ ಭಯದಿಂದ ಶ್ರೀಲಂಕಾ ಸರ್ಕಾರ ಒಂದೇ ರಾಷ್ಟ್ರ, ಒಂದೇ ಧ್ವಜ, ಒಂದೇ ರಾಷ್ಟ್ರಗೀತೆಯತ್ತ ಇಡುತ್ತಿದ್ದ ಹೆಜ್ಜೆಗಳು ನಿಧಾನವಾಗಿತ್ತಷ್ಟೆ.</p>.<p>ಪ್ರಭಾಕರನ್ ಹತ್ಯೆಯ ನಂತರ ಶ್ರೀಲಂಕಾ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ತಮಿಳರಿಗೆ ಭರವಸೆ ಮೂಡಿಸುವಂತಿರಲಿಲ್ಲ. ಸಹಜವಾಗಿಯೇ ತಮಿಳರು ಒಂಟಿತನ ಅನುಭವಿಸುವಂತಾಯಿತು, ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದೇವೆಂಬ ಭಾವ ಮೂಡತೊಡಗಿತು.<br /> <br /> ಶ್ರೀಲಂಕಾದ ಒಕ್ಕೂಟ ವ್ಯವಸ್ಥೆಯಲ್ಲಿಯೂ ಅಧಿಕಾರದ ವಿಕೇಂದ್ರೀಕರಣವನ್ನು ಅಧ್ಯಕ್ಷ ರಾಜಪಕ್ಸೆ ವಿರೋಧಿಸುತ್ತಲೇ ಬಂದಿದ್ದಾರೆ. ಇದು ಶ್ರೀಲಂಕಾ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಯಾವತ್ತಿದ್ದರೂ ಅಪಾಯಕಾರಿಯೇ. ಇದರಿಂದ ಶ್ರೀಲಂಕಾದೊಳಗಿರುವ ಅಥವಾ ಹೊರಗಿರುವ ತಮಿಳರು ಒಂದಲ್ಲಾ ಒಂದು ದಿನ ಉಗ್ರಸ್ವರೂಪದಲ್ಲಿ ಮತ್ತೆ ಸಿಡಿದೆದ್ದರೆ ಅಚ್ಚರಿ ಏನಿಲ್ಲ. <br /> <br /> ಎಲ್ಟಿಟಿಇ ವಿರುದ್ಧದ ಸಮರದ ಕೊನೆಯ ದಿನಗಳಲ್ಲಿ ಶ್ರೀಲಂಕಾ ಸೇನೆ ನಡೆಸಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಭಾರತದ ಸಂಸತ್ತಿನಲ್ಲಿ ಪ್ರಸ್ತಾಪವಾದಾಗ ವ್ಯಕ್ತವಾದ ಕಟುವಾದ ಅಭಿಪ್ರಾಯಗಳು ಶ್ರೀಲಂಕಾದಲ್ಲಿನ ದೌರ್ಜನ್ಯದ ವಿರುದ್ಧದ ಅನಿಸಿಕೆಗಳು ಬೂದಿ ಮುಚ್ಚಿದ ಕೆಂಡದಂತಿವೆ ಎಂಬುದರ ದ್ಯೋತಕದಂತಿದೆ. <br /> <br /> ಶ್ರೀಲಂಕಾ ಮಂದಿ ಅಥವಾ ಕೊಲಂಬೊ ಗದ್ದುಗೆಯ ಸುತ್ತ ಇರುವವರು ರಾಜಪಕ್ಸೆ ಅವರನ್ನೇ ಬದಲಿಸಬೇಕಿಲ್ಲ. ಆದರೆ ರಾಜಪಕ್ಸೆ ಮೂಗಿನ ನೇರದಲ್ಲೇ ನಡೆಯುತ್ತಿರುವ ಆಡಳಿತ ಪ್ರಕ್ರಿಯೆ, ಸರ್ವಾಧಿಕಾರಿ ವರ್ತನೆ, ವಂಶಪಾರಂಪರ್ಯಕ್ಕೆ ಪೂರಕವಾದ ಚಟುವಟಿಕೆಗಳಿಗೆಲ್ಲಾ ಕಡಿವಾಣ ಹಾಕಲೇ ಬೇಕಾಗಿದೆ.<br /> <br /> ಎಲ್ಟಿಟಿಐ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಸಮರದಲ್ಲಿ ತೊಂದರೆಗೀಡಾದ ತಮಿಳರ ಪುನರ್ವಸತಿಗಾಗಿ ಭಾರತ ಸರ್ಕಾರ ಭಾರಿ ಮೊತ್ತದ ಹಣವನ್ನೇ ವೆಚ್ಚ ಮಾಡುತ್ತಿದೆ.<br /> <br /> ಇಷ್ಟಾದರೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ರಸ್ತೆಬದಿ, ಬಯಲುಗಳಲ್ಲಿ ದಿನ ದೂಡುತ್ತಿದ್ದಾರೆ. ಯುದ್ಧ ಮುಗಿದು ವರ್ಷಗಳುರುಳಿದರೂ ನಿರಾಶ್ರಿತರ ಪರಿಸ್ಥಿತಿ ಅದೇ ರೀತಿ ಇದೆ. ತಮಿಳರ ಮೇಲೆ ಮಲತಾಯಿ ಧೋರಣೆ ಮುಂದುವರಿದೇ ಇದೆ. <br /> <br /> ತಮ್ಮದು ಪ್ರಜಾಸತ್ತಾತ್ಮಕ ದೇಶ ಎಂದುಕೊಳ್ಳುತ್ತಿರುವ ಶ್ರೀಲಂಕಾದಲ್ಲಿ ಎಲ್ಲಾ ನಾಗರಿಕರನ್ನು ಸಮಾನವಾಗಿ ನೋಡಬೇಕಾದಂತಹ ಮನಸ್ಥಿತಿಯಾದರೂ ಇರಬೇಕಲ್ಲ. ಸಿಂಹಳೀಯರು ಬಹುಸಂಖ್ಯಾತರಿರಬಹುದು, ತಮಿಳರು ಅಲ್ಪಸಂಖ್ಯಾತರಿರಬಹುದು. ಆದರೆ ಇವರೆಲ್ಲರೂ ಸೇರಿಯೇ ರಾಷ್ಟ್ರವಾಗಿರುವುದು ತಾನೆ.<br /> <br /> ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವವರು `ಕೊಲಂಬೊ ಆಡಳಿತಗಾರ~ರ ಜತೆಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ, ನಿಜ. ಆದರೆ ಶ್ರೀಲಂಕಾದಲ್ಲಿರುವ ತಮಿಳರ ಪರಿಸ್ಥಿತಿ ಸುಧಾರಿಸುವಂತೆ ಕೊಲಂಬೊ ಮೇಲೆ ಪ್ರಭಾವ ಬೀರಬೇಕೆಂದು ತಮಿಳುನಾಡಿನ ಮಂದಿ ಕೇಂದ್ರದ ಆಡಳಿತಗಾರರ ಮೇಲೆ ನಿರಂತರ ಪರಿಣಾಮಕಾರಿ ಒತ್ತಡ ಹೇರುತ್ತಲೇ ಬಂದಿದ್ದಾರೆ.<br /> <br /> ಶ್ರೀಲಂಕಾದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ ಭಾಗದ ಮಂದಿಗೆ ತಾವು ದಕ್ಷಿಣದವರಷ್ಟೇ ಸುರಕ್ಷಿತ ಎಂಬ ಭಾವ ಮೂಡಿದರಷ್ಟೇ ಅದು ಯಶಸ್ವಿ ಪ್ರಜಾಪ್ರಭುತ್ವ ಎನಿಸುತ್ತದೆ ಎಂಬುದನ್ನು ಅಲ್ಲಿನ ಸರ್ಕಾರ ಅರಿತುಕೊಳ್ಳಬೇಕು.<br /> <br /> ಇವೆಲ್ಲಾ ಚಿಂತನೆ, ರಾಜಕೀಯ ಆಗುಹೋಗುಗಳ ನಡುವೆಯೇ ರಾಜಪಕ್ಸೆ ಸರ್ಕಾರ ಭಾರತದ ಜತೆಗಿನ ಸಂಬಂಧವಷ್ಟೇ ಅಲ್ಲ, ಚೀನಾ ಮತ್ತು ಪಾಕಿಸ್ತಾನಗಳ ಜತೆಗೂ ಉತ್ತಮ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆಸಿದೆ.<br /> <br /> ಚೀನಾ ಮತ್ತು ಪಾಕಿಸ್ತಾನಗಳ ಜತೆ ಭಾರತದ ಸಂಬಂಧ ಅಷ್ಟಕ್ಕಷ್ಟೆ. ಆದರೆ ಶ್ರೀಲಂಕಾ ಸರ್ಕಾರವು ಇದೀಗ ಟ್ರಿಂಕಾಮಲಿಯಲ್ಲಿ ಬಂದರೊಂದನ್ನು ಕಟ್ಟಲು ಚೀನಾಕ್ಕೆ ಅವಕಾಶ ನೀಡಿದೆಯಷ್ಟೇ ಅಲ್ಲ,<br /> <br /> ಪಾಕಿಸ್ತಾನ ಸೇನೆಗೆ ಸೇರ್ಪಡೆಗೊಂಡ ಹೊಸಬರಿಗೆ ಶ್ರೀಲಂಕಾ ಸೇನಾ ಶಿಬಿರಗಳಲ್ಲಿ ತರಬೇತಿ ನೀಡಿ ಕಳುಹಿಸಲಾಗುತ್ತಿದೆ. ಇಂತಹ ಸಂಗತಿಗಳು ಭಾರತಕ್ಕೆ ಮುಜುಗರ ಉಂಟು ಮಾಡುವಂತಿದ್ದರೂ, ಭಾರತ ಸರ್ಕಾರ ಶ್ರೀಲಂಕಾ ಜತೆಗಿನ ತನ್ನ ಸ್ನೇಹಪರ ಸಂಬಂಧವನ್ನೇ ಮುಂದುವರಿಸಿದೆ.<br /> <br /> ತಮಿಳರೂ ಅಲ್ಲಿನ ಮುಖ್ಯವಾಹಿನಿ ರಾಜಕಾರಣದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾದ ವಾತಾವರಣ ಮೂಡುವಂತೆ ಮಾಡಲು ಭಾರತ ನೆರವು ನೀಡುತ್ತಿದೆ. ಇದು ಕೊಲಂಬೊಕ್ಕೆ, ಸಿಂಹಳೀಯರಿಗೆ ಒಳ್ಳೆಯದು ಮಾಡುವಂತಹದ್ದೇ ಆಗಿದೆ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಭಾರತೀಯರ ಎದುರು ತಮ್ಮ ವಾದವನ್ನು ಅದೇಕೆ ಮಂಡಿಸುತ್ತಿಲ್ಲವೋ, ನನಗಂತೂ ಅರ್ಥವಾಗುತ್ತಿಲ್ಲ. ಶ್ರೀಲಂಕಾ ತಮಿಳರ ಬಗ್ಗೆ ಅದೇನು ಹೇಳಬೇಕೆಂದಿದ್ದಾರೊ ಅದನ್ನು ನೇರವಾಗಿಯೇ ಹೇಳಿ ಬಿಡಲಿ. ರಾಜಪಕ್ಸೆ ಬಗ್ಗೆ ಈ ಭಾಗದಲ್ಲಿ ಸದಭಿಪ್ರಾಯವಂತೂ ಇದ್ದಂತಿಲ್ಲ. <br /> <br /> ಈ ನಡುವೆ ಶ್ರೀಲಂಕಾವನ್ನು ಇಬ್ಭಾಗ ಮಾಡಬೇಕೆಂಬ ತಮಿಳು ರಾಷ್ಟ್ರೀಯವಾದಿಗಳ ವಾದಕ್ಕೆ ಭಾರತೀಯರು ಬೆಂಬಲಿಸುವುದು ಅಷ್ಟರಲ್ಲೇ ಇದೆ. ಪರಿಸ್ಥಿತಿ ಹೀಗಿರುವಾಗ ರಾಜಪಕ್ಸೆ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂವಹನ ನಡೆಸಬೇಕಾದ ಅಗತ್ಯ ಇದ್ದೇ ಇದೆ.<br /> <br /> ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂತಾದವರೊಂದಿಗೆ ಹಲವು ಸುತ್ತುಗಳ ಚರ್ಚೆಗಿಂತಲೂ ರಾಜಪಕ್ಸೆ ಅವರಿಗೆ ರಾಜಕೀಯ ತಜ್ಞರು, ವಿಶ್ಲೇಷಕರು, ಚಿಂತಕರ ಜತೆಗಿನ ಸಂವಾದದ ಅಗತ್ಯವಿದೆ.<br /> <br /> ಭಾರತದ ಗುಪ್ತಚರ ಇಲಾಖೆಯೇ ಆಗಲಿ, ನಾಗರಿಕ ಸಮಾಜವೇ ಆಗಲಿ ಹಿಂದೆ ಯಾವತ್ತೂ ಎಲ್ಟಿಟಿಇ ಮುಖಂಡ ಪ್ರಭಾಕರನ್ ಅವರ ಯಾವುದೇ ಫ್ಯಾಸಿಸ್ಟ್ ತಂತ್ರ, ಕಾರ್ಯಾಚರಣೆಗಳನ್ನು ಬೆಂಬಲಿಸಿರಲಿಲ್ಲ. <br /> <br /> ಅದೇನೇ ಇದ್ದರೂ, ಶ್ರೀಲಂಕಾದಲ್ಲಿರುವ ಅಲ್ಪಸಂಖ್ಯಾತ ತಮಿಳರನ್ನು ಪ್ರಜಾಸತ್ತೆಯ ಚೌಕಟ್ಟಿನೊಳಗೆ ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳಬೇಕೆಂದು ಭಾರತೀಯರೆಲ್ಲರೂ ಬಯಸುತ್ತಾರೆ. <br /> <br /> ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಶಾಂತಿ ಪಾಲನಾ ಪಡೆಯು (ಐಪಿಕೆಎಫ್) ಅಲ್ಲಿಗೆ ತೆರಳಿದ್ದು ಈಗ ಹಳೆಯ ವಿಚಾರ. ಉಭಯ ದೇಶಗಳಿಗೂ ಅದರಿಂದ ಕಹಿ ಅನುಭವವೇ ಹೆಚ್ಚು. ಈಗಂತೂ ಉಭಯ ದೇಶಗಳ ನಡುವೆ ಅದೊಂದು ಮರೆತು ಹೋಗುತ್ತಿರುವ ಅಧ್ಯಾಯ.<br /> <br /> ಆದರೂ ಎಲ್ಟಿಟಿಇ ವಿರುದ್ಧದ ಕದನದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಘಟನೆಗಳು ತಮಿಳರೂ ಸೇರಿದಂತೆ ಭಾರತೀಯರೆಲ್ಲರ ನೆನಪಿನಲ್ಲಿವೆ. ಅದರಲ್ಲೂ, ಅಂದು ನಡೆದ ದೌರ್ಜನ್ಯಗಳ ಕೆಲವು ಮಾಹಿತಿಗಳು ಈಚೆಗೆ ಬಯಲಾಗುತ್ತಿದ್ದು, ಭಾರತೀಯ ಸಮುದಾಯವೇ ತಲ್ಲಣಗೊಂಡಿದೆ. <br /> <br /> ಪ್ರಭಾಕರನ್ ಅವರ ಮಗನ ವಿಕೃತ ರೀತಿಯ ಹತ್ಯೆಯ ವಿವರಗಳಂತೂ ಅಮಾನವೀಯವಾಗಿವೆ. ಇಂತಹ ಸುದ್ದಿಗಳು ಬಯಲಾಗುತ್ತಿದ್ದರೂ, ಅಂತರರಾಷ್ಟ್ರೀಯ ವಲಯಗಳಲ್ಲಿ ಈ ಕುರಿತು ಚರ್ಚೆಗೆ ಗ್ರಾಸ ಒದಗುತ್ತಿದ್ದರೂ ಶ್ರೀಲಂಕಾ ಸರ್ಕಾರ ಮಾತ್ರ ಕಿವುಡಾಗಿ ವರ್ತಿಸುತ್ತಿದೆ. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. <br /> <br /> ಇಂತಹ ದೌರ್ಜನ್ಯಗಳು ನಡೆದಿವೆ ಎನ್ನಲಾದ ಸ್ಥಳಗಳಿಗೂ ಭಾರತೀಯ ಅಧಿಕಾರಿಗಳನ್ನು ಕರೆದೊಯ್ದು ತೋರಿಸುವ ಸೌಜನ್ಯವನ್ನು ತೋರಿಲ್ಲ. ಹೀಗಾಗಿ ಇದು ಹಲವು ಅನುಮಾನಗಳಿಗೆ ಎಡೆ ಕೊಡುತ್ತದೆ.<br /> <br /> ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಹಿಂದೊಮ್ಮೆ ಶ್ರೀಲಂಕಾದ ಪ್ರಮುಖ ಪತ್ರಿಕೆಯೊಂದರಲ್ಲಿ ನಾನು ನಿಖರ ಮಾಹಿತಿಗಳೊಂದಿಗೆ ಲೇಖನ ಬರೆದಿದ್ದೆ. ಆ ಪತ್ರಿಕೆಯವರು ತಮ್ಮನ್ನು ಅತ್ಯಂತ ಮುಕ್ತಧೋರಣೆ ಹೊಂದಿರುವವರೆಂದು ಬಿಂಬಿಸಿಕೊಳ್ಳುತ್ತಾರೆ. <br /> <br /> ಆ ಪತ್ರಿಕೆಯವರೇ ನನ್ನ ಆ ಲೇಖನದಿಂದ ಸಿಡಿಮಿಡಿಗೊಂಡರಲ್ಲದೆ, ನಂತರ ನನ್ನ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿಬಿಟ್ಟರು. ಇವುಗಳೇನೇ ಇದ್ದರೂ, ವಾಸ್ತವಗಳನ್ನು, ನಿಖರ ಮಾಹಿತಿಗಳನ್ನು ಎದುರಿಗಿಟ್ಟುಕೊಂಡು ಕಣ್ಣಾಮುಚ್ಚಾಲೆ ನಡೆಸಬೇಕಿಲ್ಲ.<br /> <br /> ಈ ಬಗ್ಗೆ ತಮಿಳುನಾಡಿನಲ್ಲಿ ಹೆಚ್ಚು ಜನ ಕೋಪೋದ್ರಿಕ್ತರಾಗಿದ್ದಾರೆ. ಇದು ಸಹಜ. ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಈ ಜನರು ಶ್ರೀಲಂಕಾ ತಮಿಳರಿಗೆ ಅತಿ ಸಮೀಪದವರು. ಕೇಂದ್ರ ಸರ್ಕಾರ ಈ ವಿವಾದ, ಸಮಸ್ಯೆಯನ್ನು ಇನ್ನಷ್ಟೂ ವಸ್ತುನಿಷ್ಠವಾಗಿ ನೋಡಬಹುದು. ಇದು ಮನಮೋಹನ್ ಸಿಂಗ್ ಸರ್ಕಾರ ಇತರರಿಗಿಂತ ಭಿನ್ನ ಎಂಬುದನ್ನು ತೋರಿಸುತ್ತದೆ.<br /> <br /> ಯುಪಿಎ ಸರ್ಕಾರದ ಮಿತ್ರಪಕ್ಷವಾದ ಡಿಎಂಕೆ ಈಚೆಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿತ್ತು. ಶ್ರೀಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಗೊತ್ತುವಳಿಗೆ ಬೆಂಬಲಿಸಬೇಕೆಂದು ಡಿಎಂಕೆ ಪಕ್ಷವು ಕೇಂದ್ರವನ್ನು ಒತ್ತಾಯಿಸಿತ್ತು. ಕೊನೆಗೂ ಕರುಣಾನಿಧಿ ಆಗ್ರಹಕ್ಕೆ ಮನಮೋಹನ್ ಸಿಂಗ್ ಒಪ್ಪಿದ್ದಾರೆ.<br /> <br /> ಶ್ರೀಲಂಕಾದ ರಾಜಕೀಯ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ನಿರಂತರವಾಗಿ ಗಮನಿಸುತ್ತಿರುವವರಿಗೆಲ್ಲಾ ಅಲ್ಲಿಂದ ವಲಸೆ ಹೋಗುತ್ತಿರುವವರ ಸಂಖ್ಯೆಯನ್ನು ಗಮನಿಸಿದಾಗ ಆತಂಕವೆನಿಸುತ್ತದೆ. ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಕಾಣಲಾಗುತ್ತಲೇ ಇಲ್ಲ. <br /> <br /> ತನ್ನಲ್ಲಿರುವ ಜನಾಂಗೀಯ ಸಮಸ್ಯೆಯ ಬೆಂಕಿಯನ್ನು ನಂದಿಸುವಲ್ಲಿ ಶ್ರೀಲಂಕಾ ಸರ್ಕಾರ ತಪ್ಪು ಹಾದಿ ಹಿಡಿದಿದೆಯೇನೋ ಎಂದೆನಿಸುತ್ತದೆ. ಶತಶತಮಾನಗಳಿಂದ ತಾವು ಬಾಳಿ ಬದುಕುತ್ತಿರುವ ನೆಲದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂಬ ಶ್ರೀಲಂಕಾ ತಮಿಳರ ಭಾವನೆಗಳಿಗೆ ಸರ್ಕಾರದ ಕೆಲವು ಧೋರಣೆಗಳು ಪುಷ್ಟಿ ನೀಡುವಂತಿವೆ. <br /> <br /> ಬಹುಸಂಖ್ಯಾತ ಸಿಂಹಳೀಯ ಕೋಮಿಗೆ ಸೇರಿರುವ ರಾಜಪಕ್ಸೆ ಅವರು ತಾವು ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿದ ಮೇಲಾದರೂ ತಮಿಳರ ಪ್ರಶ್ನೆಗೆ ಸರಿಯಾಗಿ ಸ್ಪಂದಿಸಬೇಕಿತ್ತು. <br /> <br /> ಆದರೆ ರಾಜಪಕ್ಸೆ ತಮಿಳು ಭಾಷೆಯಲ್ಲಿ ರಾಷ್ಟ್ರಗೀತೆ ಹಾಡುವುದಕ್ಕೂ ಇತಿಶ್ರೀ ಹೇಳಿಬಿಟ್ಟರು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವಾಗಿತ್ತು.<br /> <br /> ಇದು ಅಲ್ಪಸಂಖ್ಯಾತ ತಮಿಳರ ಮನದಲ್ಲಿ ಸಮಾನತೆಯ ಭಾವ ತಂದು ಕೊಡುವಂತಿತ್ತು. ತಾವು ಈ ನೆಲದಲ್ಲಿ ಎರಡನೇ ದರ್ಜೆಯ ಪ್ರಜೆಗಳಲ್ಲ ಎಂಬ ಭಾವ ಅವರ ಮನದಲ್ಲಿ ತುಂಬಿರುವಂತೆ ಮಾಡುತಿತ್ತು. ಈಗ ರಾಜಪಕ್ಸೆ ಆ ಭಾವನೆಗಳನ್ನೂ ಪುಡಿಗಟ್ಟಿ ಬಿಟ್ಟರು.<br /> <br /> ಶ್ರೀಲಂಕಾದ ಉತ್ತರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹಳ ಮಂದಿ ಎಲ್ಟಿಟಿಇ ಸಂಘಟನೆಯ ಬೆಂಬಲಿಗರೇನೂ ಆಗಿರಲಿಲ್ಲ. ವೇಲುಪಿಳ್ಳೈ ಪ್ರಭಾಕರನ್ ಇವರೆಲ್ಲರಿಗೂ ಹೀರೊ ಆಗಿರಲಿಲ್ಲ.<br /> <br /> ತಮ್ಮ ಕಾರ್ಯತಂತ್ರಗಳಿಂದ ತಮಿಳರನ್ನು ಬಡತನದ ಕೂಪಕ್ಕೆ ತಳ್ಳಿದ ಪ್ರಭಾಕರನ್ ವಿರುದ್ಧ ಬಹಳಷ್ಟು ತಮಿಳರು ಟೀಕಾಸ್ತ್ರಗಳನ್ನು ಬಿಡುತ್ತಲೇ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.<br /> <br /> ಪ್ರಭಾಕರನ್ ನಂತರವಾದರೂ ಕೊಲಂಬೊ ಮಂದಿ ಜಾಫ್ನಾ ಭಾಗದವರನ್ನು ಗೌರವದಿಂದ ನಡೆಸಿಕೊಳ್ಳಬಹುದು, ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂದುಕೊಂಡಿದ್ದವರಿಗೆಲ್ಲಾ ಈಗ ನಿರಾಸೆ ಉಂಟಾಗಿದೆ. ಪ್ರಭಾಕರನ್ ಪ್ರಭಾವದಿಂದ ದೂರ ಉಳಿದಿದ್ದವರ ಮೇಲೂ ಶ್ರೀಲಂಕಾ ಸರ್ಕಾರ ತನ್ನ ಸೇಡಿನ ಗದಾಪ್ರಹಾರ ನಡೆಸುತ್ತಲೇ ಇದೆ. <br /> <br /> ಆದರೂ ಎಲ್ಟಿಟಿಇಯ ಬಗ್ಗೆ ಹೆದರಿಕೆ, ವಿದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ಸಂಖ್ಯೆಯ ತಮಿಳರ ಭಯದಿಂದ ಶ್ರೀಲಂಕಾ ಸರ್ಕಾರ ಒಂದೇ ರಾಷ್ಟ್ರ, ಒಂದೇ ಧ್ವಜ, ಒಂದೇ ರಾಷ್ಟ್ರಗೀತೆಯತ್ತ ಇಡುತ್ತಿದ್ದ ಹೆಜ್ಜೆಗಳು ನಿಧಾನವಾಗಿತ್ತಷ್ಟೆ.</p>.<p>ಪ್ರಭಾಕರನ್ ಹತ್ಯೆಯ ನಂತರ ಶ್ರೀಲಂಕಾ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ತಮಿಳರಿಗೆ ಭರವಸೆ ಮೂಡಿಸುವಂತಿರಲಿಲ್ಲ. ಸಹಜವಾಗಿಯೇ ತಮಿಳರು ಒಂಟಿತನ ಅನುಭವಿಸುವಂತಾಯಿತು, ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದೇವೆಂಬ ಭಾವ ಮೂಡತೊಡಗಿತು.<br /> <br /> ಶ್ರೀಲಂಕಾದ ಒಕ್ಕೂಟ ವ್ಯವಸ್ಥೆಯಲ್ಲಿಯೂ ಅಧಿಕಾರದ ವಿಕೇಂದ್ರೀಕರಣವನ್ನು ಅಧ್ಯಕ್ಷ ರಾಜಪಕ್ಸೆ ವಿರೋಧಿಸುತ್ತಲೇ ಬಂದಿದ್ದಾರೆ. ಇದು ಶ್ರೀಲಂಕಾ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಯಾವತ್ತಿದ್ದರೂ ಅಪಾಯಕಾರಿಯೇ. ಇದರಿಂದ ಶ್ರೀಲಂಕಾದೊಳಗಿರುವ ಅಥವಾ ಹೊರಗಿರುವ ತಮಿಳರು ಒಂದಲ್ಲಾ ಒಂದು ದಿನ ಉಗ್ರಸ್ವರೂಪದಲ್ಲಿ ಮತ್ತೆ ಸಿಡಿದೆದ್ದರೆ ಅಚ್ಚರಿ ಏನಿಲ್ಲ. <br /> <br /> ಎಲ್ಟಿಟಿಇ ವಿರುದ್ಧದ ಸಮರದ ಕೊನೆಯ ದಿನಗಳಲ್ಲಿ ಶ್ರೀಲಂಕಾ ಸೇನೆ ನಡೆಸಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ಭಾರತದ ಸಂಸತ್ತಿನಲ್ಲಿ ಪ್ರಸ್ತಾಪವಾದಾಗ ವ್ಯಕ್ತವಾದ ಕಟುವಾದ ಅಭಿಪ್ರಾಯಗಳು ಶ್ರೀಲಂಕಾದಲ್ಲಿನ ದೌರ್ಜನ್ಯದ ವಿರುದ್ಧದ ಅನಿಸಿಕೆಗಳು ಬೂದಿ ಮುಚ್ಚಿದ ಕೆಂಡದಂತಿವೆ ಎಂಬುದರ ದ್ಯೋತಕದಂತಿದೆ. <br /> <br /> ಶ್ರೀಲಂಕಾ ಮಂದಿ ಅಥವಾ ಕೊಲಂಬೊ ಗದ್ದುಗೆಯ ಸುತ್ತ ಇರುವವರು ರಾಜಪಕ್ಸೆ ಅವರನ್ನೇ ಬದಲಿಸಬೇಕಿಲ್ಲ. ಆದರೆ ರಾಜಪಕ್ಸೆ ಮೂಗಿನ ನೇರದಲ್ಲೇ ನಡೆಯುತ್ತಿರುವ ಆಡಳಿತ ಪ್ರಕ್ರಿಯೆ, ಸರ್ವಾಧಿಕಾರಿ ವರ್ತನೆ, ವಂಶಪಾರಂಪರ್ಯಕ್ಕೆ ಪೂರಕವಾದ ಚಟುವಟಿಕೆಗಳಿಗೆಲ್ಲಾ ಕಡಿವಾಣ ಹಾಕಲೇ ಬೇಕಾಗಿದೆ.<br /> <br /> ಎಲ್ಟಿಟಿಐ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಸಮರದಲ್ಲಿ ತೊಂದರೆಗೀಡಾದ ತಮಿಳರ ಪುನರ್ವಸತಿಗಾಗಿ ಭಾರತ ಸರ್ಕಾರ ಭಾರಿ ಮೊತ್ತದ ಹಣವನ್ನೇ ವೆಚ್ಚ ಮಾಡುತ್ತಿದೆ.<br /> <br /> ಇಷ್ಟಾದರೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ತಮಿಳರು ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ರಸ್ತೆಬದಿ, ಬಯಲುಗಳಲ್ಲಿ ದಿನ ದೂಡುತ್ತಿದ್ದಾರೆ. ಯುದ್ಧ ಮುಗಿದು ವರ್ಷಗಳುರುಳಿದರೂ ನಿರಾಶ್ರಿತರ ಪರಿಸ್ಥಿತಿ ಅದೇ ರೀತಿ ಇದೆ. ತಮಿಳರ ಮೇಲೆ ಮಲತಾಯಿ ಧೋರಣೆ ಮುಂದುವರಿದೇ ಇದೆ. <br /> <br /> ತಮ್ಮದು ಪ್ರಜಾಸತ್ತಾತ್ಮಕ ದೇಶ ಎಂದುಕೊಳ್ಳುತ್ತಿರುವ ಶ್ರೀಲಂಕಾದಲ್ಲಿ ಎಲ್ಲಾ ನಾಗರಿಕರನ್ನು ಸಮಾನವಾಗಿ ನೋಡಬೇಕಾದಂತಹ ಮನಸ್ಥಿತಿಯಾದರೂ ಇರಬೇಕಲ್ಲ. ಸಿಂಹಳೀಯರು ಬಹುಸಂಖ್ಯಾತರಿರಬಹುದು, ತಮಿಳರು ಅಲ್ಪಸಂಖ್ಯಾತರಿರಬಹುದು. ಆದರೆ ಇವರೆಲ್ಲರೂ ಸೇರಿಯೇ ರಾಷ್ಟ್ರವಾಗಿರುವುದು ತಾನೆ.<br /> <br /> ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವವರು `ಕೊಲಂಬೊ ಆಡಳಿತಗಾರ~ರ ಜತೆಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ, ನಿಜ. ಆದರೆ ಶ್ರೀಲಂಕಾದಲ್ಲಿರುವ ತಮಿಳರ ಪರಿಸ್ಥಿತಿ ಸುಧಾರಿಸುವಂತೆ ಕೊಲಂಬೊ ಮೇಲೆ ಪ್ರಭಾವ ಬೀರಬೇಕೆಂದು ತಮಿಳುನಾಡಿನ ಮಂದಿ ಕೇಂದ್ರದ ಆಡಳಿತಗಾರರ ಮೇಲೆ ನಿರಂತರ ಪರಿಣಾಮಕಾರಿ ಒತ್ತಡ ಹೇರುತ್ತಲೇ ಬಂದಿದ್ದಾರೆ.<br /> <br /> ಶ್ರೀಲಂಕಾದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತರ ಭಾಗದ ಮಂದಿಗೆ ತಾವು ದಕ್ಷಿಣದವರಷ್ಟೇ ಸುರಕ್ಷಿತ ಎಂಬ ಭಾವ ಮೂಡಿದರಷ್ಟೇ ಅದು ಯಶಸ್ವಿ ಪ್ರಜಾಪ್ರಭುತ್ವ ಎನಿಸುತ್ತದೆ ಎಂಬುದನ್ನು ಅಲ್ಲಿನ ಸರ್ಕಾರ ಅರಿತುಕೊಳ್ಳಬೇಕು.<br /> <br /> ಇವೆಲ್ಲಾ ಚಿಂತನೆ, ರಾಜಕೀಯ ಆಗುಹೋಗುಗಳ ನಡುವೆಯೇ ರಾಜಪಕ್ಸೆ ಸರ್ಕಾರ ಭಾರತದ ಜತೆಗಿನ ಸಂಬಂಧವಷ್ಟೇ ಅಲ್ಲ, ಚೀನಾ ಮತ್ತು ಪಾಕಿಸ್ತಾನಗಳ ಜತೆಗೂ ಉತ್ತಮ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆಸಿದೆ.<br /> <br /> ಚೀನಾ ಮತ್ತು ಪಾಕಿಸ್ತಾನಗಳ ಜತೆ ಭಾರತದ ಸಂಬಂಧ ಅಷ್ಟಕ್ಕಷ್ಟೆ. ಆದರೆ ಶ್ರೀಲಂಕಾ ಸರ್ಕಾರವು ಇದೀಗ ಟ್ರಿಂಕಾಮಲಿಯಲ್ಲಿ ಬಂದರೊಂದನ್ನು ಕಟ್ಟಲು ಚೀನಾಕ್ಕೆ ಅವಕಾಶ ನೀಡಿದೆಯಷ್ಟೇ ಅಲ್ಲ,<br /> <br /> ಪಾಕಿಸ್ತಾನ ಸೇನೆಗೆ ಸೇರ್ಪಡೆಗೊಂಡ ಹೊಸಬರಿಗೆ ಶ್ರೀಲಂಕಾ ಸೇನಾ ಶಿಬಿರಗಳಲ್ಲಿ ತರಬೇತಿ ನೀಡಿ ಕಳುಹಿಸಲಾಗುತ್ತಿದೆ. ಇಂತಹ ಸಂಗತಿಗಳು ಭಾರತಕ್ಕೆ ಮುಜುಗರ ಉಂಟು ಮಾಡುವಂತಿದ್ದರೂ, ಭಾರತ ಸರ್ಕಾರ ಶ್ರೀಲಂಕಾ ಜತೆಗಿನ ತನ್ನ ಸ್ನೇಹಪರ ಸಂಬಂಧವನ್ನೇ ಮುಂದುವರಿಸಿದೆ.<br /> <br /> ತಮಿಳರೂ ಅಲ್ಲಿನ ಮುಖ್ಯವಾಹಿನಿ ರಾಜಕಾರಣದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾದ ವಾತಾವರಣ ಮೂಡುವಂತೆ ಮಾಡಲು ಭಾರತ ನೆರವು ನೀಡುತ್ತಿದೆ. ಇದು ಕೊಲಂಬೊಕ್ಕೆ, ಸಿಂಹಳೀಯರಿಗೆ ಒಳ್ಳೆಯದು ಮಾಡುವಂತಹದ್ದೇ ಆಗಿದೆ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>