ಕ್ರಿಕೆಟ್ ಪಂದ್ಯದಲ್ಲಿ ವಿಕೆಟ್ ಬೀಳುವುದಕ್ಕೂ ಪ್ರಭ್ಯಾ ಮನಿ ಬಾಗಲ್ದಾಗ ಪ್ರತ್ಯಕ್ಷ ಆಗುದಕ್ಕೂ ಸರಿಹೋಯ್ತು. ‘ಬಾರಪಾ, ಯಾವ್ ಮುಹೂರ್ತ
ದಾಗ್ ಬಂದಿ ನೋಡ್. ನೀ ಕಾಲಿಡುದಕ್ಕೂ ಅಲ್ಲೊಂದು ವಿಕೆಟ್ ಬಿತ್ತು ನೋಡ್’ ಅಂದೆ...
‘ಏಯ್ ವಿಕೆಟ್ ಹೋಗ್ಲಿ ಬಿಡು. ನಮ್ಮ ದೇವ್ರಿಗೆ ಇಂತಾ ಗತಿ ಬರಬಾರ್ದಿತ್ತು ನೋಡ್’ ಎಂದು ಗೊಣಗುತ್ತಲೇ ಸೋಫಾದ ಮೇಲೆ ಕುಕ್ಕರುಬಡಿದ.
‘ಕ್ರಿಕೆಟ್ ದೇವ್ರಿ’ಗೆ ರಾಜ್ಯಸಭೆಯಲ್ಲಿ ಮಾತಾಡಾಕ್ ಅವಕಾಶ ಸಿಗಲಿಲ್ಲ ಅನ್ನೋದು ಪ್ರಭ್ಯಾನ ಸಿಟ್ಟಿಗೆ ಕಾರ್ಣ ಇದ್ಹಂಗ್ ಕಾಣಸ್ತೈತಿ ಅನಕೊಂಡು, ‘ಅಲ್ಲಿ ಮಾತಾಡಾಕ್ ಆಗ್ದಿದ್ರ ನಿಮ್ಮ ದ್ಯಾವ್ರು ಮುನಿಸಿಕೊಂಡು ಮನ್ಯಾಗ್ ಸುಮ್ನ ಕುಂದ್ರರ್ಲಿಲ್ಲ. ಅಂವಾ ಭಾಳ್ ಶಾಣೆ ಅದಾನ್ ನೋಡ್. ಟಿವ್ಯಾಗ್ ಭಕ್ತರು ತನ್ನ ಭಾಷ್ಣಾ ಕೇಳದಿದ್ರ ಏನಾಯ್ತು. ಫೇಸ್ಬುಕ್ ಗ್ವಾಡಿ ಮ್ಯಾಲ್ ಪ್ರತ್ಯಕ್ಷನಾಗಿ ಹೇಳಿಕಿ ಕೊಟ್ಟು ಕ್ರೀಡಾ ಮನೋಭಾವ ತೋರ್ಶ್ಯಾನ್ ಬಿಡು’ ಎಂದೆ.
‘ಅದ್ನಪs ನಾನೂ ಹೇಳೂದು. ದೊಡ್ಡೋರ್ ಅನಿಸಿಕೊಂಡವ್ರು ದೇವ್ರಿಗೆ ಹಿಂಗ್ ಅವಮಾನ ಮಾಡಿದ್ರ ಹೆಂಗ್. ಸ್ವಲ್ಪರs ಛಂದ್ ಕಾಣ್ತೈತೇನ್’ ಅಂದ ಬ್ಯಾಸರದಿಂದ.
‘ಏಯ್, ನಿಮ್ ದೇವ್ರು ಇಷ್ಟ್ ದಿನಾ ಮಕ್ಕೊಂಡಿದ್ನೇನ್. ಅಥ್ವಾ ಇನ್ನಷ್ಟು ಶತಕ ಬಾರ್ಸ್ಬೇಕಂತ್ ತಪಸ್ ಮಾಡಾಕತ್ನಿದ್ನ? ಎಲ್ಲಾ ಮುಗ್ದದಪಾ. ಕ್ರೀಡಾಪ್ರೇಮಿ ದೇಶಾನ ಕ್ರೀಡೆಗಳನ್ನಾಡುವ ದೇಶಾ ಮಾಡೊ ದೊಡ್ಡ ಕನ್ಸ ಹಂಚ್ಕೊಳಾಕ್ ಇಷ್ಟ್ ವರ್ಷ ಬೇಕಾತೇನ್ ನಿಮ್ಮ ದ್ಯಾವ್ರಿಗೆ’ ಎಂದು ಹೀಯಾಳಿಸಿದೆ.
‘ಏಯ್ ನಮ್ಮ ಕ್ರಿಕೆಟ್ ದೇವ್ರ ಬಗ್ಗೆ ಹಂಗೆಲ್ಲಾ ಹಗರ ಮಾತಾಡ್ಬ್ಯಾಡ್ ನೋಡ್ ಮತ್ತ. ದೇವ್ರು ದಿಂಡರು ಬಗ್ಗೆ ಹೆಂಗೆಂಗರ್ ಮಾತ್ ಮುಂದುವರೆಸಿದ್ರ, ನಿಮ್ಮಂಥವರ ಬಾಯಿ ಮುಚ್ಚಸಾಕ್ ಸಂವಿಧಾನಾನ ತಿದ್ದುಪಡಿ ಮಾಡಾಕೂ ನಾವ್ ಹಿಂದ್ಮುಂದ್ ನೋಡುದಿಲ್ಲ ನೋಡ್’ ಅಂದ ಬೆದರಿಕೆ ಧಾಟಿಯಲ್ಲಿ.
‘ಮಾಡಪಾ, ನೀವು ಬಂದಿರೋದs ಸಂವಿಧಾನ ಬದಲ್ ಮಾಡಾಕ್sss. ಮೊದ್ಲು ನಾಲ್ಗಿ ಬದ್ಲ ಮಾಡ್ಕೊ, ಆಮ್ಯಾಲ್ ಸಂವಿಧಾನ ಬದಲ್ ಮಾಡು ಅಂತಿ’ ಎಂದು ಜೋರು ಮಾಡಿದೆ.
ನಮ್ಮಿಬ್ಬರ ಜಗಳಕ್ಕೆ ತಣ್ಣೀರೆರಚುಹಂಗ್, ಹೆಂಡ್ತಿ, ನೀರು ತಂದಿಟ್ಟು ಅಡ್ಡಬಾಯಿ ಹಾಕ್ದ ಅಡಿಗೆ ಮನಿ ಹೊಕ್ಕಳು.
‘ಯಾವ್ದೊ ಯಾತ್ರಾ ಮುಗಿಸಿಕೊಂಡ್ ಬಂದ್ಹಂಗ್ ಕಾಣಸ್ತೈತಿ. ನೀರ್ ಕುಡ್ದು ಸುಧಾರಿಸಿಕೊ’ ಎಂದೇ ಕಕ್ಕುಲಾತಿಯಿಂದ.
‘ನಿನ್ನ ಮನ್ಯಾಗ್ ಯಾವ್ ನೀರ ಅದಪ. ಕಾವೇರಿ, ಮಹದಾಯಿ, ತುಂಗಾ, ಬೋರ್ವೆಲ್ ಅಥ್ವಾ ನೀರಿಲ್ಲದ ಬಾವಿ...’ ಎಂದ ಕೀಟಲೆಯಿಂದ.
‘ಮಹದಾಯಿ– ಅತಿರಥ – ಮಹಾರಥರಿಗೂ ನೀರು ಕುಡಿಸ್ಯಾಕತ್ತಾಳ್. ದಿನಕ್ಕೊಂದು ಹೇಳಿಕಿ ಕೊಡ್ಸಾಕತ್ತಾಳ್. ಈ ಮಹಾತಾಯಿಯ ಹೆಸರನಾಗ ಏನೆಲ್ಲಾ ಭಾನಗಡಿ ಮಾಡ್ಕೊಂಡಿರೊ ‘ಭಾ–ಜಪ’ದ ಭಗೀರಥರಿಗಂತೂ ಹನಿ ನೀರೂ ಕೂಡ ದಕ್ವಲ್ದು. ನೀರ್ ಅಂದ್ರನ ಕನಸ್ನ್ಯಾಗೂ ಬೆಚ್ಚಿ ಬೀಳಾಕತ್ತಾರ್. ಮಹದಾಯಿ ನೀರು ತರೋದು ಅಂದ್ರ, ಗೋವಾದಿಂದ ಕದ್ದುಮುಚ್ಚಿ ಫೆನ್ನಿ ತಗೊಂಡ್ ಬಂದ್ಹಂಗ್ ಅಂತ ತಿಳಕೊಂಡಿಯೇನ್ ಮಗನ’ ಎಂದು ಕಿಚಾಯಿಸಿದೆ.
ನಂಗೆ ಪ್ರತ್ಯುತ್ತರ ನೀಡಲು ಸುಧಾರಿಸಿಕೊಳ್ಳುವ ನೆಪದಲ್ಲಿ ನೀರಿನ ಗ್ಲಾಸ್ ಕೈಗೆತ್ತಿಕೊಂಡು, ‘ದೇವ್ರು ಫೇಸ್ಬುಕ್ ಗ್ವಾಡಿ ಮ್ಯಾಲೆ ಪ್ರತ್ಯಕ್ಷನಾಗೋದು, ಪೂಜಾರಿ ಅಳೋದು ನೋಡಿದ್ರ ಕಾಲ ಭಾಳ್ ಬದಲಾಗೇತಿ ಬಿಡು’ ಎಂದ.
‘ಹೌದು, ಕರಾವಳಿದೊಳಗs ಅಮಾಯಕರ ನೆತ್ತರ್ ಹರಿತೀದ್ರ ದಪ್ಪಚರ್ಮದ ಜನಸೇವಕರು (ಮೊಸಳೆ) ಕಣ್ಣೀರ ಧಾರೆ ಹರಸಾಕತ್ತಾರಲ್ಲ, ಇವ್ರಿಗೆ ಮೈಮೇಲೆ ಸ್ವಲ್ಪನರ ಎಚ್ಚರ ಅದ ಏನ್. ದೇವ್ರಿಗಿಂತ ಹೆಚ್ಚು ಪ್ರಭಾವಿ ಆಗಿರುವ ಪೂಜಾರಿ, ಹಣೆ ಬಡಿದುಕೊಂಡು ಗಳಗಳನೆ ಅತ್ತರೆ ಅರಣ್ಯರೋದನವೇ ಸೈ ಎಂದು ರೈ ಕೂಡ ಅತ್ತೂ ಅತ್ತೂ ಮೈಭಾರ ಹಗುರ ಮಾಡಿಕೊಂಡರಂತೆ’ ಎಂದು ಶಾಣ್ಯಾಬುದ್ಧಿ ಪ್ರದರ್ಶಿಸಿದ.
‘ಕಾಲಾಯ ತಸ್ಮೈ ನಮಃ’ ಎಂದೆ ಮಗುಮ್ಮಾಗಿ.
‘ಏನ್ ಕಾಲಾನೊ, ಏನ್ ಕಾಲ್ಮರಿ ನೆಕ್ಕುದೊ’ ಎಂದು ತಾನೇ ಮೈಮೇಲೆ ವಿವಾದ ಎಳೆದುಕೊಂಡ ಪ್ರಭ್ಯಾ, ತಾ ಎಂಥಾ ಅನಾಹುತ ಮಾಡೀನಿ ಅನ್ನೋದು ನೆನಸ್ಕೊಂಡು ನಾಲ್ಗಿ ಕಚ್ಚಿಕೊಂಡ.
‘ಹೌದಪ, ನನಗ್ ಒಂದ್ ಅನುಮಾನ ಕಾಡ್ತೈತಿ. ಗರ್ಭಗುಡಿ ಸಂಸ್ಕೃತಿಯವರು ತಮ್ಮವರಿಗೆ ನಾಲಿಗೆ ಸಂಸ್ಕಾರನs ಕಲಿಸಿಲ್ಲ ಏನ್. ಬರೀ ಕಾಲ್ಮರಿ, ಕೈ – ಕಾಲ್ ಕಡಿ, ಕುತ್ಗಿ ಕತ್ತರ್ಸು, ನಾಲ್ಗಿ ಕಡಿ ಅಂತನ ಬಡ್ಕೊತಿರ್ತಾರಲ್ಲ– ಅವರ ಅಪ್ಪ ಅಮ್ಮ ಯಾರೂ ಅಂತ. ಅವ್ರ ಸಾಲ್ಯಾಗೂ (ಶಾಖಾದಾಗೂ) ಇದ್ನ ಕಲ್ಸತಾರ್ ಏನ್ ಮತ್ತ’ ಎಂದೆ.
‘ಯಥಾ ರಾಜಾ ತಥಾ ಪ್ರಜಾ ಅನ್ನೋದನ್ನ ಯಥಾ ಪ್ರಜಾ ತಥಾ ರಾಜಾ ಅಂತ ಉಲ್ಟಾನೂ ಮಾಡಾಕ್ ಹೊಂಟಾರಲ್ಲ. ಅವ್ರ ಹೇಳ್ದಂಗ್, ಹಿಂಗ್ ಬಾಯಿಗ್ ಬಂದ್ಹಂಗ್ ಮಾತಾಡೊ ಪಕ್ಷದ ಕಾರ್ಯಕರ್ತರ, ಮುಖಂಡರ ಕೌಶಲ್ಯಾನ (ಚಟಾನ) ಪಕ್ಷದ ಅಧ್ಯಕ್ಷ, ಪ್ರಧಾನಿನೂ ಅಳವಡಿಸಿಕೊಂಡ್ರ; ಮತ್ತs ಎಲ್ಲಾರೂ ಅಳವಡಿಸಿಕೊಳ್ಳಬೇಕಂತ ಬೈಠಕ್ದಾಗ್ ಹೇಳಿದ್ರ ದೇಶ ಉದ್ಧಾರ್ ಆಗೋದು ಗ್ಯಾರಂಟಿ ಬಿಡಪ. ಪಕ್ಷದ ಕಾರ್ಯಕರ್ತರು ಗಳಹುವಂತೆ, ಪಕ್ಷದ ಅಧ್ಯಕ್ಷ, ಪ್ರಧಾನಿ ಮಾತಾಡೊ ದಿನ ಭಾಳ್ ದೂರ ಇಲ್ಲ ಬಿಡಪಾ’ ಎಂದೆ.
ಈ ಪ್ರಶ್ನೆಗೆ ಗಾಬರಿಯಾದ ಪ್ರಭ್ಯಾ, ಮಾತೇ ಮರೆತವನಂತೆ ಬಾಗಿಲ ಹತ್ತಿರ ಹೋಗಿ ನಿಂತ. ‘ಯಥಾ ರಾಜಾನs... ಸರಿ. ಅದ್ನ ಮೊದ್ಲು ಸರಿ ಮಾಡ್ಬೇಕು’ ಎಂದು ಬಡಬಡಿಸುತ್ತ ಕಾಲ್ಮರಿ ಹಾಕ್ಕೊಂಡು ಹೊರಡಲು ಅವಸರಿಸಿದ. ಬೀದಿ ನಾಯಿ ಅವನ ಕಾಲ್ಮರಿ ನೆಕ್ಕುತ್ತಿದ್ದುದನ್ನು ನೋಡಿ ಹಚ್ಯಾ ಹಚ್ಯಾ ಎಂದು ಬೈಯುತ್ತಲೇ ಬೀದಿಗೆ ಇಳಿದ.
ನಾಯಿಗೆ ಪ್ರಭ್ಯಾ ಬೈದದ್ದು, ಬೈಸಿಕೊಂಡ ನಾಯಿ ಸುಮ್ಮನಿರದೇ ಅವನು ಹೋದ ದಿಕ್ಕಿನತ್ತಲೇ ಒಂದೇ ಸಮನೆ ಬೊಗಳುವುದನ್ನು ನೋಡುತ್ತ ನಿಂತವನಿಗೆ ಡ್ರಾಮಾ ಜೂನಿಯರ್ಗಳ ... ‘ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೆsss’ ಎನ್ನುವ ಹಾಡು ಟಿ.ವಿ.ಯಿಂದ ಕೇಳಿ ಬರುತ್ತಿದ್ದಂತೆ ಅತ್ತ ಹೊರಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.