ಬೆಂಗಳೂರು, ಜುಲೈ 3– ಮುಂಗಾರು ಮಳೆಯ ಮೊದಲ ತಿಂಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಷ್ಟೇನೂ ಆಶಾದಾಯಕವಾಗಿಲ್ಲ. ಈ ಅವಧಿಯಲ್ಲಿ ರಾಜ್ಯದ 175 ತಾಲ್ಲೂಕುಗಳ ಪೈಕಿ 50ರಲ್ಲಿ ಮಾಮೂಲಿಗೂ ಅಧಿಕ ಹಾಗೂ 45ರಲ್ಲಿ ಮಾಮೂಲು ಮಳೆಯಾಗಿದ್ದು, 80 ತಾಲ್ಲೂಕುಗಳು ಕೊರತೆ ಅನುಭವಿಸುತ್ತಿವೆ.
ವಿದ್ಯುತ್ ಉತ್ಪಾದನೆಗೆ ಒತ್ತು ವಿಶ್ವಬ್ಯಾಂಕ್ ನೆರವಿಗೆ ಕಾರಣ
ಮೈಸೂರು, ಜುಲೈ 3– ರಾಜ್ಯದಲ್ಲಿ ವಿದ್ಯುತ್ ವಿತರಣೆ ಜಾಲವನ್ನು ಸುಧಾರಿಸಲು ಕೈಗೊಂಡ ಕ್ರಮಗಳಿಂದ 2000 ಮೆಗಾವಾಟ್ ವಿದ್ಯುತ್ ಹೊಸದಾಗಿ ಉತ್ಪಾದನೆ ಆಗುತ್ತಿರುವುದು ವಿಶ್ವಬ್ಯಾಂಕ್ನ ನೆರವು ಮತ್ತೆ ಲಭಿಸುತ್ತಿರುವುದಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಇಂದು ಹೇಳಿದರು.
ರಾಜ್ಯ ಕಾಂಗೈ ಪುನರ್ರಚನೆ ಶೀಘ್ರ
ನವದೆಹಲಿ, ಜುಲೈ 3 (ಪಿಟಿಐ)– ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ (ಐ) ಸಮಿತಿಗಳನ್ನು ಶೀಘ್ರವೇ ಪುನರ್ ರಚಿಸಲಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯಗಳತ್ತ ಪಕ್ಷಾಧ್ಯಕ್ಷರು ಗಮನ ಹರಿಸುತ್ತಿದ್ದಾರೆ. ರಾವ್ ನೇತೃತ್ವದ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ (ಐ) ದೆಹಲಿಯ ಕೆಂಪುಕೋಟೆಯಲ್ಲಿ ಜುಲೈ 14ರಂದು ಹಮ್ಮಿಕೊಂಡಿರುವ ರ್ಯಾಲಿಗೆ ಮೊದಲೇ ಈ ಪುನರ್ರಚನೆ ನಡೆಯುವ ಸಾಧ್ಯತೆ ಇದೆ.