ನವದೆಹಲಿ, ಡಿ. 19 (ಪಿಟಿಐ)– ‘ಪ್ರಪಂಚ ಸುಂದರಿ’ ಕಿರೀಟ ಧರಿಸಿರುವ ಭಾರತದ ಐಶ್ವರ್ಯಾ ರೈ ಅವರಿಗೆ ಇನ್ನೂ ಎತ್ತರಕ್ಕೆ ಏರುವ ಆಸೆ. ಪ್ರಪಂಚ ಪರ್ಯಟನದ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ತಮ್ಮ ಜ್ಞಾನ ಪರಿ ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಆಶಯವನ್ನು ಐಶ್ವರ್ಯಾ ಇಂದು ಇಲ್ಲಿ ವ್ಯಕ್ತಪಡಿಸಿದರು.
‘ಉತ್ತುಂಗವನ್ನು ತಲುಪಲು ನಾನಿನ್ನೂ ಕಾರ್ಯಪ್ರವೃತ್ತಳಾಗಿದ್ದೇನೆ’ ಎಂದು ರಾಜಧಾನಿ ದೆಹಲಿಯಲ್ಲಿನ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬೇರೆಯವರಲ್ಲಿ ಸೌಂದರ್ಯವನ್ನು ಯಾರು ಕಾಣುತ್ತಾರೋ ಅವರೇ ಸುಂದರರು. ಸುಂದರವಾದುದನ್ನೇ ಯೋಚಿಸಿದಾಗ ನಾವೂ ಸುಂದರರಾಗು ತ್ತೇವೆ’ ಎಂದರು.
ದೇವೇಗೌಡ ಸಂಪುಟ– ಹೆಗಡೆಗೆ ತೃಪ್ತಿ
ನವದೆಹಲಿ, ಡಿ. 19– ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಜನತಾದಳದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. ಅದು ಒಳ್ಳೆಯ ಕೆಲಸ ಮಾಡಿದರೆ, ಜನತೆ ಮತ್ತೆ ಅದನ್ನು ಅಧಿಕಾರದಲ್ಲಿ ಮುಂದುವರಿಸುವ ವಿಶ್ವಾಸ ತಮಗಿರುವುದಾಗಿ ದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಇಂದು ಇಲ್ಲಿ ತಿಳಿಸಿದರು.