ನವದೆಹಲಿ, ಏ. 15– ಮಂಗಳೂರಿನ 1,000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು. ಕೇಂದ್ರ ವಿದ್ಯುತ್ ಸಚಿವಾಲಯವು ವಾರದೊಳಗೆ ಈ ಯೋಜನೆಗೆ ಒಪ್ಪಿಗೆ ನೀಡಲಿದೆ ಎಂದರು.
ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಕೇಂದ್ರ ವಿದ್ಯುತ್ ಸಚಿವ ಎನ್.ಕೆ.ಪಿ. ಸಾಳ್ವೆ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಈ ವಿಷಯ ಪ್ರಕಟಿಸಿದರು.
ಪ್ರದೇಶ ಕಾಂಗೈ ಸಮಿತಿ ಪುನರ್ರಚನೆ ಕಾರ್ಯ ಆರಂಭ
ನವದೆಹಲಿ, ಏ. 15 (ಪಿಟಿಐ)– ಕೆಲವು ಪ್ರದೇಶ ಕಾಂಗೈ ಸಮಿತಿಗಳನ್ನು ಪುನರ್ ರಚಿಸುವ ಕಾರ್ಯವನ್ನು ಕಾಂಗ್ರೆಸ್ (ಐ) ಹೈಕಮಾಂಡ್ ಆರಂಭಿಸಿದೆ. ಈ ಉದ್ದೇಶಕ್ಕಾಗಿ ಪಕ್ಷದ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ತೆರಳುವರು.
ಏಪ್ರಿಲ್ 19ರಂದು ಜನಾರ್ದನ ಪೂಜಾರಿ ಅವರು ಮುಂಬೈಗೆ ತೆರಳಿದರೆ, ಮಾಧವ ಸಿನ್ಹಾ ಸೋಳಂಕಿ ಅವರು ಏಪ್ರಿಲ್ 20ರಂದು ಬೆಂಗಳೂರಿಗೆ ಹೋಗುವರು. ಈ ವಿಷಯವನ್ನು ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.