ತನಿಖೆಗೆ ಆಗ್ರಹಿಸಿ ಮನವಿ ಬೆಂಗಳೂರು, ಸೆ. 20– ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿರುವ ವಾಸುದೇವನ್ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರಿಂದಾಗಲೀ ನಿವೃತ್ತ ನ್ಯಾಯಾಧೀಶರಿಂದಾಗಲೀ ತನಿಖೆ ನಡೆಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಇಂದು ವಿರೋಧ ಪಕ್ಷಗಳು ಮನವಿ ಸಲ್ಲಿಸಿದವು.
ನ್ಯಾಯಾಂಗ ನಿಂದನೆ ಒಬ್ಬ ಅಧಿಕಾರಿಯ ವಿರುದ್ಧವಾಗಿದ್ದರೂ ಸುಪ್ರೀಂ ಕೋರ್ಟ್ಗೆ ನೀಡಿದ ಆಶ್ವಾಸನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಜವಾಬ್ದಾರಿ ಕೂಡ ಇದೆ. ಆಡಳಿತಾತ್ಮಕ ವೈಫಲ್ಯಕ್ಕೆ ಕೇವಲ ಅಧಿಕಾರಿಯನ್ನೇ ಜವಾಬ್ದಾರರನ್ನಾಗಿ ಮಾಡುವುದು ಸರಿಯಲ್ಲ. ಏಕೆಂದರೆ ಸರ್ಕಾರ ಒಂದು ಘಟಕದಂತೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಇದರಲ್ಲಿ ಸಚಿವರ ಪಾತ್ರವನ್ನೂ ತಳ್ಳಿಹಾಕಲಾಗದು ಎಂದು ವಿರೋಧ ಪಕ್ಷಗಳು ವಾದಿಸಿವೆ.
** ನಗರ– ಗ್ರಾಮೀಣ ಅಭಿವೃದ್ಧಿಗೆ ಸಾವಿರ ಕೋಟಿ ರೂ ಬೆಂಗಳೂರು, ಸೆ. 20– ರಾಜ್ಯದ 50,000 ಮಂದಿಗೆ ಉದ್ಯೋಗ ನೀಡುವುದೂ ಸೇರಿದಂತೆ ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚಿನ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ವಿಧಾನಸಭೆಯಲ್ಲಿ ಪ್ರಕಟಿಸಿದರು.
ವಿವಿಧ ವರ್ಗದವರಿಗೆ ವಸತಿ ಯೋಜನೆ, ಗ್ರಾಮಕ್ಕೊಂದು ಶಾಲೆ, ಆಟೊ ರಿಕ್ಷಾ– ಖಾಸಗಿ ವಾಹನ ಚಾಲಕರಿಗೆ ವಿಮೆ, ಕಾನೂನು ಪದವೀಧರೆಯರಿಗೆ ಆರ್ಥಿಕ ನೆರವು ಹಾಗೂ ನೇಮಕಾತಿಗೆ ವಯೋಮಿತಿ ಏರಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿನಲ್ಲೇ ಕೈಗೊಳ್ಳುವ ಭರವಸೆಯನ್ನು ನೀಡಿದರು.