ನವದೆಹಲಿ, ಜುಲೈ 19 (ಯುಎನ್ಐ)– ವಿದೇಶಿ ಒತ್ತೆಯಾಳುಗಳ ಬಿಡುಗಡೆಗಾಗಿ ಅಲ್ ಫರಾನ್ ಭಯೋತ್ಪಾದಕ ಗುಂಪಿನ ಮನವೊಲಿಸುವಂತೆ ಪಾಕಿಸ್ತಾನದ ಜಮಾತ್– ಉಲ್– ಉಲೇಮಾ ನಾಯಕ ಫಜ್ಲುರ್ ರೆಹಮಾನ್ ಅವರನ್ನು ಅಮೆರಿಕ ಹಾಗೂ ಬ್ರಿಟನ್ಗಳು ಕೋರಿದ್ದು, ರೆಹಮಾನ್ ಅವರು ಭಾರತಕ್ಕೆ ಬರಲು ಭಾರತ ಸರ್ಕಾರ ವೀಸಾ ನೀಡಿದೆ.
ರೆಹಮಾನ್ ಅವರು ಎಂದು ಬರುವರು ಎಂಬುದು ಖಚಿತವಾಗಿಲ್ಲ. ವೀಸಾ ನೀಡಿರುವ ವಿಷಯವನ್ನು ವಿದೇಶಾಂಗ ಖಾತೆಯ ವಕ್ತಾರರು ಇಂದು ತಿಳಿಸಿದರು. ರೆಹಮಾನ್ ಅವರದ್ದು ಖಾಸಗಿ ಭೇಟಿಯಾಗಿರುತ್ತದೆ ಎಂದರು.
ನೋವಿನಲ್ಲೂ ನಗಿಸಿದ ‘ಅಭಿಮಾನಿ’ ಬಾಲಣ್ಣ ಕಣ್ಮರೆ
ಬೆಂಗಳೂರು, ಜುಲೈ 19– ಹಲವಾರು ದಶಕಗಳ ಕಾಲ ಕನ್ನಡದ ಪ್ರೇಕ್ಷಕರನ್ನು ನಗಿಸಿ, ರಂಜಿಸಿದ ಕನ್ನಡ ಚಿತ್ರರಂಗದ ಖ್ಯಾತ ನಟ ಟಿ.ಎನ್.ಬಾಲಕೃಷ್ಣ ಇನ್ನಿಲ್ಲ.
ವೈವಿಧ್ಯಮಯ ಪಾತ್ರಗಳಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಕಲಾಪ್ರೇಮಿಗಳನ್ನು ರಂಜಿಸಿದ ಬಾಲಕೃಷ್ಣ ಇಂದು ರಾತ್ರಿ ಇಲ್ಲಿ ನಿಧನರಾದರು.
‘ಬಾಲಣ್ಣ’ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ ಬಾಲಕೃಷ್ಣ ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ನರಳುತ್ತಿದ್ದು, ಚಿತ್ರರಂಗಕ್ಕೆ ವಿದಾಯ ಹೇಳಿದ್ದರು.