ನವದೆಹಲಿ, ಅ. 4 (ಪಿಟಿಐ, ಯುಎನ್ಐ)– ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಬದಲಾಯಿಸುವುದಿಲ್ಲ ಎಂದು ಬಿಜೆಪಿ ಇಂದು ಸ್ಪಷ್ಟವಾಗಿ ಘೋಷಿಸಿತು. ಆದರೆ, ಸರ್ಕಾರವನ್ನು ಉರುಳಿಸಲು ಭಿನ್ನಮತೀಯ ಬಿಜೆಪಿ ಶಾಸಕರು ದೃಢ ನಿರ್ಧಾರ ಮಾಡುವುದರೊಂದಿಗೆ ರಾಜಕೀಯ ಅಸ್ಥಿರತೆ ಪರಾಕಾಷ್ಠೆ ತಲುಪಿದೆ.
ಬಿಕ್ಕಟ್ಟು ಪರಿಹರಿಸಲು ಮಾತುಕತೆಗೆ ಮುನ್ನ ಕೇಶುಭಾಯಿ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದು ಭಿನ್ನ ಬಣದ ಷರತ್ತು.
ಈ ಮಧ್ಯೆ ಗುಜರಾತ್ ಸರ್ಕಾರವನ್ನು ಉರುಳಿಸಲು ವಿವಿಧ ಮೂಲಗಳಿಂದ ಅಪಾರ ಪ್ರಮಾಣದ ಹಣದ ಹೊಳೆ ಹರಿಸಲಾಗುತ್ತಿದೆ ಎಂದು ಪಕ್ಷದ ವಕ್ತಾರ ಕೆ.ಎಲ್.ಶರ್ಮಾ ಇಲ್ಲಿ ಆರೋಪಿಸಿದರು.
ಜುರಾಲಾ: ಮರು ಸರ್ವೆಗೆ ಆಗ್ರಹ
ರಾಯಚೂರು, ಅ. 4– ಕೃಷ್ಣಾ ನದಿಗೆ ಆಂಧ್ರ ಪ್ರದೇಶವು ನಿರ್ಮಿಸಿರುವ ಅಣೆಕಟ್ಟು ನಿಗದಿಗಿಂತ 2 ಅಡಿ ಜಾಸ್ತಿಯಾಗಿರುವುದ ರಿಂದ ಮುಳುಗಡೆಯಾಗುವ ಪ್ರದೇಶದ ಮರು ಸರ್ವೆಯನ್ನು ತಕ್ಷಣವೇ ನಡೆಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ನಾಯಕರಾಗಿರುವ ಡಾ. ಎಂ.ಆರ್.ತಂಗಾ ಅವರು ಒತ್ತಾಯಿಸಿದರು.
ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಣೆಕಟ್ಟೆ ಎತ್ತರ ಜಾಸ್ತಿಯಾಗಿದೆ ಎಂದರೆ ಮುಂದಿನ ಪರಿಣಾಮವನ್ನುಸುಲಭವಾಗಿ ಊಹಿಸಬಹುದಾಗಿದೆ. ಸಹಜವಾಗಿಯೇ ಮುಳುಗಡೆ ಪ್ರದೇಶ ಹೆಚ್ಚಾಗುತ್ತದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಏರ್ಪಟ್ಟ ಒಪ್ಪಂದದಂತೆ ಅಣೆಕಟ್ಟೆ ಎತ್ತರ 318.516 ಮೀಟರ್ ಇರಬೇಕಿತ್ತು. ಆದರೆ, ಇದು ಇನ್ನೂ 2 ಅಡಿ ಹೆಚ್ಚಾಗಿರುವುದು ಜಂಟಿ ಸರ್ವೆಯಿಂದ ಖಚಿತವಾಗಿದೆ ಎಂದರು.