ನವದೆಹಲಿ, ಅ. 5– ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ರಂಗ ಮತ್ತು ಎಡಪಕ್ಷಗಳ ಒಕ್ಕೂಟವು ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚಿಸುವ ಪೂರ್ಣ ವಿಶ್ವಾಸ ತಮಗಿರುವುದಾಗಿ ಜನತಾ ದಳದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಇಂದು ಇಲ್ಲಿ ಹೇಳಿದರು.
ಈ ಬಗೆಗೆ ಈಗಾಗಲೇ ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಯ ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಈ ಸಂಬಂಧ ಒಂದು ಸ್ಪಷ್ಟ ಚಿತ್ರ ಮೂಡಿ ಬರಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಾಣಿಜ್ಯ ತೆರಿಗೆ: 420 ಕೋಟಿ ಹೆಚ್ಚು ಸಂಗ್ರಹ
ಬೆಂಗಳೂರು, ಅ. 5– ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಮಾಧಾನಕರವಾಗಿದ್ದು, ಕೇವಲ ವಾಣಿಜ್ಯ ತೆರಿಗೆ ಬಾಬ್ತಿನಲ್ಲೇ ಕಳೆದ ಸಾಲಿಗಿಂತ ಈ ವರ್ಷದ ಮೊದಲ ಐದು ತಿಂಗಳಲ್ಲಿ 420 ಕೋಟಿ ರೂಪಾಯಿ ಹೆಚ್ಚಿಗೆ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವ ಸಿದ್ದರಾಮಯ್ಯ ಇಂದು ಇಲ್ಲಿ ತಿಳಿಸಿದರು.