ಬೆಂಗಳೂರು, ಜೂನ್ 17– ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ– ವರ್ಗದ ಮೀಸಲಾತಿ ಪ್ರಮಾಣವನ್ನು ಶೇ 18ರಿಂದ 25ಕ್ಕೆ ಹೆಚ್ಚಿಸಬೇಕಾದ ಅಗತ್ಯವನ್ನು ಜನತಾ ದಳ ಪ್ರತಿಪಾದಿಸಿದೆ.
ನಾಲ್ಕು ವರ್ಷದ ಹಿಂದೆ 1991ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಈ ವರ್ಗದವರ ಸಂಖ್ಯೆ ಶೇ 24.8ಕ್ಕೆ ಹೆಚ್ಚಿದೆ. ಇದೇ ಅನುಪಾತದಲ್ಲಿ ಮೀಸಲಾತಿಯ ಪ್ರಮಾಣವನ್ನೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಏರಿಸಬೇಕಾಗಿದೆ ಎಂಬ ಪ್ರಸ್ತಾಪಕ್ಕೆ ಇಂದಿನ ಸಭೆಯಲ್ಲಿ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತವಾಯಿತು.
‘ಜಾನಪದ ಪಂಪ’ ಜೀಶಂಪ ನಿಧನ
ಬೆಂಗಳೂರು, ಜೂನ್ 17–‘ಜಾನಪದ ಪಂಪ’ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ, ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜೀ.ಶಂ. ಪರಮಶಿವಯ್ಯ ಅವರು ಇಂದು ರಾತ್ರಿ ನಗರದ ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಂತರ ಅದರ ಮುಖ್ಯಸ್ಥರೂ ಆಗಿ ನಿವೃತ್ತರಾಗಿದ್ದ ಜೀಶಂಪ ಅವರಿಗೆ 62 ವರ್ಷ ವಯಸ್ಸಾಗಿತ್ತು.