ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ| ರಂಗಕಾಯಕ, ಶಿಕ್ಷಣ, ಅನುದಾನ

ಉತ್ಕೃಷ್ಟ ರಂಗಪ್ರಯೋಗ ಮಾಡಲು, ಸವಿಯಲು ಬೇಕಾದ ಸ್ಥಿತಿಯು ಮನುಷ್ಯತ್ವದ ಅತಿ ಎತ್ತರದ ಸ್ಥಿತಿಗಳಲ್ಲೊಂದು
Published 8 ಜೂನ್ 2023, 23:33 IST
Last Updated 8 ಜೂನ್ 2023, 23:33 IST
ಅಕ್ಷರ ಗಾತ್ರ

ನಮ್ಮ ರಾಜ್ಯದಲ್ಲಿ ವೃತ್ತಿಪರವಾದ ರಂಗಶಿಕ್ಷಣ ನೀಡುತ್ತಿರುವ ಶಾಲೆಗಳು, ಅಂದರೆ ವಿದ್ಯಾರ್ಥಿಗಳನ್ನು ಕನಿಷ್ಠ ಒಂದು ವರ್ಷ ತಮ್ಮಲ್ಲಿ ಇಟ್ಟುಕೊಂಡು, ಅವರಿಗೆ ಊಟ, ವಸತಿ ಒದಗಿಸಿ, ಕ್ರಮಬದ್ಧವೂ ಕಠಿಣ-ಪ್ರಾಯೋಗಿಕವೂ ಆಗಿರುವ ರಂಗಶಿಕ್ಷಣ ನೀಡುತ್ತಿರುವ ಶಾಲೆಗಳ ಸಂಖ್ಯೆ ಒಂದು ಕೈ ಬೆರಳೆಣಿಕೆಯಷ್ಟೂ ಇಲ್ಲ. ಈ ಶಾಲೆಗಳು ಕೊಡುವುದು ಎಸ್‍ಎಸ್ಎಲ್‍ಸಿ ನಂತರದ ಡಿಪ್ಲೊಮಾ ಮಾತ್ರವೇ ಆದರೂ ಇವುಗಳಿಂದ ನಾಡಿನ ಸಂಸ್ಕೃತಿಗೆ ಸಲ್ಲುತ್ತಾ ಬಂದಿರುವ ಕೊಡುಗೆ ದೊಡ್ಡದು.

ಇವು ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ಕಾವ್ಯ, ಕತೆ, ಕಾದಂಬರಿ, ನಾಟಕಗಳ ಅರಿವು ಮೂಡಿಸುವುದರ ಜೊತೆಗೆ ತಾವು ಕೈಗೊಳ್ಳುತ್ತಾ ಬಂದಿರುವ ‘ತಿರುಗಾಟ’ ಹಾಗೂ ‘ಸಂಚಾರ’ಗಳ ಮೂಲಕ ಕನ್ನಡದವೂ ಸೇರಿದಂತೆ ಜಗತ್ತಿನ ಕ್ಲಾಸಿಕ್ ನಾಟಕಗಳನ್ನು ನಾಡಿನ ಮೂಲೆಮೂಲೆಗೆ ತಲುಪಿಸಿವೆ.
ಈ ಶಾಲೆಗಳಿಂದ ನೂರಾರು ಜನ ಪದವೀಧರರು ಹೊರಬಂದಿದ್ದಾರೆ. ಅವರಿಂದಾಗಿ ಆಧುನಿಕ ನಾಟಕದ ಸಂಸ್ಕೃತಿ ಮಾತ್ರವಲ್ಲದೆ ಹೊಸ ಕಾಲಕ್ಕೆ ಬೇಕಾದ ಸಾಹಿತ್ಯ ಮತ್ತು ಇತರ ಕಲೆಗಳ ಸಂವೇದನೆ ಕೂಡ ಹೋಬಳಿ, ಹಳ್ಳಿಗಳಿಗೂ ತಲುಪುತ್ತಾ ಬಂದಿದೆ.

ನಾಡಿನ ಯಾವ ತಾಲ್ಲೂಕಿಗೆ ಹೋದರೂ ಈ ಶಾಲೆಗಳಿಂದ ಬಂದ ಒಬ್ಬರಲ್ಲ ಒಬ್ಬರು ಅಲ್ಲಿನ ಅನೇಕ ಮಿತಿಗಳ ನಡುವೆಯೂ ನಾಟಕ ಆಡುತ್ತ, ರಂಗಕಮ್ಮಟ ನಡೆಸುತ್ತ ಇರುವುದನ್ನು ಕಾಣುತ್ತೇವೆ. ಅವರಿಂದಾಗಿ ಕುವೆಂಪು, ಬೇಂದ್ರೆ, ತೇಜಸ್ವಿ, ಜಿ.ಬಿ.ಜೋಶಿ, ಕಾರ್ನಾಡ, ಬೆಸಗರಹಳ್ಳಿ ರಾಮಣ್ಣ, ಲಂಕೇಶ್, ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ರವೀಂದ್ರನಾಥ ಠಾಕೂರ್, ಯು.ಆರ್.ಅನಂತಮೂರ್ತಿ, ಮುಕುಂದರಾವ್, ಭಾಸ, ಕಾಳಿದಾಸ, ಷೇಕ್‍ಸ್ಪಿಯರ್, ಪ್ರಾಚೀನ ಗ್ರೀಕ್ ನಾಟಕಕಾರರು, ಬ್ರೆಖ್ಟ್, ಚೆಕೊಫ್, ಮೊಲಿಯೇರ್ ಅವರಂತಹವರ ಕೃತಿಗಳು ನಾಡಿನ ಊರೂರಿನಲ್ಲಿ ರಂಗದ ಮೇಲೆ ನಾಟಕ, ಕಾವ್ಯ, ಸಂಗೀತವಾಗಿ ಜೀವತಳೆದಿವೆ. ಸಮಾನತೆ ಮತ್ತು ಭ್ರಾತೃತ್ವಭಾವದ ಸಂಸ್ಕಾರ, ಸಂಸ್ಕೃತಿ ಉದ್ದೀಪನಗೊಂಡು, ಉಳಿದುಕೊಳ್ಳುತ್ತಿವೆ.

ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅವರ ಪಠ್ಯೇತರ ಕಲಿಕೆಯ ಭಾಗವಾಗಿ ನಾಟಕ ಕಲೆಯನ್ನು ಪರಿಚಯಿಸುತ್ತಿರುವುದು ಕೂಡ ರಂಗಶಿಕ್ಷಣ ಪಡೆದ ಈ ವೃತ್ತಿನಿರತರೇ ಅನ್ನುವುದನ್ನು ನಾಡಿನ ಎಲ್ಲೆಡೆಯೂ ಕಾಣಬಹುದು. ಈ ಥರದ ಕೆಲಸ ದಕ್ಷಿಣ ಭಾರತದ ಬೇರೆ ಯಾವ ರಾಜ್ಯದಲ್ಲಿಯೂ ಇಷ್ಟರಮಟ್ಟಿಗೆ ನಡೆಯುತ್ತಿರುವುದು ಕಾಣದು. ನಮ್ಮಲ್ಲಿರುವ ನಾಟಕ ಶಾಲೆಗಳಂಥವು ಆ ರಾಜ್ಯಗಳಲ್ಲಿಲ್ಲ. ಆದ್ದರಿಂದ, ಕರ್ನಾಟಕಕ್ಕೆ ದಕ್ಕಿರುವ ಈ ಸೌಭಾಗ್ಯಕ್ಕೆ ನಮ್ಮ ಈ ನಾಟಕಶಾಲೆಗಳು ಮತ್ತು ಇವು ಬೋಧಿಸುವ ಕಾಯಕಬದ್ಧತೆಯೇ ನೇರ, ನಿಚ್ಚಳ ಕಾರಣ ಅನ್ನುವುದು ಅತಿಶಯೋಕ್ತಿಯಲ್ಲ.

ಈ ಶಾಲೆಗಳ ಪದವೀಧರರ ಪೈಕಿ ಐವತ್ತೆರಡು ಜನ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಾಟಕ ಕಲೆ ಬೋಧಿಸಲು ನೇಮಕಗೊಂಡಿದ್ದಾರೆ. ಹಳ್ಳಿ ಮತ್ತು ತಾಲ್ಲೂಕು ಕೇಂದ್ರಗಳ ಆ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅವರ ಕಲಿಕೆ ಮುದ ನೀಡುವಲ್ಲಿಯೂ, ಅವರಲ್ಲಿ ಒಳ್ಳೆಯ ಆಲೋಚನೆ ಮತ್ತು ನಡೆನುಡಿಯನ್ನು ಉಂಟುಮಾಡುವುದರಲ್ಲಿಯೂ ಈ ಶಿಕ್ಷಕರು ಮಾಡುತ್ತಿರುವ ಕೆಲಸ ದೊಡ್ಡದು. ಮಕ್ಕಳ ಪ್ರತಿಭೆಯನ್ನು ಬೆಳೆಸುತ್ತ, ಅದು ಆರೋಗ್ಯಕರವಾಗಿ ಹೊಮ್ಮುವಂತೆ ಮಾಡುತ್ತಿದ್ದಾರೆ ಇವರು. ತಮ್ಮ ಶಾಲೆಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ವಿಶೇಷವೆಂದರೆ, ತಮ್ಮತಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸುವುದರ ಜೊತೆಗೆ, ಆ ಮಕ್ಕಳ ಕುಟುಂಬದವರಿಗೂ, ಆಯಾ ಊರಿನ ಜನರಿಗೂ ಜಾತಿ, ಮತ, ವರ್ಗ, ವರ್ಣದಂತಹವುಗಳ ಸಂಬಂಧ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸಿ, ಅವರ ಮನಸ್ಸನ್ನು ಒಂದಷ್ಟು ಬದಲಾಯಿಸುವುದರಲ್ಲಿ ಸಫಲರಾಗಿದ್ದಾರೆ. ಇವೆಲ್ಲವೂ ಕಾಲಕಾಲಕ್ಕೆ ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆದಿವೆ.

ರಂಗಕಲೆಯ ಕಾಯಕದಲ್ಲಿ ಪೂರ್ಣಾವಧಿ ತೊಡಗಿಕೊಂಡವರಿಗೆ ಆರ್ಥಿಕ ಮತ್ತು ಸಾಮಾಜಿಕ ಅಭದ್ರತೆ ತಪ್ಪಿದ್ದಲ್ಲ. ಹಾಗಿದ್ದೂ, ತಮ್ಮೆಲ್ಲ ಕಷ್ಟಗಳ ನಡುವೆಯೂ ಈ ಪದವೀಧರರು ತಮ್ಮ ಕಾಯಕಕ್ಕೆ ಬದ್ಧರಾಗಿದ್ದು ಕೆಲಸ ಮಾಡುತ್ತ ಬಂದಿದ್ದಾರೆ. ಇವರಲ್ಲಿ ಹೆಚ್ಚುಕಮ್ಮಿ ಎಲ್ಲರೂ ಸಾಮಾಜಿಕವಾಗಿ ದುರ್ಬಲವಾದ ಜಾತಿ ಮತ್ತು ವರ್ಗಗಳವರು, ಬಡತನದ ಹಿನ್ನೆಲೆಯುಳ್ಳವರು, ಗ್ರಾಮೀಣ ಪ್ರದೇಶಗಳವರು. ಮೇಲಾಗಿ, ಇವರಲ್ಲಿ ಎಷ್ಟೋ ಜನ ತಮ್ಮ ತಂದೆತಾಯಿ ಇಲ್ಲವೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಈ ನಾಟಕಶಾಲೆಗಳಲ್ಲಿ ಓದಿ, ಈಗ ವೃತ್ತಿನಿರತರಾಗಿದ್ದಾರೆ. ಆದ್ದರಿಂದ ಈ ಶಾಲೆಗಳಿಗೆ ಸೇರುವ ತರುಣತರುಣಿಯರ ವ್ಯಾಸಂಗಕ್ಕೆ ಸಮಾಜದ, ಅಂದರೆ ಸರ್ಕಾರದ ಧಾರಾಳ ನೆರವು ಬೇಕಾಗುತ್ತದೆ.

ಕರ್ನಾಟಕ ಸರ್ಕಾರವು ಈ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವ್ಯಾಸಂಗ ವೇತನ, ಬೋಧಕವರ್ಗ ಮತ್ತು ಸಿಬ್ಬಂದಿಯ ಸಂಬಳ, ಸಾರಿಗೆ ಹಾಗೂ ಒಂದು ಮಿತಿಯಲ್ಲಿ, ಕಲಿಕೆಯ ಸಲುವಾಗಿ ಇವುಗಳಲ್ಲಿ ನಡೆಯುವ ನಾಟಕ ಪ್ರಯೋಗ– ಇದಕ್ಕೆಲ್ಲ ಬೇಕಾದ ಆರ್ಥಿಕ ಅನುದಾನವನ್ನು ಇಷ್ಟು ವರ್ಷಗಳ ಕಾಲವೂ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳ ಆ ವ್ಯಾಸಂಗ ವೇತನವು ಅವರಿಗೆ ಸರಳವಾದ ಊಟ, ತಿಂಡಿ ಮತ್ತು ವಸತಿ ನೀಡಲು ಬಳಕೆಯಾಗುತ್ತಾ ಬಂದಿದೆ. ಆದರೆ ಇಲ್ಲೊಂದು ತಾರತಮ್ಯ ಕಾಣುತ್ತದೆ. ಒಂದು ಶಾಲೆಯ ವಿದ್ಯಾರ್ಥಿಗಳಿಗೆ ತಿಂಗಳೊಂದಕ್ಕೆ ಐದು ಸಾವಿರ ರೂಪಾಯಿ ಕೊಡಲಾಗುತ್ತಿದ್ದರೆ, ಮತ್ತೊಂದು ಶಾಲೆಯವರಿಗೆ ಹಿಂದಿನ ಹದಿನೆಂಟು ವರ್ಷಗಳಿಂದಲೂ ತಿಂಗಳೊಂದಕ್ಕೆ ಬರೀ ಸಾವಿರದ ಇನ್ನೂರೈವತ್ತು ರೂಪಾಯಿ ಕೊಡಲಾಗುತ್ತಿದೆ. ಇಂದಿನ ದಿನ, ವಿದ್ಯಾರ್ಥಿಯೊಬ್ಬರಿಗೆ ಊಟ-ತಿಂಡಿ ಒದಗಿಸಲು ತಿಂಗಳಿಗೆ ಕನಿಷ್ಠ ನಾಲ್ಕೂವರೆ ಸಾವಿರ ರೂಪಾಯಿಯಾದರೂ ಬೇಕಾಗುತ್ತದೆ! ಆದರೆ ಅನುದಾನ ಹೆಚ್ಚಿಸಬೇಕೆಂದು ಆ ಶಾಲೆಯವರು ಎಷ್ಟು ಸಲ ಕೇಳಿಕೊಂಡರೂ ಸರ್ಕಾರವು ಮಿಸುಕಾಡಿಲ್ಲ. ಹಾಗಾಗಿ, ಆ ನಾಟಕಶಾಲೆಯು ಊಟ, ವಸತಿ, ಶಿಕ್ಷಣದ ಖರ್ಚುವೆಚ್ಚವನ್ನು ತುಂಬಿಕೊಳ್ಳಲು ತನ್ನ ವಿದ್ಯಾರ್ಥಿಗಳಿಂದ ಹತ್ತಾರು ಸಾವಿರ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳುವುದು ಈಗ ಅನಿವಾರ್ಯವಾಗಿದ್ದು, ಬಡವರ ಮಕ್ಕಳು ಅವರಲ್ಲಿ ರಂಗಶಿಕ್ಷಣವನ್ನು ಪಡೆದುಕೊಳ್ಳುವುದು ಅಸಾಧ್ಯವಾಗುತ್ತಿದೆ. ಆ ಶಾಲೆಯವರು ವಿದ್ಯಾರ್ಥಿಗಳ ವ್ಯಾಸಂಗದ ಭಾಗವಾದ ನಾಟಕ ಪ್ರಯೋಗಕ್ಕೂ, ಬೋಧನ ಸಾಮಗ್ರಿಯಂಥದ್ದಕ್ಕೂ ಬೇಕಾದ ಹಣವನ್ನು ಕೂಡ ಇದೀಗ ಬೇರೆಬೇರೆ ದಾನಿಗಳಿಂದ ಬಹಳ ಕಷ್ಟಪಟ್ಟು ಸಂಗ್ರಹಿಸುವಂತಾಗಿದೆ. ಅವರ ಪ್ರಯತ್ನ ಕೆಲವೊಮ್ಮೆ ಫಲ ನೀಡುತ್ತಿದೆ, ಕೆಲವೊಮ್ಮೆ ನೀಡುತ್ತಿಲ್ಲ.

ಆದರೆ, ಬೊಮ್ಮಾಯಿ ನೇತೃತ್ವದ ಸರ್ಕಾರವು ಈ ಎಲ್ಲ ಸತ್ಯ ಮತ್ತು ಅಗತ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಿ, ಆ ಶಾಲೆಗೆ ತಾನು ನೀಡುತ್ತಿದ್ದ ಕಡಿಮೆ ಮೊತ್ತದ ಅನುದಾನದಲ್ಲಿಯೂ ದೊಡ್ಡ ಕಡಿತ ಮಾಡಿಬಿಟ್ಟಿತು. ಒಟ್ಟು ಶಿಕ್ಷಣ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ಸಾರ್ವಜನಿಕ ವಲಯದಿಂದ ದೂರಮಾಡಿ ಖಾಸಗೀಕರಣದತ್ತ ದೂಡಿದ್ದಕ್ಕೆ ಅದರ ಆ ತೀರ್ಮಾನವು ಮತ್ತೊಂದು ಉದಾಹರಣೆ.

ಅಗಾಧ ಗಹನ, ವಿಸ್ತಾರವಾದ ಭಾವನೆ ಮತ್ತು ವಿಚಾರಗಳನ್ನು ಭಾಷೆಯಲ್ಲಿ ದಾಖಲು ಮಾಡಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುವುದು ಮನುಷ್ಯತ್ವದ ಅತ್ಯಂತ ಮುಖ್ಯವಾದ ಕುರುಹು. ಕಾವ್ಯವು ಭಾಷೆಯ ಉತ್ತುಂಗಸ್ಥಿತಿ, ನಾಟಕವೆಂಬ ಪ್ರಕಾರವು ಕಾವ್ಯಪ್ರಕಾರದಲ್ಲಿಯೇ ರಮ್ಯ, ಉತ್ಕೃಷ್ಟವಾದದ್ದು. ನಾಟಕದ ಅತಿ ಎತ್ತರದ ದೆಸೆ ನಾಟ್ಯ ಅರ್ಥಾತ್ ರಂಗಪ್ರಯೋಗ. ಉತ್ಕೃಷ್ಟವಾದ ರಂಗಪ್ರಯೋಗವನ್ನು ಮಾಡಲು, ಸವಿಯಲು ಬೇಕಾದ ಸ್ಥಿತಿ ಮನುಷ್ಯತ್ವದ ಅತಿ ಎತ್ತರದ ಸ್ಥಿತಿಗಳಲ್ಲೊಂದು. ಅಂಥ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯಬಲ್ಲ ಕಲಾವಿದರು, ಅವರನ್ನು ತಯಾರುಮಾಡುವ ರಂಗಶಾಲೆಗಳು ನಮ್ಮ ನಾಡಿಗೆ ಬೇಡವೇ?

ಪ್ರಜಾಸತ್ತೆ ಉಳಿಯಬೇಕಾದರೆ ರಂಗಭೂಮಿ ಉಳಿಯಬೇಕು. ರಂಗಭೂಮಿಯ ಗುಣಮಟ್ಟ ಬೆಳೆಯುತ್ತ, ಕಲೆಗಾರಿಕೆಯ ಹೊಸ ಹಾದಿಗಳು ತೆರೆದುಕೊಳ್ಳಬೇಕಾದರೆ, ವಿಜ್ಞಾನ, ತಂತ್ರಜ್ಞಾನ, ಸಂಗೀತ, ಸಿನಿಮಾ, ಚಿತ್ರಕಲೆಯಂತಹ ಕ್ಷೇತ್ರಗಳಲ್ಲಿಯಂತೆಯೇ ನಾಟಕರಂಗದಲ್ಲಿಯೂ ಉತ್ಕೃಷ್ಟವಾದ ವೃತಿಪರತೆ ಇರಬೇಕು. ಅದಕ್ಕಾಗಿ ರಂಗಕಲೆಯ ಇಂಥ ಶಾಲೆಗಳು ಬೇಕು. ಆದ್ದರಿಂದ, ಕರ್ನಾಟಕದ ಇಂದಿನ ಸರ್ಕಾರವು ಈ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಧಾರಾಳ ಅನುದಾನ ಮತ್ತು ನೆರವು ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT