<blockquote><em>ಅಧಿಕಾರಕ್ಕಾಗಿ ಕಿತ್ತಾಟ ಕಾಂಗ್ರೆಸ್ಗೆ ಹೊಸತಲ್ಲ. ಸ್ವಾತಂತ್ರ್ಯ ಬಂದ ದಿನದಿಂದಲೂ ಅದು ಮುಗಿಯದ ನಾಟಕ. ಕೆ.ಸಿ. ರೆಡ್ಡಿ ಹಾಗೂ ಕೆಂಗಲ್ ಹನುಮಂತಯ್ಯ ಅವರೂ ಭಿನ್ನಮತದ ಭಾಗವಾಗಿದ್ದರು ಹಾಗೂ ಭಿನ್ನಮತದಿಂದ ಅಧಿಕಾರ ಕಳೆದುಕೊಂಡಿದ್ದರು! ಆ ಬೃಹನ್ನಾಟಕದ ಹೊಸ ಅಧ್ಯಾಯ ಈಗ ಚಾಲ್ತಿಯಲ್ಲಿದೆ!</em></blockquote>.<p>ಈಚೆಗೆ, 60 ವರ್ಷಗಳ ಹಿಂದೆ ಪ್ರಕಟಗೊಂಡ ಜಗಳೂರು ಮಹಮ್ಮದ್ ಇಮಾಂ ಅವರ ‘ಮೈಸೂರು ಆಗ, ಈಗ’ ಎಂಬ ಪುಸ್ತಕ (ಪ್ರಕಟಣೆ: 1966) ಓದಿದೆ. ಇಂದಿನ ಪೀಳಿಗೆಯವರಿಗೆ ಜಗಳೂರು ಮಹಮ್ಮದ್ ಇಮಾಂ ಗೊತ್ತಿಲ್ಲ. ಆದರೆ, ಚಿತ್ರದುರ್ಗ ಮತ್ತು ದಾವಣಗೆರೆಯ ಜಿಲ್ಲೆಯ ಹಿರಿಯರಿಗೆ ‘ಮೆಚ್ಚಿನ ರಾಜಕಾರಣಿ ಇಮ್ಮಣ್ಣ’ ಎಂದೇ ಪ್ರಿಯರಾಗಿದ್ದವರು. 40ರ ದಶಕದ ರಾಜಪ್ರಭುತ್ವ ದಲ್ಲಿಯೇ ಅಂದಿನ ಮೈಸೂರು ದಿವಾನರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದವರು. ಸ್ವಾತಂತ್ರ್ಯಾನಂತರ ಸಮಾಜವಾದಿಯಾಗಿ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಕೆ.ಸಿ. ರೆಡ್ಡಿ ಮತ್ತು ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದವರು. 1957 ಮತ್ತು 1967ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಿ.ಎಸ್.ವಿ.ಯಿಂದ ಸಂಸತ್ತಿಗೆ ಆಯ್ಕೆಯಾದವರು. ಅವರು ನಮ್ಮ ಮಧ್ಯೆ ಇಲ್ಲ. ಆದರೆ, ಅಂದಿನ ರಾಜ್ಯ ರಾಜಕಾರಣದ ಸಾಕ್ಷಿಪ್ರಜ್ಞೆಯಾಗಿ, ಕೆಲವೊಮ್ಮೆ ಸೂತ್ರಧಾರರಾಗಿ, ಪಾತ್ರಧಾರಿಯಾಗಿ ತಾವು ಕಂಡ ರಾಜಕಾರಣದ ಒಳಹೊರಗುಗಳನ್ನು ತಮ್ಮ ಪುಸ್ತಕದಲ್ಲಿ, ಆಪ್ತಶೈಲಿಯಲ್ಲಿ ತೆರೆದಿಟ್ಟಿದ್ದಾರೆ. ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಟಿಸಿರುವ ಈ ಅಮೂಲ್ಯ ಪುಸ್ತಕದಲ್ಲಿ ಇಮಾಂ ಬರೆದಿರುವ ನೈಜ ಘಟನೆಗಳ ಸಾರಾಂಶವನ್ನು ನಾನಿಲ್ಲಿ ಹೇಳುತ್ತಿದ್ದೇನೆ.</p><p>ಸ್ವಾತಂತ್ರ್ಯಾನಂತರ ಅಂದಿನ ಮೈಸೂರು ಸಂಸ್ಥಾನದಲ್ಲಿ 1881ರಿಂದಲೇ ಅಸ್ತಿತ್ವದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆ ಅಧಿಕೃತವಾಗಿ ಶಾಸನಸಭೆಯಾಗಿ ಪರಿವರ್ತಿತವಾಯಿತು. 1952ರ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ತಾತ್ಪೂರ್ತಿಕ ಮಂತ್ರಿಮಂಡಲ ರಚನೆಯಾಯಿತು. ಸಹಜವಾಗಿ ಕಾಂಗ್ರೆಸ್ಸಿಗರೇ ಅದರ ನೇತಾರರು. ಕೆ.ಸಿ. ರೆಡ್ಡಿಯವರುಮುಖ್ಯಮಂತ್ರಿಯಾದರು. ಅವರ ಮಂತ್ರಿಮಂಡಲ ದಲ್ಲಿ ಎಚ್.ಸಿ. ದಾಸಪ್ಪ, ಟಿ. ಮರಿಯಪ್ಪ, ಕೆ.ಟಿ. ಭಾಷ್ಯಂ, ಚೆನ್ನಿಗರಾಮಯ್ಯ, ಎಚ್. ಸಿದ್ದಯ್ಯ ಮುಂತಾದ ಕಾಂಗ್ರೆಸ್ ನಾಯಕರು ಮಂತ್ರಿಗಳಾದರು. ಕೆಂಗಲ್ ಹನುಮಂತಯ್ಯನವರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಕೆಲವೇ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಅತೃಪ್ತಿ ಮತ್ತು ಒಳಜಗಳ ಪ್ರಾರಂಭವಾದವು. ಕೆಂಗಲ್ ಹನುಮಂತಯ್ಯನವರು ಮತ್ತು ಟಿ. ಸಿದ್ದಲಿಂಗಯ್ಯನವರು ತಮ್ಮದೇ ಕಾಂಗ್ರೆಸ್ ಆಡಳಿತದಲ್ಲಿ ಅಸಮಾಧಾನವನ್ನು ಹೊರಹಾಕಿದರು. ಕೆ.ಸಿ. ರೆಡ್ಡಿಯವರು ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಹನುಮಂತಯ್ಯನವರು ಪಟ್ಟು ಹಿಡಿ ದರು. ಕೆ.ಸಿ. ರೆಡ್ಡಿಯವರು, ‘ತಮಗೆ ಬಹುಮತವಿದೆ. ಶಾಸಕಾಂಗ ಪಕ್ಷದ ಸಭೆ ಕರೆದು ತೋರಿಸುತ್ತೇನೆ. ಸಂಪುಟ ಪುನರ್ರಚನೆ ಮಾಡೋಲ್ಲ’ ಎಂದರು. ದೆಹಲಿ ವರಿಷ್ಠರ ಮಧ್ಯಪ್ರವೇಶದಿಂದ ಮಂತ್ರಿಮಂಡಲಮುಂದುವರಿಯಿತು. ಒಳಜಗಳ ನಿಲ್ಲಲಿಲ್ಲ.</p><p>ಅಷ್ಟು ಹೊತ್ತಿಗೆ ಸಾರ್ವತ್ರಿಕ ಚುನಾವಣೆ ಬಂತು.1952ರ ಆ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ಗಳನ್ನು ಆಯ್ಕೆ ಮಾಡುವ ಕೆಲಸ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆಂಗಲ್ ಅವರದಾಗಿತ್ತು. ಆಗ ಮೈಸೂರು ರಾಜ್ಯದಲ್ಲಿ ಇದ್ದುದು 9 ಜಿಲ್ಲೆಗಳು ಮಾತ್ರ. (ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು). ತಮಗೆ ಬೆಂಬಲ ಕೊಡುವವರನ್ನೇ ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಮಾಡಿದರು.</p><p>1952ರ ಫೆಬ್ರುವರಿಯಲ್ಲಿ ಚುನಾವಣೆ ಮುಗಿದು ಫಲಿತಾಂಶವೂ ಬಂತು. ಅಂದಿನ 100 ವಿಧಾನಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ನ 80 ಅಭ್ಯರ್ಥಿಗಳು ಗೆದ್ದರು. 20 ಜನ ವಿಪಕ್ಷದವರು, ಪಿ.ಎಸ್.ವಿ.ಯವರು. ವಿಪಕ್ಷದ ನಾಯಕ ಕೃತಿ ಕರ್ತೃ ಜೆ.ಎಂ. ಇಮಾಂ.</p><p>ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಉದ್ಭವವಾಯಿತು. ‘ರೆಡ್ಡಿ ಬಣ’ ಮತ್ತು ‘ಕೆಂಗಲ್ ಬಣ’ ಎಂಬ ಬಣಗಳಾದವು. ರೆಡ್ಡಿಯವರು ದೆಹಲಿಗೆ ಹೊರಟರು. ಆದರೆ, ಕೆಂಗಲ್ ಅವರಿಗೆ ಬಹುಮತ ವಿದೆ ಎಂದು ತಿಳಿದ ದೆಹಲಿ ವರಿಷ್ಠರು ಕೆ.ಸಿ. ರೆಡ್ಡಿಯವರಿಗೆ ಏನು ಹೇಳಿದರೋ ಏನೋ! ದೆಹಲಿ ಯಿಂದ ಹಿಂದಿರುಗಿದ ರೆಡ್ಡಿಯವರು ತಾವು ಮುಖ್ಯಮಂತ್ರಿ ಸ್ಪರ್ಧಿ ಅಲ್ಲ ಎಂದುಬಿಟ್ಟರು. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದರು. ಕೆ.ಸಿ. ರೆಡ್ಡಿ ಮಂತ್ರಿಮಂಡಲ ದಲ್ಲಿ ಮಂತ್ರಿಗಳಾಗಿದ್ದವರನ್ನೆಲ್ಲಾ ಬಿಟ್ಟು, ತಮ್ಮ ಬಣದ ಟಿ. ಸಿದ್ದಲಿಂಗಯ್ಯ, ಎ.ಜಿ. ರಾಮಚಂದ್ರರಾವ್, ಕಡಿದಾಳ್ ಮಂಜಪ್ಪ, ಟಿ. ಚೆನ್ನಯ್ಯ, ಹೆಚ್. ಸಿದ್ದ ವೀರಪ್ಪ ಅವರನ್ನು ಮಂತ್ರಿಗಳನ್ನಾಗಿ ಮಾಡಿದರು.</p><p>ಕೆಂಗಲ್ ಮುಖ್ಯಮಂತ್ರಿಯಾದ ಸ್ಪಲ್ಪದಿನ ಗಳಲ್ಲಿಯೇ ಕಾಂಗ್ರೆಸ್ ಮುಖಂಡರಿಂದಲೇ ಸರ್ಕಾರದ ವಿರುದ್ಧ ಒಂದಲ್ಲಾ ಒಂದು ಆಪಾದನೆ ಕೇಳಿಬರತೊಡ ಗಿತು. ಆ ಪೈಕಿ, ‘ಮಟ್ಟಿದೊಡ್ಡಿ ಪ್ರಕರಣ’ ಎಂಬುದು ಅಂದಿನ ವಿಧಾನಭೆಯಲ್ಲಿ ವ್ಯಾಪಕ ಬಿಸಿಯೇರಿದ ಚರ್ಚೆಯಾಗಿತ್ತು. ಹನುಮಂತಯ್ಯನವರ ತಮ್ಮನಾದ ನಂಜಪ್ಪ ಎಂಬುವರು ಬಹಳ ವರ್ಷಗಳಿಂದ ಹಂಗಾಮಿಯಾಗಿ ಸಾಗುವಳಿ ಮಾಡುತ್ತಿದ್ದ ರೈತರನ್ನು ದೌರ್ಜನ್ಯ ದಿಂದ ಒಕ್ಕಲೆಬ್ಬಿಸಿ ದರಖಾಸ್ತು ಮೂಲಕ ಕಿಮ್ಮತ್ತು ಕಟ್ಟಿ ತಮ್ಮ ಹೆಸರಿಗೆ ಕಾಯಂ ಸಾಗುವಳಿ ಚೀಟಿ ಪಡೆದುಕೊಂಡಿದ್ದಾರೆ ಎಂಬುದು ಪ್ರಕರಣ. ಕೆಂಗಲ್ ಅವರನ್ನು ಪೇಚಿಗೆ ಗುರಿಪಡಿಸಿದ ಪ್ರಸಂಗ ಅದು. ಅದು ತಣ್ಣಗಾಗುವಷ್ಟರಲ್ಲಿ ಕೆಂಗಲ್ ಅವರ ಪರಮಾಪ್ತರಾದ ಇಂಧನ ಸಚಿವ ಟಿ. ಸಿದ್ದಲಿಂಗಯ್ಯನವರ ಮೇಲೆ ಆಪಾದನೆ ಬಂತು. ತಾಮ್ರದ ತಂತಿ ಖರೀದಿಗೆಂದು ಕರೆಯಲಾದ ಟೆಂಡರ್ನಲ್ಲಿ, ಮಂತ್ರಿಗಳು ತಮ್ಮ ಸಂಬಂಧಿಕರಿಗೇ ವರ್ಕ್ ಆರ್ಡರ್ ಕೊಡಿಸಿದ್ದಾರೆ ಎಂಬ ಆಪಾದನೆಯನ್ನು ಕಾಂಗ್ರೆಸ್ಸಿಗರೇ ವಿಪಕ್ಷಕ್ಕೆ ರವಾನಿಸಿದರು. ಕೆಂಗಲ್ ಅವರು ಸಿದ್ದಲಿಂಗಯ್ಯನವರ ರಾಜೀನಾಮೆ ಪಡೆಯಲೇಬೇಕಾಯ್ತು.</p><p>ಕರ್ನಾಟಕ ಏಕೀಕರಣದ ಒಲವು ವ್ಯಕ್ತ ಪಡಿಸಿದ ಕೆಂಗಲ್ ಅವರು ಬಳ್ಳಾರಿಯನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿ ತಾವೇ ಖುದ್ದು ನಿಂತು ನಾಲ್ಕೇ ವರ್ಷಗಳಲ್ಲಿ ಪೂರ್ಣಗೊಳಿಸಿಯೂಬಿಟ್ಟರು. ವಿಧಾನಸೌಧ ನಿರ್ಮಾಣ ವೆಚ್ಚ ಆರಂಭದಲ್ಲಿ 50 ಲಕ್ಷ ರೂಪಾಯಿ ಇದ್ದದ್ದು, ಮುಗಿಯುವ ಹೊತ್ತಿಗೆ 2 ಕೋಟಿ ರೂಪಾಯಿ ಆಗಿತ್ತು. ಇವೆರಡೂ ಕಾಂಗ್ರೆಸ್ ಭಿನ್ನಮತೀಯರಿಗೆ ಅಸ್ತ್ರವಾದವು. ಕೆಂಗಲ್ ವಿಚಲಿತರಾಗಲಿಲ್ಲ. ಅವರಿಗೆ ವಿರೋಧ ಪಕ್ಷದ ನಾಯಕ ಇಮಾಂ ಅವರ ಬೆಂಬಲ ಈ ವಿಷಯದಲ್ಲಿತ್ತು. ಹೀಗಾಗಿ, ವಿರೋಧ ಪಕ್ಷದ ನಾಯಕರನ್ನೂ ತಮ್ಮ ಜತೆಯಲ್ಲಿ ಕರೆದುಕೊಂಡು ರಾಜ್ಯಕ್ಕೆ ಸೇರಬೇಕೆಂದಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಹೊರಟರು. ಆ ಪ್ರವಾಸದ ಅದ್ಭುತವನ್ನು ಇಮಾಂ ಅವರ ಬಾಯಲ್ಲೇ ಕೇಳಿ: </p><p>‘ಹಳ್ಳಿ ಹಳ್ಳಿಗೂ ಚಪ್ಪರ. ಬಿನ್ನವತ್ತಳೆ. ಅದ್ಭುತ ಸ್ವಾಗತ ಸಮಾರಂಭ. ಜನರು ತಂಡೋಪತಂಡವಾಗಿ ಅಖಿಲ ಕರ್ನಾಟಕದ ನಿರ್ಮಾಪಕರು ಬಂದಿದ್ದಾರೆ ಎಂದೂ, ಅಖಿಲ ಕರ್ನಾಟಕ ಭಾವಿ ಮುಖ್ಯಮಂತ್ರಿ ಗಳು ದಯಮಾಡಿಸಿದ್ದರೆಂದು ಘೋಷಿಸುತ್ತಿದ್ದರು. ಎಲ್ಲಾ ಬಿನ್ನವತ್ತಳೆಗಳಲ್ಲಿ, ‘ನೀವು ಕರ್ನಾಟಕದ ಕಣ್ಮಣಿ. ಕರ್ನಾಟಕದ ಉದ್ಧಾರಕ, ಕರ್ನಾಟಕದ ನಿರ್ಮಾಪಕ, ಕರ್ನಾಟಕದ ಭಾವಿ ಮುಖ್ಯಮಂತ್ರಿ ಹನುಮಂತಯ್ಯನವರು’ ಎಂಬ ಗುಣಗಾನ. ಗದಗಿನಲ್ಲಿ ಆನೆಯಿಂದ ಹನುಮಂತಯ್ಯನವರಿಗೆ ಪುಷ್ಪಮಾಲೆ.’ ಇದರಿಂದ ಪುಳಕಿತರಾದ ಕೆಂಗಲ್ರವರು ಗುಳೇದಗುಡ್ಡದಲ್ಲಿ, ‘ನಾನು ಕರ್ನಾಟಕ ದಾಸ’ ಎಂದೂ, ಬಿಜಾಪುರದಲ್ಲಿ ‘ಕರ್ನಾಟಕ ಏಕೀಕರಣಕ್ಕೆ ನನ್ನ ಪ್ರಾಣ ಮುಡಿಪು’ ಎಂದೂ, ಹುಬ್ಬಳ್ಳಿಯ ಕಾಂಗ್ರೆಸ್ ಸಭೆಯಲ್ಲಿ, ‘ಮದುವೆ ನಿಶ್ಚಯವಾಗಿದೆ. ಆಹ್ವಾನಗಳು ಕಳಿಸಲ್ಪಟ್ಟಿವೆ. ಇನ್ನು ಲಗ್ನವು ತಡವಾಗದು’ ಎಂದೂ ಉದ್ಗರಿಸಿದರು.</p><p>ಉತ್ತರ ಕರ್ನಾಟಕದ ಪ್ರವಾಸ ಮುಗಿಸಿಕೊಂಡು ಬಂದವರೇ ಕರ್ನಾಟಕದ ಏಕೀಕರಣ ಪ್ರಕ್ರಿಯೆಗೆ ವೇಗ ತುಂಬಿದರು. ನವೆಂಬರ್ 1, 1956 ಎಂದು ದಿನಾಂಕವೂ ನಿರ್ಧಾರವಾಯಿತು. ಆಗ ಕೆಂಗಲ್ ಅವರು ಇಮಾಂರವರ ಬಳಿ ಮಾತನಾಡುತ್ತ, ‘1956 ನವೆಂಬರ್ 1ರಂದು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿ ನಾನೇ ಕಟ್ಟಿಸಿರುವ ವಿಧಾನಸೌಧವನ್ನು ಪ್ರವೇಶ ಮಾಡಬೇಕೆಂಬುದು ನನ್ನ ಬಯಕೆ’ ಎಂದು ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು. </p><p>ಆದರೆ ನಡೆದದ್ದೇ ಬೇರೆ. ಮೊದಲಿನಿಂದಲೂ ಚನ್ನಯ್ಯನವರು, ನಿಜಲಿಂಗಪ್ಪನವರು, ನಾಗಯ್ಯರೆಡ್ಡಿ ಅವರು ಕೆಂಗಲ್ ಅವರಿಗೆ ವಿರೋಧವಾಗಿದ್ದರು. ಆ ಗುಂಪಿಗೆ ಕೆಂಗಲ್ ಅವರ ನಂಬಿಕೆಯ ಸಚಿವರಾಗಿದ್ದ ಕಡಿದಾಳರೂ, ರಾಮಚಂದ್ರರಾಯರೂ ಸೇರಿ ಬಿಟ್ಟರು. ಹನುಮಂತಯ್ಯನವರು ಪದವಿಯನ್ನು ತ್ಯಜಿಸಬೇಕಾಯಿತು. 1956ರ ಆಗಸ್ಟ್ನಲ್ಲಿ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಗಳಾದರು. </p><p>ಹನುಮಂತಯ್ಯನವರು ಪದಚ್ಯುತರಾದ ಮೇಲೆ ಕಡಿದಾಳ್ ಅವರು ಎರಡು ತಿಂಗಳು ಮುಖ್ಯಮಂತ್ರಿ ಯಾಗಿದ್ದರು. 1956ರ ನವೆಂಬರ್ 1ರಂದು ವಿಶಾಲ ಮೈಸೂರಿನ ಉದ್ಘಾಟನೆಯನ್ನು ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ನೆರವೇರಿಸುವವರಿದ್ದರು. ಆ ವಿಶಾಲ ಮೈಸೂರಿನ ಪ್ರಥಮ ಮುಖ್ಯಮಂತ್ರಿ ಯಾರಾಗ ಬೇಕು? ಕಡಿದಾಳ್ ಮಂಜಪ್ಪನವರನ್ನೇ ಮುಂದು ವರಿಸಬೇಕೇ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೇ? ವಿಶಾಲ ಮೈಸೂರಿನ ಎಲ್ಲ ಭಾಗಗಳಿಂದ ಸದಸ್ಯರು ಆಗಮಿಸಿದರು. ಉತ್ತರ ಕರ್ನಾಟಕದ ತಮ್ಮ ಪ್ರವಾಸ ಕಾಲದಲ್ಲಿ ಜನರೆಲ್ಲಾ ‘ನೀವೇ ಅಖಿಲ ಕರ್ನಾಟಕದ ಮುಖ್ಯಮಂತ್ರಿ’ ಎಂದು ಹಾಡಿ ಹೊಗಳಿದ್ದು ಕೆಂಗಲ್ ಕಿವಿಗಳಲ್ಲಿ ಗುಂಯ್ ಗುಡುತ್ತಿತ್ತು. ‘ಆದರೆ, ಹಿಂದೆ ನಡೆದುದೆಲ್ಲಾ ಮರೆತೇ ಹೋಯ್ತು, ಉತ್ತರ ಕರ್ನಾಟಕದ ಮಹನೀಯರ ಪ್ರಭಾವು ಹೆಚ್ಚಾಯಿತು. ಶ್ರೀ ನಿಜಲಿಂಗಪ್ಪ ಅವರನ್ನು ವಿಶಾಲ ಮೈಸೂರಿನ ಪ್ರಥಮ ಮುಖ್ಯಮಂತ್ರಿಗಳನ್ನಾಗಿ ಚುನಾಯಿಸಿದರು... ಅಷ್ಟೇ ಅಲ್ಲ, ಅವರ ಮಹದಾಸೆಗಳಾದ ವಿಧಾನಸೌಧದ ಆರಂಭೋತ್ಸವವೂ, ಅಖಿಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗುವುದೂ ಕನಸಾಗಿಯೇ ಉಳಿಯಿತು’ ಎನ್ನುತ್ತಾರೆ ಇಮಾಂ ಅವರು.</p><p>ಇದಿಷ್ಟು 70 ವರ್ಷಗಳ ಹಿಂದಿನ ‘ಕಾಂಗ್ರೆಸ್ ಮುಖ್ಯಮಂತ್ರಿ’ ನಾಟಕದ ನೈಜ ಕಥೆಯ ಒಂದು ಅಧ್ಯಾಯ. ಹೋಗಲಿ, ನಿಜಲಿಂಗಪ್ಪನವರಾದರೋ ನೆಮ್ಮದಿಯಿಂದ ಆಡಳಿತ ನಡೆಸುವಂತಾಯ್ತೇ? ಅದೂ ಆಗಲಿಲ್ಲ ಎನ್ನುತ್ತಾರೆ ಇಮಾಂ. ಏಕೆ? ಅದು ನಾಟಕದ ಇನ್ನೊಂದು ಅಧ್ಯಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಅಧಿಕಾರಕ್ಕಾಗಿ ಕಿತ್ತಾಟ ಕಾಂಗ್ರೆಸ್ಗೆ ಹೊಸತಲ್ಲ. ಸ್ವಾತಂತ್ರ್ಯ ಬಂದ ದಿನದಿಂದಲೂ ಅದು ಮುಗಿಯದ ನಾಟಕ. ಕೆ.ಸಿ. ರೆಡ್ಡಿ ಹಾಗೂ ಕೆಂಗಲ್ ಹನುಮಂತಯ್ಯ ಅವರೂ ಭಿನ್ನಮತದ ಭಾಗವಾಗಿದ್ದರು ಹಾಗೂ ಭಿನ್ನಮತದಿಂದ ಅಧಿಕಾರ ಕಳೆದುಕೊಂಡಿದ್ದರು! ಆ ಬೃಹನ್ನಾಟಕದ ಹೊಸ ಅಧ್ಯಾಯ ಈಗ ಚಾಲ್ತಿಯಲ್ಲಿದೆ!</em></blockquote>.<p>ಈಚೆಗೆ, 60 ವರ್ಷಗಳ ಹಿಂದೆ ಪ್ರಕಟಗೊಂಡ ಜಗಳೂರು ಮಹಮ್ಮದ್ ಇಮಾಂ ಅವರ ‘ಮೈಸೂರು ಆಗ, ಈಗ’ ಎಂಬ ಪುಸ್ತಕ (ಪ್ರಕಟಣೆ: 1966) ಓದಿದೆ. ಇಂದಿನ ಪೀಳಿಗೆಯವರಿಗೆ ಜಗಳೂರು ಮಹಮ್ಮದ್ ಇಮಾಂ ಗೊತ್ತಿಲ್ಲ. ಆದರೆ, ಚಿತ್ರದುರ್ಗ ಮತ್ತು ದಾವಣಗೆರೆಯ ಜಿಲ್ಲೆಯ ಹಿರಿಯರಿಗೆ ‘ಮೆಚ್ಚಿನ ರಾಜಕಾರಣಿ ಇಮ್ಮಣ್ಣ’ ಎಂದೇ ಪ್ರಿಯರಾಗಿದ್ದವರು. 40ರ ದಶಕದ ರಾಜಪ್ರಭುತ್ವ ದಲ್ಲಿಯೇ ಅಂದಿನ ಮೈಸೂರು ದಿವಾನರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದವರು. ಸ್ವಾತಂತ್ರ್ಯಾನಂತರ ಸಮಾಜವಾದಿಯಾಗಿ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಕೆ.ಸಿ. ರೆಡ್ಡಿ ಮತ್ತು ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದವರು. 1957 ಮತ್ತು 1967ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಿ.ಎಸ್.ವಿ.ಯಿಂದ ಸಂಸತ್ತಿಗೆ ಆಯ್ಕೆಯಾದವರು. ಅವರು ನಮ್ಮ ಮಧ್ಯೆ ಇಲ್ಲ. ಆದರೆ, ಅಂದಿನ ರಾಜ್ಯ ರಾಜಕಾರಣದ ಸಾಕ್ಷಿಪ್ರಜ್ಞೆಯಾಗಿ, ಕೆಲವೊಮ್ಮೆ ಸೂತ್ರಧಾರರಾಗಿ, ಪಾತ್ರಧಾರಿಯಾಗಿ ತಾವು ಕಂಡ ರಾಜಕಾರಣದ ಒಳಹೊರಗುಗಳನ್ನು ತಮ್ಮ ಪುಸ್ತಕದಲ್ಲಿ, ಆಪ್ತಶೈಲಿಯಲ್ಲಿ ತೆರೆದಿಟ್ಟಿದ್ದಾರೆ. ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಟಿಸಿರುವ ಈ ಅಮೂಲ್ಯ ಪುಸ್ತಕದಲ್ಲಿ ಇಮಾಂ ಬರೆದಿರುವ ನೈಜ ಘಟನೆಗಳ ಸಾರಾಂಶವನ್ನು ನಾನಿಲ್ಲಿ ಹೇಳುತ್ತಿದ್ದೇನೆ.</p><p>ಸ್ವಾತಂತ್ರ್ಯಾನಂತರ ಅಂದಿನ ಮೈಸೂರು ಸಂಸ್ಥಾನದಲ್ಲಿ 1881ರಿಂದಲೇ ಅಸ್ತಿತ್ವದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆ ಅಧಿಕೃತವಾಗಿ ಶಾಸನಸಭೆಯಾಗಿ ಪರಿವರ್ತಿತವಾಯಿತು. 1952ರ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ತಾತ್ಪೂರ್ತಿಕ ಮಂತ್ರಿಮಂಡಲ ರಚನೆಯಾಯಿತು. ಸಹಜವಾಗಿ ಕಾಂಗ್ರೆಸ್ಸಿಗರೇ ಅದರ ನೇತಾರರು. ಕೆ.ಸಿ. ರೆಡ್ಡಿಯವರುಮುಖ್ಯಮಂತ್ರಿಯಾದರು. ಅವರ ಮಂತ್ರಿಮಂಡಲ ದಲ್ಲಿ ಎಚ್.ಸಿ. ದಾಸಪ್ಪ, ಟಿ. ಮರಿಯಪ್ಪ, ಕೆ.ಟಿ. ಭಾಷ್ಯಂ, ಚೆನ್ನಿಗರಾಮಯ್ಯ, ಎಚ್. ಸಿದ್ದಯ್ಯ ಮುಂತಾದ ಕಾಂಗ್ರೆಸ್ ನಾಯಕರು ಮಂತ್ರಿಗಳಾದರು. ಕೆಂಗಲ್ ಹನುಮಂತಯ್ಯನವರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಕೆಲವೇ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಅತೃಪ್ತಿ ಮತ್ತು ಒಳಜಗಳ ಪ್ರಾರಂಭವಾದವು. ಕೆಂಗಲ್ ಹನುಮಂತಯ್ಯನವರು ಮತ್ತು ಟಿ. ಸಿದ್ದಲಿಂಗಯ್ಯನವರು ತಮ್ಮದೇ ಕಾಂಗ್ರೆಸ್ ಆಡಳಿತದಲ್ಲಿ ಅಸಮಾಧಾನವನ್ನು ಹೊರಹಾಕಿದರು. ಕೆ.ಸಿ. ರೆಡ್ಡಿಯವರು ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂದು ಹನುಮಂತಯ್ಯನವರು ಪಟ್ಟು ಹಿಡಿ ದರು. ಕೆ.ಸಿ. ರೆಡ್ಡಿಯವರು, ‘ತಮಗೆ ಬಹುಮತವಿದೆ. ಶಾಸಕಾಂಗ ಪಕ್ಷದ ಸಭೆ ಕರೆದು ತೋರಿಸುತ್ತೇನೆ. ಸಂಪುಟ ಪುನರ್ರಚನೆ ಮಾಡೋಲ್ಲ’ ಎಂದರು. ದೆಹಲಿ ವರಿಷ್ಠರ ಮಧ್ಯಪ್ರವೇಶದಿಂದ ಮಂತ್ರಿಮಂಡಲಮುಂದುವರಿಯಿತು. ಒಳಜಗಳ ನಿಲ್ಲಲಿಲ್ಲ.</p><p>ಅಷ್ಟು ಹೊತ್ತಿಗೆ ಸಾರ್ವತ್ರಿಕ ಚುನಾವಣೆ ಬಂತು.1952ರ ಆ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ಗಳನ್ನು ಆಯ್ಕೆ ಮಾಡುವ ಕೆಲಸ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆಂಗಲ್ ಅವರದಾಗಿತ್ತು. ಆಗ ಮೈಸೂರು ರಾಜ್ಯದಲ್ಲಿ ಇದ್ದುದು 9 ಜಿಲ್ಲೆಗಳು ಮಾತ್ರ. (ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು). ತಮಗೆ ಬೆಂಬಲ ಕೊಡುವವರನ್ನೇ ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಮಾಡಿದರು.</p><p>1952ರ ಫೆಬ್ರುವರಿಯಲ್ಲಿ ಚುನಾವಣೆ ಮುಗಿದು ಫಲಿತಾಂಶವೂ ಬಂತು. ಅಂದಿನ 100 ವಿಧಾನಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ನ 80 ಅಭ್ಯರ್ಥಿಗಳು ಗೆದ್ದರು. 20 ಜನ ವಿಪಕ್ಷದವರು, ಪಿ.ಎಸ್.ವಿ.ಯವರು. ವಿಪಕ್ಷದ ನಾಯಕ ಕೃತಿ ಕರ್ತೃ ಜೆ.ಎಂ. ಇಮಾಂ.</p><p>ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಉದ್ಭವವಾಯಿತು. ‘ರೆಡ್ಡಿ ಬಣ’ ಮತ್ತು ‘ಕೆಂಗಲ್ ಬಣ’ ಎಂಬ ಬಣಗಳಾದವು. ರೆಡ್ಡಿಯವರು ದೆಹಲಿಗೆ ಹೊರಟರು. ಆದರೆ, ಕೆಂಗಲ್ ಅವರಿಗೆ ಬಹುಮತ ವಿದೆ ಎಂದು ತಿಳಿದ ದೆಹಲಿ ವರಿಷ್ಠರು ಕೆ.ಸಿ. ರೆಡ್ಡಿಯವರಿಗೆ ಏನು ಹೇಳಿದರೋ ಏನೋ! ದೆಹಲಿ ಯಿಂದ ಹಿಂದಿರುಗಿದ ರೆಡ್ಡಿಯವರು ತಾವು ಮುಖ್ಯಮಂತ್ರಿ ಸ್ಪರ್ಧಿ ಅಲ್ಲ ಎಂದುಬಿಟ್ಟರು. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದರು. ಕೆ.ಸಿ. ರೆಡ್ಡಿ ಮಂತ್ರಿಮಂಡಲ ದಲ್ಲಿ ಮಂತ್ರಿಗಳಾಗಿದ್ದವರನ್ನೆಲ್ಲಾ ಬಿಟ್ಟು, ತಮ್ಮ ಬಣದ ಟಿ. ಸಿದ್ದಲಿಂಗಯ್ಯ, ಎ.ಜಿ. ರಾಮಚಂದ್ರರಾವ್, ಕಡಿದಾಳ್ ಮಂಜಪ್ಪ, ಟಿ. ಚೆನ್ನಯ್ಯ, ಹೆಚ್. ಸಿದ್ದ ವೀರಪ್ಪ ಅವರನ್ನು ಮಂತ್ರಿಗಳನ್ನಾಗಿ ಮಾಡಿದರು.</p><p>ಕೆಂಗಲ್ ಮುಖ್ಯಮಂತ್ರಿಯಾದ ಸ್ಪಲ್ಪದಿನ ಗಳಲ್ಲಿಯೇ ಕಾಂಗ್ರೆಸ್ ಮುಖಂಡರಿಂದಲೇ ಸರ್ಕಾರದ ವಿರುದ್ಧ ಒಂದಲ್ಲಾ ಒಂದು ಆಪಾದನೆ ಕೇಳಿಬರತೊಡ ಗಿತು. ಆ ಪೈಕಿ, ‘ಮಟ್ಟಿದೊಡ್ಡಿ ಪ್ರಕರಣ’ ಎಂಬುದು ಅಂದಿನ ವಿಧಾನಭೆಯಲ್ಲಿ ವ್ಯಾಪಕ ಬಿಸಿಯೇರಿದ ಚರ್ಚೆಯಾಗಿತ್ತು. ಹನುಮಂತಯ್ಯನವರ ತಮ್ಮನಾದ ನಂಜಪ್ಪ ಎಂಬುವರು ಬಹಳ ವರ್ಷಗಳಿಂದ ಹಂಗಾಮಿಯಾಗಿ ಸಾಗುವಳಿ ಮಾಡುತ್ತಿದ್ದ ರೈತರನ್ನು ದೌರ್ಜನ್ಯ ದಿಂದ ಒಕ್ಕಲೆಬ್ಬಿಸಿ ದರಖಾಸ್ತು ಮೂಲಕ ಕಿಮ್ಮತ್ತು ಕಟ್ಟಿ ತಮ್ಮ ಹೆಸರಿಗೆ ಕಾಯಂ ಸಾಗುವಳಿ ಚೀಟಿ ಪಡೆದುಕೊಂಡಿದ್ದಾರೆ ಎಂಬುದು ಪ್ರಕರಣ. ಕೆಂಗಲ್ ಅವರನ್ನು ಪೇಚಿಗೆ ಗುರಿಪಡಿಸಿದ ಪ್ರಸಂಗ ಅದು. ಅದು ತಣ್ಣಗಾಗುವಷ್ಟರಲ್ಲಿ ಕೆಂಗಲ್ ಅವರ ಪರಮಾಪ್ತರಾದ ಇಂಧನ ಸಚಿವ ಟಿ. ಸಿದ್ದಲಿಂಗಯ್ಯನವರ ಮೇಲೆ ಆಪಾದನೆ ಬಂತು. ತಾಮ್ರದ ತಂತಿ ಖರೀದಿಗೆಂದು ಕರೆಯಲಾದ ಟೆಂಡರ್ನಲ್ಲಿ, ಮಂತ್ರಿಗಳು ತಮ್ಮ ಸಂಬಂಧಿಕರಿಗೇ ವರ್ಕ್ ಆರ್ಡರ್ ಕೊಡಿಸಿದ್ದಾರೆ ಎಂಬ ಆಪಾದನೆಯನ್ನು ಕಾಂಗ್ರೆಸ್ಸಿಗರೇ ವಿಪಕ್ಷಕ್ಕೆ ರವಾನಿಸಿದರು. ಕೆಂಗಲ್ ಅವರು ಸಿದ್ದಲಿಂಗಯ್ಯನವರ ರಾಜೀನಾಮೆ ಪಡೆಯಲೇಬೇಕಾಯ್ತು.</p><p>ಕರ್ನಾಟಕ ಏಕೀಕರಣದ ಒಲವು ವ್ಯಕ್ತ ಪಡಿಸಿದ ಕೆಂಗಲ್ ಅವರು ಬಳ್ಳಾರಿಯನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿ ತಾವೇ ಖುದ್ದು ನಿಂತು ನಾಲ್ಕೇ ವರ್ಷಗಳಲ್ಲಿ ಪೂರ್ಣಗೊಳಿಸಿಯೂಬಿಟ್ಟರು. ವಿಧಾನಸೌಧ ನಿರ್ಮಾಣ ವೆಚ್ಚ ಆರಂಭದಲ್ಲಿ 50 ಲಕ್ಷ ರೂಪಾಯಿ ಇದ್ದದ್ದು, ಮುಗಿಯುವ ಹೊತ್ತಿಗೆ 2 ಕೋಟಿ ರೂಪಾಯಿ ಆಗಿತ್ತು. ಇವೆರಡೂ ಕಾಂಗ್ರೆಸ್ ಭಿನ್ನಮತೀಯರಿಗೆ ಅಸ್ತ್ರವಾದವು. ಕೆಂಗಲ್ ವಿಚಲಿತರಾಗಲಿಲ್ಲ. ಅವರಿಗೆ ವಿರೋಧ ಪಕ್ಷದ ನಾಯಕ ಇಮಾಂ ಅವರ ಬೆಂಬಲ ಈ ವಿಷಯದಲ್ಲಿತ್ತು. ಹೀಗಾಗಿ, ವಿರೋಧ ಪಕ್ಷದ ನಾಯಕರನ್ನೂ ತಮ್ಮ ಜತೆಯಲ್ಲಿ ಕರೆದುಕೊಂಡು ರಾಜ್ಯಕ್ಕೆ ಸೇರಬೇಕೆಂದಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಹೊರಟರು. ಆ ಪ್ರವಾಸದ ಅದ್ಭುತವನ್ನು ಇಮಾಂ ಅವರ ಬಾಯಲ್ಲೇ ಕೇಳಿ: </p><p>‘ಹಳ್ಳಿ ಹಳ್ಳಿಗೂ ಚಪ್ಪರ. ಬಿನ್ನವತ್ತಳೆ. ಅದ್ಭುತ ಸ್ವಾಗತ ಸಮಾರಂಭ. ಜನರು ತಂಡೋಪತಂಡವಾಗಿ ಅಖಿಲ ಕರ್ನಾಟಕದ ನಿರ್ಮಾಪಕರು ಬಂದಿದ್ದಾರೆ ಎಂದೂ, ಅಖಿಲ ಕರ್ನಾಟಕ ಭಾವಿ ಮುಖ್ಯಮಂತ್ರಿ ಗಳು ದಯಮಾಡಿಸಿದ್ದರೆಂದು ಘೋಷಿಸುತ್ತಿದ್ದರು. ಎಲ್ಲಾ ಬಿನ್ನವತ್ತಳೆಗಳಲ್ಲಿ, ‘ನೀವು ಕರ್ನಾಟಕದ ಕಣ್ಮಣಿ. ಕರ್ನಾಟಕದ ಉದ್ಧಾರಕ, ಕರ್ನಾಟಕದ ನಿರ್ಮಾಪಕ, ಕರ್ನಾಟಕದ ಭಾವಿ ಮುಖ್ಯಮಂತ್ರಿ ಹನುಮಂತಯ್ಯನವರು’ ಎಂಬ ಗುಣಗಾನ. ಗದಗಿನಲ್ಲಿ ಆನೆಯಿಂದ ಹನುಮಂತಯ್ಯನವರಿಗೆ ಪುಷ್ಪಮಾಲೆ.’ ಇದರಿಂದ ಪುಳಕಿತರಾದ ಕೆಂಗಲ್ರವರು ಗುಳೇದಗುಡ್ಡದಲ್ಲಿ, ‘ನಾನು ಕರ್ನಾಟಕ ದಾಸ’ ಎಂದೂ, ಬಿಜಾಪುರದಲ್ಲಿ ‘ಕರ್ನಾಟಕ ಏಕೀಕರಣಕ್ಕೆ ನನ್ನ ಪ್ರಾಣ ಮುಡಿಪು’ ಎಂದೂ, ಹುಬ್ಬಳ್ಳಿಯ ಕಾಂಗ್ರೆಸ್ ಸಭೆಯಲ್ಲಿ, ‘ಮದುವೆ ನಿಶ್ಚಯವಾಗಿದೆ. ಆಹ್ವಾನಗಳು ಕಳಿಸಲ್ಪಟ್ಟಿವೆ. ಇನ್ನು ಲಗ್ನವು ತಡವಾಗದು’ ಎಂದೂ ಉದ್ಗರಿಸಿದರು.</p><p>ಉತ್ತರ ಕರ್ನಾಟಕದ ಪ್ರವಾಸ ಮುಗಿಸಿಕೊಂಡು ಬಂದವರೇ ಕರ್ನಾಟಕದ ಏಕೀಕರಣ ಪ್ರಕ್ರಿಯೆಗೆ ವೇಗ ತುಂಬಿದರು. ನವೆಂಬರ್ 1, 1956 ಎಂದು ದಿನಾಂಕವೂ ನಿರ್ಧಾರವಾಯಿತು. ಆಗ ಕೆಂಗಲ್ ಅವರು ಇಮಾಂರವರ ಬಳಿ ಮಾತನಾಡುತ್ತ, ‘1956 ನವೆಂಬರ್ 1ರಂದು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿ ನಾನೇ ಕಟ್ಟಿಸಿರುವ ವಿಧಾನಸೌಧವನ್ನು ಪ್ರವೇಶ ಮಾಡಬೇಕೆಂಬುದು ನನ್ನ ಬಯಕೆ’ ಎಂದು ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು. </p><p>ಆದರೆ ನಡೆದದ್ದೇ ಬೇರೆ. ಮೊದಲಿನಿಂದಲೂ ಚನ್ನಯ್ಯನವರು, ನಿಜಲಿಂಗಪ್ಪನವರು, ನಾಗಯ್ಯರೆಡ್ಡಿ ಅವರು ಕೆಂಗಲ್ ಅವರಿಗೆ ವಿರೋಧವಾಗಿದ್ದರು. ಆ ಗುಂಪಿಗೆ ಕೆಂಗಲ್ ಅವರ ನಂಬಿಕೆಯ ಸಚಿವರಾಗಿದ್ದ ಕಡಿದಾಳರೂ, ರಾಮಚಂದ್ರರಾಯರೂ ಸೇರಿ ಬಿಟ್ಟರು. ಹನುಮಂತಯ್ಯನವರು ಪದವಿಯನ್ನು ತ್ಯಜಿಸಬೇಕಾಯಿತು. 1956ರ ಆಗಸ್ಟ್ನಲ್ಲಿ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಗಳಾದರು. </p><p>ಹನುಮಂತಯ್ಯನವರು ಪದಚ್ಯುತರಾದ ಮೇಲೆ ಕಡಿದಾಳ್ ಅವರು ಎರಡು ತಿಂಗಳು ಮುಖ್ಯಮಂತ್ರಿ ಯಾಗಿದ್ದರು. 1956ರ ನವೆಂಬರ್ 1ರಂದು ವಿಶಾಲ ಮೈಸೂರಿನ ಉದ್ಘಾಟನೆಯನ್ನು ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ನೆರವೇರಿಸುವವರಿದ್ದರು. ಆ ವಿಶಾಲ ಮೈಸೂರಿನ ಪ್ರಥಮ ಮುಖ್ಯಮಂತ್ರಿ ಯಾರಾಗ ಬೇಕು? ಕಡಿದಾಳ್ ಮಂಜಪ್ಪನವರನ್ನೇ ಮುಂದು ವರಿಸಬೇಕೇ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೇ? ವಿಶಾಲ ಮೈಸೂರಿನ ಎಲ್ಲ ಭಾಗಗಳಿಂದ ಸದಸ್ಯರು ಆಗಮಿಸಿದರು. ಉತ್ತರ ಕರ್ನಾಟಕದ ತಮ್ಮ ಪ್ರವಾಸ ಕಾಲದಲ್ಲಿ ಜನರೆಲ್ಲಾ ‘ನೀವೇ ಅಖಿಲ ಕರ್ನಾಟಕದ ಮುಖ್ಯಮಂತ್ರಿ’ ಎಂದು ಹಾಡಿ ಹೊಗಳಿದ್ದು ಕೆಂಗಲ್ ಕಿವಿಗಳಲ್ಲಿ ಗುಂಯ್ ಗುಡುತ್ತಿತ್ತು. ‘ಆದರೆ, ಹಿಂದೆ ನಡೆದುದೆಲ್ಲಾ ಮರೆತೇ ಹೋಯ್ತು, ಉತ್ತರ ಕರ್ನಾಟಕದ ಮಹನೀಯರ ಪ್ರಭಾವು ಹೆಚ್ಚಾಯಿತು. ಶ್ರೀ ನಿಜಲಿಂಗಪ್ಪ ಅವರನ್ನು ವಿಶಾಲ ಮೈಸೂರಿನ ಪ್ರಥಮ ಮುಖ್ಯಮಂತ್ರಿಗಳನ್ನಾಗಿ ಚುನಾಯಿಸಿದರು... ಅಷ್ಟೇ ಅಲ್ಲ, ಅವರ ಮಹದಾಸೆಗಳಾದ ವಿಧಾನಸೌಧದ ಆರಂಭೋತ್ಸವವೂ, ಅಖಿಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗುವುದೂ ಕನಸಾಗಿಯೇ ಉಳಿಯಿತು’ ಎನ್ನುತ್ತಾರೆ ಇಮಾಂ ಅವರು.</p><p>ಇದಿಷ್ಟು 70 ವರ್ಷಗಳ ಹಿಂದಿನ ‘ಕಾಂಗ್ರೆಸ್ ಮುಖ್ಯಮಂತ್ರಿ’ ನಾಟಕದ ನೈಜ ಕಥೆಯ ಒಂದು ಅಧ್ಯಾಯ. ಹೋಗಲಿ, ನಿಜಲಿಂಗಪ್ಪನವರಾದರೋ ನೆಮ್ಮದಿಯಿಂದ ಆಡಳಿತ ನಡೆಸುವಂತಾಯ್ತೇ? ಅದೂ ಆಗಲಿಲ್ಲ ಎನ್ನುತ್ತಾರೆ ಇಮಾಂ. ಏಕೆ? ಅದು ನಾಟಕದ ಇನ್ನೊಂದು ಅಧ್ಯಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>