ಹೊಸ ನ್ಯೂಸ್ ಚಾನೆಲ್ ಒಂದಕ್ಕೆ ವರದಿಗಾರರ ಹುದ್ದೆಗೆ ಸಂದರ್ಶನ ನಡೆಯುತ್ತಿತ್ತು. ಸಂದರ್ಶನಕ್ಕೆ ಬಂದಿದ್ದ ತೆಪರೇಸಿಯನ್ನು ಸಂಪಾದಕರು ಪ್ರಶ್ನಿಸಿದರು. ‘ನಮ್ಮ ನ್ಯೂಸ್ ಚಾನೆಲ್ಗೆ ತಕ್ಷಣ ದೊಡ್ಡ ಟಿ.ಆರ್.ಪಿ ಬರಬೇಕು. ಇಡೀ ಕರ್ನಾಟಕ ನಮ್ಮ ಚಾನೆಲ್ ಕಡೆ ತಿರುಗಿ ನೋಡಬೇಕು. ಅಂಥ ಸುದ್ದಿ ಕೊಡ್ತೀರಾ?’
‘ಖಂಡಿತ ಕೊಡ್ತೀನಿ ಸಾ...’
‘ಒಕೆ, ಒಂದು ಸ್ಯಾಂಪಲ್ ಕೊಡಿ...’
‘ಕರ್ನಾಟಕ ವಿಧಾನಸಭೆ ವಿಸರ್ಜನೆ’ ಅಂತ ಬಿಗ್ ಬ್ರೇಕಿಂಗ್ ಕೊಟ್ಟುಬಿಡಿ. ಯಾಕೆ, ಏನು, ಯಾವಾಗ ಇತ್ಯಾದಿ ಸಂಜೆ ಐದು ಗಂಟೆಗೆ ಬ್ಲಾಸ್ಟ್ ಮಾಡ್ತೀವಿ ಅಂತ ಹಾಕಿ. ಟಿ.ಆರ್.ಪಿ ಹೆಂಗೆ ಒದ್ದು ಕೊಂಡು ಬರುತ್ತೆ ನೋಡಿ’ ತೆಪರೇಸಿ ಹೇಳಿದ.
‘ಟಿ.ಆರ್.ಪಿ ಒದ್ದುಕೊಂಡು ಬರುತ್ತೋ, ಜನ ಬಂದು ನಮ್ಮನ್ನ ಒದೀತಾರೋ... ಇರ್ಲಿ, ಮುಂದೆ?’
‘ನಿಮಗೆ ಟಿ.ಆರ್.ಪಿ ಬೇಕೋ ಬೇಡ್ವೊ? ಆಮೇಲೆ ಸಂಜೆ ಐದು ಗಂಟೆಗೆ ಒಂದಿಬ್ಬರ ವಾಯ್ಸ್ ರೆಕಾರ್ಡಿಂಗ್ ಮಾಡಿ ಸ್ಕ್ರೀನ್ಗೆ ಬಿಡ ಬೇಕು. ಅದ್ರಲ್ಲಿ ‘ಹಂಗಾದ್ರೆ ಸರ್ಕಾರ ಉಳಿಯಲ್ವ?’ ಅಂತ ಒಬ್ಬ ಕೇಳಬೇಕು. ಅದಕ್ಕೆ ಇನ್ನೊಬ್ಬ ‘ಉಳೀದಿದ್ರೆ ವಿಧಾನಸಭೆ ವಿಸರ್ಜನೆ ಮಾಡಿದ್ರಾತು’ ಅನ್ನಬೇಕು’.