‘ಗುರೂ... ನಂಗೇನೋ ಈ ಗ್ಯಾರಂಟಿಗಳು ಜಾರಿಗೆ ಬರ್ತಾವೆ ಅನ್ನೋದು ಡೌಟಪ, ತೀರ ಅಟಾಕಂದು ರೊಕ್ಕ ಎಲ್ಲಿಂದ ತರ್ತಾರೆ ಅಂತ’ ಹರಟೆಕಟ್ಟೆಯಲ್ಲಿ ದುಬ್ಬೀರ ತಲೆಯಾಡಿಸಿದಾಗ, ‘ನಂಗೂ ಹಂಗೇ ಅನ್ಸುತ್ತಪ್ಪ, ಅದ್ಕೇ ಈಗ ಕಂಡೀಷನ್ನು ಅದೂ ಇದೂ ಅಂತಿದಾರೆ’ ತೆಪರೇಸಿಯೂ ದನಿಗೂಡಿಸಿದ.
‘ಅಲ್ಲ ತಮಾಸಿಗೆ ಕೇಳ್ತೀನಿ, ಗ್ಯಾರಂಟಿ ಕೊಡ್ತೀವಿ ಅಂದಿದ್ದು ನಿಜ, ಈಗ್ಲೇ ಕೊಡ್ತೀವಿ ಅಂದಿದ್ರಾ?’ ಗುಡ್ಡೆ ನಕ್ಕ.
‘ಮತ್ತೆ? ಇನ್ಯಾವಾಗ ಕೊಡ್ತಾರೆ, ಐದು ವರ್ಷ ಬಿಟ್ಟಾ?’ ಮಂಜಮ್ಮಗೆ ಕೋಪ.
‘ಅಕ್ಕಿ ಪಕ್ಕಿ ಕೊಡಬೋದು, ಆದ್ರೆ ನಿನ್ನಂಥ ಹೋಟ್ಲು ಓನರ್ಗೆ ಎರಡು ಸಾವಿರ ಕೊಡಾಣ ಅಂದ್ರೆ, ಇದೇ ಟೈಮಿಗೆ ಕೇಂದ್ರದೋರು ಎರಡು ಸಾವಿರ ರೂಪಾಯಿ ನೋಟೇ ವಾಪಸ್ ತಗಂಡ್ರು. ಪಾಪ ರಾಜ್ಯ ಸರ್ಕಾರದೋರು ಏನ್ಮಾಡ್ತಾರೆ?’
‘ಐನೂರವು ನಾಕು ಕೊಡ್ಲಿ, ಬ್ಯಾಡಂತೀವಾ? ಆಮೇಲೆ ನಮಿಗೆ ಫ್ರೀ ಬಸ್ ಪ್ರಯಾಣ ಯಾವಾಗಿಂದ?’
‘ಅದ್ಕೂ ಕಂಡೀಷನ್ ಇದೆ. ಮೊಬೈಲ್ ಇಟ್ಕಂಡಿರೋ ನಿನ್ನಂಥ ಮಹಿಳೆಯರಿಗೆ ಫ್ರೀ ಬಸ್ ಇಲ್ಲ ಅಂತಾರಪ, ಆಗ?’
‘ಗುಡ್ಡೆ ಬ್ಯಾಡ ನೋಡು, ಅಷ್ಟೇ ಈಗ...’ ಮಂಜಮ್ಮ ಕಾಫಿ ಲೋಟ ಕೈಗೆತ್ತಿಕೊಂಡಳು.
‘ಶಾಂತಿ ಶಾಂತಿ... ಲೇ ಗುಡ್ಡೆ ನೀನು ಗೌರ್ಮೆಂಟಿಗೆ ಅಡ್ವೈಸರ್ ಆಗಾಕೆ ಲಾಯಕ್ಕಿದಿ ನೋಡಲೆ, ಅಲ್ಲಲೆ ಈಗಿನ ಕಾಲದಾಗೆ ಮೊಬೈಲ್ ಇಲ್ದೇ ಇರೋರು ಯಾರದಾರ್ಲೆ? ಅದಿರ್ಲಿ ಈಗ ಕರೆಂಟ್ ಕತಿ ಹೆಂಗೆ, ಫ್ರೀ ಕೊಡ್ತಾರಾ?’ ದುಬ್ಬೀರ ಕೇಳಿದ.
‘ಅದೆಂಗ್ ಕೊಡ್ತಾರಲೆ, ಕರೆಂಟ್ ಬಿಲ್ ಬಂದೇ ಬರ್ತತಿ’.
‘ನಾವು ಕಟ್ಟಲ್ಲ ಅಂತೀವಪ’.
‘ನಾವು ಬಿಲ್ ಕೊಟ್ಟಿರೋದು ಕರೆಂಟ್ ಬಳಸಿದ್ದಕ್ಕಲ್ಲ, ಇದು ಮೀಟರ್ ಚಾರ್ಜು ಅಂತೀವಪ, ಆಗ?’
ಮಂಜಮ್ಮ ಕಾಫಿ ಲೋಟವನ್ನ ಗುಡ್ಡೆ ಮೇಲೆ ಬೀಸಿ ಒಗೆದು ‘ಅಯ್ಯೋ ಮನೆಹಾಳ’ ಎಂದಳು. ಎಲ್ಲರೂ ಗೊಳ್ಳಂತ ನಕ್ಕರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.