‘ಸಾ, ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ ಎಂಟು ಜನ ಕಷ್ಟ ದಿಕ್ಪಾಲಕರನ್ನ ನೇಮಕ ಮಾಡ್ಯವರಂತೆ. ನಾವೆಲ್ಲಾ ಮನೇಲೇ ಇದ್ದು ಮಕ್ಕೆ ಮಾಸ್ಕಾಕಿಕೊಂಡು ಮಾಸ್ಕಂಡೇಯರಾಗಿರಬೇಕು ಸಾ!’ ಅಂತ ಮಾಸ್ಕ್ ಹಾಕಿರದ ತುರೇಮಣೆ ನೋಡಿಕ್ಯಂಡು ಭಾಷಣ ಮಾಡಿದೆ.
‘ಅಡ್ನಾಡಿ ನನ ಮಗನೇ, ಯಡುರಪ್ಪಾರು ಕ್ವಾರಂಟೈನಾಗಿ ಯಯಾತಿ ಬುಕ್ಕು ಹಿಡಕಂದು ಕುಂತವರೆ ಅಂದ್ರೆ ರಾಜಕೀಯದಲ್ಲಿ ಹೊಸ ರಕ್ತ ಹರಿಯೋ ಸೂಚನೆ ಅದೆ ಕನೋ’ ಅಂದ್ರು.
‘ಅಲ್ಲಾ ಸಾ, ತಿರುಪತೀಲಿ 200 ಕೋಟಿ ಖರ್ಚು ಮಾಡಿ ಸವತಿ ಸಮುಚ್ಚಯ ಯಾಕೆ ನಿರ್ಮಿಸ್ತಾವರೆ?’ ಅಂತಂದೆ. ತುರೇಮಣೆಗೆ ಸಿಟ್ಟು ಬಂದೋಯ್ತು. ‘ಲೋ ಅವೇಗ್ಯ, ಅದು ಸವತಿ ಸಮುಚ್ಚಯ ಅಲ್ಲಾ ಕಲಾ ವಸತಿ ಸಮುಚ್ಚಯ. ಕೊರೊನಾ ಕಾಲದಲ್ಲಿ ಲೆಕ್ಕ ಕೇಳೋರು ಸರ್ವನಾಸಾಗ್ಲಿ ಅಂತ ಸರ್ಕಾರ ತಿಮ್ಮಪ್ಪನಿಗೆ ಹರಕೆ ಕಟ್ಟಿಗ್ಯಂಡದಂತೆ ಕನಲಾ’ ಅಂತಂದ್ರು.
‘ಇರಬೌದು ಬುಡಿ, ಸರ್ಕಾರ ಕೊರೊನಾ ಲೇಣೆದೇಣೆ ಸರಿಯಾಗಿ ಮಡಗಿಲ್ಲ ಅಂತ ಸಿದ್ದರಾಮಣ್ಣ ಬಾರಾ ನಮೂನೆ ಪ್ರಶ್ನೆ ಹಾಕ್ಯವರೆ. ಸಿದ್ದರಾಮಣ್ಣನಿಗೆ ಒಳೇಟು ಕೊಡಕೆ ಅವರ ಗರಡಿ ಹಳೇ ಪೈಲ್ವಾನುಗಳನ್ನೇ ಬುಟ್ಟವರಂತೆ ಕನಾ ಸಿಎಮ್ಮು. ಹ್ಯಂಗೋ ಕುಮಾರಣ್ಣನೇ ಪರವಾಗಿಲ್ಲ ಕಣೀ ಸಾ. ‘ಇದು ಲೇವಾದೇವಿ ಕೇಳಾ ಕಾಲ ಅಲ್ಲ! ಕಾಂಗ್ರೇಸ್ನೋರಿಗೆ ಕಣ್ಣೆಸರಾಗದೆ. ಅವುರ್ನ ಮಾತಾಡಿಸಿಕ್ಯಂಡು ಪ್ಯಾರ್ ದರ್ಶಕವಾಗಿ ಕೆಲಸ ಮಾಡಿ’ ಅಂದವುರೆ. ಜೊತೆಗೆ ನಾನು ನಿಮ್ಮ ಹಿಂದೆ ಅವನಿ ಅಂತ್ಲೂ ಬಾಸೆ ಕೊಟ್ಟವ್ರೆ ಯಡೂರಪ್ಪಾರಿಗೆ!’ ಅಂದೆ.
‘ಅದೇ ಕನಪ್ಪಾ ಕಷ್ಟ! ಈ ಕೊರೊನಾ ವೈರಾಗ್ಯ ಯಾಕೋ ಕಾಣೆ!’ ಅಂತ ಸುಮ್ಮಗಾದರು.