ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು, ಸಚಿವರ ವೇತನ ಹೆಚ್ಚಳ: ಮೃಷ್ಟಾನ್ನದವರಿಗೇಕೆ ಭಿಕ್ಷಾನ್ನದ ತಹತಹ?

ಶಾಸಕರು, ಸಚಿವರ ವೇತನ ಹೆಚ್ಚಳ ಸರಿಯಾದ ನಡೆಯೇ?
Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕೈಯಲ್ಲಿ ಧಂಡಿಯಾಗಿ ಕಾಸಿದ್ದು, ಹೀಗೆ ಸಂಬಳ-ಭತ್ಯೆ ಜಾಸ್ತಿ ಮಾಡಿಕೊಂಡರೆ ಅದಕ್ಕೆ ಆಕ್ಷೇಪ ಹೇಳುವುದು ಕಷ್ಟ. ಆದರೆ ಇದು ಹೊಟ್ಟೆಗೆ ಹಿಟ್ಟಿಲ್ಲದೆ ಇರುವುದು ಗೊತ್ತಿದ್ದೂ, ಕೇವಲ ತಮ್ಮ ಜುಟ್ಟಿಗೆ ಮಲ್ಲಿಗೆ ಏರಿಸಿಕೊಳ್ಳುವ ಕೆಲಸ. ರಾಜ್ಯದ ಹಣಕಾಸು ಜವಾಬ್ದಾರಿಗಳ ಕಾಯ್ದೆಯ ಪ್ರಕಾರ, ರಾಜ್ಯದ ಬಜೆಟ್ ಹಣಕಾಸಿನ ಕೊರತೆ ಶೇ 3ರಷ್ಟನ್ನು ಮೀರುವಂತಿಲ್ಲ. ಆದರೆ 20-21 ಸಾಲಿನ ಪರಿಷ್ಕೃತ ಹಣಕಾಸು ಕೊರತೆ ಅದನ್ನು ಮೀರಿ, ಶೇ 3.5ರ ಆಸುಪಾಸಿನಲ್ಲಿದೆ.

ಯಾವುದೇ ಶಾಸನ ರಚನೆಯ ವೇಳೆ, ಅದರ ಉದ್ದೇಶ ಮತ್ತು ಕಾರಣಗಳನ್ನು ಸದನಕ್ಕೆ ವಿವರಿಸುವುದು ಸರ್ಕಾರದ ಕರ್ತವ್ಯ. ಶಾಸಕರ, ಸಚಿವರ ಸಂಬಳ-ಭತ್ಯೆಗಳನ್ನು ಹೆಚ್ಚಿಸುವಾಗಲೆಲ್ಲ, ಸದನದಲ್ಲಿ ಆ ಕುರಿತು ಮಸೂದೆ ಮಂಡಿಸುವಾಗ ಸಾಮಾನ್ಯವಾಗಿ ಕೇಳಿಸುತ್ತಾ ಬಂದಿರುವ ಒಂದು ಕಾರಣ ಎಂದರೆ, ‘ಜೀವನ ವೆಚ್ಚದಲ್ಲಿ ಗಣನೀಯ ಹೆಚ್ಚಳ’. ಈ ಬಾರಿ ಕೂಡ ಇದೇ ಕಾರಣ ಬಳಕೆಯಾಗಿದ್ದು, ಸಂಸದೀಯ ವ್ಯವಹಾರ ಸಚಿವರು, ‘2015ರಿಂದ ಈಚೆಗೆ ಶಾಸಕರು ಮತ್ತು ಸಚಿವರ ವೇತನ ಮತ್ತು ಭತ್ಯೆ ಪರಿಷ್ಕರಣೆ ಆಗಿಲ್ಲ ಮತ್ತು ಈ ಅವಧಿಯಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ಸಾಕಷ್ಟು ಶಾಸಕರು ಸಂಕಷ್ಟ ಅನುಭವಿಸಿದ್ದಾರೆ’ ಎಂದು ಸದನದಲ್ಲಿ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಒಂದು ಆದರ್ಶ ರಾಜ್ಯದಲ್ಲಿ, ಪ್ರಾಮಾಣಿಕ ಜನಪ್ರತಿನಿಧಿಗಳು ಇರುವ ಸನ್ನಿವೇಶವಿದ್ದರೆ, ಜೀವನ ವೆಚ್ಚದಲ್ಲಿ ಹೆಚ್ಚಳ ಆದಾಗ, ಜನಸೇವೆಯಲ್ಲಿ ವ್ಯಸ್ತರಿರುವವರಿಗೆ ಅದರಿಂದ ಹೊರೆಯಾಗುವುದು ಸಹಜ. ಅದನ್ನು ಭರಿಸಬೇಕಾದುದು ಖಂಡಿತಕ್ಕೂ ರಾಜ್ಯದ ಬೊಕ್ಕಸದ ಕರ್ತವ್ಯ. ನಮ್ಮಲ್ಲಿ ಪರಿಸ್ಥಿತಿ ಹೀಗಿದೆಯೆ?

2018ರ ವಿಧಾನಸಭಾ ಚುನಾವಣೆಯಲ್ಲಿ ಆರಿಸಿಬಂದಿರುವ 224 ಶಾಸಕರ ಪೈಕಿ 215 ಮಂದಿ (ಅಂದರೆ ಶೇ 97ರಷ್ಟು) ಕೋಟ್ಯಧಿಪತಿಗಳು ಎಂದು ಕೆಇಡಬ್ಲ್ಯು ಮತ್ತು ಎಡಿಆರ್‌ ವಿಶ್ಲೇಷಣೆ ಹೇಳುತ್ತಿದೆ. ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರಗಳಿಂದ ಆರಿಸಿ ತೆಗೆಯಲಾದ ಅಂಕಿ-ಸಂಖ್ಯೆ ಗಳಿವು. ಈ ವಿಶ್ಲೇಷಣೆಯ ಪ್ರಕಾರ, ಕರ್ನಾಟಕದ ಒಬ್ಬ ಶಾಸಕನ ಸರಾಸರಿ ಸಂಪತ್ತು ₹34.59 ಕೋಟಿ!

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು

ವಾಸ್ತವ ಹೀಗಿರುವಾಗ, ಕೋಟಿಗಳಲ್ಲಿ ತೂಗುವ ಈ ಜನಗಳು ಕೆಲವೇ ಸಾವಿರ ರೂಪಾಯಿಗಳ ಆಸೆಗೆ ಸದನದಲ್ಲಿ ತಮ್ಮ ಸಂಬಳವನ್ನು ಶೇ 50ರ ತನಕ ಹೆಚ್ಚಿಸಿಕೊಳ್ಳುತ್ತಿರುವುದು ಬಹಳ ಶೋಚನೀಯ ಸ್ಥಿತಿ. ಮೃಷ್ಟಾನ್ನ ಉಣ್ಣುವವರಿಗೆ ಈ ಭಿಕ್ಷಾನ್ನದ ತಹತಹ ಏಕೆ? ಹೀಗೆ ಸಂಬಳ ಹೆಚ್ಚಿಸಿಕೊಳ್ಳುತ್ತಿರುವ ಈ ಜನಪ್ರತಿನಿಧಿಗಳು ತಮಗೆ ಬೇರಾವುದೇ ಮೂಲದಿಂದ ವರಮಾನ ಇಲ್ಲ ಎಂದು ಖಚಿತಪಡಿಸಬಲ್ಲರೆ? ಜನಪ್ರತಿನಿಧಿಗಳಿಗೆ ಶೇ 10ರಿಂದ ಶೇ 40ರತನಕ ಕಮಿಷನ್ ನೀಡಿ ಕಾಮಗಾರಿಗಳನ್ನು ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರು ಇತ್ತೀಚೆಗೆ ಬಹಿರಂಗವಾಗಿ ಹೇಳಿಕೊಂಡರೂ, ಏನೂ ಮಾಡಲಾಗದ ಸಾರ್ವಜನಿಕ ಬದುಕು ರಾಜ್ಯದ್ದು. ಈಗ ಅದೇ ಜನಪ್ರತಿನಿಧಿಗಳು ಪಕ್ಷಭೇದ ಮರೆತು, ಯಾವುದೇ ಚರ್ಚೆ ಇಲ್ಲದೆ ಕೆಲವೇ ನಿಮಿಷಗಳಲ್ಲಿ, ರಾಜ್ಯದ ಬೊಕ್ಕಸದ ಮೇಲೆ ಪರಿಣಾಮ ಬೀರಬಲ್ಲ ಮಸೂದೆಯೊಂದನ್ನು ಜಾರಿ ಮಾಡಿಕೊಂಡಿದ್ದಾರೆ. ಸಂವಿಧಾನದ ಗೌರವವನ್ನು ಎತ್ತಿ ಹಿಡಿಯಬೇಕಾದ ಸದನಗಳ ಸ್ಪೀಕರ್‌ಗಳು ಅದಕ್ಕೆ ಕಣ್ಣುಮುಚ್ಚಿ ಹಾದಿ ಮಾಡಿಕೊಟ್ಟಿದ್ದಾರೆ. ಈ ಸನ್ನಿವೇಶದಲ್ಲಿ ರಾಜ್ಯದ ಜನತೆಯದು ಕೇವಲ ಅಸಹಾಯಕತೆ. ಇದು ಪ್ರಜಾತಂತ್ರದ ಅಪಹಾಸ್ಯ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರ ಎನ್ನದೇ ವಿಧಿಯಿಲ್ಲ.

ಸಂಬಳ ಕಡಿತ ಕೂಡ ಮಾಡಿಕೊಂಡಿದ್ದರು!: ಜನಪ್ರತಿನಿಧಿಗಳು ತಮ್ಮ ಸಂಬಳ ತಾವೇ ಜಾಸ್ತಿ ಮಾಡಿಕೊಳ್ಳುವ ಈ ಪರಿಪಾಟ ಇದೇನೂ ಹೊಸದಲ್ಲ. 1957ರಲ್ಲಿ ಜಾರಿಗೆ ಬಂದ ಈ ‘ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1956’ ಕಾಯ್ದೆಯು ಶಾಸಕರ ಸಂಬಳ, ಪಿಂಚಣಿ ಮತ್ತು ಭತ್ಯೆ ಹೆಚ್ಚಳಗಳಿಗೆ ಸಂಬಂಧಿಸಿದಂತೆ ಇಲ್ಲಿಯ, ತನಕ 43 ತಿದ್ದುಪಡಿಗಳನ್ನು ಮತ್ತು ಸಚಿವರ, ಸದನದ ಸ್ಪೀಕರ್‌ಗಳ ಸಂಬಳ ಹಾಗೂ ಭತ್ಯೆ ಹೆಚ್ಚಳಗಳಿಗೆ ಸಂಬಂಧಿಸಿದಂತೆ 16 ತಿದ್ದುಪಡಿಗಳನ್ನು ಕಂಡಿದೆ. 65 ವರ್ಷಗಳ ಇತಿಹಾಸ ಇರುವ ಈ ಕಾಯ್ದೆಗೆ ಒಂದು ಬಾರಿ ಮಾತ್ರ (ಅದೂ ತಾತ್ಕಾಲಿಕವಾಗಿ) ಸಂಬಳ ಹಾಗೂ ಭತ್ಯೆಗಳನ್ನು ಕಡಿತಗೊಳಿಸುವ ತಿದ್ದುಪಡಿ ನಡೆದಿದೆ. ಅದು ಜಾರಿಗೊಂಡದ್ದು 2020ರ ಅಕ್ಟೋಬರ್ ತಿಂಗಳಿನಲ್ಲಿ; ಕೋವಿಡ್ ಫಲಶ್ರುತಿಯಾಗಿ. ಸುಗ್ರೀವಾಜ್ಞೆಯ ಮೂಲಕ ಜಾರಿಗೊಂಡ ಈ ತಿದ್ದುಪಡಿಯಲ್ಲಿ, 2020ರ ಏಪ್ರಿಲ್ ಒಂದರಿಂದ ಒಂದು ವರ್ಷದ ಅವಧಿಗೆ ವಿಧಾನಮಂಡಲದ ಎಲ್ಲರ ಸಂಬಳ-ಭತ್ಯೆಗಳನ್ನು ಶೇ 30ರಷ್ಟು ಕಡಿತಗೊಳಿಸಲಾಗಿತ್ತು.

ಭಾರಿ ಪ್ರಚಾರದೊಂದಿಗೆ ಹೀಗೆ ಕಡಿತಗೊಳಿಸುವಾಗಲೂ ಅದು ಅರೆಕಾಸಿನ ಮಜ್ಜಿಗೆ ಅನ್ನಿಸಿತ್ತು. ‘ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಬಹುದಾದ ಸನ್ನಿವೇಶವನ್ನು ನಿಭಾಯಿಸಲು, ತುರ್ತು ಅಗತ್ಯಗಳನ್ನು ಪೂರೈಸಲು ಈ ಕಡಿತ ಮಾಡಲಾಗುತ್ತಿದೆ ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಆದರೆ, ಇಂತಹದೊಂದು ಕ್ರಮದಿಂದ ಸರ್ಕಾರ ಉಳಿಸಿದ್ದು, ಕೇವಲ ₹15.9 ಕೋಟಿ. ಇದು ₹2,37,893 ಕೋಟಿ ಗಾತ್ರದ ಕರ್ನಾಟಕದ ವಾರ್ಷಿಕ ಬಜೆಟ್ ವೆಚ್ಚಕ್ಕೆ ಹೋಲಿಸಿದರೆ, ಅದರ ಕೇವಲ ಶೇ 0.007ರಷ್ಟು ಭಾಗ ಮಾತ್ರ! ಮುಂದೆಂದಾದರೂ ಕೋವಿಡ್ ಕಾಲದಲ್ಲಿ ನಡೆದ ಹಗರಣಗಳ ಲೆಕ್ಕ ತೆಗೆದರೆ, ಇದೆಂತಹ ಕ್ಷುಲ್ಲಕ ನಾಟಕ ಎಂಬುದು ಬಹಿರಂಗಗೊಳ್ಳಬಹುದು.

ಅಗತ್ಯ ಇರುವಲ್ಲಿ ಕೊಟ್ಟರೆ?: ಕೈಯಲ್ಲಿ ಧಂಡಿಯಾಗಿ ಕಾಸಿದ್ದು, ಹೀಗೆ ಸಂಬಳ-ಭತ್ಯೆ ಜಾಸ್ತಿ ಮಾಡಿಕೊಂಡರೆ ಅದಕ್ಕೆ ಆಕ್ಷೇಪ ಹೇಳುವುದು ಕಷ್ಟ. ಆದರೆ ಇದು ಹೊಟ್ಟೆಗೆ ಹಿಟ್ಟಿಲ್ಲದೆ ಇರುವುದು ಗೊತ್ತಿದ್ದೂ, ಕೇವಲ ತಮ್ಮ ಜುಟ್ಟಿಗೆ ಮಲ್ಲಿಗೆ ಏರಿಸಿಕೊಳ್ಳುವ ಕೆಲಸ. ರಾಜ್ಯದ ಹಣಕಾಸು ಜವಾಬ್ದಾರಿಗಳ ಕಾಯ್ದೆಯ ಪ್ರಕಾರ, ರಾಜ್ಯದ ಬಜೆಟ್ ಹಣಕಾಸಿನ ಕೊರತೆ ಶೇ 3ರಷ್ಟನ್ನು ಮೀರುವಂತಿಲ್ಲ. ಆದರೆ 20-21ನೇ ಸಾಲಿನ ಪರಿಷ್ಕೃತ ಹಣಕಾಸು ಕೊರತೆ ಅದನ್ನು ಮೀರಿ, ಶೇ 3.5ರ ಆಸುಪಾಸಿನಲ್ಲಿದೆ. ಸರ್ಕಾರದ ಹಣಕಾಸಿನ ಭಾಧ್ಯತೆಗಳು 2021-22ನೇ ಸಾಲಿಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ 26.9ರ ಸಮೀಪ ತಲುಪಿದೆ. ರಾಜ್ಯದ ಸಾಲ 2019-20ರಲ್ಲಿ ₹50,459 ಕೋಟಿಗಳಿದ್ದದ್ದು 2020-21ನೇ ಸಾಲಿಗೆ ₹70,672 ಕೋಟಿಗಳಿಗೆ ಏರಿದ್ದು, ಶೇ 33ರಷ್ಟು ಹೆಚ್ಚಳ ಕಂಡಿದೆ.

ಒಂದು ರಾಜ್ಯ ಸರ್ಕಾರದ ಸಾಲದ ಮರುಪಾವತಿ ಪ್ರಮಾಣವು ಆ ರಾಜ್ಯದ ಆದಾಯದ ಶೇ 10ರಷ್ಟನ್ನು ಮೀರದಿರುವುದು ಆರೋಗ್ಯಕರ ಸ್ಥಿತಿ ಎಂದು ರಿಸರ್ವ್ ಬ್ಯಾಂಕ್‌ ಹೇಳಿದ್ದರೆ, ಕರ್ನಾಟಕದ 21-22ನೇ ಸಾಲಿನ ಬಡ್ಡಿ ಪಾವತಿಯು ರಾಜ್ಯ ಸರ್ಕಾರದ ಆದಾಯದ ಶೇ 16ರಷ್ಟಾಗಿದೆ ಎಂದು ರಾಜ್ಯಗಳ ಹಣಕಾಸು ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದ ‍ಪಿಆರ್‌ಎಸ್‌ ಕಳೆದ ವರ್ಷದ ಅಂತ್ಯದಲ್ಲಿ ವಿಶ್ಲೇಷಿಸಿದೆ.

ಇದಕ್ಕಿಂತ ಆತಂಕಕಾರಿ ಎಂದರೆ, ಸರ್ಕಾರಿ ಸೊತ್ತುಗಳ ಖಾಸಗೀಕರಣದ ಮೂಲಕ ಬಂದ ಹಣವೂ ಇಂತಹ ಗುಂಡಿ ಮುಚ್ಚಲು ಬಳಕೆ ಆಗುತ್ತಿರುವುದು. 2021-22ನೇ ಸಾಲಿಗೆ, ಕೋವಿಡ್ ಆತಂಕದ ನಿರ್ವಹಣೆಗೆ ಸಂಪನ್ಮೂಲ ಕ್ರೋಡೀಕರಿಸಲು ಕರ್ನಾಟಕದಲ್ಲಿ ಸರ್ಕಾರಿ ಭೂಮಿಗಳ ಖಾಸಗೀಕರಣದಿಂದ (ಮಾರಾಟ ಅಥವಾ ದೀರ್ಘಕಾಲಿಕ ಗುತ್ತಿಗೆ) ₹36 ಕೋಟಿಗಳನ್ನು ಸ್ವೀಕರಿಸಲಾಗಿದೆ (ಆಧಾರ: ಪಿಆರ್‌ಎಸ್‌ ವಿಶ್ಲೇಷಣೆ). ಇವೆಲ್ಲವೂ ಬೊಟ್ಟುಮಾಡುತ್ತಿರುವುದು ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದರ ಕಡೆಗೇ.

ಕೋವಿಡ್ ಕಾಲದಲ್ಲಿ ಜನಸಾಮಾನ್ಯರ ಹಸಿವು ತಣಿಸಿದ್ದ ನರೇಗಾ ಯೋಜನೆಯಡಿ ಜನರಿಗೆ ಕೂಲಿ ನೀಡಲು ವಿಳಂಬ ಆಗುತ್ತಿದೆ, ಕೋವಿಡ್ ಕರ್ತವ್ಯದಲ್ಲಿರುವ ಹಲವು ರಾಜ್ಯ ಸರ್ಕಾರಿ ಸಿಬ್ಬಂದಿಗಳ ವೇತನ, ಭತ್ಯೆಗಳು ವಿಳಂಬವಾಗುತ್ತಿರುವ ಬಗ್ಗೆ ವರದಿಗಳು ಕಾಣಿಸಿಕೊಳ್ಳುತ್ತಿವೆ. ಅಗತ್ಯ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹಣಕಾಸಿನ ಹೊಂದಿಕೆಯಲ್ಲಿ ವಿಳಂಬ ಆಗುತ್ತಿದೆ. ಇದೆಲ್ಲದರ ಜೊತೆ, ಸರ್ಕಾರದ ಆದಾಯದಲ್ಲಿ ಸತತವಾಗಿ ಇಳಿತ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಬಳಿಕ ಸರ್ಕಾರದ ವರಮಾನ ಮತ್ತಷ್ಟು ಕುಸಿದಿದೆ. ಹೀಗೆ ಎಲ್ಲರೂ ಕೈ-ಬಾಯಿ ನೋಡುವ ಸನ್ನಿವೇಶ ಎದುರಿರುವಾಗ ಒಂದು ಶಾಸಕಾಂಗ ವ್ಯವಸ್ಥೆ, ತನ್ನನ್ನು ಯಾವುದೇ ಚರ್ಚೆಯ ನಿಕಷಕ್ಕೆ ಒಡ್ಡಿಕೊಳ್ಳದೆ ತನ್ನ ಸಂಬಳವನ್ನು ಹೆಚ್ಚಿಸಿಕೊಳ್ಳುವುದು ತೀರಾ ಅನೈತಿಕವೆನ್ನಿಸುತ್ತದೆ.

ಲೇಖಕ: ಸಾಮಾಜಿಕ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT