ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶ್ರೀಕಾಂತ್ ಚಾರಿತ್ರಿಕ ಸಾಧನೆ ಭರವಸೆಯ ಬೆಳಕು ಲಕ್ಷ್ಯ

Last Updated 20 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕಿದಂಬಿ ಶ್ರೀಕಾಂತ್ ಅವರು ಐತಿಹಾಸಿಕ ಸಾಧನೆ ಮೆರೆದರು. ಸ್ಪೇನ್‌ನ ಯುವೆಲಾದಲ್ಲಿ ನಡೆದ ಟೂರ್ನಿಯಲ್ಲಿ ಹೋದ ಬಾರಿಯ ಚಾಂಪಿಯನ್ ಪಿ.ವಿ. ಸಿಂಧು ಎಂಟರ ಘಟ್ಟದಲ್ಲಿ ಸೋತ ನಿರಾಶೆಯನ್ನು ಶ್ರೀಕಾಂತ್‌ ಮರೆಸಿದರು. ಅಲ್ಲದೇ ಭಾರತದ ಪುರುಷರ ಬ್ಯಾಡ್ಮಿಂಟನ್‌ ಬೆಳವಣಿಗೆಯ ದೃಷ್ಟಿಯಿಂದ ಇನ್ನಷ್ಟು ಭರವಸೆ ಮೂಡಿಸಿದರು. ಕಂಚಿನ ಪದಕ ಗೆದ್ದ ಲಕ್ಷ್ಯ ಸೇನ್ ಕೂಡ ಶ್ರೀಕಾಂತ್ ಅವರೊಂದಿಗೆ ಸಂಭ್ರಮಕ್ಕೆ ಇನ್ನಷ್ಟು ಮೆರುಗು ಮೂಡಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸದಲ್ಲಿ ಪುರುಷರ ವಿಭಾಗದಲ್ಲಿ ಭಾರತಕ್ಕೆ ಸಂದ ನಾಲ್ಕನೇ ಪದಕ ಇದಾಗಿದೆ. ಇಷ್ಟು ಸುದೀರ್ಘ ಅವಧಿಯಲ್ಲಿ ಫೈನಲ್ ತಲುಪಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಶ್ರೀಕಾಂತ್ ಅವರದ್ದಾಗಿದೆ. 1983ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2019ರಲ್ಲಿ ಬಿ. ಸಾಯಿಪ್ರಣೀತ್ ಕಂಚಿನ ಪದಕ ಗೆದ್ದಿದ್ದರು. ಈ ವರ್ಷದಲ್ಲಿ ಇಬ್ಬರು ಪದಕಗಳನ್ನು ಗೆದ್ದಿರುವುದು ಕೂಡ ದಾಖಲೆ.

ಈ ಬಾರಿ ನಾಲ್ಕರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ಮತ್ತು ಲಕ್ಷ್ಯ ಮುಖಾಮುಖಿಯಾಗಿದ್ದು ಕೂಡ ವಿಶೇಷ. ತಮಗಿಂತಲೂ ಎಂಟು ವರ್ಷ ದೊಡ್ಡವರಾದ ಶ್ರೀಕಾಂತ್ ವಿರುದ್ಧ ಸೆಣಸಿದ 20 ವರ್ಷದ ಲಕ್ಷ್ಯ ಆಟ ಕೌಶಲಪೂರ್ಣವಾಗಿತ್ತು. ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳೂ ಅವರಲ್ಲಿವೆ. ದಿಗ್ಗಜ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಹಲವು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಶ್ರೀಕಾಂತ್ ಅವರಿಗೆ ಈ ಪದಕ ಹೊಸ ಚೈತನ್ಯ ನೀಡುವ ಎಲ್ಲ ಸಾಧ್ಯತೆಗಳು ಇವೆ. ಏಕೆಂದರೆ ಈ ವರ್ಷ ಅವರಿಗೆ ಅಷ್ಟೊಂದು ಒಳ್ಳೆಯ ಫಲಿತಾಂಶಗಳು ಲಭಿಸಿರಲಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಗಿಟ್ಟಿಸದೇ ನಿರಾಶೆಗೊಂಡಿದ್ದರು.

ಕೋವಿಡ್ ಕಾಲಘಟ್ಟದಲ್ಲಿ ಟೂರ್ನಿಗಳ ಆಯೋಜನೆಯಲ್ಲಿ ಆದ ಏರುಪೇರು ಮತ್ತು ಅದರಿಂದ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದರಿಂದ ಅವರು ಅರ್ಹತೆ ಪಡೆದಿರಲಿಲ್ಲ. ಕಳೆದ ಎರಡು ತಿಂಗಳಲ್ಲಿ ನಡೆದ ಪ್ರಮುಖ ಟೂರ್ನಿಗಳಲ್ಲಿ ಅವರು ನಿರಾಶೆ ಅನುಭವಿಸಿದ್ದೇ ಹೆಚ್ಚು. ಇತ್ತೀಚೆಗೆ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯ ನಾಕೌಟ್ ಹಂತದಲ್ಲಿ ಎಡವಿದ್ದರು. ಅದರಿಂದಾಗಿ ಅವರು ವಿಶ್ವ ಟೂರ್ನಿಯಲ್ಲಿ ಪದಕ ಸಾಧನೆ ಮಾಡುವ ಬಗ್ಗೆ ಹೆಚ್ಚು ನಿರೀಕ್ಷೆಗಳೇನೂ ಇರಲಿಲ್ಲ. ಸ್ಪೇನ್‌ಗೆ ತೆರಳಲು ವೀಸಾ ಸಿಕ್ಕಿದ್ದೂ ಕೊನೆಯ ಕ್ಷಣದಲ್ಲಿ. ಆ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಅವರ ಮನೋಬಲಕ್ಕೆ ಯಶಸ್ಸು ದೊರೆತಿದೆ. ಫೈನಲ್‌ನಲ್ಲಿ ಸಿಂಗಪುರದ ಲೋಹ್ ಕಿನ್ ಯೂ ವಿರುದ್ಧದ ಸೋಲಿನಲ್ಲಿ ಆದ ಲೋಪಗಳನ್ನು ತಿದ್ದಿಕೊಂಡರೆ ಮುಂದಿನ ವರ್ಷದ ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡುವ ಅವಕಾಶ ಅವರಿಗೆ ಇದೆ.

ಈ ಟೂರ್ನಿಯಲ್ಲಿ ಮೂಡಿದ ಮತ್ತೊಂದು ಆಶಾಕಿರಣವೆಂದರೆ ಲಕ್ಷ್ಯ ಸೇನ್. ಉತ್ತರಾಖಂಡದ ಲಕ್ಷ್ಯ ಸಬ್‌ ಜೂನಿಯರ್ ಹಂತದಿಂದಲೂ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತಂದೆ ಡಿ.ಕೆ. ಸೇನ್ ಮತ್ತು ಅನುಭವಿ ಕೋಚ್ ವಿಮಲ್‌ ಕುಮಾರ್ ಅವರುಲಕ್ಷ್ಯಗೆ ಮಾರ್ಗದರ್ಶನ ನೀಡಿದ್ದಾರೆ. ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಲಕ್ಷ್ಯ, ಭಾರತದ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಭವಿಷ್ಯದ ಧ್ವಜಧಾರಿಯಾಗುವ ಭರವಸೆ ಮೂಡಿಸಿದ್ದಾರೆ. ದೇಶದ ಕೆಲವು ಸೀನಿಯರ್ ಆಟಗಾರರು ತಮ್ಮ ವೃತ್ತಿಜೀವನದ ಕೊನೆಯ ಹಂತದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಲಕ್ಷ್ಯ ಅವರಂತಹ ಯುವಪ್ರತಿಭೆ ಬೆಳಕಿಗೆ ಬಂದಿರುವುದು ಶುಭಸೂಚನೆ.

ಚೀನಾ, ಕೊರಿಯಾ ಮತ್ತು ಜಪಾನ್ ಆಟಗಾರರ ಪ್ರಾಬಲ್ಯ ಹೆಚ್ಚಿರುವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಒಂದು ದಶಕದಿಂದ ಭಾರತ ಛಾಪು ಮೂಡಿಸುತ್ತಿದೆ. ಈ ಅವಧಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ 10 ಪದಕಗಳು ದೇಶದ ಮಡಿಲು ಸೇರಿವೆ. ಅದರಲ್ಲಿ ಮಹಿಳೆಯರದ್ದೇ ಸಿಂಹಪಾಲು. 2011ರಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಡಬಲ್ಸ್ ವಿಭಾಗದಲ್ಲಿ ಕಂಚು ಗೆದ್ದಿತು. ಅದಾದ ನಂತರ ಸಿಂಗಲ್ಸ್‌ನಲ್ಲಿ ಸಿಂಧು ಎರಡು ಕಂಚು, ಎರಡು ಬೆಳ್ಳಿ ಮತ್ತು ಒಂದು ಚಿನ್ನದ ಪದಕ ಗೆದ್ದರು.

ಸೈನಾ ನೆಹ್ವಾಲ್ ಒಂದು ಬೆಳ್ಳಿ ಮತ್ತು ಒಂದು ಕಂಚು ಗಳಿಸಿದರು. ಸೂಪರ್ ಸೀರಿಸ್ ಟೂರ್ನಿಗಳ ಸಂಖ್ಯೆಯಲ್ಲಿ ಹೆಚ್ಚಳ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಪೈಪೋಟಿ, ದೇಶದಲ್ಲಿ ತರಬೇತಿಗೆ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಪ್ರೋತ್ಸಾಹದ ಹೆಚ್ಚಳದಿಂದಾಗಿ ಈ ಸಾಧನೆ ಸಾಧ್ಯವಾಗುತ್ತಿದೆ. ವಿದೇಶಿ ಕೋಚ್‌ಗಳ ನೆರವು ಸುಲಭವಾಗಿ ಲಭಿಸುತ್ತಿರುವುದರಿಂದ ಆಟಗಾರರ ಕೌಶಲದಲ್ಲಿ ಸುಧಾರಣೆ ಕಂಡುಬರುತ್ತಿದೆ. ಫಿಟ್‌ನೆಸ್‌ ಮಟ್ಟವೂ ಹೆಚ್ಚುತ್ತಿದೆ. ಆದರೆ, ಟೋಕಿಯೊ ಒಲಿಂಪಿಕ್ಸ್‌ ಸೇರಿದಂತೆ ಇತ್ತೀಚಿನ ಕೆಲವು ಪ್ರಮುಖ ಟೂರ್ನಿಗಳಲ್ಲಿ ಸಿಂಧು ನಾಕೌಟ್‌ ಹಂತದಲ್ಲಿ ಎಡವಿದ್ದು ಹೆಚ್ಚು. ಅದರಲ್ಲೂ ಚೀನಾ ತೈಪೆಯ ತೈಜು ಯಿಂಗ್‌ ವಿರುದ್ಧ ಅವರು ಸತತವಾಗಿ ಸೋಲನುಭವಿಸುತ್ತಿದ್ದಾರೆ. ಇದರಿಂದಾಗಿ ಚಿನ್ನದ ಪದಕ ಅವರಿಂದ ದೂರ ಉಳಿಯುತ್ತಿದೆ.

ಶ್ರೀಕಾಂತ್ ಕೂಡ ಫೈನಲ್‌ನಲ್ಲಿ ಇನ್ನಷ್ಟು ಜಿಗುಟುತನದ ಹೋರಾಟ ತೋರಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲಿ ಸಾಧನೆ ತೃಪ್ತಿಕರವಾಗಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ನೀಡುವತ್ತ ತರಬೇತುದಾರರು ಚಿತ್ತಹರಿಸುವುದು ಅನಿವಾರ್ಯ. ಇದರಿಂದ ಹೊಸ ವರ್ಷದಲ್ಲಿ ಮತ್ತಷ್ಟು ಸಂಭ್ರಮದ ಹೊನಲು ಹರಿಯುವ ಕನಸು ಕೈಗೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT