<blockquote>ವಿಧಾನಮಂಡಲ ಅಧಿವೇಶನ ರಾಜಕೀಯ ಪ್ರಹಸನಗಳ ಆಡುಂಬೊಲವಾಗಿದೆ. ರಾಜಕೀಯ ನಾಯಕರ ಅಸಭ್ಯ ಹಾಗೂ ದ್ವೇಷದ ಮಾತುಗಳಿಂದ ಸದನದ ಘನತೆಗೆ ಹಾನಿಯಾಗಿದೆ.</blockquote>.<p>ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಅವರ ರಾಷ್ಟ್ರೀಯತೆಯನ್ನು ಪರೋಕ್ಷವಾಗಿ ಪ್ರಶ್ನಿಸಿದ ಹೇಳಿಕೆಗೆ ಕ್ಷಮೆ ಕೋರಲು ನಿರಾಕರಿಸಿರುವ ಕಾರಣದಿಂದಾಗಿ ಸದನದಿಂದ ಒಂದು ದಿನದ ಅವಧಿಗೆ ಅಮಾನತುಗೊಂಡಿದ್ದಾರೆ. ಈ ಘಟನೆ, ರಾಜ್ಯದ ವಿಧಾನಮಂಡಲದಲ್ಲಿನ ಚರ್ಚೆಗಳು ತಲಪಿರುವ ಅಧೋಗತಿಗೆ ಸಂಕೇತದಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ತಮ್ಮ ಹೇಳಿಕೆಗಳಿಗೆ ನಸೀರ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ ನಂತರವೂ, ಸಭಾಧ್ಯಕ್ಷರ ಆದೇಶವನ್ನು ಮತ್ತೆ ಮತ್ತೆ ಉಲ್ಲಂಘಿಸುವುದನ್ನೇ ರವಿ ತಮ್ಮ ಆಯ್ಕೆಯನ್ನಾಗಿಸಿಕೊಂಡರು. ಈ ನಡವಳಿಕೆ ಆಕಸ್ಮಿಕ ಅಥವಾ ಅನುದ್ದೇಶಿತ ಎಂದು ಭಾವಿಸಲಾಗದು. ಒಂದು ವರ್ಷದ ಹಿಂದೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಉದ್ದೇಶಿಸಿ ಸದನದಲ್ಲಿ ಅಶ್ಲೀಲ ಹಾಗೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಗಂಭೀರ ಆರೋಪಕ್ಕೆ ಸಿ.ಟಿ. ರವಿ ಗುರಿಯಾಗಿದ್ದರು. </p><p>ಆದರೆ, ಇಂಥ ನೈತಿಕ ಅಧಃಪತನ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಸೀಮಿತವಾದುದಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ವಿರೋಧ ಪಕ್ಷದ ಸದಸ್ಯರನ್ನುದ್ದೇಶಿಸಿ ಬಳಸಿದ ಅವಹೇಳನಕಾರಿ ಶಬ್ದಗಳು ಹಾಗೂ ಏಕವಚನ ಪ್ರಯೋಗವು ಸದನದ ಗೌರವ ಎತ್ತಿಹಿಡಿಯುವಂತಹದ್ದೇನಾಗಿರಲಿಲ್ಲ. ಶಾಸಕರ ಕುಟುಂಬದ ಸದಸ್ಯರನ್ನು ಪ್ರಸ್ತಾಪಿಸಿ ಅವರು ನಡೆಸಿದ ದಾಳಿ ಅಗ್ಗದ ಅಭಿರುಚಿಯಿಂದ ಕೂಡಿತ್ತು. ಅವರ ಬೀದಿರಂಪದ ಆಕ್ರೋಶ ಹಾಗೂ ಕೀಳು ಮಾತುಗಳು ಸದನದ ಚರ್ಚೆಗಳು ಮುಟ್ಟಿರುವ ಅಧಃಪತನದ ಸಂಕೇತದಂತಿದ್ದವು. ಉಮಾಶ್ರೀ ಅವರನ್ನು ಕುರಿತಂತೆ ವಿಧಾನ ಪರಿಷತ್ ಸಭಾಧ್ಯಕ್ಷರು ಆಡಿದ ಮಾತುಗಳೂ ಸದಭಿರುಚಿಯಿಂದ ಕೂಡಿರಲಿಲ್ಲ ಹಾಗೂ ಲಿಂಗಸೂಕ್ಷ್ಮತೆ ಒಳಗೊಂಡಿರಲಿಲ್ಲ. ದ್ವೇಷಭಾಷಣ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಉತ್ಸುಕವಾಗಿರುವ ಸಂದರ್ಭದಲ್ಲಿ, ಪ್ರಜಾಪ್ರತಿನಿಧಿಗಳ ಕಲಾಪಗಳೇ ದ್ವೇಷಭಾಷಣಗಳ ಕಮ್ಮಟಗಳಾಗಿ ರೂಪುಗೊಂಡಿರುವುದು ವಿಷಾದಕರ ಬೆಳವಣಿಗೆ.</p>.<p>ವಾದಕ್ಕೆ ಪ್ರತಿವಾದ ಮಂಡಿಸುವ ಬದಲು ಪ್ರಚೋದನೆ ಹಾಗೂ ಬೈಗುಳವೇ ಸಂವಾದಕ್ಕೆ ಸರಿಯಾದ ನೀತಿ ಎನ್ನುವಂತಾಗಿರುವುದು ದುರದೃಷ್ಟಕರ. ಇದು, ಕರ್ನಾಟಕ ವಿಧಾನಮಂಡಲ ಕಂಡಿದ್ದ ಅತ್ಯುನ್ನತ ಮಟ್ಟದ ಬೌದ್ಧಿಕ ಹಾಗೂ ವಾಗ್ವಾದ ಪರಂಪರೆಯು ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುವಂತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ಗಂಟಲಿನ ಶಕ್ತಿಗಿಂತಲೂ ಕಾನೂನು ಸಂಹಿತೆ, ಅಂಕಿಅಂಶಗಳು ಹಾಗೂ ಅಧಿಕೃತ ದಾಖಲೆಗಳೇ ಮುಖ್ಯವಾಗಿದ್ದವು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರು ಪೂರ್ವಸಿದ್ಧತೆಯೊಂದಿಗೆ ಆಗಮಿಸಿ, ಗಂಟೆಗಟ್ಟಲೆ ವಿದ್ವತ್ಪೂರ್ಣವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ವ್ಯಂಗ್ಯ ಹಾಗೂ ವಿಡಂಬನೆ ಚರ್ಚೆಯ ಭಾಗವಾಗಿದ್ದರೂ, ಅದು ಯಾರನ್ನೂ ನೋಯಿಸುವಂತಿರಲಿಲ್ಲ; ಆಯುಧದಂತೆ ಬಳಕೆಯಾಗುತ್ತಿರಲಿಲ್ಲ; ವೈಯಕ್ತಿಕ ತೇಜೋವಧೆಯ ಉದ್ದೇಶ ಹೊಂದಿರುತ್ತಿರಲಿಲ್ಲ. ಗೌರವಪೂರ್ಣ ಸಂಬೋಧನೆ ಹಾಗೂ ಹದ್ದುಮೀರದ ಭಾಷೆ ಸದನದ ಘನತೆಯ ದ್ಯೋತಕವಾಗಿದ್ದವು. </p><p>ನ್ಯಾಯಾಲಯದ ಕಲಾಪ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೆಮಿನಾರ್ಗಳಂತೆ ಸದನದಲ್ಲಿನ ಮಾತುಕತೆಗಳೂ ಗಂಭೀರವಾಗಿ ನಡೆಯುತ್ತಿದ್ದವು. ಆ ಸಂಸ್ಕೃತಿ ಈಗ ಮರೆಯಾಗಿದ್ದು, ಸದನಗಳಲ್ಲಿನ ಚರ್ಚೆಗಳು ದ್ವೇಷಭಾಷಣದ ಸ್ವರೂಪ ಪಡೆದುಕೊಂಡಿರುವುದು ದುರದೃಷ್ಟಕರ. ಈ ಬೆಳವಣಿಗೆ ಸಾಂಸ್ಥಿಕ ಮೌಲ್ಯಗಳಲ್ಲಿ ಆಗಿರುವ ಆಳವಾದ ಸವಕಳಿಯ ಫಲಶ್ರುತಿಯಾಗಿದೆ.</p>.<p>ಉನ್ನತ ಮಟ್ಟದ ಚರ್ಚೆಯ ಮಾನದಂಡಗಳನ್ನು ಗುರುತಾಗಿ ಹೊಂದಿದ್ದ ಕರ್ನಾಟಕ ವಿಧಾನಮಂಡಲವು ತನ್ನ ಘನತೆಯನ್ನು ಮರುಸ್ಥಾಪಿಸಿಕೊಳ್ಳಬೇಕಾದ ತುರ್ತನ್ನು ಎದುರಿಸುತ್ತಿದೆ. ಸದನದ ಭಾಷೆ ಹಾಗೂ ನಡವಳಿಕೆಯಲ್ಲಿ ಆಗಿರುವ ಬದಲಾವಣೆಯು ಶಿಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರವಾಗಿರದೆ, ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದೂ ಆಗಿದೆ. ಕೋಮು ಪ್ರಚೋದನೆ, ಅಸಭ್ಯ ಭಾಷೆ ಹಾಗೂ ವೈಯಕ್ತಿಕ ದ್ವೇಷಕ್ಕೆ ಸದನ ಅವಕಾಶ ಮಾಡಿಕೊಟ್ಟಾಗ, ಸಾರ್ವಜನಿಕ ಸಂವಾದದ ಬದಲು ಅದೊಂದು ಪ್ರಹಸನದಂತೆ ಕಾಣಿಸತೊಡಗುತ್ತದೆ. ಸದನದಲ್ಲಿನ ಚರ್ಚೆಗಳನ್ನು ಬೀದಿಜಗಳದ ಮಟ್ಟಕ್ಕೆ ಇಳಿಸುವುದು ಪ್ರಜಾಪ್ರತಿನಿಧಿಗಳು ತಮ್ಮ ಮತದಾರರಿಗೆ ಮಾಡುವ ವಿಶ್ವಾಸದ್ರೋಹವಾಗಿದೆ ಹಾಗೂ ಸದನದ ಪರಂಪರೆಗೆ ಎಸಗುವ ಅವಮಾನವಾಗಿದೆ. </p><p>ಸರ್ಕಾರದ ನೀತಿ, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದನ ವೇದಿಕೆಯಾಗಬೇಕೆಂದು ಅಪೇಕ್ಷಿಸುವ ಎಲ್ಲ ಹಕ್ಕು ನಾಗರಿಕರಿಗಿದೆ. ಸದನದಲ್ಲಿ ಶಿಸ್ತು ಮತ್ತು ಘನತೆಯನ್ನು ಮರುಸ್ಥಾಪಿಸುವುದು ಶಿಷ್ಟಾಚಾರಕ್ಕೆ ಸಂಬಂಧಿಸಿದ ಸಂಗತಿಯಷ್ಟೇ ಆಗಿರದೆ, ಈಗಾಗಲೇ ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ಘನತೆಯನ್ನು ಕಳೆದುಕೊಳ್ಳುವ ದಾರಿಯಲ್ಲಿರುವ ಶಾಸಕಾಂಗದ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವ ಕ್ರಮವೂ ಆಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಸದನ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ಚರ್ಚೆಗೆ ವೇದಿಕೆ ಆಗಬೇಕೇ ಹೊರತು, ರಾಜಕೀಯ ಪ್ರಹಸನಗಳಿಗಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ವಿಧಾನಮಂಡಲ ಅಧಿವೇಶನ ರಾಜಕೀಯ ಪ್ರಹಸನಗಳ ಆಡುಂಬೊಲವಾಗಿದೆ. ರಾಜಕೀಯ ನಾಯಕರ ಅಸಭ್ಯ ಹಾಗೂ ದ್ವೇಷದ ಮಾತುಗಳಿಂದ ಸದನದ ಘನತೆಗೆ ಹಾನಿಯಾಗಿದೆ.</blockquote>.<p>ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಅವರ ರಾಷ್ಟ್ರೀಯತೆಯನ್ನು ಪರೋಕ್ಷವಾಗಿ ಪ್ರಶ್ನಿಸಿದ ಹೇಳಿಕೆಗೆ ಕ್ಷಮೆ ಕೋರಲು ನಿರಾಕರಿಸಿರುವ ಕಾರಣದಿಂದಾಗಿ ಸದನದಿಂದ ಒಂದು ದಿನದ ಅವಧಿಗೆ ಅಮಾನತುಗೊಂಡಿದ್ದಾರೆ. ಈ ಘಟನೆ, ರಾಜ್ಯದ ವಿಧಾನಮಂಡಲದಲ್ಲಿನ ಚರ್ಚೆಗಳು ತಲಪಿರುವ ಅಧೋಗತಿಗೆ ಸಂಕೇತದಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ತಮ್ಮ ಹೇಳಿಕೆಗಳಿಗೆ ನಸೀರ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ ನಂತರವೂ, ಸಭಾಧ್ಯಕ್ಷರ ಆದೇಶವನ್ನು ಮತ್ತೆ ಮತ್ತೆ ಉಲ್ಲಂಘಿಸುವುದನ್ನೇ ರವಿ ತಮ್ಮ ಆಯ್ಕೆಯನ್ನಾಗಿಸಿಕೊಂಡರು. ಈ ನಡವಳಿಕೆ ಆಕಸ್ಮಿಕ ಅಥವಾ ಅನುದ್ದೇಶಿತ ಎಂದು ಭಾವಿಸಲಾಗದು. ಒಂದು ವರ್ಷದ ಹಿಂದೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಉದ್ದೇಶಿಸಿ ಸದನದಲ್ಲಿ ಅಶ್ಲೀಲ ಹಾಗೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಗಂಭೀರ ಆರೋಪಕ್ಕೆ ಸಿ.ಟಿ. ರವಿ ಗುರಿಯಾಗಿದ್ದರು. </p><p>ಆದರೆ, ಇಂಥ ನೈತಿಕ ಅಧಃಪತನ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಸೀಮಿತವಾದುದಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ವಿರೋಧ ಪಕ್ಷದ ಸದಸ್ಯರನ್ನುದ್ದೇಶಿಸಿ ಬಳಸಿದ ಅವಹೇಳನಕಾರಿ ಶಬ್ದಗಳು ಹಾಗೂ ಏಕವಚನ ಪ್ರಯೋಗವು ಸದನದ ಗೌರವ ಎತ್ತಿಹಿಡಿಯುವಂತಹದ್ದೇನಾಗಿರಲಿಲ್ಲ. ಶಾಸಕರ ಕುಟುಂಬದ ಸದಸ್ಯರನ್ನು ಪ್ರಸ್ತಾಪಿಸಿ ಅವರು ನಡೆಸಿದ ದಾಳಿ ಅಗ್ಗದ ಅಭಿರುಚಿಯಿಂದ ಕೂಡಿತ್ತು. ಅವರ ಬೀದಿರಂಪದ ಆಕ್ರೋಶ ಹಾಗೂ ಕೀಳು ಮಾತುಗಳು ಸದನದ ಚರ್ಚೆಗಳು ಮುಟ್ಟಿರುವ ಅಧಃಪತನದ ಸಂಕೇತದಂತಿದ್ದವು. ಉಮಾಶ್ರೀ ಅವರನ್ನು ಕುರಿತಂತೆ ವಿಧಾನ ಪರಿಷತ್ ಸಭಾಧ್ಯಕ್ಷರು ಆಡಿದ ಮಾತುಗಳೂ ಸದಭಿರುಚಿಯಿಂದ ಕೂಡಿರಲಿಲ್ಲ ಹಾಗೂ ಲಿಂಗಸೂಕ್ಷ್ಮತೆ ಒಳಗೊಂಡಿರಲಿಲ್ಲ. ದ್ವೇಷಭಾಷಣ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಉತ್ಸುಕವಾಗಿರುವ ಸಂದರ್ಭದಲ್ಲಿ, ಪ್ರಜಾಪ್ರತಿನಿಧಿಗಳ ಕಲಾಪಗಳೇ ದ್ವೇಷಭಾಷಣಗಳ ಕಮ್ಮಟಗಳಾಗಿ ರೂಪುಗೊಂಡಿರುವುದು ವಿಷಾದಕರ ಬೆಳವಣಿಗೆ.</p>.<p>ವಾದಕ್ಕೆ ಪ್ರತಿವಾದ ಮಂಡಿಸುವ ಬದಲು ಪ್ರಚೋದನೆ ಹಾಗೂ ಬೈಗುಳವೇ ಸಂವಾದಕ್ಕೆ ಸರಿಯಾದ ನೀತಿ ಎನ್ನುವಂತಾಗಿರುವುದು ದುರದೃಷ್ಟಕರ. ಇದು, ಕರ್ನಾಟಕ ವಿಧಾನಮಂಡಲ ಕಂಡಿದ್ದ ಅತ್ಯುನ್ನತ ಮಟ್ಟದ ಬೌದ್ಧಿಕ ಹಾಗೂ ವಾಗ್ವಾದ ಪರಂಪರೆಯು ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುವಂತಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ಗಂಟಲಿನ ಶಕ್ತಿಗಿಂತಲೂ ಕಾನೂನು ಸಂಹಿತೆ, ಅಂಕಿಅಂಶಗಳು ಹಾಗೂ ಅಧಿಕೃತ ದಾಖಲೆಗಳೇ ಮುಖ್ಯವಾಗಿದ್ದವು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರು ಪೂರ್ವಸಿದ್ಧತೆಯೊಂದಿಗೆ ಆಗಮಿಸಿ, ಗಂಟೆಗಟ್ಟಲೆ ವಿದ್ವತ್ಪೂರ್ಣವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ವ್ಯಂಗ್ಯ ಹಾಗೂ ವಿಡಂಬನೆ ಚರ್ಚೆಯ ಭಾಗವಾಗಿದ್ದರೂ, ಅದು ಯಾರನ್ನೂ ನೋಯಿಸುವಂತಿರಲಿಲ್ಲ; ಆಯುಧದಂತೆ ಬಳಕೆಯಾಗುತ್ತಿರಲಿಲ್ಲ; ವೈಯಕ್ತಿಕ ತೇಜೋವಧೆಯ ಉದ್ದೇಶ ಹೊಂದಿರುತ್ತಿರಲಿಲ್ಲ. ಗೌರವಪೂರ್ಣ ಸಂಬೋಧನೆ ಹಾಗೂ ಹದ್ದುಮೀರದ ಭಾಷೆ ಸದನದ ಘನತೆಯ ದ್ಯೋತಕವಾಗಿದ್ದವು. </p><p>ನ್ಯಾಯಾಲಯದ ಕಲಾಪ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೆಮಿನಾರ್ಗಳಂತೆ ಸದನದಲ್ಲಿನ ಮಾತುಕತೆಗಳೂ ಗಂಭೀರವಾಗಿ ನಡೆಯುತ್ತಿದ್ದವು. ಆ ಸಂಸ್ಕೃತಿ ಈಗ ಮರೆಯಾಗಿದ್ದು, ಸದನಗಳಲ್ಲಿನ ಚರ್ಚೆಗಳು ದ್ವೇಷಭಾಷಣದ ಸ್ವರೂಪ ಪಡೆದುಕೊಂಡಿರುವುದು ದುರದೃಷ್ಟಕರ. ಈ ಬೆಳವಣಿಗೆ ಸಾಂಸ್ಥಿಕ ಮೌಲ್ಯಗಳಲ್ಲಿ ಆಗಿರುವ ಆಳವಾದ ಸವಕಳಿಯ ಫಲಶ್ರುತಿಯಾಗಿದೆ.</p>.<p>ಉನ್ನತ ಮಟ್ಟದ ಚರ್ಚೆಯ ಮಾನದಂಡಗಳನ್ನು ಗುರುತಾಗಿ ಹೊಂದಿದ್ದ ಕರ್ನಾಟಕ ವಿಧಾನಮಂಡಲವು ತನ್ನ ಘನತೆಯನ್ನು ಮರುಸ್ಥಾಪಿಸಿಕೊಳ್ಳಬೇಕಾದ ತುರ್ತನ್ನು ಎದುರಿಸುತ್ತಿದೆ. ಸದನದ ಭಾಷೆ ಹಾಗೂ ನಡವಳಿಕೆಯಲ್ಲಿ ಆಗಿರುವ ಬದಲಾವಣೆಯು ಶಿಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರವಾಗಿರದೆ, ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದೂ ಆಗಿದೆ. ಕೋಮು ಪ್ರಚೋದನೆ, ಅಸಭ್ಯ ಭಾಷೆ ಹಾಗೂ ವೈಯಕ್ತಿಕ ದ್ವೇಷಕ್ಕೆ ಸದನ ಅವಕಾಶ ಮಾಡಿಕೊಟ್ಟಾಗ, ಸಾರ್ವಜನಿಕ ಸಂವಾದದ ಬದಲು ಅದೊಂದು ಪ್ರಹಸನದಂತೆ ಕಾಣಿಸತೊಡಗುತ್ತದೆ. ಸದನದಲ್ಲಿನ ಚರ್ಚೆಗಳನ್ನು ಬೀದಿಜಗಳದ ಮಟ್ಟಕ್ಕೆ ಇಳಿಸುವುದು ಪ್ರಜಾಪ್ರತಿನಿಧಿಗಳು ತಮ್ಮ ಮತದಾರರಿಗೆ ಮಾಡುವ ವಿಶ್ವಾಸದ್ರೋಹವಾಗಿದೆ ಹಾಗೂ ಸದನದ ಪರಂಪರೆಗೆ ಎಸಗುವ ಅವಮಾನವಾಗಿದೆ. </p><p>ಸರ್ಕಾರದ ನೀತಿ, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದನ ವೇದಿಕೆಯಾಗಬೇಕೆಂದು ಅಪೇಕ್ಷಿಸುವ ಎಲ್ಲ ಹಕ್ಕು ನಾಗರಿಕರಿಗಿದೆ. ಸದನದಲ್ಲಿ ಶಿಸ್ತು ಮತ್ತು ಘನತೆಯನ್ನು ಮರುಸ್ಥಾಪಿಸುವುದು ಶಿಷ್ಟಾಚಾರಕ್ಕೆ ಸಂಬಂಧಿಸಿದ ಸಂಗತಿಯಷ್ಟೇ ಆಗಿರದೆ, ಈಗಾಗಲೇ ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ಘನತೆಯನ್ನು ಕಳೆದುಕೊಳ್ಳುವ ದಾರಿಯಲ್ಲಿರುವ ಶಾಸಕಾಂಗದ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವ ಕ್ರಮವೂ ಆಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಸದನ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ಚರ್ಚೆಗೆ ವೇದಿಕೆ ಆಗಬೇಕೇ ಹೊರತು, ರಾಜಕೀಯ ಪ್ರಹಸನಗಳಿಗಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>