ಕಿರಿಯ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ‘ತೆಹೆಲ್ಕಾ’ ಸಂಸ್ಥಾಪಕ ಸಂಪಾದಕ ತರುಣ್ ತೇಜ್ಪಾಲ್ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದ ಈ ಪ್ರಕರಣದ ಕಾನೂನು ಪ್ರಕ್ರಿಯೆ ಇದರಿಂದ ಚುರುಕುಗೊಂಡಂತಾಗಿದೆ.
ಕುಟುಕು ಕಾರ್ಯಾಚರಣೆಗಳ ತನಿಖಾ ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ತೇಜ್ಪಾಲ್ ವಿರುದ್ಧ ಹೊರಿಸಲಾಗಿರುವ ಆರೋಪಗಳು ಗಂಭೀರವಾದವು. ಆದರೆ ಈ ಆರೋಪಗಳನ್ನು ಹಗುರವಾಗಿ ಕಂಡು ತೇಲಿಸಿಬಿಡುವಂತಹ ಹೇಳಿಕೆಗಳನ್ನು ಅವರು ನೀಡಿದ್ದು ಪರಿಸ್ಥಿತಿಯ ವ್ಯಂಗ್ಯ. ‘ಅತಿ ಕೆಟ್ಟ ತಪ್ಪು ನಿರ್ಣಯ ಹಾಗೂ ಪರಿಸ್ಥಿತಿಯ ತಪ್ಪಾದ ಗ್ರಹಿಕೆ’ಯಿಂದ ಈ ಪ್ರಮಾದ ಘಟಿಸಿದೆ ಎಂಬಂತಹ ತೇಜ್ಪಾಲ್ ನುಡಿಗಳು ಈ ದುಷ್ಕೃತ್ಯದ ತೀವ್ರತೆಯನ್ನು ತಗ್ಗಿಸುವ ಧಾಟಿಯದಾಗಿತ್ತು.
ಇದಕ್ಕಾಗಿ ಆರು ತಿಂಗಳ ಕಾಲ ‘ತೆಹೆಲ್ಕಾ’ದ ಸಂಪಾದಕತ್ವದಿಂದ ದೂರ ಉಳಿದು ಪಶ್ಚಾತ್ತಾಪಪಡುವುದಾಗಿ ಕೈಗೊಂಡಿದ್ದಂತಹ ಸ್ವಯಂ ನಿರ್ಧಾರವಂತೂ ಹಾಸ್ಯಾಸ್ಪದ. ಲೈಂಗಿಕ ಹಲ್ಲೆ ಎಂಬುದು ಈ ನಾಡಿನ ಕಾನೂನಿನ ಅನ್ವಯ ಪೊಲೀಸರಿಂದ ತನಿಖೆಯಾಗಿ ಶಿಕ್ಷೆಯಾಗುವಂತಹ ಅಪರಾಧ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇದು ಸಂಸ್ಥೆಯ ‘ಆಂತರಿಕ ವಿಚಾರ’ ಎಂದು ‘ತೆಹೆಲ್ಕಾ’ ವ್ಯವಸ್ಥಾಪಕ ಸಂಪಾದಕಿಯಾಗಿದ್ದ ಶೋಮಾ ಚೌಧರಿ ಬಣ್ಣಿಸಿದ್ದು ಸಹಜವಾಗಿಯೇ ದೊಡ್ಡ ವಿವಾದವಾಯಿತು.
ಅತ್ಯಾಚಾರದಂತಹ ಆರೋಪ ಸಂಸ್ಥೆಯೊಂದರ ಆಂತರಿಕ ವಿಚಾರವಾಗುವುದಾದರೂ ಹೇಗೆ? ಲೈಂಗಿಕ ಕಿರುಕುಳ ದೂರಿನ ವಿಚಾರದಲ್ಲಿ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಎಡವಿದ ಆರೋಪಕ್ಕೊಳಗಾದ ಶೋಮಾ ಚೌಧರಿ ತಮ್ಮ ಹುದ್ದೆಗೂ ರಾಜೀನಾಮೆ ನೀಡುವಂತಾಯಿತು. ಲೈಂಗಿಕ ಕಿರುಕುಳದ ದೂರನ್ನು ನಿರ್ವಹಿಸುವಲ್ಲಿನ ವೈಫಲ್ಯ ಇಲ್ಲಿ ಎದ್ದು ಕಾಣಿಸುತ್ತದೆ. ‘ತೆಹೆಲ್ಕಾ’ದ ಅನೇಕ ಪತ್ರಕರ್ತರೂ ಸಂಸ್ಥೆ ತೊರೆಯಲು ಇದು ನೆಪವಾಯಿತು.
‘ತೇಜ್ಪಾಲ್ ವಿರುದ್ಧದ ದೂರು ಚುನಾವಣಾಪೂರ್ವ ರಾಜಕೀಯ ಸಂಚು’ ಎಂಬಂತಹ ಮಾತುಗಳನ್ನಾಡುತ್ತಾ ಈ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನಗಳು ಈ ಮಧ್ಯೆ ನಡೆದಿವೆ. ಅತ್ಯಾಚಾರ ಅಪರಾಧದಿಂದ ಗಮನವನ್ನು ಬೇರೆಡೆ ಸೆಳೆಯುವ ಇಂತಹ ಪ್ರಯತ್ನಗಳು ನ್ಯಾಯ ಪಡೆಯುವ ಹಾದಿಯಲ್ಲಿ ತೊಡಕಾಗಬಾರದು. ಪ್ರಭಾವಿ ಶಕ್ತಿಗಳ ಒತ್ತಡಗಳು ತನಿಖೆಯ ದಿಕ್ಕನ್ನು ತಪ್ಪಿಸುವಂತಾಗಬಾರದು.
ಇದೇ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರೂ, ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಯಲು 1997ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ‘ವಿಶಾಖಾ’ ಮಾರ್ಗದರ್ಶಿ ಸೂತ್ರಗಳಿವೆ. ಜೊತೆಗೆ ಲೈಂಗಿಕ ಕಿರುಕುಳಗಳ ವಿರುದ್ಧ ಹೊಸ ಕಾನೂನಿಗೆ ರಾಷ್ಟ್ರಪತಿ ಅಂಕಿತ ಬಿದ್ದಿದೆ. ಹೀಗಿದ್ದೂ ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮೆ ಆಗುತ್ತಿಲ್ಲ.
ಇದರ ವಿರುದ್ಧ ದನಿ ಎತ್ತುವುದು ಅಷ್ಟು ಸುಲಭವಲ್ಲ. ಈ ವಿಚಾರದಲ್ಲಿ ಆವರಿಸಿರುವ ಮೌನವನ್ನು ಒಡೆಯುವ ದಿಟ್ಟತನ ಈಗೀಗಷ್ಟೇ ಕಂಡು ಬರುತ್ತಿದೆ. ಲೈಂಗಿಕ ಕಿರುಕುಳಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ದೂರು ಸಮಿತಿಗಳನ್ನು ಸಂಸ್ಥೆಗಳು ಹೊಂದಿರುವುದು ವಿಶಾಖಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಡ್ಡಾಯ. ಆದರೆ ಈ ನಿಯಮ ಎಲ್ಲೆಡೆ ಪಾಲನೆಯಾಗುತ್ತಿಲ್ಲ. ‘ತೆಹೆಲ್ಕಾ’ದ ಅಹಿತಕರ ವಿದ್ಯಮಾನ ಈ ನಿಟ್ಟಿನಲ್ಲಿ ಎಚ್ಚರಿಕೆ ಗಂಟೆಯಾಗಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.