ನವದೆಹಲಿ, ಜ. 15– ಮೈಸೂರು– ಮಹಾರಾಷ್ಟ್ರ ನಡುವಣ 12 ವರ್ಷಗಳ ಗಡಿ ವಿವಾದ ಪರಿಹರಿಸಲು ಮಧ್ಯೆ ಪ್ರವೇಶಿಸಬೇಕೆಂದು ಪುಣೆ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಎಚ್.ವಿ. ಪಾಟಸ್ಕರ್ ಅವರ ನೇತೃತ್ವದಲ್ಲಿ ಇಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರನ್ನು ಭೇಟಿ ಮಾಡಿದ್ದ ಒಂದು ನಿಯೋಗ ಒತ್ತಾಯ ಮಾಡಿತು.
ಶ್ರೀ ಪಾಟಸ್ಕರ್ ಅವರ ಜೊತೆಗೆ ಮೈಸೂರು ವಿಧಾನಸಭೆಯಲ್ಲಿ ಕಾರವಾರ ಮತ್ತು ಬೆಳಗಾವಿ ಪ್ರತಿನಿಧಿಗಳಾಗಿರುವ ಶ್ರೀ ಬಿ.ಪಿ. ಕದಂ ಮತ್ತು ಶ್ರೀ ಪಿ.ಬಿ. ನಂದಿಹಳ್ಳಿ ಅವರೂ ಇದ್ದರು.
ಬಿಹಾರ: ವಿರೋಧಿ ಕಾಂಗ್ರೆಸ್ ಸರ್ಕಾರ ತೀರಾ ಅಸಂಭವ
ಪಟನಾ, ಜ. 15– ಶೋಷಿತ ದಳ, ಹುಲ್ ಜಾರ್ಖಂಡ್ ಮತ್ತು ಜಾರ್ಖಂಡ್ ಪಕ್ಷಗಳು ಈ ಮೊದಲು ನೀಡಿದ್ದ ಬೆಂಬಲವನ್ನು ಈಗಹಿಂತೆಗೆದುಕೊಂಡಿರುವುದರಿಂದ ಬಿಹಾರದಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವ ಅವಕಾಶ ಕಳೆದುಕೊಂಡಂತಾಗಿದೆ.
ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗಿರುವ ಈ ರಾಜ್ಯದಲ್ಲಿ ಸರ್ಕಾರ ರಚಿಸಲು ಐದು ದಿನಗಳ ಯತ್ನದ ನಂತರ ಸ್ಪಷ್ಟವಾಗಿ ಕಂಡುಬಂದ ಫಲಿತಾಂಶ ಇದೊಂದೇ.