ನವದೆಹಲಿ, ಜುಲೈ 5– ಭಾರತೀಯ ಕ್ರಾಂತಿದಳ ಮತ್ತು ಆಡಳಿತ ಕಾಂಗ್ರೆಸ್ ವಿಲೀನ ಪ್ರಶ್ನೆಯನ್ನು ‘ಎಲ್ಲ ದೃಷ್ಟಿಯಿಂದಲೂ ಪರಿಶೀಲಿಸಿ’ ಸಲಹೆ ಸಲ್ಲಿಸುವಂತೆ ದಳದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಇಂದು ಪಕ್ಷದ ಅಧ್ಯಕ್ಷ ಚರಣ್ ಸಿಂಗ್ರವರಿಗೆ ಅಧಿಕಾರ ನೀಡಿತು.
ಬಿ.ಕೆ.ಡಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಇಂದು ಇಲ್ಲಿ ಒಂಬತ್ತು ಗಂಟೆ ಕಾಲ ವಿಲೀನ ಪ್ರಶ್ನೆಯನ್ನು ಚರ್ಚಿಸಿತು. ನಂತರ ಸುದ್ದಿಗಾರರೊಡನೆ ಮಾತನಾಡಿದ ಅಧ್ಯಕ್ಷ ಚರಣ್ ಸಿಂಗ್ ಅವರು ಕಾರ್ಯನಿರ್ವಾಹಕ ಸಮಿತಿಯ ಬಹುತೇಕ ಸದಸ್ಯರ ಪ್ರಥಮ ಪ್ರತಿಕ್ರಿಯೆ ವಿಲೀನಕ್ಕೆ ವಿರೋಧ ವಾಗಿತ್ತೆಂದು ನುಡಿದರು. ಆದರೆ ಈ ಸದಸ್ಯರ ವಿರೋಧ ಅಂತಿಮವಲ್ಲ ಎಂದು ಅವರು ಹೇಳಿದರು.
ಸರ್ಕಾರಿ ಉದ್ಯಮಗಳಲ್ಲಿ ಹೆಚ್ಚುದಕ್ಷ ಆಡಳಿತ ಅಗತ್ಯ: ಭಗತ್ ಒಪ್ಪಿಗೆ
ಪಣಜಿ, ಜುಲೈ 5– ಸರ್ಕಾರಿ ಕ್ಷೇತ್ರದ ಉದ್ಯಮಗಳ ಆಡಳಿತದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯ ಅಭಿವೃದ್ಧಿಗೆ ಅವಕಾಶ ಇದೆಯೆಂದು ಕೇಂದ್ರ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಸಚಿವ ಬಿ.ಆರ್.ಭಗತ್ರವರು ಇಲ್ಲಿ ಇಂದು ಒಪ್ಪಿಕೊಂಡರು.
ಪತ್ರಕರ್ತರೊಡನೆ ಮಾತನಾಡುತ್ತಾ, ಸರ್ಕಾರಿ ಕ್ಷೇತ್ರದ ಉದ್ಯಮಗಳನ್ನು ಅವರು ಸಮರ್ಥಿಸಿಕೊಂಡರು. ‘ನಮ್ಮ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಈ ಸರ್ಕಾರಿ ಕ್ಷೇತ್ರ’ ಎಂದರು.