ನವದೆಹಲಿ, ಮೇ 13– ಬೆಳಗಾವಿ ನಗರದ ಭವಿಷ್ಯದ ಬಗ್ಗೆ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಯಾವ ಹೊಸ ಸೂತ್ರವನ್ನೂ ರೂಪಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ ಅಥವಾ ರೈಲು ಮಾರ್ಗವನ್ನೇ ಗಡಿ ರೇಖೆಯಾಗಿ ನಗರವನ್ನು ವಿಭಜಿಸುವುದೊಂದೇ ಇದುವರೆಗೆ ಮೈಸೂರು ಮತ್ತು ಮಹಾರಾಷ್ಟ್ರ ಪ್ರತಿನಿಧಿಗಳಿಗೆ ಸೂಚಿಸಿರುವ ಸೂತ್ರ.
ಕೇವಲ ತಾತ್ಕಾಲಿಕ ಎಂದು ಬಣ್ಣಿಸಲಾಗಿದ್ದ ಈ ಸಲಹೆಯನ್ನು ಎರಡೂ ರಾಜ್ಯಗಳು ತಿರಸ್ಕರಿಸಿದ ನಂತರ ಕೇಂದ್ರ ಸರ್ಕಾರವು ವಿವಾದ ಇತ್ಯರ್ಥಕ್ಕೆ ಯಾವ ಹೊಸ ಸೂತ್ರವನ್ನೂ ರೂಪಿಸಿಲ್ಲ.
ಏನೇ ಆಗಲಿ ಕಾವೇರಿ, ಕೃಷ್ಣಾ ಯೋಜನೆಗಳ ಕೆಲಸ ನಿಲ್ಲದು: ಮುಖ್ಯಮಂತ್ರಿ ಘೋಷಣೆ
ಮಡಿಕೇರಿ, ಮೇ 13– ಹಾರಂಗಿ ನದಿಗೆ ಹುದಗೂರು ಬಳಿ 11 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಜಲಾಶಯದ ಮಣ್ಣಿನ ಅಣೆಕಟ್ಟೆ ಕೆಲಸದ ಗುದ್ದಲಿ ಪೂಜೆಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನೆರವೇರಿಸಿದರು. ಮಣ್ಣಿನ ಅಣೆಕಟ್ಟೆಗೆ 27 ಲಕ್ಷ ರೂ. ವೆಚ್ಚವನ್ನು ಅಂದಾಜು ಮಾಡಲಾಗಿದೆ.
ಹಲವು ವರ್ಷಗಳ ಕೆಳಗೆ ನಿಜಲಿಂಗಪ್ಪನವರು ಈ ಜಲಾಶಯದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಜಲಾಶಯದ ಕೆಲಸಕ್ಕಾಗಿ ಸರ್ಕಾರ ಈವರೆಗೆ 17 ಲಕ್ಷ ರೂ. ವೆಚ್ಚ ಮಾಡಿದೆ.