ದೇಶದಾದ್ಯಂತ ‘ಭೂ ಗ್ರಹಣ’ ಚಳವಳಿ ಬೆಂಗಳೂರು, ಆ. 8– ಭೂಮಿ ಇಲ್ಲದವರಿಗೆ ಹಂಚುವುದಕ್ಕಾಗಿ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ಸೇರಿದ ಹೆಚ್ಚುವರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ದೇಶದ ನಾನಾ ಭಾಗಗಳಲ್ಲಿ ಭಾನುವಾರ ‘ಭೂ ಗ್ರಹಣ’ ಚಳವಳಿ ಪ್ರಾರಂಭವಾಯಿತು.
ಕೆಲವು ರಾಜ್ಯಗಳಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷ ಮತ್ತು ಪ್ರಜಾ ಸೋಷಲಿಸ್ಟ್ ಪಕ್ಷಗಳು ಸಂಯುಕ್ತವಾಗಿ, ಇನ್ನು ಕೆಲವು ರಾಜ್ಯಗಳಲ್ಲಿ ಎಸ್.ಎಸ್.ಪಿ ಮಾತ್ರ ಮತ್ತು ಇತರ ರಾಜ್ಯಗಳಲ್ಲಿ ಸ್ವತಂತ್ರವಾಗಿ ಭಾರತ ಕಮ್ಯುನಿಷ್ಟ್ ಪಕ್ಷ ಈ ‘ಭೂ ಗ್ರಹಣ’ ಚಳವಳಿಯನ್ನು ಪ್ರಾರಂಭಿಸಿವೆ.
ವಾರಾಣಸಿಯಲ್ಲಿ ಸಂಸತ್ತಿನ ಎಸ್.ಎಸ್.ಪಿ ಸದಸ್ಯ ಶ್ರೀ ಮಧುಲಿಮಯೆ, ಮುಂಬೈಯಲ್ಲಿ ಪಿ.ಎಸ್.ಪಿ.ಯ ಸಂಸತ್ ಸದಸ್ಯ ಶ್ರೀ ನಾಥ್ಪೈ ಇಂದು ಬಂಧಿತರಾದವರಲ್ಲಿ ಮುಖ್ಯರು.
ಚಳವಳಿಯಲ್ಲಿ ಭಾಗವಹಿಸಿದವರಲ್ಲಿ ಅನೇಕ ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದರು. ತಮಿಳುನಾಡಿನಲ್ಲಿ ಬಂಧಿತರಾದವರ ಸಂಖ್ಯೆಯೇ ಹೆಚ್ಚು. ಅಲ್ಲಿ ಇಂದು ಮಧ್ಯಾಹ್ನದವರೆಗೆ 3,193 ಮಂದಿಯನ್ನು ಬಂಧಿಸಲಾಗಿತ್ತು.
ಸಣ್ಣ ಕಾರು ಕಾರ್ಖಾನೆಗೆ ಎಚ್ಎಂಟಿ ನೆರವು ನವದೆಹಲಿ, ಆ. 9– ಕಳೆದ ವಾರ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದ ಸಣ್ಣ ಕಾರು ಯೋಜನೆಯನ್ನು ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಸಂಸ್ಥೆಯ ನೆರವಿನೊಡನೆ ಕಾರ್ಯಗತಗೊಳಿಸುವುದು ಈಗ ಖಚಿತವೆನಿಸಿದೆ.
ಸಣ್ಣ ಕಾರು ಕಾರ್ಖಾನೆಗೆ ಬೇಕಾದ ಬಹುತೇಕ ಯಂತ್ರೋಪಕರಣಗಳನ್ನು ತಯಾರಿಸಲು ಎಚ್ಎಂಟಿಯಲ್ಲಿ ಸೌಲಭ್ಯವಿರುವುದು ಇದಕ್ಕೆ ಕಾರಣ.
ಎಚ್ಎಂಟಿ ಅಧ್ಯಕ್ಷ ಶ್ರೀ ಎಸ್.ಎಂ.ಪಾಟೀಲರು ಈ ಸಂಬಂಧದಲ್ಲಿ ಪೂರ್ವಭಾವಿ ಮಾತುಕತೆಗಾಗಿ ಈಗಾಗಲೇ ದೆಹಲಿಗೆ ಬಂದಿದ್ದಾರೆ.