ನವದೆಹಲಿ, ಡಿ. 2– ಭಾರತದ ಉತ್ಸಾಹಿ ತರುಣ ಕ್ರಿಕೆಟ್ ಆಟಗಾರರ ತಂಡ ಅಸಾಧ್ಯ ಎನ್ನಿಸಿದ್ದುದನ್ನು ಸಾಧ್ಯ ಮಾಡಿದೆ.
ಇಂದು ವಿಶ್ವದ ಅಗ್ರಮಾನ್ಯ ಕ್ರಿಕೆಟ್ ಟೀಮೆನಿಸಿರುವ ಆಸ್ಟ್ರೇಲಿಯಾ ಟೀಮಿನ ಮೇಲೆ ಫೆರೋಜ್ ಷಾ ಕೋಟ್ಲಾ ಮೈದಾನದಲ್ಲಿ ತೃತೀಯ ಕ್ರಿಕೆಟ್ ಟೆಸ್ಟ್ನಲ್ಲಿ ವಾಡೇಕರ್ ಮತ್ತು ವಿಶ್ವನಾಥ್ ಸೆಂಚುರಿ ಜೊತೆಯಾಟದಿಂದ, 7 ವಿಕೆಟ್ಗಳ ಅದ್ಭುತ ಗೆಲುವು ಪಡೆದಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತ ನೀಡಿದ್ದ ಪ್ರದರ್ಶನದ ಕಳಪೆ ಆಟದ ನೆನಪಿದ್ದ ಭಾರತದ ಅಭಿಮಾನಿಗಳು ಐದು ದಿನಗಳ ತೃತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಟೀ ವಿರಾಮದ ವೇಳೆಗೆ ಸಂತೋಷದಿಂದ ಹುಚ್ಚೆದ್ದು ಕುಣಿದರು. ಗೆದ್ದ ನಾಯಕ ಪಟೌಡಿಯವರು ತಮ್ಮ ಟೀಮಿನ ಉಳಿದ ಆಟಗಾರರೊಂದಿಗೆ ಮೈದಾನಕ್ಕೆ ಬಂದಾಗ ವೀಕ್ಷಕರೆಲ್ಲ ಎದ್ದು ನಿಂತು ದೀರ್ಘ ಕರತಾಡನ ಮಾಡಿದರು.
ಕಾಂಗ್ರೆಸ್ ಒಡೆಯಲು ಕಾಮರಾಜ್ ಕಾರಣ: ಸುಬ್ರಹ್ಮಣ್ಯಂ ಆರೋಪ
ಮದುರೆ, ಡಿ. 2– ಕಾಂಗ್ರೆಸ್ ಪಕ್ಷ ಒಡೆದು ಹೋದುದಕ್ಕೆ ಒಬ್ಬ ವ್ಯಕ್ತಿಯೇ ಕಾರಣ, ಅವರೇ ಸಂಸತ್ ಸದಸ್ಯ ಹಾಗೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಶ್ರೀ ಕಾಮರಾಜ್ ಎಂದು ತಾತ್ಕಾಲಿಕ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ಇಲ್ಲಿ ಹೇಳಿದರು.