* ಇದುವರೆಗೆ ಹತ್ತಾರು ಸಾವಿರ ಅನಾಥ ಶವಗಳನ್ನು ಏಕಾಂಗಿಯಾಗಿ ಸಂಸ್ಕಾರ ಮಾಡಿದ್ದೀರಿ. ಅವುಗಳ ಮೇಲೇಕೆ ನಿಮಗೆ ಅಷ್ಟೊಂದು ಕಾಳಜಿ?
ನಂಜನಗೂಡು ತಾಲ್ಲೂಕಿನ ಅಂಚೆಪುರ ನಮ್ಮೂರು. ಅದು 1969ನೇ ಇಸವಿ. ನನಗಾಗ ಎಂಟು ವರ್ಷ. ನಮ್ಮವ್ವ ಕಾಯಿಲೆ ಬಿದ್ದಿದ್ದರಿಂದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದೆ. ಚಿಕಿತ್ಸೆ ಸಿಗದೆ ಆಕೆ ಫುಟ್ಪಾತ್ ಮೇಲೇ ಪ್ರಾಣ ಬಿಟ್ಟಳು. ಅನಾಥ ಶವಗಳ ಸಂಸ್ಕಾರ ಮಾಡುತ್ತಿದ್ದ ಕೃಷ್ಣಪ್ಪ, ನಮ್ಮವ್ವನ ಹೆಣವನ್ನು ಒಯ್ದು ಮಣ್ಣು ಮಾಡಿದರು. ನೀನು ನನ್ನ ಜತೆಗೆ ಇರಪ್ಪ ಅಂತ ಅವರೇ ಊಟ ಕೊಟ್ಟು ಸಾಕಿದರು. ಆಗಿನಿಂದ ನನಗೂ ಅನಾಥ ಶವಗಳಿಗೂ ನಂಟು ನೋಡಿ. ಕೃಷ್ಣಪ್ಪ ಸತ್ತಾಗ, ಅವರನ್ನು ಮಣ್ಣು ಮಾಡಿ ಅವರ ಋಣ ತೀರಿಸಿದೆ.