ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆಗಳ ಲೋಕದಲ್ಲಿನ ವಿಸ್ಮಯದ ಜಾಡು ಹಿಡಿದು....

Last Updated 30 ಸೆಪ್ಟೆಂಬರ್ 2018, 1:03 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮೊದಲ ಬಾರಿಗೆ ಚಿರತೆಗಳ ಸಂಖ್ಯೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆದಿದೆ. ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥೆಯು ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯ ಮಾಡಿದೆ. ‘ಸೆರೆ ಹಿಡಿ- ಮರು ಸೆರೆ ಹಿಡಿ’ ವಿಧಾನ ಅನುಸರಿಸಿ ಚಿರತೆಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಸಂಸ್ಥೆಯ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅವರು ಚಿರತೆಯ ಜಾಡಿನ ಬಗ್ಗೆ ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

*ಚಿರತೆಗಳ ಅಧ್ಯಯನದ ಅಗತ್ಯ ಮತ್ತು ವೈಶಿಷ್ಟ್ಯಗಳೇನು?
ರಾಜ್ಯವಾರು ಚಿರತೆಗಳ ಸಂಖ್ಯೆಯನ್ನು ಅಂದಾಜಿಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ನಮ್ಮ ರಾಜ್ಯವು ಕಲೆ, ಇತಿಹಾಸ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯಲ್ಲೂ ಮುಂದಿರುವುದು ಬಹು ವಿಶೇಷ. ಈ ಹೆಗ್ಗಳಿಕೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನಮ್ಮ ಅಧ್ಯಯನದಿಂದ ತಿಳಿದುಬಂದ ಪ್ರಮುಖ ಅಂಶವೆಂದರೆ ಚಿರತೆಗಳಿಗೂ ದೊಡ್ಡ ನೈಸರ್ಗಿಕ ಆವಾಸಸ್ಥಾನದ ಅವಶ್ಯಕತೆಯಿದೆ.
ಚಿಕ್ಕಪುಟ್ಟ ಗುಡ್ಡ, ಕಲ್ಲುಬಂಡೆಗಳಿರುವ ಪ್ರದೇಶಗಳಲ್ಲಿ ಚಿರತೆಗಳು ಕಂಡುಬಂದರೂ ಅಲ್ಲಿ ಅವುಗಳ ಸಂಖ್ಯೆ ಹೆಚ್ಚಿರುವುದಿಲ್ಲ ಮತ್ತು ಈ ಕಲ್ಲುಬಂಡೆಗಳು ಆಧುನಿಕ ಅಭಿವೃದ್ಧಿಯ ಪ್ರವಾಹದಲ್ಲಿ ಕರಗಿ ಹೋಗುತ್ತಿವೆ. ಅವು ಕರಗಿದ ತಕ್ಷಣ ಅಲ್ಲಿದ್ದ ಚಿರತೆಗಳು ಮಾನವನಿರ್ಮಿತ ಹಾಗೂ ಕಡಿಮೆ ಗುಣಮಟ್ಟದ ಆವಾಸಸ್ಥಾನಗಳಾದ ಕಬ್ಬಿನ ಗದ್ದೆಯಂತಹ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯೇ ಹೆಚ್ಚು. ಇದು ಮಾನವ- ಚಿರತೆ ಸಂಘರ್ಷಕ್ಕೆ ಕಾರಣವಾಗುತ್ತದೆ.

ಚಿರತೆಗಳು ಎಲ್ಲ ಕಡೆಗಳಲ್ಲೂ ಇರುತ್ತವೆ ಎಂಬುದು ನಿಜವಲ್ಲ. ಆದರೆ, ಕೆಲವು ಗಣಿಗಾರಿಕೆ ಸಂಸ್ಥೆಗಳು, ಕಲ್ಲುಗಣಿ ಮಾಲೀಕರು, ‘ಚಿರತೆಗಳು ಎಲ್ಲೆಡೆಯೂ ಕಾಣಸಿಗುತ್ತವೆ. ಗಣಿಗಾರಿಕೆಯಿಂದ ಅವುಗಳ ಮೇಲೆ ಯಾವ ಕೆಟ್ಟ ಪರಿಣಾಮವೂ ಆಗುವುದಿಲ್ಲ’ ಎಂಬ ವಾದವನ್ನು ಮುಂದಿಟ್ಟು ನೈಸರ್ಗಿಕ ಕಾಡು ಹಾಗೂ ಬೆಟ್ಟಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ ಹಾಗೂ ಕಲ್ಲುಗಣಿಗಳು ಬೇಡವೆಂದು ಹೇಳಲಾಗದು. ಆದರೆ, ಇತಿಮಿತಿಯಲ್ಲಿ, ಕೆಲವು ಪ್ರದೇಶಗಳಲ್ಲಿ ಮಾತ್ರ ಮಾಡಬೇಕೇ ಹೊರತು ವನ್ಯಜೀವಿಗಳ ಹಿತವನ್ನು ನಿರ್ಲಕ್ಷಿಸಿ, ಅಪರಿಮಿತವಾಗಿ ಮಾಡುವುದು ಸಮಂಜಸವಲ್ಲ.

*ರಾಜ್ಯದಲ್ಲಿ ಚಿರತೆಗಳ ದಟ್ಟಣೆ ಹೆಚ್ಚು ಇರುವುದೆಲ್ಲಿ?
ವನ್ಯಜೀವಿಧಾಮಗಳಾದ ಮಲೆಮಹದೇಶ್ವರಬೆಟ್ಟ, ಕಾವೇರಿ, ಬಿಳಿಗಿರಿರಂಗನಬೆಟ್ಟದ ಜತೆಗೆ ತುಮಕೂರಿನ ದೇವರಾಯನದುರ್ಗ, ಭದ್ರಾವತಿಯ ಕುಕ್ಕವಾಡಿ- ಉಬ್ರಾಣಿ, ಬಳ್ಳಾರಿಯ ಸಂಡೂರು... ಮುಂತಾದ ಪ್ರದೇಶಗಳಲ್ಲಿ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಿಕ್ಕಪುಟ್ಟ ಕಾಡುಗಳಲ್ಲಿ ಅವು ಕಂಡುಬಂದರೂ ಅಲ್ಲಿ ಅವುಗಳ ಸಂಖ್ಯೆ ಕಡಿಮೆಯಿರುತ್ತದೆ.

*ಮಾನವ– ಚಿರತೆ ಸಂಘರ್ಷ ಕಂಡುಬಂದಿರುವ ಗ್ರಾಮಗಳೆಷ್ಟು?
ನಮ್ಮ ಅಧ್ಯಯನದ ಪ್ರಕಾರ, ರಾಜ್ಯದ ಶೇಕಡ ಎರಡಕ್ಕಿಂತ ಹೆಚ್ಚು ಹಳ್ಳಿಗಳು (ರಾಜ್ಯದಲ್ಲಿ ಹಳ್ಳಿಗಳ ಸಂಖ್ಯೆ 27,418) ಚಿರತೆ- ಮಾನವ ಸಂಘರ್ಷವನ್ನು ಎದುರಿಸುತ್ತಿವೆ.

*ಇತ್ತೀಚಿನ ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ಕಡಿಮೆಯಾಗುತ್ತಿದೆಯಲ್ಲ?
ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಕಡಿಮೆಯಾಗಿದೆಯೇ ಅಥವಾ ಹೆಚ್ಚಿದೆಯೇ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಿ ಹೇಳುವುದು ಕಷ್ಟಸಾಧ್ಯ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಇತರ ಅರಣ್ಯ ಕಾಯ್ದೆಗಳು ಜಾರಿಯಾದ ನಂತರ ಕೆಲವು ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಮಾತನ್ನು ದೊರವಾಯನ ಹಕ್ಕಿ (ಎರಲೊಡ್ದು) ಬಗ್ಗೆಯಾಗಲಿ, ಸಣ್ಣ ಹುಲ್ಲೆ ಅಥವಾ ತೋಳಗಳ ಬಗ್ಗೆಯಾಗಲಿ ಹೇಳಲು ಸಾಧ್ಯವಿಲ್ಲ. ವಿಶಿಷ್ಟ ಆವಾಸಸ್ಥಾನಗಳ ಅವಶ್ಯಕತೆಯಿರುವ ಈ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಎಲ್ಲಾ ಬಗೆಯ ಆವಾಸಸ್ಥಾನಗಳಲ್ಲಿ ಬದುಕಬಲ್ಲ ಚಿರತೆಯಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಿರಬಹುದು. ನಮ್ಮ ಸಂಸ್ಕೃತಿಯಲ್ಲಿ ವನ್ಯಜೀವಿಗಳ ಕುರಿತು ಮೃದು ಧೋರಣೆ ಇತ್ತು. ಅದು ಕೂಡ ಕೆಲ ವನ್ಯಜೀವಿಗಳ ಸಂಖ್ಯೆ ಹೆಚ್ಚಲು ಸಹಕರಿಸಿತು.

*ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆಯಲ್ಲ?
ಚಿರತೆಗಳ ನೈಸರ್ಗಿಕ ಆವಾಸಸ್ಥಾನ ಕಡಿಮೆಯಾಗುತ್ತಿರುವುದಂತೂ ನಿಜ. ಹಾಗಾಗಿ, ಅಷ್ಟು ಸೂಕ್ತವಲ್ಲದ ಹಾಗೂ ಕಡಿಮೆ ಗುಣಮಟ್ಟದ ಆವಾಸಸ್ಥಾನಗಳಾದ ಜನವಸತಿ ಮತ್ತು ಕೃಷಿ ಪ್ರದೇಶಕ್ಕೆ ಅವುಗಳು ಬರುತ್ತಿರುವುದು ಸಹಜ. ನಮ್ಮ ಜಾನುವಾರುಗಳನ್ನು ಕೊಟ್ಟಿಗೆಗಳಲ್ಲಿ ರಾತ್ರಿ ವೇಳೆ ಸೂಕ್ತವಾಗಿ ಸಂರಕ್ಷಣೆ ಮಾಡದಿದ್ದರೆ ಅಥವಾ ಬೆಳಗಿನ ಹೊತ್ತಿನಲ್ಲಿ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಬಿಟ್ಟಾಗ ರಕ್ಷಣೆ ಒದಗಿಸದಿದ್ದರೆ ಚಿರತೆಗಳು ಜಾನುವಾರುಗಳನ್ನು ತಿನ್ನುವ ಅಪಾಯ ಇದೆ. ಇತ್ತೀಚೆಗೆ ಚಿರತೆಗಳು ಹೆಚ್ಚಾಗಿ ಕಾಣಿಸುತ್ತಿವೆಯೋ ಅಥವಾ ಅವುಗಳನ್ನು ಕಂಡಾಗ ನಾವು ಹೆಚ್ಚು ಹೆಚ್ಚು ವರದಿ ಮಾಡುತ್ತೇವೆಯೋ ಗೊತ್ತಿಲ್ಲ.

*ಚಿರತೆಗಳ ಸಂಖ್ಯೆಗೆ ತಕ್ಕಂತೆ ಬಲಿಪ್ರಾಣಿಗಳು ಇವೆಯೇ?
ಚಿರತೆಗಳಿರುವ ಹಲವು ಪ್ರದೇಶಗಳಲ್ಲಿ ಅವುಗಳ ನೈಸರ್ಗಿಕ ಬಲಿಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಗಳಲ್ಲಿ ಚಿರತೆಗಳು ಜಾನುವಾರುಗಳನ್ನು ಅವಲಂಬಿಸುವ ಸಾಧ್ಯತೆ ಹೆಚ್ಚು. ನಮ್ಮ ಅಧ್ಯಯನದ ಭಾಗವಾಗಿ ಈಗ ಈ ಅಂಶವನ್ನೇ ವಿಶ್ಲೇಷಿಸುತ್ತಿದ್ದೇವೆ.

*ಮಾನವ– ಚಿರತೆ ಸಂಘರ್ಷ ಹೆಚ್ಚಲು ಕಾರಣವೇನು?
ಚಿರತೆಗಳ ನೈಸರ್ಗಿಕ ಆವಾಸಸ್ಥಾನಗಳ ನಾಶ, ನೈಸರ್ಗಿಕ ಆಹಾರದ ಅತಿಯಾದ ಬೇಟೆ, ನಾವು ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳುವ ವಿಧಾನ ಹಾಗೂ ಇತರ ಕೆಲ ವಿಚಾರಗಳು ಚಿರತೆ- ಮಾನವ ಸಂಘರ್ಷ ಹೆಚ್ಚಲು ಕಾರಣವಾಗಿವೆ. ಚಿರತೆಗಳ ನೈಸರ್ಗಿಕ ಆವಾಸಸ್ಥಾನಗಳ ಸಮೀಪದಲ್ಲೇ ಕೋಳಿ ಸಾಕಣೆ ಕೇಂದ್ರಗಳು, ಮೇಕೆ ಮತ್ತು ಕುರಿಗಳನ್ನು ಸಾಕುವುದು ಹೆಚ್ಚಿರುವುದು ಕೂಡ ಸಂಘರ್ಷ ಹೆಚ್ಚಲು ಕಾರಣವಾಗಿರಬಹುದು.

ಉದಾಹರಣೆಗೆ, ದೇಶದಲ್ಲಿ ಕೋಳಿಗಳ ಬಳಕೆ 2000ನೆ ಸಾಲಿನಿಂದೀಚೆಗೆ ನಾಲ್ಕುಪಟ್ಟು ಹೆಚ್ಚಿದೆ. ಕಾಡಿನ ಬದಿಯಲ್ಲಿಯೇ ಕೋಳಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಿ, ಚಿರತೆ ಕಾಟ ಜಾಸ್ತಿಯಾಗಿದೆ ಎಂದು ಹೇಳುವುದು ಮೇಜಿನ ಮೇಲೆ ಬೆಲ್ಲವನ್ನಿಟ್ಟು ಇರುವೆಗಳು ಹೆಚ್ಚುತ್ತಿವೆ ಎಂದ ಹಾಗೆ. ನಮ್ಮ ಅಧ್ಯಯನದ ಸಮಯದಲ್ಲಿ ಚಿರತೆಗಳು ಬ್ರಾಯ್ಲರ್‌ ಕೋಳಿಗಳನ್ನು ಕಚ್ಚಿಕೊಂಡು ಹೋಗುತ್ತಿರುವ ಹಲವಾರು ಚಿತ್ರಗಳು ಸಿಕ್ಕಿವೆ.

* ಸಂಘರ್ಷ ತಡೆಯುವುದು ಹೇಗೆ?
ಚಿರತೆಗಳ ಮೇಲಿರುವ ಒತ್ತಡ ಕಡಿಮೆ ಮಾಡಬೇಕು. ಅವುಗಳ ಸಂರಕ್ಷಣೆಗೆ ಕೆಲ ಸ್ಥಳಗಳನ್ನು ಮೀಸಲಿಟ್ಟು ಅಲ್ಲಿ ನೈಸರ್ಗಿಕ ಸಂಪನ್ಮೂಲಗಳ ಗಣಿಗಾರಿಕೆ ನಿಲ್ಲಿಸಬೇಕು. ಇವು ದೀರ್ಘಕಾಲೀನ ಕ್ರಮಗಳು.

ಜಾನುವಾರುಗಳ ಸೂಕ್ತ ರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ಆಗಬೇಕು. ಅರಣ್ಯ, ಪೊಲೀಸ್, ಕಂದಾಯ, ಬೆಂಕಿ ಮತ್ತು ತುರ್ತು ಸೇವೆ, ಆರೋಗ್ಯ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಘರ್ಷವನ್ನು ನಿಭಾಯಿಸುವ ತರಬೇತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಚಿರತೆ ದಾಳಿಯಿಂದ ಜನರಿಗೆ ಆರ್ಥಿಕ ನಷ್ಟವಾದರೆ ಅದಕ್ಕೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಒದಗಿಸಬೇಕು.

ಮನುಷ್ಯರಿಗೆ ಹಾನಿ ಮಾಡುವ ಚಿರತೆಗಳನ್ನು ಹಿಡಿಯಬೇಕು. ಹಾಗೆಯೇ, ಚಿರತೆ ಕಂಡುಬಂದಾಗ ಅದನ್ನು ಹಿಡಿಯಲೇಬೇಕೆಂದು ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಇವು ಕೆಲ ಅಲ್ಪಾವಧಿ ಕ್ರಮಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT