ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್

‘ಸಾಕ್ಷ್ಯಸಹಿತ ದೂರಿತ್ತರೆ ಕ್ರಮ ನಿಶ್ಚಿತ’
Last Updated 16 ಸೆಪ್ಟೆಂಬರ್ 2022, 21:30 IST
ಅಕ್ಷರ ಗಾತ್ರ

ಎಸಿಬಿ ರದ್ದುಗೊಳಿಸಿ ಹೈಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಮತ್ತೆ ಮರಳಿದೆ. ಲೋಕಾಯುಕ್ತ ಪೊಲೀಸ್‌ ವಿಭಾಗ ಈಗ ಹೇಗೆ ಕೆಲಸ ಮಾಡಬಹುದು? ಎಂಬ ಕುತೂಹಲ ಜನರಲ್ಲಿದೆ. ಸಾರ್ವಜನಿಕರ ದೂರುಗಳ ತನಿಖೆಗೆ ಏನೆಲ್ಲಾ ಸಿದ್ಧತೆ ಮಾಡಲಾಗುತ್ತಿದೆ? ಲೋಪಗಳಿಲ್ಲದ ತನಿಖಾ ವಿಭಾಗವನ್ನು ರೂಪಿಸುವುದು ಹೇಗೆ? ಎಂಬ ಪ್ರಶ್ನೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

*******

l ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಬಳಸಲು ಲೋಕಾಯುಕ್ತ ಪೊಲೀಸ್‌ ವಿಭಾಗ ಯಾವ ರೀತಿಯ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡಿದೆ?

ಲೋಕಾಯುಕ್ತ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿದ ತಕ್ಷಣದಿಂದಲೇ ಲೋಕಾಯುಕ್ತದ ಆಡಳಿತ, ವಿಚಾರಣೆ, ಪೊಲೀಸ್‌ ಮತ್ತು ತಾಂತ್ರಿಕ ವಿಭಾಗದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಲಂಚಕ್ಕೆ ಬೇಡಿಕೆ ಇಡುತ್ತಿರುವ ದೂರುಗಳು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ, ಇತರ ಸ್ವರೂಪದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಕುರಿತು ಪೊಲೀಸ್‌ ಅಧಿಕಾರಿಗಳಿಗೆ ಪರಿಣಿತರಿಂದ ಮಾಹಿತಿ ಒದಗಿಸಲಾಗಿದೆ. ನಿವೃತ್ತ ನ್ಯಾಯಾಧೀಶರು, ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಉಪನ್ಯಾಸವನ್ನೂ ಆಯೋಜಿಸಲಾಗುವುದು. ಪ್ರಾಥಮಿಕ ತನಿಖೆ, ಪ್ರಕರಣ ದಾಖಲು, ತನಿಖೆ, ಆರೋಪಪಟ್ಟಿ ಸಲ್ಲಿಕೆ, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ವಕೀಲರಿಗೆ ನೆರವಾಗುವ ಕುರಿತು ತನಿಖಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು.

l ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಲೋಕಾಯುಕ್ತ ಸಂಸ್ಥೆ ಮೇಲೆ ಮತ್ತೆ ಜನರ ನಿರೀಕ್ಷೆ ಹೆಚ್ಚಾಗಿದೆ. ಸ್ಪಂದನೆ ಹೇಗೆ?

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇಬೇಕು ಎಂಬುದು ನಮ್ಮ ಗುರಿ. ಆ ದಿಸೆಯಲ್ಲಿ ಸಂಸ್ಥೆಗೆ ಅಗತ್ಯ ಸಂಖ್ಯೆ ಸಿಬ್ಬಂದಿ, ಕೆಲವು ಸೌಲಭ್ಯಗಳು ಬೇಕಿವೆ. ಯಾವ ಹಂತದಲ್ಲೂ ಜನರ ನಿರೀಕ್ಷೆ ಹುಸಿಯಾಗಲು ಅವಕಾಶ ನೀಡುವುದಿಲ್ಲ.

l ಎಸಿಬಿಯಿಂದ ಕಡತ, ಸಿಬ್ಬಂದಿ ಹಸ್ತಾಂತರ ಪ್ರಕ್ರಿಯೆ ಯಾವ ಹಂತದಲ್ಲಿದೆ?

ಕಡತಗಳನ್ನು ಒಂದೊಂದಾಗಿ ಹಸ್ತಾಂತರ ಮಾಡುತ್ತಿದ್ದಾರೆ. 142 ಕಾನ್‌ಸ್ಟೆಬಲ್‌ಗಳನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

l ಎಸಿಬಿಯಲ್ಲಿರುವ ಎಲ್ಲ ಪೊಲೀಸ್‌ ಅಧಿಕಾರಿಗಳನ್ನೂ ಲೋಕಾಯುಕ್ತಕ್ಕೆ ಕರೆಸಿಕೊಳ್ಳುವ ಪ್ರಸ್ತಾವವನ್ನು ಮಾಜಿ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ವಿರೋಧಿಸಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಎಸಿಬಿಯಲ್ಲಿರುವ ಎಲ್ಲ ಪ್ರಕರಣಗಳು, ಅಧಿಕಾರಿ ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ನೀಡಬೇಕು ಎಂಬುದು ಹೈಕೋರ್ಟ್‌ ಆದೇಶ. ಅದರಂತೆ ಕ್ರಮ ಜರುಗಿಸಲು ಕೋರಲಾಗಿದೆ. ಅಲ್ಲಿರುವ ಪ್ರಕರಣಗಳನ್ನು ವರ್ಗಾಯಿಸುವಾಗ ಎಸಿಬಿಯ ಅಧಿಕಾರಿಗಳು ಇಲ್ಲಿಗೆ ಬಂದು ಸಮಗ್ರ ವಿವರಣೆ ಒದಗಿಸಬೇಕು. ಅದಕ್ಕೆ ಪೂರಕವಾಗಿ ಎಲ್ಲರನ್ನೂ ಕರೆಸುವುದು ಅಗತ್ಯ. ನಂತರದಲ್ಲಿ ಎಷ್ಟು ಮಂದಿಯನ್ನು ಇಲ್ಲಿ ಉಳಿಸಿಕೊಳ್ಳಬೇಕು? ವಾಪಸ್‌ ಕಳುಹಿಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ.

l ಲೋಕಾಯುಕ್ತದ ಪೊಲೀಸ್‌ ವಿಭಾಗಕ್ಕೆ ಕಳಂಕಿತರು ಪ್ರವೇಶಿಸದಂತೆ ತಡೆ ಹೇಗೆ?

ಕೆಲವು ಮಾನದಂಡಗಳನ್ನು ಇರಿಸಿಕೊಂಡು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು. ಅಧಿಕಾರಿ ಮತ್ತು ಸಿಬ್ಬಂದಿಯ ಪೂರ್ವಾಪರ ಕುರಿತು ವರದಿ ಪಡೆಯಲಾಗುವುದು. ನಂಬಲರ್ಹ ಪೊಲೀಸ್‌ ಅಧಿಕಾರಿಗಳಿಂದಲೂ ಅಭಿಪ್ರಾಯ ಪಡೆಯಲಾಗುವುದು. ಯಾವುದೇ ವಿಧದ ಅಪರಾಧ ಪ್ರಕರಣ, ವಿಚಾರಣೆ ಎದುರಿಸುತ್ತಿರುವವರು, ಶಿಸ್ತುಕ್ರಮಕ್ಕೆ ಗುರಿಯಾದವರಿಗೆ ಸಂಸ್ಥೆಗೆ ಪ್ರವೇಶ ನೀಡುವುದಿಲ್ಲ. ಈಗ ನಮ್ಮ ಪೊಲೀಸ್‌ ವಿಭಾಗದಲ್ಲಿರುವ ಅಧಿಕಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಪ್ರಾಮಾಣಿಕರು, ದಕ್ಷತೆಯುಳ್ಳವರು ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಯ ಅನುಭವ ಹೊಂದಿದವರಿಗೆ ಅವಕಾಶ ನೀಡಲಾಗುವುದು. ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಬಂದವರು ಇಲ್ಲಿನ ನಿಯಮಗಳಿಗೆ ಹೊಂದಿಕೊಂಡು ಕೆಲಸ ಮಾಡಬೇಕು.

l ಭ್ರಷ್ಟಾಚಾರದ ದೂರುಗಳು ಬಂದ ತಕ್ಷಣ ಕ್ರಮ ಕೈಗೊಳ್ಳಲು ಲೋಕಾಯುಕ್ತ ಸನ್ನದ್ಧವಾಗಿದೆಯೆ?

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ಮೇಲ್ನೋಟಕ್ಕೆ ಸತ್ಯ ಎಂದು ತೀರ್ಮಾನಿಸಬಹುದಾದ ಸಾಕ್ಷ್ಯಗಳೊಂದಿಗೆ ನೀಡಿದರೆ ತಕ್ಷಣ ಕ್ರಮ ಜರುಗಿಸುವುದು ನಿಶ್ಚಿತ. ಈ ಬಗ್ಗೆ ಯಾವ ಅನುಮಾನಗಳೂ ಬೇಡ. ಈಗಾಗಲೇ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿರುವುದೇ ಇದಕ್ಕೆ ಸಾಕ್ಷಿ.

l ಸಂಸ್ಥೆಯ ಪೊಲೀಸ್‌ ವಿಭಾಗದ ಕಾರ್ಯನಿರ್ವಹಣೆಗೆ ಪ್ರತ್ಯೇಕ ಕೈಪಿಡಿ ರೂಪಿಸುವಂತೆ ಐಪಿಎಸ್‌ ಅಧಿಕಾರಿ ಕೆ. ಮಧುಕರ ಶೆಟ್ಟಿ ಸಲ್ಲಿಸಿದ್ದ ಪ್ರಸ್ತಾವದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈ ಕುರಿತು ನಮ್ಮ ಪೊಲೀಸ್‌ ಹಾಗೂ ಆಡಳಿತ ವಿಭಾಗದ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಅಂತಹ ಒಂದು ಕೈಪಿಡಿ ಅಗತ್ಯ ಎನಿಸಿದರೆ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ. ಮಧುಕರ ಶೆಟ್ಟಿ ಅವರು ಸರ್ಕಾರಕ್ಕೆ ಸಲ್ಲಿಸಿರುವ ಕರಡು ಸೂಕ್ತ ಎಂಬುದು ಮನವರಿಕೆಯಾದರೆ ಅದಕ್ಕೆ ಒಪ್ಪಿಗೆ ನೀಡುವಂತೆ ಸರ್ಕಾರವನ್ನು ಕೋರಲಾಗುವುದು. ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕೆ ಬೇಕಿರುವ ಕ್ರಮ ಕೈಗೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇವೆ.

l ಎಸಿಬಿಯಲ್ಲಿ ‘ಬಿ’ ವರದಿ ಸಲ್ಲಿಸಿದ ಪ್ರಕರಣಗಳ ಮರುತನಿಖೆ ನಡೆಸುವ ಉದ್ದೇಶವಿದೆಯೆ?

ಆ ರೀತಿ ಯಾವುದೇ ನಿರ್ಧಾರ ಮಾಡಿಲ್ಲ. ಪ್ರಕರಣಗಳ ಮರುತನಿಖೆ ನಡೆಸಬೇಕಾದ ಸನ್ನಿವೇಶ ಉದ್ಭವವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ.

l ಸಾರ್ವಜನಿಕ ನೌಕರರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಲು ಸರ್ಕಾರ ವಿಳಂಬ ಮಾಡಿದರೆ ಏನು ಮಾಡುತ್ತೀರಿ?

ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಪೊಲೀಸ್‌ ವಿಭಾಗದಿಂದ ಸಕ್ಷಮ ಪ್ರಾಧಿಕಾರಗಳಿಗೆ ಪ್ರಸ್ತಾವ ಕಳುಹಿಸಲಾಗುತ್ತದೆ. ಮೂರು ತಿಂಗಳೊಳಗೆ ಅನುಮತಿ ನೀಡದ ಪ್ರಕರಣಗಳನ್ನು ಲೋಕಾಯುಕ್ತದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ. ವಿಚಾರಣಾ ವರದಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಈ ಕ್ರಮ ಜಾರಿಯಲ್ಲಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಸರ್ಕಾರವನ್ನು ಪ್ರಶ್ನಿಸಬೇಕು. ಸರ್ಕಾರವೂ ತನ್ನ ಹೊಣೆ ಅರಿತುಕೊಂಡು ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು.

lಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ, ಸಚಿವ ಎಸ್‌.ಟಿ. ಸೋಮಶೇಖರ್‌ ವಿರುದ್ಧ ತನಿಖೆಗೆ ನ್ಯಾಯಾಲಯ ನೀಡಿರುವ ಆದೇಶದಂತೆ ಕ್ರಮ ಆಗಲಿದೆಯೆ?

ತಪ್ಪು ಮಾಡಿದವರು ದೊಡ್ಡವರೋ? ಸಣ್ಣವರೋ ಎಂಬುದು ನಮಗೆ ಮುಖ್ಯವಲ್ಲ. ನ್ಯಾಯಾಲಯದ ಆದೇಶದಂತೆ ತನಿಖಾಧಿಕಾರಿ ಮುಂದಿನ ಕ್ರಮ ಜರುಗಿಸುತ್ತಾರೆ. ಸಾಕ್ಷ್ಯಗಳಿದ್ದರೆ ಉಳಿದವರಿಗೆ ಆಗುವ ಕ್ರಮವೇ ಇವರಿಗೂ ಆಗುತ್ತದೆ.

lಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿರುವ ಲೋಕಾಯುಕ್ತರು ಈ ಸರ್ಕಾರದ ವಿರುದ್ಧ ಕ್ರಮ ಜರುಗಿಸುತ್ತಾರಾ ಎಂಬ ಸಂಶಯಕ್ಕೆ ನಿಮ್ಮ ಉತ್ತರವೇನು?

ಆ ಬಗೆಯ ಸಂಶಯವೇ ತಪ್ಪು. ನನ್ನನ್ನು ನೇಮಿಸಿರುವುದು ಸರ್ಕಾರವಲ್ಲ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್‌, ವಿಧಾನ ಪರಿಷತ್‌ ಸಭಾಪತಿ, ವಿಧಾನಮಂಡಲದ ಎರಡೂ ಸದನಗಳ ವಿರೋಧ ಪಕ್ಷದ ನಾಯಕರು ಇರುವ ಸಮಿತಿಯ ಶಿಫಾರಸು ಆಧರಿಸಿ ರಾಜ್ಯಪಾಲರು ನೇಮಕ ಮಾಡಿದ್ದಾರೆ. ನಾನು ಈಗ ಜನರಿಗೆ ಮತ್ತು ಕಾನೂನಿಗೆ ಉತ್ತರದಾಯಿ. ಸಂಶಯಕ್ಕೆ ಎಡೆಯಿಲ್ಲದಂತೆ ಕೆಲಸ ಮಾಡುವೆ.

lಕುಟುಂಬದವರು, ಸಂಬಂಧಿಕರು ಹಸ್ತಕ್ಷೇಪ ಮಾಡದಂತೆ ಹೇಗೆ ತಡೆಯುತ್ತೀರಿ?

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಲ್ಲಿ 13 ವರ್ಷ 7 ತಿಂಗಳು ಕಾರ್ಯನಿರ್ವಹಿಸಿದ್ದೇನೆ. ಎರಡೂವರೆ ವರ್ಷ ಉಪ ಲೋಕಾಯುಕ್ತರ ಹುದ್ದೆಯಲ್ಲಿದ್ದೆ. ಯಾವತ್ತೂ ನನ್ನ ಕುಟುಂಬದ ಸದಸ್ಯರು, ಸಂಬಂಧಿಕರು ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮುಂದೆಯೂ ಅದಕ್ಕೆ ಅವಕಾಶವಿಲ್ಲ.

lಯಾವ ಇಲಾಖೆಗಳ ಮೇಲೆ ಕೇಂದ್ರೀಕರಿಸಿ ಲೋಕಾಯುಕ್ತ ಪೊಲೀಸರು ಕೆಲಸ ಮಾಡಲಿದ್ದಾರೆ?

ಭ್ರಷ್ಟಾಚಾರ ಕೆಲವೇ ಇಲಾಖೆಗಳಿಗೆ ಸೀಮಿತವಾಗಿಲ್ಲ. ಎಲ್ಲ ಇಲಾಖೆಗಳನ್ನೂ ವ್ಯಾಪಿಸಿಕೊಂಡಿದೆ ಮತ್ತು ಅತಿಯಾಗಿ ಬೆಳೆದುನಿಂತಿದೆ. ಲಂಚ ಕೊಡದೆ ಸಣ್ಣ ಕೆಲಸವೂ ಆಗುವುದಿಲ್ಲ ಎಂಬ ಸ್ಥಿತಿ ಇದೆ. ಭ್ರಷ್ಟಾಚಾರ ಹಣದ ವಹಿವಾಟಿಗೆ ಸೀಮಿತವಾಗಿಯೂ ಉಳಿದಿಲ್ಲ. ಬೇರೆ ಬೇರೆ ಸ್ವರೂಪಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT