2018ರ ಫೆ.13ರಂದು ಆಕಳಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದೆ. ಆಗ ಏನಾಯಿತು ಅಂತ ಹೇಳ್ತೀಯಾ?
ಹೊನ್ನಾವರ ತಾಲ್ಲೂಕಿನ ನವಿಲಗೋಣದಲ್ಲಿ ನಮ್ಮ ಮನೆಯ ಮುಂದೆ ನನ್ನ ತಮ್ಮ ಕಾರ್ತಿಕ್ ಜೊತೆ ನಾನು ಆಟ ಆಡ್ತಿದ್ದೆ. ಆಗ ಮನೆಯ ಆಕಳು ರಸ್ತೆಯಿಂದ ಜೋರಾಗಿ ಓಡಿ ಬಂದು, ಕೆಂಪು ಅಂಗಿ ಹಾಕಿಕೊಂಡಿದ್ದ ತಮ್ಮನಿಗೆ ಹಾಯಲು ಬಂತು. ನಂಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. ಜೋರಾಗಿ ಕಿರುಚಿಕೊಂಡೆ. ಅಷ್ಟರಲ್ಲಿ ಆಕಳು ಪಕ್ಕದಲ್ಲಿದ್ದ ಬೈಕ್ ಸಮೇತ ನಮ್ಮಿಬ್ಬರನ್ನೂದೂಡಿತು. ಕೂಡಲೇ ನಾನು ತಮ್ಮನನ್ನು ಎತ್ತಿಕೊಂಡೆ. ನಂಗೆ ಸ್ವಲ್ಪ ಹೆದ್ರಿಕೆ ಆದ್ರೂಅವನನ್ನು ಬಿಡಲಿಲ್ಲ.ಆದರೆ,ಆಕಳು ಅವನಿಗೆ ಮೂರು ಸಲ ತಿವೀತು. ನಂತ್ರ ನಾನು ಬೆನ್ನುಕೊಟ್ಟೆ. ಆಗಲೂ ನಾನು ತಮ್ಮನನ್ನು ಎತ್ತಿಕೊಂಡೇ ಇದ್ದೆ. ಅಷ್ಟರಲ್ಲಿ ಜನ ಬಂದ್ರು. ನಾನು ಅವನನ್ನು ಎತ್ತಿಕೊಂಡು ಮನೆಗೆ ಓಡಿಹೋದೆ.
* ಆ ಕ್ಷಣದಲ್ಲಿ ತಮ್ಮನನ್ನು ಎತ್ತಿಕೊಳ್ಳಬೇಕು ಅಂತ ಹೇಗೆ ಗೊತ್ತಾಯ್ತು?
ಅದು ಹೇಗೋ ಅಚಾನಕ್ ಆಗಿ ಹೊಳೀತು (ನಗು). ಈ ಘಟನೆಗೆ ಒಂದು ವರ್ಷದ ಹಿಂದೆ ನಂಗೂ ಇದೇ ಆಕಳು ತಿವಿದಿತ್ತಲ್ಲ, ಅದ್ರಿಂದ ಹೊಳೆದಿರ್ಬೇಕು!
* ನಿನಗೂ ಈ ಮೊದಲು ಇದೇ ಆಕಳು ತಿವಿದಿತ್ತಾ!
ಹ್ಞಾಂ... ತಮ್ಮನಿಗೆ ತಿವಿಯಲು ಬಂದ ಆಕಳೇ ಅದಕ್ಕಿಂತ ಕೆಲವು ದಿನಗಳ ಹಿಂದೆ ಕರು ಹಾಕಿತ್ತು.ನಾನು, ತಮ್ಮ ಕೊಟ್ಟಿಗೆಯಲ್ಲಿ ಆಟಾಡ್ತಿದ್ವಿ. ಆಗ ಅದು ಇದ್ದಕ್ಕಿದ್ದಂತೆ ನನಗೆ ತಿವಿದುಸೊಂಟದ ಮೇಲೆ ಪೆಟ್ಟಾಗಿತ್ತು. ನಂತರ ಆಸ್ಪತ್ರೆಯಲ್ಲಿ ಮೂರು, ನಾಲ್ಕು ಹೊಲಿಗೆ ಹಾಕಿದ ಮೇಲೆ ವಾಸಿಯಾಗಿತ್ತು. ಹಾಗಾಗಿ ಈ ಸಲ ತಮ್ಮನಿಗೆ ಏನೂ ಆಗ್ಬಾರ್ದು ಅಂತ ನಾನು ಅವನನ್ನು ಕೂಡಲೇ ಎತ್ತಿಕೊಂಡೆ.ಧೈರ್ಯ ಮಾಡಿದ್ದಕ್ಕೆ ಹೆಚ್ಚಿಗೆ ಏನೂ ಆಗಲಿಲ್ಲ.
* ನೀನು ಯಾವ ಶಾಲೆಯಲ್ಲಿ ಓದುತ್ತಿರುವುದು, ಟೀಚರ್ಸ್ ಏನು ಹೇಳಿದ್ರು?
ನಾನುಧಾರೇಶ್ವರದದಿನಕರ ಪ್ರೈಮರಿ ಸ್ಕೂಲ್ನಲ್ಲಿ ಐದನೇ ತರಗತಿಯಲ್ಲಿ ಓದ್ತಿದ್ದೇನೆ. ಆಕಳಿನಿಂದ ತಮ್ಮನನ್ನ ರಕ್ಷಿಸಿದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ನೋಡಿದ ಟೀಚರ್ಸ್ ನಂಗೆ ‘ಹ್ಯಾಟ್ಸ್ ಆಫ್’ ಅಂತ ಹೇಳಿದ್ರು. ಜ. 30, 31ಕ್ಕೆ ನನಗೆ ಪರೀಕ್ಷೆಯಿದ್ದರೂ ಅವರೆಲ್ಲ,‘ಎಕ್ಸಾಂ ನಾವು ನೋಡಿಕೊಳ್ತೇವೆ, ನೀನು ಪ್ರಶಸ್ತಿ ತೆಗೆದುಕೊಳ್ಳಲು ಡೆಲ್ಲಿಗೆ ಹೋಗಿ ಬಾ’ ಅಂತಹೇಳಿದ್ದಾರೆ.
–ಸದಾಶಿವ ಎಂ.ಎಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.