ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಆಹಾರ: ಔಷಧಿಯೋ? ಅಮೃತವೋ?

ಕೊರೊನಾಗಿಂತಲೂ ಹೆಚ್ಚು ಗಂಭೀರವಾಗಿರುವುದು ಅಪೌಷ್ಟಿಕತೆಯ ಸಮಸ್ಯೆ
Last Updated 30 ಜುಲೈ 2020, 21:11 IST
ಅಕ್ಷರ ಗಾತ್ರ

ಪೋಷಕಾಂಶಗಳ ಮೂಲಕ ಆರೋಗ್ಯದ ಬಾಗಿಲನ್ನು ತೆರೆಯುವ ಪ್ರದೇಶಗಳಿಗಾಗಿ ಪ್ರಪಂಚದ ನಕ್ಷೆಯನ್ನು ಹುಡುಕಿದರೆ, ಮೊದಲ ಸ್ಥಾನದಲ್ಲಿ ನಮಗೆ ಸಿಗುವುದು ‘ಇಕಿಗಾಯ್’ ಜೀವನಶೈಲಿಯನ್ನು ಅನುಸರಿಸುವ ಒಕಿನಾವಾ ದ್ವೀಪ. ಜಪಾನಿನ ನಡುಗಡ್ಡೆಯಲ್ಲಿ ವಾಸವಾಗಿರುವ ಜನ ಶತಾಯುಷಿಗಳಾಗಿ ಗಿನ್ನಿಸ್ ದಾಖಲೆಯನ್ನು ಸೇರಿಕೊಂಡಿದ್ದಾರೆ. ಇವರ ಆರೋಗ್ಯಕರ ಜೀವನಶೈಲಿಯಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರ ಮಹತ್ವದ ಪಾತ್ರ ವಹಿಸಿದೆ. ಹಾಗಾದರೆ ಈ ಜನ ಯಾವ ಅಹಾರವನ್ನು, ಎಷ್ಟು ಪ್ರಮಾಣದಲ್ಲಿ, ಯಾವಾಗ ಸೇವಿಸುತ್ತಾರೆ ಎಂಬುದು ಪ್ರತಿಯೊಬ್ಬರ ಕುತೂಹಲದ ಪ್ರಶ್ನೆ.

ಒಕಿನಾವಾದ ಒಬ್ಬ ಶತಾಯುಷಿ ಹೇಳುವ ಪ್ರಕಾರ, ‘ವೈವಿಧ್ಯಮಯ ಮತ್ತು ಸ್ವಾದಿಷ್ಟವಾದ ಆಹಾರ ನನ್ನ ಆಯ್ಕೆ ಹಾಗೂ ಆಹಾರದ ಆಯ್ಕೆಯಲ್ಲಿ ಯಾವಾಗಲೂ ನನ್ನ ಪೂರ್ವಜರ ದಾರಿಯನ್ನೇ ಅನುಸರಿಸುತ್ತೇನೆ’. ಇಲ್ಲಿ ವೈವಿಧ್ಯಮಯ ಎಂಬಲ್ಲಿ ತಯಾರಿಸಿದ ಆಹಾರ ಮುಖ್ಯವಾಗಿರದೆ, ಪೋಷಕಾಂಶಗಳ ಸಮೃದ್ಧಿ ಮುಖ್ಯವಾಗಿರುತ್ತದೆ. ಶತಾಯುಷಿಗಳು ಮುಖ್ಯವಾಗಿ ಸ್ಥಳೀಯವಾಗಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ಅವರ ಊಟದ ತಟ್ಟೆಗಳಲ್ಲಿ ನಾರಿನಾಂಶದಿಂದ ಕೂಡಿದ ಬೀನ್ಸ್‌ಗೆ ವಿಶೇಷ ಸ್ಥಾನವಿದೆ. ಸೋಯಾ ಬೀನ್‌ನಿಂದ ತಯಾರಿಸಿದ ಹಾಲು, ಟೋಫು ಮುಂತಾದವು ಪೋಷಕಾಂಶಗಳ ಖಜಾನೆ ಎಂದರೆ ತಪ್ಪಾಗಲಾರದು. ಕ್ಯಾಲ್ಸಿಯಂ, ನಾರಿನಾಂಶ, ಪ್ರೋಟೀನ್‌ಗಳಿಂದ ಸಮೃದ್ಧವಾದ ಎಳ್ಳು ಕಾಳುಗಳನ್ನು ದೀರ್ಘಾಯುಷ್ಯಕ್ಕಾಗಿ ಬಳಸುತ್ತಾರೆ.‌ ಅಣಬೆ, ಮೀನು, ಸಮುದ್ರಕಳೆ ಮುಂತಾದವು ಜಪಾನಿನ ಆಹಾರ ತಟ್ಟೆಯನ್ನು ಅಲಂಕರಿಸಿರುತ್ತವೆ.

ವಿಜ್ಞಾನಿಗಳು, ವೈದ್ಯರು ಮತ್ತು ‘ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌– 2017’ರ ಆಹಾರ ಸಹಯೋಗಿಗಳ ಒಟ್ಟು 130 ಸ೦ಶೋಧಕರ ತಂಡವು ಸಾವಿಗೆ ಕಾರಣವಾಗುವ ಪ್ರಮುಖ ಅಂಶಗಳ ಬಗ್ಗೆ 1990ರಿಂದ 2017ರವರೆಗೆ ಅಧ್ಯಯನ ನಡೆಸಿ, ಪ್ರತೀ ಐದು ಜನರಲ್ಲಿ ಒಬ್ಬರ ಮರಣಕ್ಕೆ ಅಪೌಷ್ಟಿಕತೆ ಕಾರಣ ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿತು. ಇಷ್ಟೊಂದು ಸಾವುಗಳಿಗೆ ಕಾರಣವಾಗಿರುವ ಅಪೌಷ್ಟಿಕತೆಯನ್ನು ನಿವಾರಿಸುವುದು ಯಾಕೆ ಸಾಧ್ಯವಾಗುತ್ತಿಲ್ಲ? ಇದು ಎಲ್ಲರಿಗೂ ತಿಳಿದಿರುವ ಸರಳ ವಿಷಯವಲ್ಲವೇ? ಸೇವಿಸುವ ಆಹಾರದಲ್ಲಿ ಪೋಷಕಾಂಶಗಳನ್ನು ಸೇರಿಸಿಕೊಂಡರಾಯಿತು, ಅಷ್ಟೇ. ಆದರೆ ಸರಳ ವಿಷಯಗಳೇ ಯಾವಾಗಲೂ ಸಂಕೀರ್ಣ
ವಾಗಿರುತ್ತವೆ. ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿ ಆರೋಗ್ಯಕರ ಜೀವನ ನಡೆಸಲು ಪೋಷಕಾಂಶಗಳ ಕೊರತೆಯೇನೂ ಇಲ್ಲ, ಜೊತೆಗೆ ಪೋಷಕಾಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಆಹಾರದ ಸ್ವಾದವೂ ಅದ್ಭುತವೇ. ಪೋಷಕಾಂಶಗಳು ಬಡವ– ಬಲ್ಲಿದನೆಂಬ ತಾರತಮ್ಯವನ್ನು ಎಂದೂ ಮಾಡಿಲ್ಲ. ಸಿರಿವಂತ ಪರದೇಶದಿಂದ ತಂದು ತಿನ್ನುವ ಸೆಲೆರಿ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶವನ್ನು ನಮ್ಮ ಹಿತ್ತಲಿನಲ್ಲಿ ಬೆಳೆಯುವ ನುಗ್ಗೆಸೊಪ್ಪು ಹೊಂದಿರುವುದೇ ಇದಕ್ಕೆ ಸಾಕ್ಷಿ. ನಾವು ವಾಸಿಸುವ ವಾತಾವರಣದಲ್ಲಿ ತಕ್ಷಣ ಉಪಯೋಗಕ್ಕೆ ಸಿಗುವ ಎಲ್ಲಾ ಹಣ್ಣು, ತರಕಾರಿ, ಆಹಾರ ಧಾನ್ಯಗಳೇ ಶ್ರೇಷ್ಠ ಆಹಾರ ಪದಾರ್ಥಗಳು. ಪೋಷಕಾಂಶಗಳನ್ನು ಆಸ್ಪತ್ರೆಯಲ್ಲಿ ಹುಡುಕುವ ಬದಲು ತಟ್ಟೆಯಲ್ಲಿ ಹುಡುಕುವುದು ಆರೋಗ್ಯಕ್ಕೆ ರಹದಾರಿ.

ಒಂದೇ ನಾಣ್ಯದ ಎರಡು ಮುಖಗಳಾದರೂ ಸ್ಥೂಲಕಾಯವು ಬಡಕಲು ಶರೀರದಷ್ಟು ವಿಶ್ವದ ಗಮನ ಸೆಳೆದಿಲ್ಲ. ಆಹಾರದಲ್ಲಿರುವ ಪೋಷಕಾಂಶಗಳ ಅಸಮತೋಲನವೂ ಸ್ಥೂಲಕಾಯಕ್ಕೆ ಕಾರಣ ಎಂದು ಅರಿಯದೆ, ಕೇವಲ ಜೀವನಶೈಲಿ ಮತ್ತು ಶ್ರೀಮಂತ ಆಹಾರ ಪದ್ಧತಿ ಕಾರಣ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪ್ರಪಂಚದಲ್ಲಿ ಜನರ ಹದಗೆಡುತ್ತಿರುವ ಆರೋಗ್ಯ ಮತ್ತು ಅಕಾಲಿಕ ಸಾವುಗಳ ಕಾರಣವನ್ನು ಹುಡುಕಿದರೆ, ಮೊದಲನೇ ಸ್ಥಾನದಲ್ಲಿ ನಮಗೆ ಕಾಣುವುದು ಅಪೌಷ್ಟಿಕ ಆಹಾರ. ಕೊರೊನಾ ಎಂಬ ವೈರಸ್‌ನಿ೦ದ ಉಂಟಾಗುತ್ತಿರುವ ಜೀವಹಾನಿಗಿಂತ ಹಲವು ಪಟ್ಟು ಹೆಚ್ಚು ಭಯಂಕರವಾಗಿರುವ ಈ ಅಪೌಷ್ಟಿಕತೆಯ ಸಮಸ್ಯೆ ನಮ್ಮ ಗಮನವನ್ನು ಹೆಚ್ಚಾಗಿ ಸೆಳೆಯಬೇಕಲ್ಲವೇ?

ಬ್ರಿಟಿಷ್ ನೌಕಾವೈದ್ಯ ಡಾ. ಜೇಮ್ಸ್‌ ಲಂಡ್ 1747ರಲ್ಲಿ ಸಮುದ್ರಯಾನದಲ್ಲಿ ತಮ್ಮ ನಾವಿಕರ ವಸಡುಗಳ ಭಯಾನಕ ರಕ್ತಸ್ರಾವ ಮತ್ತು ಅಸ್ವಾಸ್ಥ್ಯವನ್ನು ಗಮನಿಸುತ್ತಾರೆ. ಇದಕ್ಕೆ ಕಾರಣ ಅವರು ಸೇವಿಸುವ ಬ್ರೆಡ್ ಮತ್ತು ಮಾಂಸ ಎಂದು ಭಾವಿಸುತ್ತಾರೆ. ತಮ್ಮ ನಾವಿಕರನ್ನು ಮೂರು ಗುಂಪುಗಳಾಗಿ ವಿಭಾಗಿಸಿ, ಒಂದನೇ ಗುಂಪಿಗೆ ಉಪ್ಪು ನೀರು, ಎರಡನೇ ಗುಂಪಿಗೆ ವಿನೆಗರ್ ಮತ್ತು ಮೂರನೇ ಗುಂಪಿಗೆ ನಿಂಬೆಯನ್ನು ಬಳಸಲು ಕೊಡುತ್ತಾರೆ. ನಿಂಬೆಹಣ್ಣನ್ನು ಬಳಸಿದ ನಾವಿಕರ ಆರೋಗ್ಯ ಮರುಕಳಿಸುವುದರೊಂದಿಗೆ ವಿಟಮಿನ್ ‘ಸಿ’ಯ ಆವಿಷ್ಕಾರವಾಗುತ್ತದೆ. ಬ್ರಿಟಿಷ್ ಸರ್ಕಾರ ನೌಕಾಯಾನದಲ್ಲಿ ತನ್ನ ಎಲ್ಲಾ ನಾವಿಕರು ಕಡ್ಡಾಯವಾಗಿ ತಮ್ಮೊಂದಿಗೆ ಸಿಟ್ರಸ್ ಅನ್ನು ತೆಗೆದುಕೊಂಡು ಹೋಗಬೇಕೆಂದು ಫರ್ಮಾನು ಹೊರಡಿಸಲು 264 ವರ್ಷಗಳೇ ಬೇಕಾಯಿತು. ಇದರಿಂದ, ನಾವು ಪೋಷಕಾಂಶಗಳಿಗೆ ಪ್ರಾಮುಖ್ಯ ನೀಡಿ ಪರಿಗಣಿಸಿದ ಗತಿಯನ್ನು ಊಹಿಸಬಹುದಲ್ಲವೇ?

ರೋಮ್‌ನಲ್ಲಿರುವ ಅಂತರರಾಷ್ಟ್ರೀಯ ಜೀವವೈವಿಧ್ಯ ಸ೦ಸ್ಥೆಯ ಪ್ರಕಾರ, ಪ್ರಪಂಚದಲ್ಲಿ ಯೋಗ್ಯವಾಗಿರುವ ಆಹಾರಧಾನ್ಯಗಳ ಪೈಕಿ ಬರೀ 200 ಜಾತಿಯ ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ವಿಪರ್ಯಾಸವೆಂದರೆ, ನಮ್ಮ ಆಹಾರದ ಪ್ರತಿಶತ 60 ಭಾಗವನ್ನು ಅಕ್ಕಿ, ಜೋಳ, ಗೋಧಿ, ರಾಗಿ ಮತ್ತು ಸೊರಗಮ್‌ನಂತಹ ಬರೀ 5 ಧಾನ್ಯಗಳು ಆಕ್ರಮಿಸುತ್ತವೆ. ಜನಾಂಗದಿಂದ ಜನಾಂಗಕ್ಕೆ ಆಹಾರದ ಆಯ್ಕೆಯ ದಾರಿಯನ್ನು ನಾವು ಕಿರಿದಾಗಿಸುತ್ತಾ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಹಾಗಾದರೆ ಈ ಪೋಷಕಾಂಶಗಳನ್ನು ಅನಾಯಾಸವಾಗಿ ದೇಹಕ್ಕೆ ಸೇರಿಸುವ ಪರಿ ಯಾವುದು?

ನಮ್ಮ ಪೂರ್ವಜರು ಪ್ರೀತಿಯಿಂದ ಬೆಳೆಸಿ ಬಳಸಿದ ಸಿರಿಧಾನ್ಯಗಳು ಇದಕ್ಕೆ ಉತ್ತರವಾಗಬಹುದು. ‘ಪವಾಡ ಧಾನ್ಯಗಳು’ ಅಥವಾ ‘ಭವಿಷ್ಯದ ಬೆಳೆಗಳು’ ಎಂದು ಕರೆಯಲಾಗುವ ಇವು, ಬರಡು ಭೂಮಿಯಲ್ಲಿ ಅನಾಯಾಸವಾಗಿ ಬೆಳೆದು ಆರ್ಥಿಕತೆ
ಯನ್ನು ಬೆಂಬಲಿಸುತ್ತವೆ. ಅರ್ಕ, ಊದಲು, ನವಣೆ, ಸಾಮೆ, ಕೊರ್ಲೆ ಮುಂತಾದವು ಜನಪ್ರಿಯ ಸಿರಿಧಾನ್ಯಗಳು. ಗ್ರಾನೊವಾ ನ್ಯಾಚುರಲ್ಸ್ ಇಂಡಿಯಾದ ಸಂಸ್ಥಾಪಕ, ಆಹಾರ ಸಂಶೋಧಕ ಮತ್ತು ವಿಜ್ಞಾನಿ ಶ್ರೀನಿವಾಸ ಕೆ. ರಾವ್, ಭಾರತದಲ್ಲಿ ಬೊಲಿವಿಯ ಮೂಲದ ಕಿನೊವಾ ಎಂಬ ಸಿರಿಧಾನ್ಯ ಬೆಳೆಯಲು ಮುಖ್ಯ ಪಾತ್ರ ವಹಿಸಿದರು.

ಆಹಾರ ಪದಾರ್ಥಗಳ ಆಯ್ಕೆಯನ್ನು ಶ್ರೇಷ್ಠ ಮತ್ತು ಕನಿಷ್ಠ ಎಂಬ ಅಳತೆ ಪಟ್ಟಿಯ ಮೂಲಕ ಮಾಡದೆ, ಕೇವಲ ಅವುಗಳ ಪೋಷಕಾಂಶಗಳನ್ನು ಅರಿತು ಆಯ್ಕೆ ಮಾಡಲು ನಮಗೆ ಸಹಾಯ ಮಾಡುವ ಅಪರೂಪದ ವೆಬ್‌ಸೈಟ್ ಫುಡ್-ಬಿ (https://foodb.ca/). ಇದು ಆಹಾರ ಪದಾರ್ಥಗಳ ರುಚಿ, ಬಣ್ಣ ಮತ್ತು ಸುವಾಸನೆಯ ಬಗ್ಗೆ ಸಮಗ್ರ ಮಾಹಿತಿ ನೀಡುವ ವಿಶ್ವದ ಅತ್ಯಂತ ದೊಡ್ಡ ಮತ್ತು ವ್ಯಾಪಕ ಡೇಟಾಬೇಸ್ ಸಂಪನ್ಮೂಲವಾಗಿದೆ. ಈ ಮಾಹಿತಿಯನ್ನು ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಲು, ಆಹಾರ ಕಂಪನಿಗಳು ಆಹಾರ ಘಟಕಗಳ ಲೇಬಲಿಂಗ್ ಮಾಡಲು, ನ್ಯೂಟ್ರಿಷನ್ ಕಂಪನಿಗಳಲ್ಲಿ, ಆರೋಗ್ಯ ಹಕ್ಕುಗಳಿಗಾಗಿ ಮತ್ತು ಗ್ರಾಹಕರಿಗೆ ಖರೀದಿಯಲ್ಲಿ ಸಹಾಯ ಮಾಡಲು ಬಳಸಲಾಗುತ್ತದೆ.

ಪೋಷಕಾಂಶಗಳು ಎಲ್ಲಾ ವರ್ಗದ, ಪ್ರದೇಶಗಳ ಜನರಿಗೆ ಸಮಗ್ರವಾಗಿ ತಲುಪಲು ಆರೋಗ್ಯ, ಕೃಷಿ ಮತ್ತು ಶಿಕ್ಷಣ ನೀತಿಗಳ ಮಹತ್ತರ ಪಾತ್ರವೂ ಜಂಟಿ ಪ್ರಯತ್ನವೂ ಅವಶ್ಯ. ಅನೇಕ ಬ್ರ್ಯಾಂಡ್‌ಗಳ ಬಗ್ಗೆ ಜನರನ್ನು ಮೆಚ್ಚಿಸಲು ಮು೦ದಾಗುವ ನಮ್ಮ ಸೆಲೆಬ್ರಿಟಿಗಳು ಪೋಷಕಾಂಶಗಳ ಜ್ಞಾನ ಪಸರಿಸುವಿಕೆಯಲ್ಲೂ ಭಾಗವಹಿಸಿದರೆ ಸಮಾಜಕ್ಕೆ ಅದು ದೊಡ್ಡ ಕೊಡುಗೆ
ಯಾಗುತ್ತದೆ.

ಗ್ರೀಕ್ ವೈದ್ಯ ಹಿಪೊಕ್ರಟೀಸ್‌ ಹೇಳಿದ೦ತೆ, ನಾವು ಆಹಾರವನ್ನು ಔಷಧಿಯೆ೦ದು ಭಾವಿಸಿದರೆ, ದಿನನಿತ್ಯ ಔಷಧವನ್ನು ಆಹಾರದ ಹಾಗೆ ಸೇವಿಸುವುದನ್ನು ತಪ್ಪಿಸಬಹುದು. ನಿಯಮಿತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿರುವ ಆಹಾರವು ಔಷಧಿಯೂ ಹೌದು ಅಮೃತವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT