ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಸಾಲದ ಭವಿಷ್ಯಕ್ಕೆ ಬುನಾದಿ

Last Updated 30 ಜೂನ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಕಿರುಸಾಲ ಅಥವಾ ಮೈಕ್ರೊ ಕ್ರೆಡಿಟ್‌ನ ಭವಿಷ್ಯವು ದೇಶವೊಂದರ ಇಡೀ ಆರ್ಥಿಕ ವ್ಯವಸ್ಥೆಯ ಭವಿಷ್ಯವನ್ನೇ ಪ್ರತಿಬಿಂಬಿಸುವ ಬಹುಮುಖ್ಯ ಸಂಗತಿವಾಗಿದೆ. ಭಾರತದಲ್ಲಿ ನಿಧಾನವಾಗಿ ವಿಸ್ತರಿಸಿಕೊಳ್ಳುತ್ತಿರುವ ಈ ವ್ಯವಸ್ಥೆಯು ಅದಕ್ಕಿರುವ ಹಲವಾರು ತೊಡಕುಗಳನ್ನು, ಸಂದೇಹಗಳನ್ನು ನಿವಾರಿಸಿಕೊಂಡು ಇನ್ನಷ್ಟೇ ಬೆಳೆಯುವ ಹಂತದಲ್ಲಿದೆ. ಇದು ಇಡೀ ಅನೌಪಚಾರಿಕ ಆರ್ಥಿಕ ವಲಯವನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿದೆ. ಅನೌಪಚಾರಿಕ ಆರ್ಥಿಕತೆಗೆ ಕಿರುಸಾಲದ ಹೊರತಾಗಿ ಬೇರೆ ಹಣಕಾಸು ನೆರವಿನ ಮೂಲಗಳು ಲಭ್ಯ ಇಲ್ಲ. ಔಪಚಾರಿಕ ಆರ್ಥಿಕ ವಲಯಗಳಲ್ಲಿ ದುಡಿಯುವವರಿಗೂ ಮನೆ ಸಾಲ, ಶಿಕ್ಷಣ ಹಾಗೂ ವಿಮೆಯಂತಹ ಸೌಲಭ್ಯಗಳನ್ನು ಒದಗಿಸುವ ಮಟ್ಟಿಗೆ ಮೈಕ್ರೊ ಕ್ರೆಡಿಟ್ ಕ್ಷೇತ್ರದ ವಿಸ್ತರಣೆಯಾಗಬೇಕಾಗಿದೆ.

ಹಣಕಾಸಿನ ಅನುಕೂಲಗಳು ಹೇರಳವಾಗಿದ್ದಾಗ ಮತ್ತು ಸುಲಭವಾಗಿ ಲಭ್ಯವಿರುವಾಗ ಜನರ ಜೀವನ ವಿಧಾನವನ್ನು ಪವಾಡಸದೃಶ ರೀತಿಯಲ್ಲಿ ಬದಲಾಯಿಸಿ ಬಿಡಬಹುದು. ಮುಖ್ಯವಾಹಿನಿಯ ಆರ್ಥಿಕ ವ್ಯವಸ್ಥೆಯು ಸಂಪತ್ತನ್ನು ಕ್ರೋಡೀಕರಿಸುವ ವಾಹಕವಾಗಿ ಬದಲಾಗಿಬಿಟ್ಟಿದೆ. ಹೆಚ್ಚು ಸ್ಥಿತಿವಂತರಾಗಿರುವ ವರ್ಗದವರಿಗೇನೇ ಪುನಃ ಆರ್ಥಿಕ ಅನುಕೂಲತೆ ಒದಗಿಸುವ ಕೆಲಸವನ್ನು ಮುಖ್ಯವಾಹಿನಿ ಮಾಡುತ್ತದೆ. ಅದರ ಅಗತ್ಯ ಇರುವವರಿಗೆ, ಅರ್ಥಿಕ ಅನುಕೂಲಗಳು ಇಲ್ಲದವರಿಗೆ ಅದು ನೆರವಾಗುವುದಿಲ್ಲ. ಮುಖ್ಯವಾಗಿ, ಹಣದ ಅಗತ್ಯವಿರುವವರನ್ನು ಅದು ತಲುಪುವುದೇ ಇಲ್ಲ.

ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕ್ ಸೃಷ್ಟಿಯಾಗಿದ್ದೇ ಮುಖ್ಯವಾಹಿನಿಯ ಇಂತಹ ವ್ಯವಸ್ಥೆಗೆ ಸವಾಲು ಹಾಕಲು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಹಾಗೆ ಜನರು ಸಾಲಪಡೆಯಲು ಅರ್ಹರೋ ಅಲ್ಲವೋ ಎಂಬುದು ಸಮಸ್ಯೆಯಲ್ಲ. ಜನರ ವಿಶ್ವಾಸಕ್ಕೆ ತಕ್ಕ ಬ್ಯಾಂಕುಗಳು ಇವೆಯೇ ಎಂಬುದೇ ಮುಖ್ಯ ಸಮಸ್ಯೆಯಾಗಿದೆ ಎನ್ನುವ ವಾಸ್ತವವನ್ನು ಗ್ರಾಮೀಣ್ ಬ್ಯಾಂಕ್ ಮನದಟ್ಟು ಮಾಡಿಕೊಟ್ಟಿತು.

ಅದಕ್ಕೆಂದೇ ಅದು ಬ್ಯಾಂಕಿಂಗ್‌ ಜಗತ್ತಿನ ಎಲ್ಲ ಶಿಷ್ಟಾಚಾರಗಳನ್ನು ಹಿಂದಿಕ್ಕಿ, ಹೊಸದೇ ಆದ, ದಿಟ್ಟನಡೆಯ ಹಣಕಾಸಿನ ವ್ಯವಸ್ಥೆ ಹುಟ್ಟುಹಾಕಿತು. ಸಹಜ ಬ್ಯಾಂಕುಗಳ ಎಲ್ಲ ಬಗೆಯ ನಿಯಮ, ಲಕ್ಷಣಗಳನ್ನು ಬದಿಗೊತ್ತಿ ಅದು ತನ್ನದೇ ಮಾರ್ಗಗಳನ್ನು ಅನುಸರಿಸಿತು. ಇದನ್ನೇ ಮೈಕ್ರೊ ಕ್ರೆಡಿಟ್ ಅಥವಾ ಮೈಕ್ರೊ ಫೈನಾನ್ಸ್ ಎನ್ನಲಾಗುತ್ತದೆ.

ಪ್ರೊ. ಮೊಹಮದ್ ಯೂನಸ್

ಭಾರತವು ಈ ಪರಿಕಲ್ಪನೆಯನ್ನು ಅಳವಡಿಸಿಕೊಂಡು, ಅದನ್ನು ವಿಶ್ವದ ಅತಿದೊಡ್ಡ ಮೈಕ್ರೊಕ್ರೆಡಿಟ್ ಯೋಜನೆಯನ್ನಾಗಿ ವಿಸ್ತರಿಸಿತು. ಆದರೆ, ಅದು ಎರಡು ಸಂಗತಿಗಳನ್ನು ಕೈಬಿಟ್ಟಿತು.

1. ಠೇವಣಿಗಳನ್ನು ತೆಗೆದುಕೊಳ್ಳುವುದು ಹಾಗೂ ಅದನ್ನೊಂದು ಸಾಮಾಜಿಕ ಉದ್ಯಮವಾಗಿ ನಡೆಸದೆ ಇದ್ದದ್ದು. ಅಂದರೆ ಯಾವುದೇ ವೈಯಕ್ತಿಕ ಲಾಭದ ನಿರೀಕ್ಷೆಗಳ ಉದ್ದೇಶವಿರದೆ ನಡೆಸಬಹುದಾದ ಉದ್ದಿಮೆ. ಪ್ರಸ್ತುತ ಸನ್ನಿವೇಶವು ಈ ಎರಡೂ ಸಂಗತಿಗಳನ್ನು ಭಾರತದ ಮೈಕ್ರೊ ಕ್ರೆಡಿಟ್ ಜಗತ್ತಿಗೆ ಸೇರಿಸಲು ಸಕಾಲವಾಗಿದೆ.

ಕೊರೋನಾ ಬಿಕ್ಕಟ್ಟು ಹೊಸ ಪ್ರಶ್ನೆ ಹುಟ್ಟುಹಾಕಿದೆ. ಭಾರತದ ಮೈಕ್ರೊ ಕ್ರೆಡಿಟ್ ವ್ಯವಸ್ಥೆ ಈ ಬಿಕ್ಕಟ್ಟಿನ ಸಮಯವನ್ನು ಎದುರಿಸುವಷ್ಟು ಸಶಕ್ತವಾಗಿದೆಯೇ. ಬಾಂಗ್ಲಾದೇಶದಲ್ಲಿನ ನಮ್ಮ ಅನುಭವವನ್ನು ಗಮನಿಸಿ ಹೇಳುವುದಾದರೆ, ಭಾರತದ ಪ್ರತಿಕ್ರಿಯೆ ಖಚಿತವಾಗಿಯೂ 'ಹೌದು' ಎಂಬುದೇ ಆಗಿದೆ. ಪ್ರಾಕೃತಿಕ ವಿಪತ್ತುಗಳನ್ನು ಎದುರಿಸುವುದು ಮೈಕ್ರೊ ಕ್ರೆಡಿಟ್‌ನ ಅವಿಭಾಜ್ಯ ಅಂಗವೇನೋ ಎಂಬಂತಾಗಿದೆ. 'ಮೈಕ್ರೊಕ್ರೆಡಿಟ್ ಜನರ ಬಗ್ಗೆಯೇ ಹೊರತು ಹಣದ ಬಗ್ಗೆ ಅಲ್ಲ' ಎಂಬುದನ್ನು ಗ್ರಾಮೀಣ್ ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ಅರ್ಥಮಾಡಿಸಿಕೊಟ್ಟಿತು. ಹಣ ಎಂಬುದು ಅವರವರ ಬದುಕುಗಳಿಗಾಗಿ ಹೋರಾಡುವ ಅವಕಾಶವನ್ನು ಕಲ್ಪಿಸುವ ಒಂದು ಸಾಧನ ಎಂಬುದನ್ನು ನಾವು ಮೊದಲು ನೆನಪಿಡಬೇಕು.

'ಅನೌಪಚಾರಿಕ ವಲಯ'ದ ಕುರಿತು ಜನರಿಗಿದ್ದ ಅಸಹಾಯಕತೆಯ ಭಾವವನ್ನು ಕೊರೋನಾ ಬಿಕ್ಕಟ್ಟು ತೆರೆದಿಟ್ಟದ್ದು ಮತ್ತೊಂದು ಸಂಗತಿ. ಭಾರತದ ಅತಿ ದೊಡ್ಡ ಶ್ರಮಿಕ / ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವವರು ಈ ಜನರೇ. ಹಠಾತ್ ಕೋವಿಡ್ ಆಕ್ರಮಣದಿಂದಾಗಿ ದಿನಗೂಲಿ ಕಾರ್ಮಿಕ ವರ್ಗದ ಅಸ್ತಿತ್ವವೇ ಇಲ್ಲದಂತಾಗಿದೆ. ಲಕ್ಷಗಟ್ಟಲೆ ಕಾರ್ಮಿಕರು, ಕೆಲಸಗಾರರು ಸಾವಿರಾರು ಮೈಲಿ ನಡೆದುಕೊಂಡೇ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳಬೇಕಾಯಿತು.

ಕಿರು ಮತ್ತು ಸಣ್ಣ ಉದ್ಯಮಿಗಳು ಎಷ್ಟೆಲ್ಲ ಕಷ್ಟನಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಕೋವಿಡ್-19 ಅನಾವರಣಗೊಳಿಸಿತು. ಮೈಕ್ರೊ ಉದ್ಯಮ ವಲಯಕ್ಕೆ ಅತ್ಯಂತ ತುರ್ತಾಗಿ ಸಂಪೂರ್ಣ ಅಕಾಡೆಮಿಕ್ ಮತ್ತು ರಾಜಕೀಯ ಮಾನ್ಯತೆ ನೀಡಲೇಬೇಕಾಗಿದೆ. ಆರ್ಥಿಕ ವ್ಯವಸ್ಥೆಯ ಪಿರಮಿಡ್ಡಿನ ಮೂಲವೇ ಮೈಕ್ರೊ ಉದ್ಯಮವಾಗಿದೆ. ಯಾವುದೇ ಉದ್ಯಮದ ಅವಿಭಾಜ್ಯ ಹಾಗೂ ಮುಂದುವರಿಕೆಯ ಭಾಗವಾಗಿ ಅದನ್ನು ನೋಡಬೇಕೇ ಹೊರತು ಕಳಚಿಕೊಂಡು ಹೋಗುವ ಬಿಡಿಭಾಗವನ್ನಾಗಿ ಅಲ್ಲ.

ಒಂದುವೇಳೆ ಸಮಾಜೋದ್ಯಮ ಘಟಕಗಳು ನಡೆಸುವ ಕಿರುಸಾಲ ವ್ಯವಸ್ಥೆಯುಳ್ಳ ಬ್ಯಾಂಕುಗಳ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದೆ ಆದರೆ, ಇಡೀ ಮೈಕ್ರೊ ಕ್ರೆಡಿಟ್ ಕ್ಷೇತ್ರವನ್ನು ಅದ್ಭುತವಾಗಿ ಬೆಳೆಸಬಹುದು. ಆಯಾ ರಾಜ್ಯಗಳ ಎಲ್ಲಾ ಪ್ರಮುಖ ಬ್ಯಾಂಕುಗಳು ಈ ಸಮಾಜೋದ್ಯಮ ಘಟಕಗಳು ನಡೆಸುವ ಕಿರುಸಾಲ ವ್ಯವಸ್ಥೆಯುಳ್ಳ ಬ್ಯಾಂಕುಗಳನ್ನು ತಮ್ಮ ಉಪವಿಭಾಗಗಳಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಅವುಗಳ ಸ್ಥಾಪನೆಗೆ ರಿಸರ್ವ್ ಬ್ಯಾಂಕ್ ಪ್ರೋತ್ಸಾಹ ನೀಡಿದ್ದೆ ಆದರೆ ಒಳ್ಳೆಯ ಬೆಳವಣಿಗೆ ನಿರೀಕ್ಷಿಸಬಹುದು.

ಮೈಕ್ರೊ ಕ್ರೆಡಿಟ್ ಉದ್ಯಮಿಗಳಿಗೆ ಸಮಾಜೋದ್ಯಮ ಕಿರುಸಾಲ ಬ್ಯಾಂಕುಗಳು ನೀಡುವ ಸಹಕಾರದ ಜೊತೆಗೆ ಅವರಿಗೆಂದೇ ವಿಶೇಷವಾಗಿ ರಚನೆಗೊಂಡ ಸಮಾಜೋದ್ಯಮವನ್ನು ಬೆಳೆಸುವ ಉದ್ದೇಶದಿಂದ ಕ್ಯಾಪಿಟಲ್ ಹೂಡಿಕೆ ಮಾಡಬಹುದಾದ ಹಣಕಾಸು ಸೌಲಭ್ಯ, ಸಮಾಜೋದ್ಯಮ ಹೂಡಿಕೆ ಹಣ, ಸಮಾಜೋದ್ಯಮ ವಿಮಾ ಸೌಲಭ್ಯ, ಇತ್ಯಾದಿ ಅನುಕೂಲಗಳನ್ನು ಒದಗಿಸಿದರೆ, ಮೈಕ್ರೊ ಕ್ರೆಡಿಟ್ ವ್ಯವಸ್ಥೆ ಬೆಳೆದು, ಯಶಸ್ಸು ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನ ಮಾಡಬಹುದು.

ಮೈಕ್ರೊ ಕ್ರೆಡಿಟ್ ಉದ್ಯಮಿಗಳ ಉದ್ಯಮಶೀಲತೆಯನ್ನು ಬೆಳೆಸಿ, ಒಂದು ಸುವ್ಯವಸ್ಥಿತವಾದ, ಸಮರ್ಥ ಮೈತ್ರಿಭಾವದ ನಿರ್ವಹಣೆಯಡಿಯಲ್ಲಿ, ಹಂತಹಂತವಾಗಿ ಬೆಳೆಸುವ, ಮುನ್ನಡೆಸುವ ಕೆಲಸವನ್ನು ಮಾಡಬೇಕಾಗಿದೆ. ಔಪಚಾರಿಕ ವ್ಯಾಪಾರ ವಹಿವಾಟುಗಳನ್ನು ನಡೆಸುವ ಉದ್ಯಮಿಗಳಿಗಾಗಿ ರಚಿಸಲಾಗಿರುವ ಕಾನೂನು ಹಾಗೂ ನಿಯಮಾವಳಿಗಳನ್ನು ಎದುರಿಸಿ, ನಿರ್ವಹಿಸಲು ಸಾಧ್ಯವಾಗದೇ ಹೆಚ್ಚಿನ ಮೈಕ್ರೊ ಕ್ರೆಡಿಟ್ ಉದ್ಯಮಿಗಳು ಮಾರುಕಟ್ಟೆಯಿಂದಲೇ ನಿರ್ಗಮಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಹೊಂದುವ ರೀತಿಯಲ್ಲಿ, ಸೂಕ್ತವಾದ ನಿಯಮ ಹಾಗೂ ಕಾನೂನುಗಳನ್ನು ರಚಿಸಿ, ಅವರೂ ಸಹ ಇತರ ಉದ್ಯಮಿಗಳಂತೆ ವ್ಯವಹಾರ ನಡೆಸಲು, ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಹೋಗಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವೂ ಕ್ರಮಕೈಗೊಳ್ಳುವಂತಾಗಬೇಕು.

ಮೈಕ್ರೊ ಕ್ರೆಡಿಟ್ ಉದ್ಯಮಿಗಳಿಗೆ ಪೂರಕವಾದ ರೀತಿಯಲ್ಲಿ ನಿಯಮಾವಳಿಗಳನ್ನು ರಚಿಸುವುದರ ಜೊತೆಗೆ ಒಂದು ಪ್ರತ್ಯೇಕ ಸರ್ಕಾರಿ ವ್ಯವಸ್ಥೆಯನ್ನು ಮಾಡಿ, ಇತರೆ ಸರ್ಕಾರಿ ಏಜೆನ್ಸಿಗಳ ಜೊತೆಗೆ ವ್ಯವಹರಿಸುವುದರ ಪ್ರಾಥಮಿಕ ಅಂಶಗಳನ್ನು ಹೇಳಿಕೊಡುವ ಅನುಕೂಲ ಕಲ್ಪಿಸಿಕೊಡುವುದು ಉತ್ತಮ. ಹೀಗೆ ಸಹಾಯ ಒದಗಿಸುವ ಏಜೆನ್ಸಿಯನ್ನು 'ಮೈಕ್ರೊ ಉದ್ಯಮ ಸಹಕಾರ ಸಂಘ' ಎಂಬ ಹೆಸರಿನಿಂದ ಗುರುತಿಸಿ, ಅವರ ಸೇವೆ ಪೂರ್ತಿಯಾಗಿ ಮೈಕ್ರೊ ಕ್ರೆಡಿಟ್ ಉದ್ಯಮಿಗಳಿಗೆ ಮಾತ್ರ ಲಭ್ಯವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಎದುರಾಗುವ ಹಕ್ಕು, ನೀತಿ-ನಿಯಮಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅವರು ಈ ಏಜೆನ್ಸಿಯ ಮುಖಾಂತರ ಸೂಕ್ತವಾಗಿ ಬಗೆಹರಿಸಿಕೊಳ್ಳುವ ಪದ್ಧತಿ ಇರಬೇಕು.

ಈ ಏಜೆನ್ಸಿಯು ಮೈಕ್ರೊ ಕ್ರೆಡಿಟ್ ಉದ್ಯಮಿಗಳ ಇಂತಹ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅವುಗಳನ್ನು ಯೋಗ್ಯ ರೀತಿಯಲ್ಲಿ ಬಗೆಹರಿಸುವ, ಪರಿಹಾರ ನೀಡುವ ಚಟುವಟಿಕೆಗಳನ್ನು ಮಾಡಬೇಕು. ಏಜೆನ್ಸಿಯ ಉದ್ಯೋಗಿಗಳು, ಮೈಕ್ರೊ ಕ್ರೆಡಿಟ್ ಉದ್ಯಮಿಗಳನ್ನು ಸ್ನೇಹಿತರಂತೆಯೇ ಭಾವಿಸಿ, ಅವರ ಎಲ್ಲಾ ಸಮಸ್ಯೆಗಳನ್ನು, ದೂರು-ದುಮ್ಮಾನಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸುವ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಏಜೆನ್ಸಿಯ ಉದ್ಯೋಗಿಗಳು ಒಂದು ರೀತಿಯಲ್ಲಿ ಮೈಕ್ರೊ ಕ್ರೆಡಿಟ್ ಉದ್ಯಮಿಗಳನ್ನು ಸರ್ಕಾರದೊಂದಿಗೆ ಹಾಗೂ ಸರ್ಕಾರವನ್ನು ಮೈಕ್ರೊ ಕ್ರೆಡಿಟ್ ಉದ್ಯಮಿಗಳೊಂದಿಗೆ ಪರಸ್ಪರ ಸೌಹಾರ್ದಯುತವಾಗಿ ಜೋಡಿಸಿ, ವ್ಯವಹರಿಸುವ ಮೂಲಕ ಅವುಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಹಾಗಾದಾಗ, ಯಾವುದೇ ಸಮಸ್ಯೆಗಳೂ ಉಂಟಾಗಲು ಸಾಧ್ಯವೇ ಇಲ್ಲ. ಮೈಕ್ರೊ ಕ್ರೆಡಿಟ್ ಉದ್ಯಮ ಯಶಸ್ಸು ಸಾಧಿಸಲು ಈ ಎಲ್ಲಾ ಅಂಶಗಳು ಪೂರಕವಾಗಿ ಕೆಲಸ ಮಾಡುತ್ತವೆ.

ಕ್ರಮೇಣ, ಈ ಎಲ್ಲಾ ವ್ಯಾವಹಾರಿಕ ಪದ್ಧತಿಗಳನ್ನು, ನೀತಿ-ನಿಯಮಾವಳಿಗಳನ್ನು ಅನುಸರಿಸುವುದು ಸಾಧ್ಯವಾದಾಗ, ಮೈಕ್ರೊ ಕ್ರೆಡಿಟ್ ಉದ್ಯಮಿಗಳು ತಮ್ಮದೇ ಪ್ರತ್ಯೇಕವಾದ ವಾಣಿಜ್ಯೋದ್ಯಮ ಸಂಘ ರಚಿಸಿಕೊಳ್ಳಬಹುದು. ಆ ಮೂಲಕ, ಅವರದೇ ವಲಯದ ಆಸಕ್ತಿಗಳನ್ನು ಪ್ರತಿನಿಧಿಸುವ, ಸರ್ಕಾರದ ಜೊತೆಗೆ, ಇತರೆ ಆರ್ಥಿಕ ಸಂಸ್ಥೆಗಳ ಜೊತೆಗೆ ವ್ಯಾವಹಾರಿಕ ಸಂಗತಿಗಳನ್ನು ಚರ್ಚಿಸುವ ಹಾಗೂ ಸರ್ಕಾರದ ಎಲ್ಲಾ ಹಂತಗಳ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸುವ ಚಟುವಟಿಕೆಗಳಲ್ಲಿ ಅವರು ಕೂಡಾ ಪಾಲ್ಗೊಳ್ಳಬಹುದು.

ಮೈಕ್ರೊ ಕ್ರೆಡಿಟ್ ಉದ್ಯಮಗಳಿಗೆಂದೇ ಮೀಸಲಾದ ಪ್ರತ್ಯೇಕ ಮಂತ್ರಿಮಂಡಳ ಅಥವಾ ಇಲಾಖೆಯನ್ನು ಸ್ಥಾಪಿಸುವುದು ತುಂಬಾ ಮುಖ್ಯವಾಗಿದೆ. ಹಾಗೆ ನೋಡಿದರೆ ಈ ವರ್ಗ ಇಡೀ ದೇಶದ ಆರ್ಥಿಕತೆಯ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಪ್ರತಿನಿಧಿಸುತ್ತಿರುವುದರಿಂದ ಈ ಎಲ್ಲಾ ಅನುಕೂಲಗಳನ್ನ ಒದಗಿಸಿ ಕೊಡುವುದು ಸೂಕ್ತ ಹಾಗೂ ಸಮಂಜಸ ನಡೆಯಾದೀತು.

ಈ ರೀತಿಯ ಪ್ರತ್ಯೇಕ ಮೈಕ್ರೊ ಕ್ರೆಡಿಟ್ ಇಲಾಖೆಯನ್ನು ಸ್ಥಾಪಿಸುವುದು ಗ್ರಾಮೀಣ ಆರ್ಥಿಕತೆಯನ್ನು ಒಂದು ಪರ್ಯಾಯ ಆರ್ಥಿಕ ವ್ಯವಸ್ಥೆಯನ್ನಾಗಿ ನಿರ್ಮಿಸಲು ಸಹಕಾರಿಯಾಗುತ್ತದೆ. ಜನರು ತಮ್ಮ ಊರುಗಳನ್ನು ತೊರೆದು, ಊರಿಂದೂರಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವ ಪ್ರಮಾಣವನ್ನು ತಗ್ಗಿಸಿ, ಗ್ರಾಮೀಣ ಆರ್ಥಿಕತೆಯ ಪರಿಸರದಲ್ಲಿ ಸುಧಾರಣೆ ತರಲು ಅನುಕೂಲವಾಗುತ್ತದೆ. ಹೆಚ್ಚು ಹೆಚ್ಚು ಮಹಿಳೆಯರು ಹಾಗೂ ನಿರ್ಲಕ್ಷಿತ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಸೇರಿಕೊಂಡು, ಅವರನ್ನು ಒಗ್ಗೂಡಿಸಿ ಕೆಲಸ ಮಾಡಿಸಲು ಸಾಧ್ಯವಾಗುತ್ತದೆ.

ಮೈಕ್ರೊ ಕ್ರೆಡಿಟ್ ಉದ್ಯಮ ಸಾಧಿಸುವುದು ಬಹಳಷ್ಟಿದೆ. ಅದರ ಪಾತ್ರ, ಹೊಣೆಗಾರಿಕೆ ಬಹಳ ವ್ಯಾಪಕವಾಗಿದೆ. ಅದೆಲ್ಲವನ್ನೂ ಈಡೇರಿಸುವ ವೇದಿಕೆಯನ್ನು ಒದಗಿಸಿಕೊಡುವುದಕ್ಕೆ ಇದು, ಅಂದರೆ ಈ ಕೊರೋನಾ ಬಿಕ್ಕಟ್ಟಿನ ಕಾಲ ಅತ್ಯಂತ ಸೂಕ್ತವಾದುದಾಗಿದೆ. ಎಲ್ಲಾ ರೀತಿಯ ಸಾಂಸ್ಥಿಕ ಸವಾಲುಗಳನ್ನು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಿದ್ಧರಾಗುವುದಕ್ಕೆ ಕೂಡ ಇದೊಂದು ಸುಸಮಯ.

ಕಿರು ಹಣಕಾಸು ವಲಯದ ಆಶಯಗಳು

* ಮೈಕ್ರೊ ಉದ್ಯಮ ವಲಯಕ್ಕೆ ಅಕಾಡೆಮಿಕ್ ಮತ್ತು ರಾಜಕೀಯ ಮಾನ್ಯತೆ ಅಗತ್ಯ

* ಕಿರು ಸಾಲ / ಹಣಕಾಸು ವ್ಯವಸ್ಥೆ ಬೆಳೆಯಲು ದೇಶದಲ್ಲಿ ವಿಪುಲ ಅವಕಾಶ

* ಮೈಕ್ರೊ ಉದ್ಯಮ ಸಹಕಾರ ಸಂಘ ಸ್ಥಾಪನೆಗೆ ಆದ್ಯತೆ ಸಿಗಲಿ

* ಮೈಕ್ರೊ ಕ್ರೆಡಿಟ್ ಉದ್ಯಮಿಗಳ ಪ್ರತ್ಯೇಕ

* ವಾಣಿಜ್ಯೋದ್ಯಮ ಸಂಘದ ಸ್ಥಾಪನೆಗೊಳ್ಳಲಿ

* ಮೈಕ್ರೊ ಕ್ರೆಡಿಟ್ ಇಲಾಖೆ ಅಸ್ತಿತ್ವಕ್ಕೆ ಬರಲಿ

(ಲೇಖಕ: ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕ್‌ನ ಸಂಸ್ಥಾಪಕರು ಹಾಗೂ ನೊಬೆಲ್ ಶಾಂತಿ ಪುರಸ್ಕೃತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT