ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಸರ್ಕಾರಿ ಶಾಲೆ ಮಾದರಿಯಾಗಿ ರೂಪುಗೊಂಡಿದೆ. ಶಾಲಾ ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ನಿರ್ವಹಣೆಯೂ ಅಚ್ಚುಕಟ್ಟಾಗಿದೆ.
ಗ್ರಾಮದವರೇ ಆಗಿರುವ ನಿವೃತ್ತ ಎಂಜಿನಿಯರ್ ನಾ. ತಿಪ್ಪೇಸ್ವಾಮಿ ಕಾಳಜಿಯಿಂದ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಅಭಿವೃದ್ಧಿ ಹೊಂದಿದೆ. ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಆರು ವರ್ಷದ ಹಿಂದೆಯೇ ‘ಎಲ್ ಆ್ಯಂಡ್ ಟಿ’ ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. 500 ಲೀಟರ್ ಸಾಮರ್ಥ್ಯದ ಈ ಘಟಕದ ನೀರು, ಕುಡಿಯಲು ಹಾಗೂ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ.
500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಆರು ಶೌಚಾಲಯಗಳಿವೆ. ಸಮರ್ಪಕ ನಿರ್ವಹಣೆಯಿಂದ ಬಳಕೆಗೆ ಯೋಗ್ಯವಾಗಿ ಉಳಿದಿವೆ. ನೀರು ಪೂರೈಕೆಗೆ ಕೊಳವೆಬಾವಿ ಸೌಲಭ್ಯವಿದೆ. ಇನ್ಫೋಸಿಸ್ ಕೂಡ ಅನುದಾನ ನೀಡಿ ಶಾಲೆಯ ಅಭಿವೃದ್ಧಿಗೆ ನೆರವಾಗಿದೆ. ಮೂಲಸೌಲಭ್ಯಗಳಿರುವ ಕಾರಣಕ್ಕೆ ಇದೀಗ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಆಗಿ ಪರಿವರ್ತನೆಯಾಗಿದೆ. ಕಳೆದ ವರ್ಷ ಪಿಯು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲಾಗಿತ್ತು.
‘ಮಾದರಿ’ ಆನೆಗದ್ದೆ ಸರ್ಕಾರಿ ಶಾಲೆ
ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಆನೆಗದ್ದೆ ರಸ್ತೆಯ ಸರ್ಕಾರಿ ಶಾಲೆಯನ್ನು ಅಲ್ಲಿನ ಶಿಕ್ಷಕ ಅವಿನಾಶ್ ಮತ್ತು ಅವರ ತಂಡ ಮಾದರಿಯನ್ನಾಗಿಸಿದೆ.
ದಾನಿಗಳ ನೆರವು ಪಡೆದು ಬಾಲಕ–ಬಾಲಕಿಯರಿಗೆ ಶೌಚಾಲಯ ನಿರ್ಮಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಮೂರು ಕಿಲೊಮೀಟರ್ ದೂರದ ಗ್ರಾಮ ಪಂಚಾಯಿತಿಯ ಟ್ಯಾಂಕ್ನಿಂದ ಪೈಪ್ಲೈನ್ ಹಾಕಿಸಿ ನೀರಿನ ಕೊರತೆ ನೀಗಿಸಲಾಗಿದೆ.
ಶೌಚಾಲಯ ಸ್ವಚ್ಛತೆಗೆ 4 ಸಿಬ್ಬಂದಿ!
ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ 2015-16ರಲ್ಲಿ ಮುಚ್ಚುವ ಭೀತಿ ಎದುರಿಸಿದ್ದ ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಗ ಪ್ರತಿ ಸೀಟಿಗೂ ಬೇಡಿಕೆ. ಅಲ್ಲಿನ ಶಾಲೆ ಮಾತ್ರವಲ್ಲ, ಶೌಚಾಲಯವೂ ಸ್ವಚ್ಛ–ಸುಂದರವಾಗಿದ್ದು, ಮಾದರಿಯಾಗಿದೆ.
ಶಾಲೆಯನ್ನು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಸ್ವೀಕರಿಸಿದ್ದು, ದಾನಿಗಳ ನೆರವಿನಲ್ಲಿ ಅಭಿವೃದ್ಧಿ ಮಾಡಿದೆ. ಈ ಶಾಲೆಯಲ್ಲಿ ನೆಲ ಹಾಗೂ ಮೊದಲ ಮಹಡಿ ಇದ್ದು, ಎರಡೂ ಕಡೆಗಳಲ್ಲೂ ಪ್ರತ್ಯೇಕ ಶೌಚಾಲಯಗಳಿವೆ. ದಾನಿಗಳ ಮೂಲಕ ಸುಂದರ ಶೌಚಾಲಯ ನಿರ್ಮಿಸಿದ್ದು, ಸ್ವಚ್ಛತೆಗಾಗಿ ಇಬ್ಬರು ಹೆಚ್ಚುವರಿ ಆಯಾಗಳನ್ನು ಫ್ರೆಂಡ್ಸ್ ಕ್ಲಬ್ ನೇಮಕ ಮಾಡಿದೆ.
‘ನಾವು ಸ್ವಚ್ಛತೆಗಾಗಿಯೇ ನಾಲ್ವರು ಸಿಬ್ಬಂದಿಯನ್ನು ನೇಮಿಸಿದ್ದೇವೆ. ಈ ಪೈಕಿ ಇಬ್ಬರಿಗೆ ಶೌಚಾಲಯದ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ದಿನಕ್ಕೆ ನಾಲ್ಕು ಬಾರಿ ಪರಿಶೀಲಿಸಿ, ಸ್ವಚ್ಛತೆ ಕಾಪಾಡಬೇಕು’ ಎನ್ನುತ್ತಾರೆ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಕಾಶ್ ಅಂಚನ್.
* ಜನರ ಸಹಕಾರದಿಂದ ಶೌಚಾಲಯ ನಿರ್ಮಿಸಿದ್ದೇವೆ. ನೀರು ಲಭ್ಯವಿದ್ದು, ಕೈತೊಳೆಯಲು ಸೋಪು ಒದಗಿಸಿದ್ದೇವೆ. ಮಕ್ಕಳು ಮನೆಯಿಂದಲೇ ಕುಡಿಯುವ ನೀರು ತರುತ್ತಿದ್ದಾರೆ.
–ಓಬಳೇಶ್, ಎಸ್ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯಕನಹಟ್ಟಿ
* ಬಾಲಕಿಯರ ಸುರಕ್ಷತೆಗಾಗಿ ಮಲೆನಾಡಿನ ಶಾಲೆಗಳಿಗೆ ಶೌಚಾಲಯ ಅತ್ಯಗತ್ಯ. ಸರ್ಕಾರ ಕಡ್ಡಾಯಗೊಳಿಸುವ ಮೊದಲೇ ದಾನಿಗಳ ನೆರವಿನಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಿದ್ದೆವು.
–ಅನಿನಾಶ್, ಮುಖ್ಯ ಶಿಕ್ಷಕ, ಆನೆಗದ್ದೆ ಸರ್ಕಾರಿ ಶಾಲೆ, ಹೊಸನಗರ
(ಪೂರಕ ಮಾಹಿತಿ: ಬಸವರಾಜ ಸಂಪಳ್ಳಿ, ಸಿದ್ದು ಆರ್.ಜಿ.ಹಳ್ಳಿ, ಮನೋಜ್ಕುಮಾರ್ ಗುದ್ದಿ, ಇ.ಎಸ್.ಸುಧೀಂದ್ರಪ್ರಸಾದ್, ಶಶಿಕಾಂತ ಶೆಂಬಳ್ಳಿ, ಸತೀಶ ಬೆಳ್ಳಕ್ಕಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.