ಮಂಗಳೂರು: ‘ನೀರು ಶುದ್ಧೀಕರಣ ಘಟಕಗಳು ನಮಗೆ ಅಗತ್ಯವೇ ಇಲ್ಲ...’
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಹೇಳುವ ಮಾತಿದು. ಸರ್ಕಾರದ ಯೋಜನೆಯಡಿ ಜಿಲ್ಲೆಗೆ ಘಟಕಗಳನ್ನು ಮಂಜೂರು ಮಾಡಿದ್ದರೂ ಸದ್ಯ ಯಾವುದೇ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ದುರಸ್ತಿ ಮಾಡುವುದಕ್ಕೆ ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಮುಂದೆ ಬಂದಿಲ್ಲ.
ಯೋಜನೆ ಜಿಲ್ಲೆಗೆ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯವಿದ್ದರೂ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 102 ನೀರು ಶುದ್ಧೀಕರಣ ಘಟಕಗಳು ಮಂಜೂರಾಗಿವೆ. ಸದ್ಯಕ್ಕೆ ಬಹುತೇಕ ಘಟಕಗಳು ಬಳಕೆ ಇಲ್ಲದೇ ನಿರರ್ಥಕವಾಗಿವೆ. ಕರಾವಳಿ ಮತ್ತು ಮಲೆನಾಡಿನ ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ನಂತಹ ಅಂಶಗಳಿಲ್ಲ. ಜೊತೆಗೆ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಕೊಳವೆಬಾವಿಗಳ ಬದಲು ಬಾವಿಗಳನ್ನು ಅವಲಂಬಿಸುವುದು ಹೆಚ್ಚು.
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿಲ್ಲ. ಅದರಲ್ಲೂ ಶುದ್ಧ ನೀರಿಗೆ ಇಲ್ಲಿ ಬರವಿಲ್ಲ. ಆದರೆ, ಇರುವ ನೀರನ್ನು ಹಿಡಿದಿಟ್ಟುಕೊಳ್ಳುವುದೇ ಈಗಿರುವ ಸವಾಲು. ನದಿಯ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಲು ಸಾಲು ಯೋಜನೆಗಳನ್ನು ಮಂಜೂರು ಮಾಡುತ್ತಿದ್ದರೂ, ಅನುಷ್ಠಾನ ಮಾತ್ರ ಆಮೆಗತಿಯಲ್ಲಿಯೇ ಸಾಗುತ್ತಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮಾತ್ರ ತಕ್ಕಮಟ್ಟಿಗೆ ಫಲ ನೀಡಿವೆ. ಈ ಯೋಜನೆಯಡಿ ನದಿಯ ನೀರನ್ನು ಶುದ್ಧೀಕರಣ ಮಾಡಿ, ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಸರ್ಕಾರಗಳು ಬದಲಾದಂತೆ ಪಶ್ಚಿಮ ವಾಹಿನಿ ಯೋಜನೆಯ ಸ್ವರೂಪವೂ ಬದಲಾಗುತ್ತಿದೆ. ಇದೀಗ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ನೀರಿನ ಯೋಜನೆ ಮಾದರಿಯಲ್ಲಿಯೇ ಮೂಡುಬಿದಿರೆ, ಬಂಟ್ವಾಳ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ₹201 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ.
ಜಲಮೂಲಗಳು ಕಲುಷಿತ: ಕರಾವಳಿಯ ಜನರ ನೀರಿನ ಮೂಲವಾಗಿರುವ ನದಿಗಳು ಕಲುಷಿತವಾಗುತ್ತಿವೆ. ನದಿಗಳಿಗೆ ಕಾರ್ಖಾನೆಯ ತ್ಯಾಜ್ಯ, ಕಸ ಇತ್ಯಾದಿಗಳನ್ನು ಎಸೆಯಲಾಗುತ್ತಿದ್ದು. ಕೋಟ್ಯಂತರ ವೆಚ್ಚದ ಯೋಜನೆಗಳ ಬದಲು ಇರುವ ನೀರನ್ನು ಶುದ್ಧವಾಗಿ ಇಟ್ಟುಕೊಳ್ಳುವುದಕ್ಕೆ ಆದ್ಯತೆ ನೀಡುವುದು ಒಳಿತು ಎನ್ನುವುದು ಪರಿಸರವಾದಿಗಳ ಮಾತು.
****
ಕರಾವಳಿಯಲ್ಲಿ ವರ್ಷಕ್ಕೆ 375–400 ಸೆಂ.ಮೀ. ಮಳೆ
ನೇತ್ರಾವತಿ ನದಿಯಿಂದಲೇ 124 ಟಿಎಂಸಿ ಅಡಿ ನೀರು ಲಭ್ಯ
ನೀರು ಶುದ್ಧೀಕರಣ ಘಟಕ ಕರಾವಳಿಗೆ ಅಗತ್ಯವಿಲ್ಲ
ಇದನ್ನೂ ಓದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.