ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮರಳಬೇಕಿದೆ ಕಲಿಕೆಯ ಹಳಿಗೆ

ಕೋವಿಡ್ ನಂತರದ ತರಗತಿಯು ಸವಾಲಿನದ್ದಾಗಿರುವುದರಿಂದ ತರಗತಿಯ ವಾತಾವರಣವನ್ನು ಹೆಚ್ಚು ಚಲನಶೀಲವೂ ನಮ್ಯವೂ ಆಗುವಂತೆ ರೂಪಿಸಬೇಕಿದೆ
Last Updated 10 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೋವಿಡ್ ಕಾರಣದಿಂದ ವಿವಿಧ ಉದ್ಯಮಗಳಲ್ಲಿ ಉಂಟಾಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ಅನೇಕ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಭವಿಷ್ಯದ ಜನಾಂಗವನ್ನು ರೂಪಿಸುವ ಶಿಕ್ಷಣ ಕ್ಷೇತ್ರದಲ್ಲಿ ಉಂಟಾ ಗಿರುವ ಸಮಸ್ಯೆಯ ನಿವಾರಣೆಗಾಗಿ ರಾಜ್ಯದಲ್ಲಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೋವಿಡ್ ಕಾಲದ ಎರಡು ವರ್ಷಗಳಲ್ಲಿ ಬೋಧನಾ- ಕಲಿಕಾ ಚಟುವಟಿಕೆಗಳು ಆನ್‍ಲೈನ್ ಮೂಲಕ ಹೆಚ್ಚಿನ ಅವಧಿಯಲ್ಲಿ ಹಾಗೂ ಸ್ವಲ್ಪ ಕಾಲ ನೇರವಾಗಿ ನಡೆದಿದ್ದವು. ವಿದ್ಯಾರ್ಥಿಗಳಲ್ಲಿ ಕಲಿಕೆಯ ನಷ್ಟವು ತೀವ್ರ ಸ್ವರೂಪದಲ್ಲಿ ಆಗಿರುವುದನ್ನು ಅನೇಕ ಸಮೀಕ್ಷೆಗಳು ತಿಳಿಸಿವೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಕಲಿಕೆಯ ಹಳಿಗೆ ಮರಳಿಸುವ ಬಗೆ ಹೇಗೆ ಎಂಬುದು ತಿಳಿಯದೆ ಕಂಗಾಲಾಗಿದ್ದಾರೆ.

ಹೆಚ್ಚಿನ ಮಕ್ಕಳಲ್ಲಿ ಓದುವ, ಬರೆಯುವ ಅಭ್ಯಾಸ ತಪ್ಪಿಹೋಗಿದೆ. ಶಿಕ್ಷಕರು ಆನ್‍ಲೈನ್ ಮೂಲಕ ಪಾಠದ ಟಿಪ್ಪಣಿ, ವಿಡಿಯೊ ಕಳುಹಿಸುವ ಕಾರಣ ‘ನಾನು ಬರೆಯುವ ಅಗತ್ಯವಿದೆಯೇ? ಅದರಿಂದೇನು ಪ್ರಯೋಜನ?’ ಎಂಬಂಥ ಪ್ರಶ್ನೆಗಳನ್ನು ನಗರ ಪ್ರದೇಶದ ಅನೇಕ ಮಕ್ಕಳು ಕೇಳುತ್ತಿರುವುದು ಪೋಷಕರಲ್ಲಿ ಗಾಬರಿ, ಆತಂಕಗಳನ್ನು ಹೆಚ್ಚಿಸುತ್ತಿದೆ. ಇನ್ನು ಗ್ರಾಮೀಣ ಪ್ರದೇಶದ ಅವಕಾಶವಂಚಿತ ಮಕ್ಕಳಿಗೆ ಆನ್‍ಲೈನ್ ಮೂಲಕ ಕಲಿಯುವ ಸಂಪನ್ಮೂಲಗಳ ಅಲಭ್ಯತೆ ಮತ್ತು ಪೋಷಕರ ಶೈಕ್ಷಣಿಕ ಬೆಂಬಲವಿಲ್ಲದ ಕಾರಣ ಕಲಿಕಾ ಅಂತರ ಇನ್ನಷ್ಟು ಹೆಚ್ಚಾಗಿದೆ.

ಸಾಮಾನ್ಯವಾಗಿ ಬೇಸಿಗೆ ರಜೆಯ ಬಿಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಿರಬಹುದಾದ ಕಲಿಕಾ ನಷ್ಟವನ್ನು ಸರಿದೂಗಿಸಲು ಜೂನ್‌ನಲ್ಲಿ ಹಿಂದಿನ ತರಗತಿಯ ಮೂಲ ಕಲಿಕಾಂಶಗಳನ್ನು ಒಳಗೊಂಡಂತೆ ಸೇತುಬಂಧ ಕಾರ್ಯಕ್ರಮವನ್ನು ಮಾಡಲಾಗುತ್ತಿತ್ತು. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತೀವ್ರ ಸ್ವರೂಪದ ಕಲಿಕಾ ನಷ್ಟವನ್ನು ಸರಿದೂಗಿಸಲು ಒಂದು ತಿಂಗಳ ಸೇತುಬಂಧ ಪರಿಣಾಮಕಾರಿಯಾಗುವುದಿಲ್ಲ.

ಓದು, ಬರಹ, ಲೆಕ್ಕಾಚಾರದ ಮೂಲ ಕೌಶಲಗಳು ಮತ್ತು ಹಿಂದಿನ ಎರಡು ವರ್ಷಗಳ ಕಲಿಕೆಯ ಪ್ರಮುಖ ಅಂಶಗಳ ಜೊತೆ ಆಯಾ ತರಗತಿಯ ಕಲಿಕಾಂಶ ಗಳನ್ನು ಬೆಸೆದು ರಾಜ್ಯದಲ್ಲಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಕಲಿಕೆಯ ತೊಂದರೆಗಳನ್ನು ನಿವಾರಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಬಹಳಷ್ಟು ಸಮಯ ವಿನಿಯೋಗಿಸಿ ಇಡೀ ವರ್ಷ ಆರಾಮಾಗಿ ಕಲಿಯುವಂತೆ ಸಿದ್ಧಪಡಿಸಲಾಗಿದೆ. ಉದಾಹರಣೆಗಳು, ಚಿತ್ರಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹೊಂದಿದ ಕಲಿಕಾ ಹಾಳೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಪಠ್ಯದ ಮಾಹಿತಿ ಯನ್ನು ನೆನಪಿನಲ್ಲಿರಿಸಿಕೊಂಡು, ಪರೀಕ್ಷೆಯಲ್ಲಿ ಬರೆದು ‘ಯಶ’ ಸಾಧಿಸುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ರೂಪು ಗೊಂಡಿದೆ. ಆದರೆ ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಕಲಿಕಾಂಶಗಳನ್ನು ಮಾಹಿತಿಯ ರೂಪದಲ್ಲಿ ಕಲಿಸದೆ ಹಿಂದಿನ ತರಗತಿಗಳ ಕಲಿಕಾಂಶಗಳ ಜೊತೆ ಆಯಾ ತರಗತಿಯ ಕಲಿಕಾಂಶವನ್ನು ಸೇರಿಸಿಕೊಂಡು ವಿದ್ಯಾರ್ಥಿಗಳಲ್ಲಿ ಅನ್ವಯಿಕ ಕಲಿಕೆ ಆಗುವಂತೆ ಕಲಿಕಾ ಸಂಪನ್ಮೂಲಗಳನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, 7, 6 ಮತ್ತು 5ನೇ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿ ಕ್ರಮವಾಗಿ 15, 14 ಮತ್ತು 20 ಅಧ್ಯಾಯಗಳಿವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಯು ಮೂರೂ ತರಗತಿಗಳ ಗಣಿತ ಪಠ್ಯಪುಸ್ತಕಗಳ 49 ಅಧ್ಯಾಯ
ಗಳನ್ನು ಕಲಿಯಲು ಸಾಧ್ಯವಿಲ್ಲ. ಈ ಕಾರಣದಿಂದ ಮೂರೂ ತರಗತಿಗಳಲ್ಲಿನ ಸಾಮಾನ್ಯ ಪರಿಕಲ್ಪನೆಗಳನ್ನು ಬೆಸೆದು, ಗಣಿತದ ಮೂಲ ಕೌಶಲಗಳನ್ನು ಅನ್ವಯಿಕವಾಗಿ ಕಲಿಸುವ ಯೋಜನೆ ರೂಪಿಸಲಾಗಿದೆ.

ಈ ರೀತಿ ಆದಲ್ಲಿ 7ನೇ ತರಗತಿಯಲ್ಲಿನ ಎಲ್ಲಾ ಅಧ್ಯಾಯಗಳನ್ನು ವಿದ್ಯಾರ್ಥಿ ಕಲಿಯುವುದು ಹೇಗೆ ಎಂಬ ಪ್ರಶ್ನೆ ಸಹಜ. ಆಯಾ ತರಗತಿಯ ಪಠ್ಯಪುಸ್ತಕದ ಮಾಹಿತಿಯನ್ನು ಕಲಿಸಬೇಕೆಂದರೆ ಹಿಂದಿನ ತರಗತಿಗಳ ಮೂಲಪರಿಕಲ್ಪನೆಗಳ ಸ್ಪಷ್ಟತೆ ಇಲ್ಲದೆ ಯಾವುದನ್ನೂ ವಿದ್ಯಾರ್ಥಿ ಕಲಿಯಲಾರ. ಆಯಾ ತರಗತಿಗಳ ಪಠ್ಯಪುಸ್ತಕಗಳು ಪೂರಕ ಮತ್ತು ಹೆಚ್ಚುವರಿ ಸಂಪನ್ಮೂಲ
ಗಳಾಗಿ ವಿದ್ಯಾರ್ಥಿಗಳ ಉಪಯೋಗಕ್ಕೆ ಬರಲಿವೆ.

ಶಿಕ್ಷಕರ ಕೈಪಿಡಿ ಹಾಗೂ ಕಲಿಕಾ ಹಾಳೆಗಳನ್ನು ಮುದ್ರಿಸಿ, ವಿತರಿಸಲಾಗುತ್ತಿದೆ. ಕಲಿಕಾ ಚೇತರಿಕೆ ಕುರಿತು ಒಂದೂವರೆ ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಈ ವಿನೂತನ ಮತ್ತು ಬೃಹತ್ ಪ್ರಯೋಗವು ಕೇಂದ್ರದ ಗಮನ ಸೆಳೆದಿದ್ದು, ಈ ಮಾದರಿಯನ್ನು ಇತರ ರಾಜ್ಯಗಳೂ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ, ಚಿಂತನೆ ನಡೆದಿದೆ.

ಸಾಮಾನ್ಯವಾಗಿ ವಿವಿಧ ಕಲಿಕಾ ಹಂತಗಳು ಹಾಗೂ ವಿವಿಧ ಶೈಲಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಒಂದು ತರಗತಿಯಲ್ಲಿ ಇರುತ್ತಾರೆ. ಕೋವಿಡ್ ನಂತರದ ಸನ್ನಿವೇಶದಲ್ಲಿನ ತರಗತಿಯಲ್ಲಿ ಈ ವೈವಿಧ್ಯ ಇನ್ನಷ್ಟು ಹೆಚ್ಚಾಗಿರುವ ಕಾರಣ ಶಿಕ್ಷಕರ ಪಾತ್ರವು ಮತ್ತಷ್ಟು ಸವಾಲಿನದ್ದಾಗಿರಲಿದೆ. ಈ ಹಿನ್ನೆಲೆಯಲ್ಲಿ ತರಗತಿಯ ವಾತಾವರಣವು ಹೆಚ್ಚು ಚಲನಶೀಲವೂ ಮತ್ತು ನಮ್ಯವೂ ಆಗುವಂತೆ ರೂಪಿಸಬೇಕಿದೆ.

ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಕುರಿತಂತೆ ಆತುರ ತೋರದೆ ಅವರೆಡೆ ಪ್ರೀತಿ, ವಿಶ್ವಾಸ, ಅನುಭೂತಿ ತೋರಬೇಕು. ಪೋಷಕರೂ ಇದಕ್ಕೆ ಸಹಕರಿಸಬೇಕು. ವಿದ್ಯಾರ್ಥಿಗಳು ಕಲಿಕಾ ಚೇತರಿಕೆಯ ಹಾದಿಯಲ್ಲಿ ಸಾಗಲು ಶಿಕ್ಷಕರು ಮತ್ತು ಪೋಷಕರ ಜೊತೆ ಶಿಕ್ಷಣಾಸಕ್ತರು, ಸ್ವಯಂಸೇವಾ ಸಂಸ್ಥೆಗಳನ್ನೂ ತೊಡಗಿಸಿ ಕೊಂಡು, ಶಾಲೆಗಳು ಯೋಜಿಸಿ, ಕಾರ್ಯಪ್ರವೃತ್ತ ಆದಲ್ಲಿ ಪರಿಣಾಮಕಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT