ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳನ್ನು ವಿದುರನಂತೆ ಪೊರೆಯಬಲ್ಲೆವೇ?

Last Updated 15 ಫೆಬ್ರುವರಿ 2023, 8:07 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ತರಗತಿಯಲ್ಲಿ ಪಠ್ಯವೊಂದನ್ನು ಬೋಧಿಸುತ್ತಿದ್ದೆ. ಆ ಪಾಠವನ್ನು ಮೊದಲೊಮ್ಮೆ ಮಾಡಿದ್ದರೂ ಕಾರಣಾಂತರಗಳಿಂದ ಅನೇಕ ಮಂದಿ ಗೈರುಹಾಜರಾಗಿದ್ದರಿಂದ ಮಗದೊಮ್ಮೆ ಮಾಡುವಂತೆ ನನ್ನನ್ನು ಕೇಳಿಕೊಂಡಿದ್ದರು. ಈಗಾಗಲೇ ಆ ಪಾಠವನ್ನು ಕೇಳಿದ್ದವರಿಗೆ ಅಸಹನೆ. ‘ಮಿಸ್ ಬೇಡವೇ ಬೇಡ, ಆ ಕಥೆ ನಮಗರ್ಥವಾಗಿದೆ. ಪುನಃ ಕೇಳುವುದಕ್ಕೆ ನಮ್ಮಿಂದಾಗದು’ ಎಂದರು. ಹೇಳಿಕೇಳಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು. ಅವರು ಗಮನಹರಿಸ ಬೇಕಾದ ಮುಖ್ಯ ವಿಷಯಗಳ ಕಡೆಗಷ್ಟೇ ಆಸ್ಥೆ ತೋರುವವರು ವಿನಾ ಭಾಷೆಯ ಕುರಿತು ಅವರ ಆಸಕ್ತಿ ತೀರಾ ಕಡಿಮೆಯೇ. ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರ ಭಾಷಾ ತರಗತಿಗಳನ್ನು ಹಂಬಲಿಸಿಕೊಂಡು ನಮ್ಮ ನಿರೀಕ್ಷೆಯಲ್ಲಿರುತ್ತಾರೆ. ಮಕ್ಕಳು ಔದಾಸೀನ್ಯದ ರಾಗ ಎಳೆದಾಗ ಅವರಿಗೆ ಸಹಜವಾಗಿಯೇ ಭಾಷೆಯ ಮಹತ್ವವನ್ನೂ ಪುನರಾವರ್ತಿತ ಓದಿನ ಮಹತ್ವವನ್ನೂ ಹೇಳುತ್ತಾ ಇದ್ದೆ.

ಎಂಟು-ಹತ್ತು ವರ್ಷಗಳಿಂದ ಇದೇ ಪಾಠವನ್ನು ವರ್ಷದಲ್ಲಿ ಐದಾರು ತರಗತಿಗಳಿಗೆಂಬಂತೆ ಬೋಧಿಸು ತ್ತಿದ್ದರೂ ಉಪನ್ಯಾಸಕರಾದವರು ಪ್ರತಿಯೊಂದು ಸಲ ಬೋಧಿಸುವಾಗಲೂ ಅದೊಂದು ಹೊಸ ಪಠ್ಯ, ಹೊಸ ಓದು ಎಂಬಂತೆ ಲವಲವಿಕೆಯಿಂದ ಬೋಧಿಸುವುದರ ಕುರಿತು ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಯಕ್ಷಗಾನ ತಾಳಮದ್ದಳೆಗಳಲ್ಲಿ ಅದೇ ಪ್ರಸಂಗದ ಅದೇ ಪಾತ್ರವನ್ನು ನೂರಾರು ಸಲ ಅಭಿವ್ಯಕ್ತಗೊಳಿಸುವ ಕಲಾವಿದರು ನೂರೊಂದನೆಯ ಬಾರಿ ಪ್ರಸಂಗ ಸಾಹಿತ್ಯವನ್ನು ಓದುವಾಗ, ಅಲ್ಲೊಂದು ಹೊಸ ಹೊಳಹು ಮೂಡುವ ವಿಸ್ಮಯದ ಕುರಿತು ಅವರಿಗೆ ಹೇಳುವ ಉತ್ಸಾಹದಲ್ಲೂ ಇದ್ದೆ. ಒಟ್ಟಿನಲ್ಲಿ, ಪುನರಾವರ್ತಿತ ಓದು ನಮಗೆಷ್ಟು ಅಗತ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂಬುದು ನನ್ನ ಉದ್ದೇಶವಾಗಿತ್ತು.

ಅಷ್ಟರಲ್ಲಿ ವಿದ್ಯಾರ್ಥಿಯೊಬ್ಬ ಬಾಣ ಬಿಟ್ಟಂತೆ, ‘ನಾವು ನಿಮಗೆ ಅದಕ್ಕಾಗಿಯೇ ಸಂಬಳ ಕೊಡುತ್ತಿದ್ದೇವಲ್ಲ!’ ಎಂದ. ಅವಾಕ್ಕಾಗುವ ಸರದಿ ನನ್ನದಾಗಿತ್ತು. ‘ನೀವು ಸಂಬಳ ತೆಗೆದುಕೊಳ್ಳುವುದೇ ಅದಕ್ಕಾಗಿ’ ಎಂದು ಅವನು ಹೇಳಿದ್ದರೆ ಅರ್ಥ ಬೇರೆಯೇ ಇತ್ತು. ಆದರೆ ಅವನ ಪ್ರಕಾರ, ಉಪನ್ಯಾಸಕರಿಗೆ ಸಂಬಳ ಕೊಡುವುದು ವಿದ್ಯಾರ್ಥಿಗಳು ಕಟ್ಟಿದ ಫೀಸ್ ಮುಖೇನ ಆಗಿರುವುದರಿಂದ ವಿದ್ಯಾರ್ಥಿಗಳೇ ಸಂಬಳ ಕೊಟ್ಟಂತಾಯಿತು. ಎಂತಹ ತರ್ಕ?! ನನಗೆ ಆಸ್ಥಾನಕವಿಗಳು, ಆಸ್ಥಾನಕಲಾವಿದರ ನೆನಪಾಯಿತು. ಆದರೆ ಪಠ್ಯಬೋಧನೆಯನ್ನು ಬರೀ ಜೀವನೋಪಾಯವೆಂದು ಗ್ರಹಿಸದೆ ಅದನ್ನೊಂದು ಆತ್ಮಸಂತೃಪ್ತಿಯ ಸಂಗತಿಯಾಗಿ ಕಂಡ ನನಗೆ ಆ ವಿದ್ಯಾರ್ಥಿಯ ಮಾತು ಅತ್ಯಂತ ಖೇದವನ್ನು ತಂದೊಡ್ಡಿತು.

ಹಿಂದಿನ ತಲೆಮಾರಿನ ಕಥೆಗಳು ಅಂತಿರಲಿ, ನಮ್ಮ ತಲೆಮಾರಿನ ವಿದ್ಯಾರ್ಥಿಗಳಿಗೆ ಗುರುಹಿರಿಯರ ಮೇಲಿದ್ದ ಗೌರವಾದರಗಳನ್ನು ಮುಂದಿನವರಿಗೆ ದಾಟಿಸಲು ನಾವು ಸೋಲುತ್ತಿರುವುದರ ಸಂಕೇತವಲ್ಲವೇ ಇದು? ಇಂದಿನ ಬೋಧಕರ ಕೈಯಲ್ಲಿ ಬೆತ್ತಗಳಿಲ್ಲದೇ ಇರುವ ಸಲುಗೆಯಲ್ಲವೇ ಇದು? ಕಟುವಾದ ಮಾತುಗಳಿಂದ ವಿದ್ಯಾರ್ಥಿಗಳ ಮನನೋಯಿಸದೆ ಮೆಲು
ದನಿಯಲ್ಲಿಯೇ ಅವರನ್ನು ಸರಿದಾರಿಗೆ ತರಬೇಕೆಂಬ ಅನುಸರಿಸಬಾರದ ಆದರ್ಶದ ಪ್ರತಿಫಲವಲ್ಲವೇ ಇದು? ಸದಾಕಾಲ ವಿದ್ಯಾರ್ಥಿಗಳ ಆತ್ಮಗೌರವದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಚಿಂತಿಸುವ ನಾವು, ನಮ್ಮ ಆತ್ಮಗೌರವವನ್ನು ಕಳೆದುಕೊಂಡು ಅವರೆದುರು ನಿಲ್ಲುವ ಪರಿಸ್ಥಿತಿ ತಂದುಕೊಂಡುದು ಹೀನಾಯವಲ್ಲವೇ?

ನಾವು ಇಂದೂ ನಮ್ಮ ಗುರುಗಳನ್ನು ಭೇಟಿ ಮಾಡುವ ಅವಕಾಶಗಳು ಒದಗಿದಾಗ ಎದ್ದುನಿಂತು ಗೌರವಿಸಿ ಅವರು ಕುಳಿತ ಬಳಿಕವಷ್ಟೇ ಕುಳಿತುಕೊಳ್ಳು ವುದು ನಮಗೆ ನಮ್ಮ ಹಿರಿಯರು ಕಲಿಸಿಕೊಟ್ಟ ಸಂಸ್ಕಾರ. ಇಂದು ಮಕ್ಕಳು ತರಗತಿಯಲ್ಲಿ ಗುರುಗಳ ಎದುರು ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಹಂತದಲ್ಲಿದ್ದಾರೆ. ಲಾಕ್‌ಡೌನ್ ಅವಧಿಯ ಆನ್‌ಲೈನ್ ತರಗತಿಗಳಿಗೆ ಒಗ್ಗಿಕೊಂಡ ಬಳಿಕವಂತೂ ಮಕ್ಕಳಿಗೆ ತರಗತಿಯ ಕನಿಷ್ಠ ಶಿಸ್ತನ್ನೂ ಪದೇಪದೇ ಜ್ಞಾಪಿಸಬೇಕಾದ ಪರಿಸ್ಥಿತಿ ಬಂದಿದೆ. ನೇರವಾಗಿ ಕುಳಿತುಕೊಂಡು, ಬೋಧನೆಯ ಮುಖ್ಯ ಅಂಶಗಳನ್ನು ಬರೆದುಕೊಳ್ಳುವ ಪ್ರವೃತ್ತಿಯಂತೂ ಇಲ್ಲವೇ ಇಲ್ಲ ಎಂಬಷ್ಟು ಕಳೆದುಹೋಗಿದೆ. ‘ನೋಟ್ಸ್ ಪಿಡಿಎಫ್ ಕಳಿಸ್ತೀರಾ ಅಲ್ವಾ’ ಎಂದು ಮಕ್ಕಳು ನಿರ್ದಾಕ್ಷಿಣ್ಯವಾಗಿ ಕೇಳುತ್ತಾರೆ! ‘ಪಿಡಿಎಫ್ ಕಳಿಸಿದರೆ ಮೊಬೈಲ್ ಒಳಗೆ ಕಳೆದುಹೋಗುತ್ತದೆ, ತಲೆಯೊಳಗೆ ಸೇರುತ್ತದಾ?’ ನಾನು ನಕ್ಕು ತರಗತಿಯಿಂದಾಚೆ ಬರುವುದಿದೆ.

ಮಹಾಭಾರತದಲ್ಲಿ ಸನ್ನಿವೇಶವೊಂದು ಹೀಗಿದೆ. ಹಸ್ತಿನಾಪುರದ ಆಸ್ಥಾನಕ್ಕೆ ಗುರುಗಳಾದ ಮೈತ್ರೇಯರು ಆಗಮಿಸುತ್ತಾರೆ. ಇಡೀ ಸಭೆ ಎದ್ದು ನಿಂತು ಗೌರವಿಸಿದರೂ ಸುಯೋಧನ ಮದೋನ್ಮುಖನಾಗಿ ಕಾಲ ಮೇಲೆ ಕಾಲು ಹಾಕಿ ಕುಳಿತಿರುತ್ತಾನೆ. ಇದರಿಂದ ಕ್ರುದ್ಧರಾದ ಮೈತ್ರೇಯರು ‘ನಿನ್ನ ತೊಡೆ ಭೀಮನ ಗದಾದಂಡದಿಂದ ಮುರಿದು ನಿನಗೆ ಸಾವು ಬರಲಿ’ ಎಂದು ಶಪಿಸುತ್ತಾರೆ. ವಿದುರನು ಮೈತ್ರೇಯರನ್ನು ಶಾಂತರಾಗುವಂತೆ ವಿನಂತಿಸಿದಾಗ, ವಿದುರ ಮನಸ್ಸು ಮಾಡಿದರೆ ಮಾತ್ರ ಸುಯೋಧನನನ್ನು ರಕ್ಷಿಸಿಕೊಳ್ಳ ಬಹುದು ಎಂದು ಪರಿಹಾರ ನುಡಿಯುತ್ತಾರೆ. ಸುಯೋಧನನ ಅಹಂಕಾರವೇ ಅವನಿಗೆ ಮುಳುವಾಯಿತು ಎಂಬುದು ಇತಿಹಾಸ.‌

ಸ್ವಾಭಿಮಾನದ ಹೆಸರಿನಲ್ಲಿ ಸ್ವಾರ್ಥವನ್ನು, ಅಹಂಕಾರವನ್ನು ಕಲಿಯುತ್ತಿರುವ ನಮ್ಮ ಮಕ್ಕಳನ್ನು ಬದುಕೆಂಬ ಗದಾದಂಡ ಶಿಕ್ಷಿಸುವ ಮೊದಲು ಗುರುಗಳಾಗಿರುವ ನಾವು ವಿದುರನಂತೆ ಪೊರೆಯಬಲ್ಲೆವೇ? ನಿಜವಾದ ಶಿಕ್ಷಣವೆಂದರೆ ನಮ್ಮ ಮನೋಧರ್ಮ ಮತ್ತು ಇತರರೊಂದಿಗಿನ ವರ್ತನೆ. ಇವೆರಡೂ ನಮ್ಮ ವ್ಯಕ್ತಿತವನ್ನು ನಿರೂಪಿಸುತ್ತವೆ, ಅಂಕಗಳಲ್ಲ ಎಂಬುದನ್ನು ನಾವೇ ಅರಿಯದೆ ಹೋದರೆ ಶಿಕ್ಷಣದ ನಿಜ ಉದ್ದೇಶವೇ ಕಳೆದುಹೋದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT